ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ಶನಿವಾರ (ಮಾ.30) ಮಾಜಿ ಪ್ರಧಾನಿಗಳಾದ ಪಿ.ವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್, ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಮತ್ತು ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರಿಗೆ ಘೋಷಿಸಲಾಗಿದ್ದ ಮರಣೋತ್ತರ ಪ್ರಶಸ್ತಿಯನ್ನು ಅವರ ಮಗ ಪಿ.ವಿ ಪ್ರಭಾಕರ್ ರಾವ್ ಅವರು ಸ್ವೀಕರಿಸಿದ್ದಾರೆ.
ಪಿ.ವಿ ನರಸಿಂಹರಾವ್ ಅವರ ಪ್ರಶಸ್ತಿಯನ್ನು ನೀಡುವಾಗ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ‘ಚಪ್ಪಾಳೆ ತಟ್ಟಿಲ್ಲ’ ಎಂದು ಪ್ರತಿಪಾದಿಸಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು “ಮಲ್ಲಿಕಾರ್ಜುನ ಖರ್ಗೆ ಅವರು ಚಪ್ಪಾಳೆ ತಟ್ಟದೆ ಸುಮ್ಮನೆ ಕೂರುವ ಮೂಲಕ ಪಿ.ವಿ ನರಸಿಂಹರಾವ್ ಅವರಿಗೆ ಅವಮಾನ ಮಾಡಿದ್ದಾರೆ, ಕಾಂಗ್ರೆಸ್ನ ಸಂಸ್ಕೃತಿ ತೋರಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, “ಸೋನಿಯಾ ಗಾಂಧಿಯವರ ಸೂಚನೆಯಂತೆ ಖರ್ಗೆ ಅವರು ಚಪ್ಪಾಳೆ ತಟ್ಟಿಲ್ಲ” ಎಂದಿದ್ದಾರೆ.
ಫ್ಯಾಕ್ಟ್ಚೆಕ್: ವೈರಲ್ ಫೋಟೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಕೀ ವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದ್ದೇವೆ. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಚಪ್ಪಾಳೆ ತಟ್ಟಿಲ್ಲ ಎಂಬ ವಾದಕ್ಕೆ ಸಂಬಂಧಪಟ್ಟಂತೆ ಯಾವುದೇ ಮಾಧ್ಯಮಗಳು ವರದಿ ಪ್ರಕಟಿಸಿರುವುದು ಕಂಡು ಬಂದಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 30ರಂದು ಅದೇ ವೈರಲ್ ಫೋಟೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ನರಸಿಂಹ ರಾವ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
Every Indian cherishes what PV Narasimha Rao Garu has done for our nation and feels proud that he has been conferred the Bharat Ratna. He worked extensively to further our country's progress and modernization. He is also known as a respected scholar and thinker. His contributions… pic.twitter.com/gyZmXYTL0n
— Narendra Modi (@narendramodi) March 30, 2024
ಪಿ.ವಿ ಪ್ರಭಾಕರ್ ರಾವ್ ಅವರು ತಂದೆಯ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ವಿಡಿಯೋವನ್ನು ರಾಷ್ಟ್ರಪತಿಗಳ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಮಾರ್ಚ್ 31ರಂದು ಅಪ್ಲೋಡ್ ಮಾಡಲಾಗಿದ್ದು, ಅದನ್ನು ಸರಿಯಾಗಿ ಗಮನಿಸಿದಾಗ ನಮಗೆ ಸತ್ಯ ಗೊತ್ತಾಗಿದೆ. ಒಟ್ಟು 41 ಸೆಕೆಂಡ್ನ ವಿಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಚಪ್ಪಾಳೆ ತಟ್ಟುವ ದೃಶ್ಯವಿದೆ.
ರಾಷ್ಟ್ರಪತಿಗಳ ಯೂಟ್ಯೂಬ್ನಲ್ಲಿರುವ ವಿಡಿಯೋದಲ್ಲಿ ಪಿ.ವಿ ಪ್ರಭಾಕರ್ ಅವರ ಹೆಸರು ಕರೆಯುವಾಗ ಮಲ್ಲಿಕಾರ್ಜುನ ಖರ್ಗೆ ಮೊದಲು ಚಪ್ಪಾಳೆ ತಟ್ಟಿ ಸುಮ್ಮನಾಗಿದ್ದಾರೆ. ಆದರೆ, ಇನ್ನುಳಿದ ನಾಯಕರಾದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಇವರೆಲ್ಲ ಚಪ್ಪಾಳೆ ತಟ್ಟುವುದನ್ನು ಮುಂದುವರೆಸಿದ್ದಾರೆ. ಖರ್ಗೆ ಅವರು ಚಪ್ಪಾಳೆ ತಟ್ಟಿ ಸುಮ್ಮನಾದಾಗ ತೆಗೆದ ಫೋಟೋವನ್ನು ತಪ್ಪಾಗಿ ಹಂಚಿಕೊಂಡು, ಅವರು ಚಪ್ಪಾಳೆ ತಟ್ಟಿಲ್ಲ ಎನ್ನಲಾಗಿದೆ.
ಮಾರ್ಚ್ 30ರಂದು ದೂರ ದರ್ಶನದ ಯೂಟ್ಯೂಬ್ ಚಾನೆಲ್ನಲ್ಲೂ ಪ್ರಭಾಕರ್ ಅವರು ಪ್ರಶಸ್ತಿ ಸ್ವೀಕರಿಸಿದ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರು ಚಪ್ಪಾಳೆ ತಟ್ಟುವ ದೃಶ್ಯವಿದೆ. ಹಾಗಾಗಿ , ಪಿ.ವಿ ನರಸಿಂಹ ರಾವ್ ಅವರ ಪ್ರಶಸ್ತಿ ಪ್ರದಾನ ಮಾಡುವಾಗ ಖರ್ಗೆ ಅವರು ಚಪ್ಪಾಳೆ ತಟ್ಟಿಲ್ಲ ಎನ್ನುವುದು ಸುಳ್ಳು.
ಇದನ್ನೂ ಓದಿ : Fact Check: ಚುನಾವಣಾ ಬಾಂಡ್ ಕುರಿತು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಸುಳ್ಳು