ಐತಿಹಾಸಿಕ ಗೆಲುವು ಸಾಧಿಸಿದ ರೈತ ಹೋರಾಟವನ್ನು ಇಡೀ ದೇಶವೇ ಮೆಚ್ಚಿದೆ. ಕಳೆದ ಒಂದು ವರ್ಷದಿಂದ ದೆಹಲಿ ಗಡಿಗಳಲ್ಲಿ ನೆಲೆನಿಂತು, ಪಟ್ಟುಬಿಡದೇ ಹೋರಾಡಿ ತಮ್ಮ ಹಕ್ಕುಗಳನ್ನು ಪಡೆದುಕೊಂಡ ರೈತರು ತಮ್ಮ ಹಳ್ಳಿಗಳಿಗೆ ವಿಜಯ ಯಾತ್ರೆ ಮೂಲಕ ಹೊರಟಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಜನರು ಹೂಮಳೆ ಸುರಿಸುತ್ತಾ, ಸಂಭ್ರಮಿಸುತ್ತ ಹೋರಾಟಗಾರರನ್ನು ಬರಮಾಡಿಕೊಳ್ಳುತ್ತಿದ್ದಾರೆ. ಪಂಜಾಬ್ನ ಪ್ರತಿ ಹಳ್ಳಿಗಳಲ್ಲಿಯೂ ಈಗ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದು ಹಳ್ಳಿಗಳ ಕತೆಯಾದರೆ ಇನ್ನು ನಗರಗಳಲ್ಲಿಯೂ ಜನರು ರೈತರ ಹೋರಾಟವನ್ನು ಶ್ಲಾಘಿಸುತ್ತಿದ್ದು, ಮೊಂಬತ್ತಿ ಹಾಗೂ ದೀಪ ಬೆಳಗುವ ಮೂಲಕ ಸಂಭ್ರಮಾಚರಿಸುತ್ತಿದ್ದಾರೆ.
ಸರಭ್ ನಗರದ ನಿವಾಸಿ ಶಂಶೇರ್ ಸಿಂಗ್, ‘ರೈತರು ತಮ್ಮ ಹೋರಾಟದಲ್ಲಿ ಗೆದ್ದು ಮನೆಗೆ ಮರಳುತ್ತಿರುವುದು ಸಂಭ್ರಮದ ಕ್ಷಣವಾಗಿದೆ. ಈ ದಿನವನ್ನು ದೀಪಾವಳಿಯಂತೆ ಆಚರಿಸಲು, ನಾನು ನನ್ನ ಮನೆಯ ಹೊರಗೆ ಮೇಣದಬತ್ತಿ ಮತ್ತು ದೀಪಗಳನ್ನು ಬೆಳಗಿಸಿದ್ದೇನೆ. ಡಿಸೆಂಬರ್ 13 ರಂದು ಎಲ್ಲ ರೈತರು ಸ್ವರ್ಣ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಲಿರುವುದರಿಂದ ಮೂರು ದಿನಗಳ ಕಾಲ ದೀಪ ಬೆಳಗಿಸುತ್ತೇನೆ’ಎಂದಿದ್ದಾರೆ.
‘ರೈತರು ಇಡೀ ರಾಷ್ಟ್ರಕ್ಕೆ ಆಹಾರವನ್ನು ಬೆಳೆಯುವವರು. ನಾನು ಅವರಿಗೆ ಧನ್ಯವಾದ ಸೂಚಿಸಲು ನನ್ನ ಮನೆ ಮತ್ತು ಗುರುದ್ವಾರದಲ್ಲಿ ಮೇಣದಬತ್ತಿಗಳನ್ನು ಬೆಳಗಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಸರಭ್ ನಗರದ ಇನ್ನೊಬ್ಬ ನಿವಾಸಿ ಗುರುಪ್ರೀತ್ ಸಿಂಗ್, ದೆಹಲಿಯಿಂದ ವಿಜಯ ಯಾತ್ರೆ ನಡೆಸುತ್ತಿರುವ ರೈತರಿಗೆ ಫತೇಘರ್ ಸಾಹಿಬ್ ಗುರುದ್ವಾರದ ಬಳಿ ಬಿಸಿ ಚಹಾ ಮತ್ತು ಪಕೋಡಗಳನ್ನು ಬಡಿಸುವ ಲಂಗರ್ ಅನ್ನು ಆಯೋಜಿಸಿದ್ದಾರೆ. ‘ಡಿಸೆಂಬರ್ 13 ರಂದು ಸ್ವರ್ಣ ಮಂದಿರಕ್ಕೆ ಹೋಗುವ ಮೊದಲು ಕೆಲವು ರೈತರು ಗುರುದ್ವಾರದಲ್ಲಿ ಉಳಿಯುವ ಕಾರಣ, ನಾನು ಅವರಿಗಾಗಿ ದಾರಿಯಲ್ಲಿ ಲಂಗರ್ ಅನ್ನು ಆಯೋಜಿಸಿದ್ದೇನೆ’ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ವರ್ಷದಿಂದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇತ್ತೀಚೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದೆ. ಎಂಎಸ್ಪಿ ಸೇರಿದಂತೆ ರೈತರ ಇತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರವು ಲಿಖಿತ ಭರವಸೆ ನೀಡಿದ ನಂತರ ರೈತರು ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದ್ದಾರೆ.