ರಾಮ ನವಮಿಗಿಂತ ಮುಂಚಿತವಾಗಿ ಜಾರ್ಖಂಡ್ನ ರಾಂಚಿ ಪೊಲೀಸರು ಡ್ರೋನ್ ಬಳಸಿ ನಗರದ ಕೆಲ ಮನೆಗಳ ಮೇಲೆ ತಪಾಸಣೆ ನಡೆಸಿದ್ದರು. ಈ ವೇಳೆ ಅಲ್ಲಿ ಕೆಲ ಕಲ್ಲುಗಳು ಕಂಡು ಬಂದಿವೆ ಎಂದು ಹೇಳಲಾಗುತ್ತಿದೆ. ಈ ವಿಚಾರಕ್ಕೆ ಈಗ ಕೋಮು ಬಣ್ಣ ಬಳಿಯಲಾಗಿದೆ.
Ritik (@ThenNowForeve) ಎಂಬ ಎಕ್ಸ್ ಬಳಕೆದಾರ ಪೊಲೀಸರು ರೆಕಾರ್ಡ್ ಮಾಡಿದ್ದೂ ಎನ್ನಲಾದ ಡ್ರೋನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, “ರಾಮನವಮಿಯ ಒಂದು ದಿನ ಮುಂಚೆ ರಾಂಚಿ ಪೊಲೀಸರು ಡ್ರೋನ್ಗಳ ಸಹಾಯದಿಂದ ಸುಮಾರು 10 ಮನೆಗಳ ಟೆರೇಸ್ ಮೇಲೆ ಕಲ್ಲು ಸಂಗ್ರಹಿಸಿಟ್ಟಿರುವುದನ್ನು ಪತ್ತೆ ಮಾಡಿದ್ದಾರೆ. ಆ 10 ಮನೆಗಳು ಯಾವ ಸಮುದಾಯಕ್ಕೆ ಸೇರಿರಬಹುದು ನೀವೇ ಊಹಿಸಿ” ಎಂದು ಬರೆದುಕೊಂಡಿದ್ದಾರೆ.
Ajeet Bharti(@ajeetbharti) ಎಂಬ ಮತ್ತೋರ್ವ ಬಳಕೆದಾರ ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, “ರಾಮ ನವಮಿಗೆ ಅವರ ತಯಾರಿ ನಡೆದಿದೆ, ನೀವೇನು ಮಾಡುತ್ತಿದ್ದೀರಿ? ರಾಂಚಿಯಲ್ಲಿ ಛಾವಣಿಗಳ ಮೇಲೆ ಕಲ್ಲುಗಳನ್ನು ಸಂಗ್ರಹಿಸಿಡಲಾಗಿದೆ. ನಾಳೆ ಬಂಗಾಳ, ಬಿಹಾರ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ಕಲ್ಲು ತೂರಾಟದ ಸುದ್ದಿ ಬರಲಿದೆ. ಜಾಗರೂಕರಾಗಿರಿ, ಎಚ್ಚರವಾಗಿರಿ, ಭಯಪಡಬೇಡಿ” ಎಂದು ಕೋಮು ವೈಷಮ್ಯ ಉತ್ತೇಜಿಸುವ ರೀತಿ ಬರೆದುಕೊಂಡಿದ್ದಾರೆ.
ಬಿಜೆಪಿ ಮುಖಂಡ ನವೀನ್ ಜಿಂದಾಲ್ (@naveenjindalbjp)ರಾಂಚಿ ಪೊಲೀಸರದ್ದು ಎನ್ನಲಾದ ಡ್ರೋನ್ ವಿಡಿಯೋ ಹಂಚಿಕೊಂಡಿದ್ದು, “ರಾಮನವಮಿಗೂ ಮುನ್ನ ಮನೆಗಳ ಛಾವಣಿಯ ಮೇಲೆ ಕಲ್ಲುಗಳ ರಾಶಿ. ಇವು ಯಾವ “ಸಮುದಾಯದ” ಮನೆಗಳು? ರಾಂಚಿ ಪೊಲೀಸರು ಡ್ರೋನ್ಗಳನ್ನು ಬಳಸಿ ಕನಿಷ್ಠ 10 ಮನೆಗಳನ್ನು ಪತ್ತೆ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ನಾವು ಮೇಲೆ ಉಲ್ಲೇಖಿಸಿದ ವ್ಯಕ್ತಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಮನೆಗಳ ಮೇಲೆ ಡ್ರೋನ್ ಹಾರಿಸಿರುವುದು ಕಾಣಿಸುತ್ತಿದೆಯೇ ಹೊರತು, ಕಲ್ಲು ಸಂಗ್ರಹಿಸಿಟ್ಟಿರುವುದು ಕಂಡಿಲ್ಲ.
ಫ್ಯಾಕ್ಟ್ಚೆಕ್ : ರಾಮ ನವಮಿಗಿಂತ ಮುಂಚಿತವಾಗಿ ಮನೆಗಳ ಮೇಲೆ ಕಲ್ಲು ಸಂಗ್ರಹಿಸಿಟ್ಟುರುವುದನ್ನು ರಾಂಚಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಪೋಸ್ಟ್ ಹಾಕಿರುವ ಎಕ್ಸ್ ಬಳಕೆದಾರರು, ರಾಮನವಮಿ ಮೆರವಣಿಗೆಗಳ ಮೇಲೆ ಎಸೆಯಲು ಮನೆಗಳ ಮೇಲೆ ಕಲ್ಲು ಸಂಗ್ರಹಿಸಿಡಲಾಗಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೆ, ತಮ್ಮ ಪೋಸ್ಟ್ನಲ್ಲಿ “ಇದು ಯಾವ ಸಮುದಾಯದವರ ಮನೆ ಎಂದು ಊಹಿಸಿ” ಎನ್ನುವ ಮೂಲಕ ಮುಸ್ಲಿಮರ ಮನೆಗಳ ಮೇಲೆ ಕಲ್ಲುಗಳು ದೊರೆತಿವೆ ಎಂಬ ರೀತಿ ಕೋಮು ವೈಷಮ್ಯ ಹರಡಲು ಪ್ರಯತ್ನಿಸಿದ್ದಾರೆ.
ಆದರೆ, ಏಪ್ರಿಲ್ 16, 2024ರಂದು ಈ ಸಂಬಂಧ ಸ್ಪಷ್ಟೀಕರಣ ಕೊಟ್ಟಿರುವ ರಾಂಚಿ ಪೊಲೀಸರು, “ಮೆರವಣಿಗೆಗಳು ಸಾಗುವ ರಸ್ತೆಯ ಪಕ್ಕದ ಕಟ್ಟಡಗಳನ್ನು ಡ್ರೋನ್ ಬಳಸಿ ತಪಾಸಣೆ ನಡೆಸುವುದು ಸರ್ವೆ ಸಾಮಾನ್ಯ. ಇದು ಪೊಲೀಸರ ಭದ್ರತಾ ಕ್ರಮದ ಒಂದು ಭಾಗ. ಹಲವು ಜಿಲ್ಲೆಗಳಲ್ಲಿ ಇದನ್ನು ಮಾಡಲಾಗುತ್ತಿದ್ದು, ಯಾರದ್ದಾದರೂ ಮೇಲ್ಛಾವಣಿಯ ಮೇಲೆ ಕಲ್ಲು, ಇಟ್ಟಿಗೆ, ಮರಳು ಮುಂತಾದ ಯಾವುದೇ ನಿರ್ಮಾಣ ಸಾಮಗ್ರಿಗಳು ಇದ್ದರೆ, ಅದನ್ನು ತೆರವುಗೊಳಿಸಲು ಸಂಬಂಧಿಸಿದ ಮನೆ ಮಾಲೀಕರನ್ನು ಕೋರಲಾಗ್ತಿದೆ” ಎಂದಿದ್ದಾರೆ.
जुलूस के मार्गों की ड्रोन से निगरानी एक सामान्य प्रशासनिक प्रक्रिया है। यह अनेक जिलों में किया जाता है और यदि किसी के छत पर कोई निर्माण सामग्री यथा पत्थर,ईट ,बालू आदि पड़ा रहता है तो उसे हटाने के लिए संबंधित मकान मालिकों को @JharkhandPolice @Lathkar_IPS @amolhomkar_IPS @NBTBihar
— Ranchi Police (@ranchipolice) April 16, 2024
ಈ ಮೂಲಕ “ಮನೆಗಳ ಮೇಲೆ ಕಲ್ಲುಗಳನ್ನು ಸಂಗ್ರಹಿಸಿಟ್ಟಿದಲ್ಲ. ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ತಂದಿಟ್ಟ ಸಾಮಗ್ರಿಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಡ್ರೋನ್ ಮೂಲಕ ತಪಾಸಣೆ ನಡೆಸುವುದು ಒಂದು ಸಾಮಾನ್ಯ ಪ್ರಕ್ರಿಯೆ. ಅಲ್ಲದೆ, ನಿರ್ದಿಷ್ಟ ಸಮುದಾಯದವರ ಮನೆಗಳ ಮೇಲೆ ಮಾತ್ರ ಕಲ್ಲು, ಮರಳು ದೊರೆತಿಲ್ಲ. ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ನೋಟಿಸ್ ನೀಡಿಲ್ಲ ಎಂಬುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಹಾಗಾಗಿ, ರಾಮನವಮಿಗಿಂತ ಮುಂಚಿತವಾಗಿ 10 ಮನೆಗಳ ಮೇಲೆ ಕಲ್ಲುಗಳನ್ನು ಸಂಗ್ರಹಿಟ್ಟಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆ ಮನೆಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿರುವಂತದ್ದು ಎಂಬ ಎಕ್ಸ್ ಬಳಕೆದಾರರ ವಾದ ಸುಳ್ಳು
ಈ ವಿಷಯದ ಕುರಿತು altnews.in ರಾಂಚಿ ಎಸ್ಎಸ್ಪಿ ಚಂದನ್ ಕುಮಾರ್ ಸಿನ್ಹಾ ಅವರೊಂದಿಗೆ ಮಾತನಾಡಿದ್ದು, “ಈ ವಿಷಯದಲ್ಲಿ ಯಾವುದೇ ಕೋಮು ಆಯಾಮವಿಲ್ಲ. ನೋಟಿಸ್ ಸ್ವೀಕರಿಸಿದ ಮನೆ ಮಾಲೀಕರು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಲ್ಲ. ಮೆರವಣಿಗೆ ಹೊರಡುವ ಮಾರ್ಗದ ಮೇಲ್ವಿಚಾರಣೆ ಮಾಡುವುದು ಮತ್ತು ನಡುವೆ ಬರುವ ಕಟ್ಟಡಗಳ ಮೇಲ್ಛಾವಣಿಯ ಮೇಲೆ ಕಲ್ಲು, ಇಟ್ಟಿಗೆ, ಮರಳಿನಂತಹ ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸಿಡದಂತೆ ಎಚ್ಚರಿಕೆ ವಹಿಸುವುದು ಆಡಳಿತದ ವಾಡಿಕೆಯ ಕ್ರಮವಾಗಿದೆ” ಎಂದು ತಿಳಿಸಿದ್ದಾರೆ ಎಂದಿದೆ.
ಇದನ್ನೂ ಓದಿ : Fact Check : ನಿರುದ್ಯೋಗ ಕುರಿತ ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ‘ಡೀಪ್ ಫೇಕ್’ ಅಲ್ಲ