‘ದೇಶದ ಪ್ರಧಾನಮಂತ್ರಿ ಕ್ಷಮೆ ಕೇಳಲಿ ಎಂದು ನಾವು ಬಯಸುವುದಿಲ್ಲ. ವಿದೇಶದಲ್ಲಿ ಅವರ ಪ್ರತಿಷ್ಠೆಯನ್ನು ಹಾಳುಮಾಡಲು ನಾವು ಬಯಸುವುದಿಲ್ಲ’ ಎಂದು ಭಾರತೀಯ ಕಿಸಾನ್ ಯೂನಿಯನ್ ಟಿಕಾಯತ್ ಬಣದ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರದ್ದಾದ ವಿವಾದಿತ ಮೂರು ಕೃಷಿ ಕಾನೂನುಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಿಕಾಯತ್, ’ಈ ಹೇಳಿಕೆಯು ರೈತರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ ಪ್ರಧಾನಿಯವರನ್ನು ಅವಮಾನಿಸುತ್ತದೆ’ ಎಂದು ಹೇಳಿದ್ದಾರೆ.
“ಪ್ರಧಾನಿ ಕ್ಷಮೆ ಯಾಚಿಸುವುದು ನಮಗೆ ಇಷ್ಟವಿಲ್ಲ, ವಿದೇಶದಲ್ಲಿ ಅವರ ಹೆಸರು ಕೆಡಿಸಲು ನಾವು ಬಯಸುವುದಿಲ್ಲ, ದೇಶದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರು ರೈತರ ಒಪ್ಪಿಗೆಯಿಲ್ಲದೆ ಅದನ್ನು ತೆಗೆದುಕೊಲಾಗುವುದಿಲ್ಲ, ನಾವು ಪ್ರಾಮಾಣಿಕವಾಗಿ ಹೊಲಗಳಲ್ಲಿ ಬೆಳೆ ಬೆಳೆಸಿದ್ದೇವೆ. ಆದರೆ ದೆಹಲಿಯ ಒಕ್ಕೂಟ ಸರ್ಕಾರ ಅದಕ್ಕೆ ಸರಿಯಾದ ಬೆಲೆ ನೀಡಲಿಲ್ಲ” ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಈ ಮೂಲಕ ಎಂಎಸ್ಪಿ ಜಾರಿ ಬಗ್ಗೆ ಸರ್ಕಾರವನ್ನು ತಿವಿದಿದ್ದಾರೆ.
ಇದನ್ನೂ ಓದಿ: ಇದನ್ನೂ ಓದಿರಿ: ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲ ರೈತ ಸಂಘಟನೆಗಳ ನಿರ್ಧಾರ: ಅಂತರ ಕಾಯ್ದುಕೊಂಡ SKM
ವಿವಾದಿತ ಕೃಷಿ ಕಾನೂನುಗಳ ಕುರಿತು ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡಿದ್ದ ಸಚಿವ ತೋಮರ್, “ನಾವು ಕೃಷಿ ಕಾನೂನುಗಳನ್ನು ತಂದಿದ್ದೇವೆ. ಕೆಲವರು ಅದನ್ನು ಇಷ್ಟಪಡಲಿಲ್ಲ. ಆದರೆ ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಜಾರಿಗೊಳಿಸಿದ ಅತಿದೊಡ್ಡ ಸುಧಾರಣೆಗಳು ಈ ಕಾಯ್ದೆಗಳಾಗಿದ್ದವು. ಸರ್ಕಾರ ನಿರಾಶೆಗೊಂಡಿಲ್ಲ, ನಾವು ಒಂದು ಹೆಜ್ಜೆ ಹಿಂದೆ ಸರಿದಿದ್ದೇವೆ. ನಾವು ಮತ್ತೆ ಮುಂದುವರಿಯುತ್ತೇವೆ. ಏಕೆಂದರೆ ರೈತರು ಭಾರತದ ಬೆನ್ನೆಲುಬು. ಬೆನ್ನುಮೂಳೆಯನ್ನು ಬಲಪಡಿಸಿದರೆ ದೇಶವು ಬಲಗೊಳ್ಳುತ್ತದೆ” ಎಂದು ಹೇಳಿಕೆ ನೀಡಿದ್ದರು.
ಕಿಸಾನ್ ಏಕ್ತಾ ಮೋರ್ಚಾ ಸೇರಿದಂತೆ ಪ್ರತಿಪಕ್ಷಗಳು ಖಂಡನೆ ವ್ಯಕ್ತಪಡಿಸಿದ ಬಳಿಕ, ’ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ತಿದ್ದುಪಡಿ ಮೂಲಕ ಕೃಷಿ ಕಾನೂನುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಕೇಂದ್ರಕ್ಕೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು.