ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಒಕ್ಕೂಟ ಸರ್ಕಾರವು ಏನು ಮಾಡಿದೆ ಎಂಬುದನ್ನು ರಾಷ್ಟ್ರಕ್ಕೆ ತಿಳಿಸುವಂತೆ ಕಾಂಗ್ರೆಸ್ ಬುಧವಾರ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದೆ.
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಮಾತನಾಡಿ, “ತಾಲಿಬಾನ್ ಭಯೋತ್ಪಾದಕ ಸಂಘಟನೆಯಾಗಿದ್ದು, ಪಾಕಿಸ್ತಾನದಲ್ಲಿರುವ ಹಕ್ಕಾನಿ ಜಾಲದೊಂದಿಗೆ ಸಂಪರ್ಕ ಹೊಂದಿದೆ. ಇದು ಪಾಕಿಸ್ತಾನ ಸರ್ಕಾರದ ಸಹಾಯ ಮತ್ತು ಬೆಂಬಲದೊಂದಿಗೆ ಭಾರತ ವಿರೋಧಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನ್ ಜನರು ಪಾಕಿಸ್ತಾನಕ್ಕಿಂತಲೂ ಭಾರತದಿಂದ ಹೆಚ್ಚು ನಿರೀಕ್ಷಿಸುತ್ತಿದ್ದಾರೆ- ಕಾಬೂಲ್ನಿಂದ ಬಂದ ಪತ್ರಕರ್ತೆ
ತಾಲಿಬಾನ್ಗಳು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಲಷ್ಕರ್-ಇ-ತೊಯ್ಬಾದ ಪೋಷಕರಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಮ್ಮ ಪೋಷಕ ಸಂಘಟನೆ ಅಧಿಕಾರ ವಹಿಸಿಕೊಂಡಾಗ ಇಂತಹ ಭಯೋತ್ಪಾದಕ ಸಂಘಟನೆಗಳಿಗೆ ಧೈರ್ಯ ಹೆಚ್ಚಳವಾಗುತ್ತದೆ. ಇದರ ವಿರುದ್ದ ಸರ್ಕಾರವು ಭಾರತದ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸುತ್ತದೆ ಎಂದು ಅವರು ಕೇಳಿದ್ದಾರೆ.
“ಅಫ್ಘಾನಿಸ್ತಾನವನ್ನು ಇಂತಹ ಹಿಂಸಾತ್ಮಕ ಭಯೋತ್ಪಾದಕ ಸಂಘಟನೆಗಳು ನಿಯಂತ್ರಿಸಿದಾಗ, ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಸಂಘಟನೆಗಳು ನೇರವಾಗಿ ರಕ್ಷಣೆ ಪಡೆಯುತ್ತವೆ. ಭಾರತ ಸರ್ಕಾರ ಇದರ ಬಗ್ಗೆ ಏನು ಮಾಡುತ್ತಿದೆ” ಎಂದು ಅವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮುಂದೆ ಬಂದು ನಮಗೆ ಉತ್ತರಿಸಬೇಕು ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಹಿಂಸಾತ್ಮಕ ಭಯೋತ್ಪಾದಕ ಸಂಘಟನೆಗಳ ಆಡಳಿತವಾಗಿ ಮಾರ್ಪಟ್ಟಿದೆ ಎಂದು ಅವರು ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, “ನಾವು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನ್ ಪತನ: ನೆರೆ ದೇಶಗಳಿಗೆ ಸಂಬಂಧಿಸಿದ ವಿದೇಶಾಂಗ ನೀತಿಯನ್ನು ಪರಿಶೀಲಿಸಬೇಕು – ಶರದ್ ಪವಾರ್