ಪತ್ರಕರ್ತ ಫಹಾದ್ ಶಾ ವಿರುದ್ಧದ ‘ದಿ ಕಾಶ್ಮೀರ್ ವಾಲ್ಲಾ’ ಸುದ್ದಿ ವೆಬ್ಸೈಟ್ನ ‘ದೇಶದ್ರೋಹಿ’ ಲೇಖನಕ್ಕೆ ಸಂಬಂಧಿಸಿದ ಪ್ರಕರಣವನ್ನು ಲೇಖನ ಪ್ರಕಟಗೊಂಡ 11 ವರ್ಷಗಳ ನಂತರ ಅಧಿಕಾರಿಗಳು ಮುನ್ನಲೆಗೆ ತಂದಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಹೇಳಿದೆ.
ಪ್ರಕರಣದ ಆರಂಭದಿಂದ ಇದುವರೆಗೆ ಕಾಶ್ಮೀರ್ ವಾಲ್ಲಾದ ಲೇಖನವು ಉಗ್ರವಾದಕ್ಕೆ ಜನರನ್ನು ಉತ್ತೇಜಿಸುವ ಅಂಶಗಳನ್ನು ಒಳಗೊಂಡಿತ್ತು ಎಂಬುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಒಬ್ಬ ಸಾಕ್ಷಿಯೂ ಇದನ್ನು ದೃಢೀಕರಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಮೋಹನ್ ಲಾಲ್ ಅವರನ್ನು ಒಳಗೊಂಡ ಪೀಠವು ಫಹಾದ್ ಶಾಗೆ ಜಾಮೀನು ನೀಡುವಾಗ ತಿಳಿಸಿದೆ.
ನವೆಂಬರ್ 17 ರಂದು ಫಹಾದ್ ಶಾಗೆ ಜಾಮೀನು ದೊರೆತಿದೆ. ಆದರೆ, ಅವರ ವಕೀಲರು ಕಾನೂನು ವಿಧಿಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿರುವುದರಿಂದ ಶಾಗೆ ಇನ್ನೂ ಜೈಲಿನಿಂದ ಬಿಡುಗಡೆ ಭಾಗ್ಯ ದೊರೆತಿಲ್ಲ.
‘ಸಮಾಜಕ್ಕೆ ಸ್ಪಷ್ಟ ಮತ್ತು ಪ್ರಸ್ತುತ ಅಪಾಯ’ ಎಂಬ ಅಂಶವನ್ನು ಮುಂದಿಟ್ಟುಕೊಂಡು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಆರೋಪಿಗೆ ಜಾಮೀನು ನೀಡುವುದನ್ನು ತನಿಖಾ ಸಂಸ್ಥೆ ವಿರೋಧಿಸಿದೆ ಎಂದು ತೀರ್ಪು ನೀಡುವಾಗ ನ್ಯಾಯಾಲಯ ಹೇಳಿದೆ ಎಂದು ತಿಳಿದು ಬಂದಿದೆ.
‘ಗುಲಾಮಗಿರಿಯ ಸಂಕೋಲೆಗಳು ಮುರಿಯಲಿವೆ’ ಎಂಬ ಶೀರ್ಷಿಕೆಯ ಲೇಖನವನ್ನು ಶಿಕ್ಷಣ ತಜ್ಞ ಅಬ್ದುಲ್ ಆಲಾ ಫಾಜಿಲಿ ಬರೆದಿದ್ದರು. ಇದನ್ನು 2011 ರಲ್ಲಿ ದಿ ಕಾಶ್ಮೀರ್ ವಾಲ್ಲಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆಯು ಈ ಲೇಖನವು ಅಶಾಂತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಯುವಕರನ್ನು ಭಯೋತ್ಪಾದನೆ ಮತ್ತು ಹಿಂಸಾಚಾರದ ಹಾದಿ ಹಿಡಿಯಲು ಪ್ರೇರೇಪಿಸುತ್ತದೆ ಎಂದು ಆರೋಪಿಸಿತ್ತು.
ಈ ಪ್ರಕರಣ ಸಂಬಂಧ ಸ್ವತಂತ್ರ ಸುದ್ದಿ ಸಂಸ್ಥೆ ದಿ ಕಾಶ್ಮೀರ್ ವಾಲ್ಲಾದ ಮುಖ್ಯ ಸಂಪಾದಕ ಫಹಾದ್ ಶಾ ಅವರನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಪೊಲೀಸರು ಬಂಧಿಸಿದ್ದರು. ಫಹಾದ್ ಶಾ ಭಯೋತ್ಪಾದನೆಯನ್ನು ವೈಭವೀಕರಿಸುತ್ತಿದ್ದಾರೆ, ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಶುಕ್ರವಾರ (ನ.17) ಫಹಾದ್ ಶಾಗೆ ಜಾಮೀನು ದೊರೆತಿದೆ.
ಕಾಶ್ಮೀರ್ ವಾಲ್ಲಾದ ಲೇಖನ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸಲು ಕರೆ ನೀಡುತ್ತದೆ. ಆದರೆ, ಅದು ಹಿಂಸಾಚಾರವನ್ನು ಪ್ರಚೋದಿಸುವುದಿಲ್ಲ ಅಥವಾ ರಾಜ್ಯದ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡುವುದಿಲ್ಲ ಎಂದು ಹೈಕೋರ್ಟ್ ನ್ಯಾಯಾಧೀಶರು ಜಾಮೀನು ನೀಡುವಾಗ ಹೇಳಿದ್ದಾಗಿ ತಿಳಿದು ಬಂದಿದೆ.
ಇದನ್ನು ಓದಿ : ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅತಿಥಿ: ವಿವಾದ ಸೃಷ್ಟಿ