ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಬಳಿಕ ಅಲ್ಲಿನ ನಾಗರಿಕರು ಪಾಕಿಸ್ತಾನಕ್ಕಿಂತ ಭಾರತದ ಬಗ್ಗೆ ಹೆಚ್ಚು ಅನುಕೂಲಕರ ದೃಷ್ಟಿಕೋನವನ್ನು ಹೊಂದಿದ್ದಾರೆ. ಭಾರತದಿಂದ ಹೆಚ್ಚಿನದನ್ನು ನಿರೀಕ್ಷಿಸಿದ್ದಾರೆ ಎಂದು ಕಾಬೂಲ್ನಿಂದ ದೇಶಕ್ಕೆ ಹಿಂದಿರುಗಿರುವ ಪತ್ರಕರ್ತೆ ಹೇಳಿದ್ದಾರೆ.
ಭಾರತೀಯ ವಾಯುಪಡೆಯ (ಐಎಎಫ್) ವಿಶೇಷ ವಿಮಾನದಲ್ಲಿ ಕಾಬೂಲ್ನಿಂದ ಹಿಂದಿರುಗಿದ ಪತ್ರಕರ್ತೆಯಾದ ಕನಿಕಾ ಗುಪ್ತಾ, ಅಘ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ NDTV ಜೊತೆ ಮಾತನಾಡಿದ್ದಾರೆ. ಕನಿಕಾ ಗುಪ್ತಾ, ಭಾರತೀಯ ರಾಯಭಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆ ತಂದ ವಿಮಾನದಲ್ಲಿ ದೇಶಕ್ಕೆ ವಾಪಸ್ ಆಗಿದ್ದಾರೆ.
“ತಾಲಿಬಾನಿಗಳು ನನ್ನನ್ನು ಮತ್ತು ನನ್ನ ಇನ್ನೊಬ್ಬ ಸಹೋದ್ಯೋಗಿಯನ್ನು ಹುಡುಕುತ್ತಿದ್ದಾಗ ನಾನು ಅಲ್ಲಿಂದ ಹೊರಡಲು ನಿರ್ಧರಿಸಿದೆ. ತಾಲಿಬಾನಿಗಳು ನಗರವನ್ನು ವಶಪಡಿಸಿಕೊಳ್ಳುತ್ತಿದ್ದಂತೆಯೇ, ನಾನು ಭಾರತದ ರಾಯಭಾರಿ ಕಚೇರಿಯೊಂದಿಗೆ ಮಾತನಾಡಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನ್: ಯಾರೊಂದಿಗೂ ದ್ವೇಷವಿಲ್ಲ, ಎಲ್ಲರಿಗೂ ಕ್ಷಮೆ ನೀಡಿದ್ದೇವೆ – ತಾಲಿಬಾನ್
“ಹೇಗಾದರೂ ರಾಯಭಾರಿ ಕಚೇರಿ ತಲುಪಬೇಕಿದ್ದ ನಮ್ಮನ್ನು ತಾಲಿಬಾನಿಗಳು ಚೆಕ್ಪಾಯಿಂಟ್ನಲ್ಲಿ ತಡೆದು ನಿಲ್ಲಿಸಿದ್ದರು. ನಾನು ಮಹಿಳೆಯಾಗಿದ್ದರಿಂದ ಅವರು ನನ್ನೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತಿದ್ದರು. ನನ್ನ ಡ್ರೈವರ್ನೊಂದಿಗೆ ಮಾತನಾಡುತ್ತಿದ್ದರು. ನಾವು ವಾಪಸ್ ಹೋಗಬೇಕೆಂದು ಅವರು ಒತ್ತಾಯಿಸುತ್ತಿದ್ದರು, ಸುಮಾರು 2 ಗಂಟೆಗಳ ನಂತರ ಅವರು ನಮ್ಮನ್ನು ರಾಯಭಾರ ಕಚೇರಿಗೆ ಕರೆದೊಯ್ದರು” ಎಂದು ಕನಿಕಾ ಗುಪ್ತಾ ಹೇಳಿದ್ದಾರೆ.
“ನಾವು ನಿನ್ನೆ ರಾತ್ರಿ 10 ಗಂಟೆಗೆ ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದೆವು. ಆದರೆ, ವಿಮಾನ ನಿಲ್ದಾಣದ ಗೇಟ್ಗಳ ಹೊರಗೆ ಸಾವಿರಾರು ಜನರು ಒಳಗೆ ಹೋಗಲು ಪ್ರಯತ್ನಿಸುತ್ತಿದ್ದರು. ಅವರು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಲು ಪ್ರಯತ್ನಿಸಿದರು” ಎಂದಿದ್ದಾರೆ.
“ನಾವು ವಿಮಾನ ನಿಲ್ದಾಣದ ಹೊರಗೆ ಐದು ಗಂಟೆಗಳ ಕಾಲ ಕಾದಿದ್ದೇವೆ. ಅಂತಿಮವಾಗಿ, ನಾವು ಯುಎಸ್ ಮತ್ತು ಟರ್ಕಿಶ್ ಪಡೆಗಳಿಂದ ನಿಯೋಜಿಸಲ್ಪಟ್ಟ ಇನ್ನೊಂದು ಗೇಟ್ ಬಳಸಿ ಒಳಗೆ ಹೋಗಬೇಕಾಯಿತು. ಬೆಳಿಗ್ಗೆ 6 ಗಂಟೆಗೆ ನಾವು ಭಾರತಕ್ಕೆ ಹೊರಟೆವು. 11 ಕ್ಕೆ ಇಲ್ಲಿಗೆ ಬಂದೆವು. ಏರ್ ಫೋರ್ಸ್ ನಮ್ಮನ್ನು ಬಹಳ ಕಾಳಜಿ ವಹಿಸಿ ಕರೆ ತಂದಿತು. ಅವರಿಗೆ ನಾನು ಕೃತಜ್ಞಳಾಗಿದ್ದೇನೆ” ಎಂದು ಪತ್ರಕರ್ತೆ ಹೇಳಿದ್ದಾರೆ.
“ಕಾಬೂಲ್ ವಿಮಾನ ನಿಲ್ದಾಣದಲ್ಲಿ, ನಾನು ಚಪ್ಪಲಿ, ಮಕ್ಕಳ ಪಾದರಕ್ಷೆಗಳು, ಮಹಿಳೆಯರ ದುಪಟ್ಟಾಗಳನ್ನು ನೋಡಿದೆ. ಅದು ಹಿಂದಿನ ರಾತ್ರಿ ನಡೆದ ಭಯಾನಕತೆಗೆ ಸಾಕ್ಷಿಯಾಗಿದೆ. ಅಲ್ಲಿನ ಮಹಿಳೆಯರಲ್ಲಿ ಅತಿ ಹೆಚ್ಚು ಭಯವಿದೆ. ಅವರು ತಮ್ಮನ್ನು ತಾವು ಬಟ್ಟೆಯಿಂದ ಸರಿಯಾಗಿ ಮುಚ್ಚಿಕೊಳ್ಳದಿದ್ದರೆ ಆಸಿಡ್ ದಾಳಿಯಂತಹ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ತಾಲಿಬಾನಿಗಳು ಇಂದು ಯಾವುದೇ ತಾರತಮ್ಯ ಇಲ್ಲ ಎಂದು ಮಾತಾಡುವಾಗ ಅದರ ಬಗ್ಗೆ ವಿಶ್ವಾಸ ಮೂಡುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಅಫ್ಘಾನ್ ಪತನ: ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು; ಟೇಕಾಫ್ ಆದ ವಿಮಾನದಿಂದ ಬಿದ್ದ ಜನರು!
“ನಾನು ಕಾಬೂಲ್ನಲ್ಲಿ ಕಳೆದ 1 ಅಥವಾ 2 ದಿನಗಳಲ್ಲಿ ಬಹಳಷ್ಟು ಬದಲಾವಣೆಯನ್ನು ನೋಡಿದೆ. ಬ್ಯೂಟಿ ಪಾರ್ಲರ್ಗಳಿಗೆ ಬಣ್ಣ ಬಳಿಯಲಾಗುತ್ತಿತ್ತು, ಬೀದಿಗಳಲ್ಲಿ ಮಹಿಳೆಯರಿರಲಿಲ್ಲ. ಕಾಬೂಲ್ ಕ್ರಿಯಾತ್ಮಕ, ಬುದ್ಧಿವಂತ ಮತ್ತು ಫ್ಯಾಶನ್ ಮಹಿಳೆಯರನ್ನು ಹೊಂದಿದೆ” ಎಂದು ಕನಿಕಾ ಹೇಳಿದ್ದಾರೆ.
“ಅವರೆಲ್ಲರೂ ಭಾರತವನ್ನು ಪ್ರೀತಿಸುತ್ತಾರೆ. ನೀವು ಅಲ್ಲಿ 10 ಜನರೊಂದಿಗೆ ಮಾತನಾಡಿ, ಅದರಲ್ಲಿ ಭಾರತದ ಮೇಲೆ ಪ್ರೀತಿ ಮತ್ತು ಪಾಕಿಸ್ತಾನದ ಬಗ್ಗೆ ದ್ವೇಷವಿರುವುದು ನಿಮಗೆ ತಿಳಿಯುತ್ತದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಭಾರತದಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ” ಎಂದು ಪತ್ರಕರ್ತೆ ಕನಿಕಾ ಗುಪ್ತಾ ಎನ್ಡಿಟಿವಿಗೆ ತಿಳಿಸಿದ್ದಾರೆ.
ಇತ್ತ, ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್, ’ತಾಲಿಬಾನಿಗಳು ಯಾರೊಂದಿಗೂ ದ್ವೇಷವನ್ನು ಹೊಂದಿಲ್ಲ ಮತ್ತು ತಮ್ಮ ನಾಯಕನ ಆದೇಶದ ಮೇರೆಗೆ ಅವರು ಎಲ್ಲರಿಗೂ ಕ್ಷಮೆ ನೀಡಿದ್ದಾರೆ. ಅಫ್ಘಾನಿಸ್ತಾನದಿಂದ ಯಾವುದೇ ಅಪಾಯವಿಲ್ಲ ಎಂದು ‘ಇಸ್ಲಾಮಿಕ್ ಎಮಿರೇಟ್’ ಜಗತ್ತಿನ ಎಲ್ಲ ದೇಶಗಳಿಗೆ ಪ್ರತಿಜ್ಞೆ ಮಾಡುತ್ತಿದೆ. ಅಫ್ಘಾನಿಸ್ತಾನದ ಆರ್ಥಿಕತೆ ಮತ್ತು ಜನ ಜೀವನೋಪಾಯದಲ್ಲಿ ಸುಧಾರಣೆಯಾಗಲಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಗುಲಾಮಗಿರಿಯ ಅಪಾಯದ ಅಂಚಿನಲ್ಲಿ ಅಫ್ಘಾನ್ ಮಹಿಳೆಯರು