ಇಂದು ತುಮಕೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ರೈತ ವಿರೋಧಿ ನೀತಿಯನ್ನು ಖಂಡಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಆಗಮಿಸಿದ ರಾಜ್ಯ ರೈತ ಸಂಘದ ಮುಖಂಡರನ್ನು ಎಳೆದಾಡಿದ ಪೊಲೀಸರು ಸುಮಾರು 30ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಪೊಲೀಸರು ಎಳೆದಾಡುವಾಗ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಅನಂದ ಪಟೇಲ್ ಅವರ ಕೈಬೆರಳು ಗಾಯವಾಗಿದೆ. ಪ್ರತಿಭಟನಾ ಮೆರವಣಿಗೆ ನಡೆಸಲು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಸಮಾವೇಶಗೊಳ್ಳುತ್ತಿದ್ದರು. ಆಗ ಅಲ್ಲಿಯೇ ಇದ್ದ ಪೊಲೀಸರು ಮತ್ತು ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಬಲವಂತವಾಗಿ ಪ್ರತಿಭಟನಾನಿರತರನ್ನು ವಾಹನದೊಳಗೆ ತುಂಬಿದರು.
ಈ ಕುರಿತು ನಾನುಗೌರಿ.ಕಾಮ್ ಜೊತೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್, ಪ್ರಧಾನಿಯವರು ಕೊಟ್ಟ ಭರವಸೆಗಳು ಹುಸಿಯಾಗಿವೆ. ಈ ಕುರಿತು ಇಂದು ನಾವು ರೈತರಿಗೆ ಸತ್ಯಾಂಶ ತಿಳಿಸಲು ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ನಮ್ಮನ್ನು ಪೊಲೀಸರು ಬಲವಂತವಾಗಿ ಎಳೆದಾಡಿ, ಹಲ್ಲೆ ನಡೆಸಿದರು ಎಂದು ದೂರಿದ್ದಾರೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಹುಳಿಯಾರು ಸೇರಿದಂತೆ ಎಲ್ಲಾ ಕಡೆಯೂ ರೈತ ಮುಖಂಡರನ್ನು ಬಂಧಿಸಲಾಗಿದೆ. ಇದು ಸರ್ಕಾರದ ಹೇಡಿತನವಾಗಿದೆ. ರೈತರ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಕಾರ್ಯಕ್ರಮದಲ್ಲಿ ನೈಜ ಕಾಳಜಿಯುಳ್ಳ ರೈತರು ಭಾಗವಹಿಸಿಯೇ ತೀರುತ್ತಾರೆ. ಶೇಕಡ 70ರಷ್ಟು ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಬಂದರೆ, ಇನ್ನುಳಿದ 30ರಷ್ಟು ಮಂದಿ ರೈತರು ಸಮಾವೇಶದಲ್ಲಿ ಭಾಗವಹಿಸಿ ಪ್ರಧಾನಿ ವಿರುದ್ಧ ಘೋಷಣೆ ಕೂಗಲಿದ್ದಾರೆ ಎಂದು ಅವರು ಹೇಳಿದ್ದಾರೆ.