ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್ ಬಳಕೆದಾರ Rishi Bagree
(@rishibagree) ರಾಹುಲ್ ಗಾಂಧಿಯವರ ಭಾಷಣದ ಕ್ಲಿಪ್ ಪೋಸ್ಟ್ ಮಾಡಿ ಈ ಕೆಳಗಿನಂತೆ ಬರೆದುಕೊಂಡಿದ್ದಾರೆ.
ಹಂತ 1 – ರಾಷ್ಟ್ರವ್ಯಾಪಿ “ಎಕ್ಸ್-ರೇ” ಮಾಡಿ
ಹಂತ 2- ‘ಅಲ್ಪಸಂಖ್ಯಾತರಿಗೆ’ ಎಷ್ಟು ಬಾಕಿ ಇದೆ ಎಂಬುದನ್ನು ವಿಶ್ಲೇಷಿಸಿ
ಹಂತ 3 – ವ್ಯಕ್ತಿಗಳ ‘ಸಮೀಕ್ಷೆ’ ಮಾಡಿ
ಹಂತ 4 – ‘ಸಂಪತ್ತು’ ಯಾರ ಬಳಿ ಇದೆ ಎಂಬುದನ್ನು ಹುಡುಕಿ
ಹಂತ 5 – ಅವರ ಜಾತಿಯನ್ನು ವಿಶ್ಲೇಷಿಸಿ
ಹಂತ 6 – ಸಂಪತ್ತಿನ ಮರು-ಹಂಚಿಕೆಯನ್ನು ಮಾಡಿ
“ಕಾಂಗ್ರೆಸ್ ಹಾಕುವ ಪ್ರತಿ ಮತವೂ ನಿಮ್ಮದೇ ಮರಣದಂಡನೆಗೆ ಸಹಿ ಹಾಕುತ್ತದೆ” ಎಂದು ಬರೆದುಕೊಂಡಿದ್ದಾರೆ.
ಮತ್ತೋರ್ವ ಬಲ ಪಂಥೀಯ ಎಕ್ಸ್ ಬಳಕೆದಾರ Ajeet Bharti (@ajeetbharti) ಕೂಡ ರಾಹುಲ್ ಗಾಂಧಿಯ ಭಾಷಣದ ಕ್ಲಿಪ್ ಹಂಚಿಕೊಂಡಿದ್ದು, “ನರೇಂದ್ರ ಮೋದಿಯವರ ವಿಡಿಯೋ ಇವರಿಗೆ ಸಿಕ್ಕಿಲ್ಲವೇ? ಒಬ್ಬ ವ್ಯಕ್ತಿ ಎಷ್ಟು ಮೂರ್ಖನಾಗಲು ಸಾಧ್ಯ?” ಎಂದು ಹಿಂದಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.
Arun Pudur (@arunpudur) ಎಂಬ ಎಕ್ಸ್ ಬಳಕೆದಾರ ರಾಹುಲ್ ಗಾಂಧಿಯ ವಿಡಿಯೋ ಹಂಚಿಕೊಂಡಿದ್ದು, ಈ ಕೆಳಗಿನಂತೆ ಬರೆದುಕೊಂಡಿದ್ದಾರೆ.
ನಾವು ರಾಷ್ಟ್ರವ್ಯಾಪಿ “ಎಕ್ಸ್-ರೇ” ಮಾಡುತ್ತೇವೆ, ‘ಅಲ್ಪಸಂಖ್ಯಾತರಿಗೆ’ ಎಷ್ಟು ಬಾಕಿ ಇದೆ ಎಂದು ನಮಗೆ ತಿಳಿಯುತ್ತದೆ.
ನಂತರ ನಾವು ವ್ಯಕ್ತಿಗಳ ಹಣಕಾಸು ಮತ್ತು ಸಂಸ್ಥೆಗಳ ‘ಸಮೀಕ್ಷೆ’ ಮಾಡುತ್ತೇವೆ.
ಯಾರ ಬಳಿ ‘ಸಂಪತ್ತು’ ಇದೆ ಮತ್ತು ಅವರು ಯಾವ ಜಾತಿಗೆ ಸೇರಿದವರು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ.
ಇದೆಲ್ಲದರ ನಂತರ ನಾವು ಸಂಪತ್ತಿನ ಮರು ಹಂಚಿಕೆಯ ‘ಕ್ರಾಂತಿಕಾರಿ’ ಕೆಲಸವನ್ನು ಮಾಡುತ್ತೇವೆ.
ರಾಹುಲ್ ಗಾಂಧಿ ಕಾಂಗ್ರೆಸ್
ನಾವು ಮೇಲೆ ಉಲ್ಲೇಖಿಸಿದ ಎಲ್ಲಾ ಎಕ್ಸ್ ಬಳಕೆದಾರರು ತಮ್ಮ ಪೋಸ್ಟ್ಗಳಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಸರ್ಕಾರ ಬಂದರೆ, “ನಾವು ಆರ್ಥಿಕ ಸಮೀಕ್ಷೆ ನಡೆಸುತ್ತೇವೆ. ಅಲ್ಪ ಸಂಖ್ಯಾತರಿಗೆ ಸಂಪತ್ತಿನ ಮರು ಹಂಚಿಕೆ ಮಾಡುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇಲ್ಲಿ ಅಲ್ಪ ಸಂಖ್ಯಾತರು ಎಂದರೆ ಮುಸ್ಲಿಮರು” ಎಂಬರ್ಥದಲ್ಲಿ ಪ್ರತಿಪಾದಿಸಿದ್ದಾರೆ.
ಫ್ಯಾಕ್ಟ್ಚೆಕ್ : ಎಕ್ಸ್ ಬಳಕೆದಾರರು ಹೇಳಿದಂತೆ “ದೇಶದಲ್ಲಿ ಆರ್ಥಿಕ ಸಮೀಕ್ಷೆ, ಜಾತಿ ಗಣತಿ ನಡೆಸಿ ಅಲ್ಪ ಸಂಖ್ಯಾತರಿಗೆ ಸಂಪತ್ತಿನ ಮರು ಹಂಚಿಕೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರಾ? ಎಂಬುವುದರ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.
ಇದಕ್ಕಾಗಿ ನಾವು ರಾಹುಲ್ ಗಾಂಧಿಯವರ ಭಾಷಣದ ಮೂಲ ವಿಡಿಯೋ ಹುಡುಕಿದ್ದೇವೆ. ಈ ವೇಳೆ ಏಪ್ರಿಲ್ 6,2024ರಂದು ರಾಹುಲ್ ಗಾಂಧಿಯವರೇ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ “Nyay Patra – Congress Manifesto Launch Rally | Hyderabad, Telangana” ಎಂಬ ಶೀರ್ಷಿಕೆಯ ಅಪ್ಲೋಡ್ ಮಾಡಿರುವುದು ವಿಡಿಯೋ ದೊರೆತಿದೆ.
ಒಟ್ಟು 1 ಗಂಟೆ 20 ನಿಮಿಷ 50 ಸೆಕೆಂಡ್ನ ವಿಡಿಯೋದಲ್ಲಿ 31 ನಿಮಿಷ 51 ಸೆಕೆಂಡ್ನಿಂದ ವೈರಲ್ ಕ್ಲಿಪ್ನಲ್ಲಿರುವ ರಾಹುಲ್ ಗಾಂಧಿಯವರ ಹೇಳಿಕೆಯಿದೆ. ಭಾಷಣದಲ್ಲಿ ರಾಹುಲ್ ಗಾಂಧಿ “ನಾವು ದೇಶವನ್ನು ಎಕ್ಸ್-ರೇ ಮಾಡುತ್ತೇವೆ. ಆಗ ಎಲ್ಲವೂ ಸ್ಪಷ್ಟವಾಗುತ್ತದೆ (ನೀರಿಗೆ ನೀರು, ಹಾಲಿಗೆ ಹಾಲು ಆಗುತ್ತದೆ). ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಬಡ ಸಾಮಾನ್ಯ ವರ್ಗ ಮತ್ತು ಅಲ್ಪಸಂಖ್ಯಾತರ ಜನಸಂಖ್ಯೆ ಎಷ್ಟು ಎಂದು ತಿಳಿಯುತ್ತದೆ. ನಂತರ, ನಾವು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆ ನಡೆಸುತ್ತೇವೆ. ಆಗ ಭಾರತ ನಿಜವಾಗಿಯೂ ಯಾವ ವರ್ಗದ ಕೈಯಲ್ಲಿದೆ ಎಂದು ಗೊತ್ತಾಗುತ್ತದೆ. ಈ ಐತಿಹಾಸಿಕ ಕ್ರಮದ ನಂತರ, ನಾವು ನಿಮ್ಮ ಹಕ್ಕನ್ನು ನಿಮಗೆ ನೀಡುವ ಕೆಲಸ ಮಾಡುತ್ತೇವೆ” ಎಂದಿದ್ದಾರೆ.
ರಾಹುಲ್ ಗಾಂಧಿ ಭಾಷಣದಲ್ಲಿ “ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಬಡ ಸಾಮಾನ್ಯ ವರ್ಗ ಮತ್ತು ಅಲ್ಪಸಂಖ್ಯಾತರು” ಎಂಬುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಹಾಗಾಗಿ, ಎಕ್ಸ್ ಬಳಕೆದಾರರು ಹಂಚಿಕೊಂಡಿರುವುದು ಎಡಿಟೆಡ್ ವಿಡಿಯೋ ಎಂಬುವುದು ಇಲ್ಲಿ ಸ್ಪಷ್ಟವಾಗುತ್ತದೆ.
ಎಡಿಟೆಡ್ ವಿಡಿಯೋದಲ್ಲಿ ‘ಅಲ್ಪ ಸಂಖ್ಯಾತರು’ ಎಂಬುವುದು ಮಾತ್ರ ಇದೆ. ‘ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಬಡ ಸಾಮಾನ್ಯ ವರ್ಗ’ ಎಂಬುವುದನ್ನು ಕಟ್ ಮಾಡಲಾಗಿದೆ.
ರಾಹುಲ್ ಗಾಂಧಿಯರ ಭಾಷಣದ ಎಡಿಟೆಡ್ ವಿಡಿಯೋ ಮತ್ತು ನಿಜವಾದ ವಿಡಿಯೋ ಎರಡನ್ನೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಆ ಎರಡೂ ವಿಡಿಯೋಗಳು ಕೆಳಗಿದೆ.
Edited video shared by @ajeetbharti. They've edited out OBC, SC, ST & EWS. In the original video, @RahulGandhi says after the socio-economic survey people belonging to OBC, SC, ST, EWS & Minorities will find out their fair share. C'C : @TelanganaDGP @TelanganaCOPs @IYCLegalCell pic.twitter.com/QnSiJeYrNr
— Mohammed Zubair (@zoo_bear) April 23, 2024
ಇನ್ನೂ ರಾಹುಲ್ ಗಾಂಧಿಯವರ ಎಡಿಟೆಡ್ ವಿಡಿಯೋ ಹಂಚಿಕೊಳ್ಳುತ್ತಿರುವುದು ಗಮನಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ನಿಜವಾದ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕೆಳಗೆ ಕೊಡಲಾಗಿದೆ.
BJP और उसके समर्थक राहुल गांधी के एक वक्तव्य को काटछाँट कर चला रहे हैं। यह है वो पूरा वीडियो –
'जातिगत जनगणना' से SC-ST, पिछड़े, माइनॉरिटी और गरीब जनरल कास्ट को हक देने की बात कही
BJP ने सब कुछ काट कर सिर्फ़ माइनॉरिटी ही क्यों छोड़ दिया? BJP हार से डर गई है#DarpokSaheb… pic.twitter.com/AQnYQtIHWl
— Jairam Ramesh (@Jairam_Ramesh) April 23, 2024
ನಾವು ನಡೆಸಿದ ಪರಿಶೀಲನೆಯಲ್ಲಿ ತಿಳಿದು ಬಂದ ಸತ್ಯವೆಂದರೆ, ಹೈದರಾಬಾದ್ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ನ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಆರ್ಥಿಕ- ಸಾಮಾಜಿಕ-ಜಾತಿ ಗಣತಿ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಇಲ್ಲಿ ಗಣತಿ ಅಥವಾ ಸಮೀಕ್ಷೆಯನ್ನು ‘ಎಕ್ಸ್ ರೇ’ ಎಂದು ರಾಹುಲ್ ಉಲ್ಲೇಖಿಸಿದ್ದಾರೆ. ಸಮೀಕ್ಷೆ ಮಾಡಿದ ಬಳಿಕ ಸಂಪತ್ತನ್ನು ಮರು ಹಂಚಿಕೆ ಮಾಡುತ್ತೇವೆ. ಎಸ್ಸಿ, ಎಸ್ಟಿ, ಒಬಿಸಿ, ಇಡಬ್ಲ್ಯುಎಸ್ ಮತ್ತು ಅಲ್ಪ ಸಂಖ್ಯಾತರಿಗೆ ಸಂಪತ್ತಿನ ಹಂಚಿಕೆ ಮಾಡುತ್ತೇವೆ ಎಂದಿದ್ದಾರೆ. ಈ ಮೂಲಕ ಸಾಮಾಜಿಕ ನ್ಯಾಯದ ಭರವಸೆಯನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಆದ್ದರಿಂದ ಅಲ್ಪ ಸಂಖ್ಯಾತರಿಗೆ ಸಂಪತ್ತನ್ನು ಮರು ಹಂಚಿಕೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ಪ್ರತಿಪಾದನೆ ಸುಳ್ಳು.
ಇದನ್ನೂ ಓದಿ : FACT CHECK : ಕಾಂಗ್ರೆಸ್ ಪ್ರಣಾಳಿಕೆ ಕುರಿತು ಬಿಜೆಪಿ ಹಾಕಿರುವ ಪೋಸ್ಟ್ ಸುಳ್ಳು