Homeಮುಖಪುಟಕೃಷಿ ಫಸಲುಗಳ ಬೆಲೆ - ಐದು ಶತಮಾನಗಳ ಸಂಘರ್ಷ

ಕೃಷಿ ಫಸಲುಗಳ ಬೆಲೆ – ಐದು ಶತಮಾನಗಳ ಸಂಘರ್ಷ

- Advertisement -
- Advertisement -

ಭಾರತದಲ್ಲಿ ಇಂದು ಕಾರ್ಪೊರೆಟ್‌ಗಳು ಕೃಷಿ ಭೂಮಿಯನ್ನೂ, ಕೃಷಿ ಉತ್ಪಾದನೆಗಳನ್ನು ವಶ ಮಾಡಿಕೊಳ್ಳುವುದರ ವಿರುದ್ಧ ಒಂದು ವರ್ಷಕ್ಕೂ ಕಾಲ ಬೃಹತ್ ಸಂಘರ್ಷ ನಡೆದು ಮೋದಿಯ ಸುಗ್ರೀವಾಜ್ಞೆಗಳನ್ನು ಕಸದಬುಟ್ಟಿಗೆ ಹಾಕುವ ಮೂಲಕ ಜಗತ್ತೇ ತಿರುಗಿ ನೋಡುವಂತಹ ಯಶಸ್ಸು ಪಡೆದಿದೆ ರೈತ ಹೋರಾಟ. ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಮತ್ತಿತರ ಆರು ವಿಷಯಗಳ ನಿಟ್ಟಿನಲ್ಲಿ ಮತ್ತೂ ಮುಂದುವರೆದಿದೆ ರೈತ ಸಂಘರ್ಷ. 7.12.21ರಂದು ಈ ಒತ್ತಾಯಗಳಿಗೆ ಮೋದಿ ಸರ್ಕಾರ ಒಪ್ಪುವ ಬಗ್ಗೆ ಅಮಿತ್‌ಶಾರಿಂದ ಪತ್ರ ಪಡೆವ ಮೂಲಕ ಮತ್ತೊಂದು ಹಂತದ ವಿಜಯ ಸಾಧಿಸಿದೆ. ಬೆಂಬಲ ಬೆಲೆ ಬಗ್ಗೆ ಚರ್ಚಿಸಲು ಒಂದು ಸಮಿತಿ ರಚಿಸುವ ಲಿಖಿತ ಆಶ್ವಾಸನೆಯನ್ನು ಸರ್ಕಾರ ಕೊಟ್ಟಿದೆ.

ಈ ಹೋರಾಟಗಳಿಗೆ ಕಾರಣವಾದ ಮೂರು ಕೃಷಿ ಕಾನೂನುಗಳ ಸುಗ್ರೀವಾಜ್ಞೆ ಮತ್ತು ಒಂದು ವಿದ್ಯುತ್ ಮಸೂದೆ ಮಂಡನೆಯಾದ ದಿನದಿಂದ ದೇಶಾದ್ಯಂತ ಕೃಷಿಯ ಕಾರ್ಪೊರೆಟೀಕರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದಾನಿ, ಅಂಬಾನಿ ಎಂಬ ಕಾರ್ಪೊರೇಟ್ ಧಣಿಗಳ ಇಚ್ಛೆಗೆ ವಿಧೇಯರಾಗಿ ಮೋದಿ ಸರ್ಕಾರ ಈ ಕಾನೂನುಗಳನ್ನು ತಂದಿದೆ. ರೈತರಿಗೆ ಯಾವ ಬೆಂಬಲ ಬೆಲೆ ನೀಡದೆ, ಕೃಷಿ ವಸ್ತುಗಳ ಕೊಳ್ಳುವಿಕೆ ಮೇಲೆ ಯಾವ ನಿಯಂತ್ರಣವೂ ಇಲ್ಲದೆ ಮನಸೇಚ್ಛೆಯಾಗಿ ವರ್ತಿಸುವ ಅವಕಾಶ ನೀಡುತ್ತಿದೆ ಎಂಬುದರ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯಿತು. ನಿರ್ದಿಷ್ಟವಾಗಿ ಈ ಕಂಪನಿಗಳ ವಿರುದ್ಧ ತೀವ್ರ ಪ್ರತಿಭಟನೆಗಳೂ ನಡೆದವು.

ಇಂದು ರೈತರ ಬಹಳ ಮುಖ್ಯ ಒತ್ತಾಯವಾಗಿರುವ ಲಾಭದಾಯಕ ಬೆಂಬಲ ಬೆಲೆ ಇಂದು ನಿನ್ನೆಯದಲ್ಲ. ವಾಸ್ಕೋಡಾಗಾಮನೆಂಬ ಮೊತ್ತಮೊದಲ ಐರೋಪ್ಯ (ಪೋರ್ಚುಗೀಸ್) ನಾವಿಕ ಕೇರಳದ ತೀರದ ಕಲ್ಲಿಕೋಟೆಗೆ ಬಂದು 1492ರಲ್ಲಿ ಇಳಿದಾಗಿನಿಂದ ಕೃಷಿ ವಸ್ತುಗಳ ಬೆಲೆಯ ಪ್ರಶ್ನೆ ಎದ್ದಿದೆ. ಅಂದರೆ ಈ ಪ್ರಶ್ನೆಗೆ ಕನಿಷ್ಠ ಐನೂರು ವರ್ಷಗಳ ದೀರ್ಘ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೆ ಕೋಟ್ಯಂತರ ರೈತರ ಬಲಿಯನ್ನು ಪಡೆದಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರದ ಕರಾವಳಿಯ ರಾಜ, ರಾಣಿಯರು ಮತ್ತು ಐರೋಪ್ಯ ನಾವಿಕ ಸೈನ್ಯಗಳ ನಡುವಣ ಯುದ್ಧಗಳು, ಆಕ್ರಮಣಗಳು ಆರಂಭವಾಗಿದ್ದೇ ಕೃಷಿ ಫಸಲುಗಳ ಬೆಲೆಯ ವಿಷಯದಲ್ಲಿ. ಮಂಗಳೂರಿನ ಬಳಿಯ ಉಳ್ಳಾಲದ ಪ್ರಸಿದ್ಧ ರಾಣಿ ಅಬ್ಬಕ್ಕ, ಗೇರುಸೊಪ್ಪೆ ಸಂಸ್ಥಾನದ ರಾಣಿ, ಇಕ್ಕೇರಿ, ಕೆಳದಿಯ ನಾಯಕರು ಸೇರಿದಂತೆ ಕರಾವಳಿಯುದ್ದಕ್ಕೂ ನಡೆದ ಯುದ್ಧಗಳಲ್ಲಿ ಪ್ರಾಣ ತೆತ್ತ ರೈತರಿಂದ ಈ ಬಲಿದಾನ ಆರಂಭವಾಯಿತು. 1990ರ ನಂತರದ ಮೂರು ದಶಕಗಳಲ್ಲಿನ ಲಕ್ಷಾಂತರ ರೈತರ ಆತ್ಮಹತ್ಯೆಗಳು, ದೆಹಲಿ ಗಡಿಯ ರೈತ ಸಂಘರ್ಷದಲ್ಲಿ ಪ್ರಾಣ ತೆತ್ತ ಏಳು ನೂರಕ್ಕೂ ಹೆಚ್ಚಿನ ರೈತರ ಸಾವು ಈ ಬಲಿದಾನಕ್ಕೆ ಇತ್ತೀಚಿನ ಸೇರ್ಪಡೆ.

ಯುರೋಪಿನ ದೇಶಗಳು ಅಪಾರ ಖರ್ಚು ಮಾಡಿ ಮತ್ತು ಸಾಹಸದಿಂದ ಭಾರತದ ಮಾರ್ಗವನ್ನರಸಿ ಪಯಣಿಸಿದ್ದೇ ಇಲ್ಲಿನ ಕೃಷಿ ಫಸಲುಗಳ ವ್ಯಾಪಾರಕ್ಕಾಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗೆ ಮೊದಲು ಭಾರತದ ಕರಾವಳಿಗೆ ಬಂದಿಳಿದ ಪೋರ್ಚುಗೀಸರು ಕೈಹಾಕಿದ್ದೇ ಇಲ್ಲಿಯ ಅಕ್ಕಿ, ಮೆಣಸು, ಶುಂಠಿ ಮತ್ತು ಇತರ ಸಾಂಬಾರ ಪದಾರ್ಥಗಳಿಗಾಗಿ. ಕರ್ನಾಟಕದ ಸಮುದ್ರ ತೀರ ಪ್ರದೇಶಗಳು ಮತ್ತು ಘಟ್ಟಗಳು ಈ ವ್ಯಾಪಾರವೆಂಬ ಹೆಸರಿನ ದೌರ್ಜನ್ಯಗಳಿಗೆ ಮೊದಲ ವೇದಿಕೆಯಾಯಿತು.

ಅಕ್ಕಿ, ಮೆಣಸಿನ ಬೆಲೆ ಬಗ್ಗೆ ಪೋರ್ಚುಗೀಸ ಅರಸನ ಆಜ್ಞೆ

ಪೋರ್ಚುಗೀಸರು ಕೊಳ್ಳುತ್ತಿದ್ದ ಅಕ್ಕಿಯ ಬೆಲೆ ಒಂದು ಕೋರ್ಜಿಗೆ (ಇಂದಿನ 1640.52 ಕೇಜಿಗೆ ಸಮ) 12 ರಿಂದ 14 ಚಿನ್ನದ ಪಗೋಡಾ ಇತ್ತು. ಮೆಣಸಿನ ಒಂದೊಂದು ಖಂಡಿಗೆ (220.32 ಕೆಜಿ) 22ರಿಂದ 30 ಪಗೋಡಾವರೆಗೆ ಬೆಲೆ ಏರಿಳಿಕೆಯಾಗುತ್ತಿತ್ತು. ತಮ್ಮ ಬಂದೂಕು, ಫಿರಂಗಿ ಮೊದಲಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ದೌರ್ಜನ್ಯದಿಂದ ತಮಗೆ ಬೇಕಾದ ಬೆಲೆಯನ್ನು ಹೇರುತ್ತಿದ್ದರು. ಸಂಸ್ಥಾನಗಳ ನಡುವೆ ಜಗಳ ತಂದಿಕ್ಕಿ ಅದನ್ನು ಅಗ್ಗದ ಬೆಲೆಗೆ ಕೊಳ್ಳಲು ಬಳಸುತ್ತಿದ್ದರು. ಪೋರ್ಚುಗಲ್ಲಿನ ರಾಜ ಮೆಣಸಿನ ಒಂದು ಖಂಡಿಗೆ 28.50ರಿಂದ 29 ಪಗೋಡಾ ಮಾತ್ರ ಕೊಡಬೇಕೆಂದು ರಾಜಾಜ್ಞೆ ಹೊರಡಿಸಿದನಂತೆ. ಹೇಗಿದೆ ಈ ವ್ಯಾಪಾರ! ಭಾರತದ ಬೆಳೆಗಳಿಗೆ ಬೆಲೆ ನಿರ್ಧಾರ ಮಾಡುವವನು ಪರದೇಶದ ಅರಸ. ಇಂದೂ ಕೂಡಾ ಭಾರತದ ರೈತರ ಫಸಲಿನ ಬೆಲೆಯನ್ನು ನಿರ್ಧರಿಸುವುದು ಆಯಾ ಬೆಳೆಗಳ ಅಂತಾರಾಷ್ಟ್ರೀಯ ವ್ಯಾಪಾರವನ್ನು ಮುಷ್ಟಿಯಲ್ಲಿಟ್ಟುಕೊಂಡಿರುವ ಬೃಹತ್ ಬಹುರಾಷ್ಟ್ರೀಯ ಕಾರ್ಪೊರೆಟ್‌ಗಳು. ಇದು ವಿಶ್ವ ವ್ಯಾಪಾರ ಸಂಸ್ಥೆಯ ರೂಲೀಸು.

ಯುರೋಪಿನ ಈ ದೇಶಗಳ ವ್ಯಾಪಾರಿಗಳು ಎಷ್ಟೋ ಬಾರಿ ಬೆಲೆ ಕೊಟ್ಟು ಕೊಳ್ಳುವುದನ್ನು ಬಿಟ್ಟು ಯುದ್ಧ ಮಾಡಿ ದೌರ್ಜನ್ಯದಿಂದ ದರೋಡೆ ಮಾಡುವುದು, ಯುದ್ಧದ ಬೆದರಿಕೆ ಒಡ್ಡಿ ಅಕ್ಕಿ, ಮೆಣಸುಗಳನ್ನು ಕಪ್ಪಕಾಣಿಕೆಯಾಗಿ ವಸೂಲಿ ಮಾಡುವುದೂ ನಡೆದಿದೆ. ವಾಸ್ಕೋಡಾಗಾಮ ಇಲ್ಲಿಗೆ ಕಾಲಿಟ್ಟ ಏಳೆಂಟು ವರ್ಷಗಳಲ್ಲಿ, 1502ರಲ್ಲಿ ಭಟ್ಕಳವನ್ನು ಸುಟ್ಟು ವರ್ಷಕ್ಕೆ ಎರಡು ಸಾವಿರದ ಕೋರ್ಜಿ ಅಕ್ಕಿಯನ್ನು ಕಪ್ಪಕಾಣಿಕೆಯಾಗಿ ವಸೂಲಿ ಮಾಡಿದ.


ಇಂಗ್ಲಿಷರ ಬೂಟಿನಡಿಯಲ್ಲಿ ರೈತರ ಗೋಳು

ಕೇವಲ ಗೋವಾ, ಭಟ್ಕಳ, ಹೊನ್ನಾವರ, ಬಸರೂರು, ಮಂಗಳೂರು ಕೊಚ್ಚಿ ಮುಂತಾದ ಬಂದರುಗಳ ಮೇಲೆ ಮಾತ್ರ ಹಿಡಿತ ಸ್ಥಾಪಿಸಿದ್ದ ಪೋರ್ಚುಗೀಸರು ಭಾರತದ ರೈತರ ಮೇಲೆ ನಡೆಸಿದ ದಬ್ಬಾಳಿಕೆಯೇ ಹೀಗಿದ್ದರೆ, ಇನ್ನು ಇಡೀ ಭಾರತವನ್ನು ತಮ್ಮ ವಶ ಮಾಡಿಕೊಂಡ ಬ್ರಿಟಿಷರ ಉರವಣಿಗೆ ಎಷ್ಟಿರಬಹುದು ಯೋಚಿಸಿ.

ಬ್ರಿಟಿಷರು ತಮ್ಮ ಕೈಗಾರಿಕೆಗಳಿಗೆ ತುರ್ತು ಅಗತ್ಯಗಳಾದ ಹತ್ತಿ, ನೀಲಿ, ಸೆಣಬು, ರೇಷ್ಮೆ, ಹೊಗೆಸೊಪ್ಪುಗಳನ್ನು ಬೆಳೆಯಲು ರೈತರ ಮೇಲೆ, ದೇಸೀ ಸಂಸ್ಥಾನಗಳ ಮೇಲೆ ದಬ್ಬಾಳಿಕೆ ನಡೆಸಿದರು. ಭೂ ಕಂದಾಯವನ್ನು ಹಣದ ಮೂಲಕ ಪಾವತಿ ಮಾಡಬೇಕೆನ್ನುವ ನಿರ್ಬಂಧ ಮತ್ತು ಅದನ್ನು ಪದೇಪದೇ ಹೆಚ್ಚಿಸುವುದು ನಡೆದಿತ್ತು. ಇದು ಈ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಒತ್ತಡಕ್ಕೆ ರೈತರನ್ನು ಸಿಲುಕಿಸಿತು. ಜೊತೆಗೆ ಗೋಧಿ, ಅಕ್ಕಿ, ಸಕ್ಕರೆ, ಎಣ್ಣೆ ಕಾಳುಗಳು ಇತ್ಯಾದಿ ಆಹಾರ ವಸ್ತುಗಳೂ ಕೂಡಾ ವಾಣಿಜ್ಯ ಬೆಳೆಗಳಾದವು. ಎಷ್ಟೋ ಪ್ರದೇಶಗಳಲ್ಲಿ ಚೀನಾಕ್ಕೆ ರಫ್ತು ಮಾಡಲು ಅಫೀಮು ಬೆಳೆಯಲು ಒತ್ತಡ ಹೇರಲಾಯಿತು. ಈ ವಸ್ತುಗಳ ಬೆಲೆಗಳು ನಿರಂತರವಾಗಿ ಇಳಿತಕ್ಕೊಳಗಾದವು. ಗೋಧಿಯ ಬೆಲೆ 1810ರ ದಶಕದಲ್ಲಿದ್ದರ ಅರ್ಧಕ್ಕೆ 1850ರ ದಶಕದಲ್ಲಿ ಇಳಿಯಿತು.

ಹತ್ತಿ, ನೀಲಿ ಮೊದಲಾದವುಗಳು ಬೇರೆ ಬ್ರಿಟಿಷ್ ಅಧೀನದ ವಸಾಹತುಗಳಲ್ಲಿನ ಬೆಲೆಗಳನ್ನು ಆಧರಿಸಿ ತೀವ್ರ ಏರಿಳಿತಕ್ಕೊಳಗಾದವು. ಅಮೆರಿಕದಲ್ಲಿ ಕಪ್ಪು ಗುಲಾಮರ ಶ್ರಮವನ್ನು ಹಿಂಡಿ ಸಾವಿರಾರು ಎಕರೆಗಳ ಫಾರಂಗಳಲ್ಲಿ ಬೆಳೆಸುತ್ತಿದ್ದ ಅಗ್ಗದ ಹತ್ತಿ, ಬ್ರೆಜಿಲ್‌ನ ಹೊಗೆಸೊಪ್ಪು, ಕೆರಿಬಿಯನ್ ದ್ವೀಪ ಮೊದಲಾದ ದೇಶಗಳ ಸಕ್ಕರೆಯೊಂದಿಗೆ ಭಾರತದ ನಾಲ್ಕೈದು ಎಕರೆಗಳ ಗೇಣಿದಾರ ರೈತ ಸ್ಫರ್ಧೆ ಮಾಡಬೇಕಾಗಿತ್ತು. ಆಹಾರದ ಬೆಳೆಗಳನ್ನು ಬಿಟ್ಟು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಒತ್ತಡದಿಂದಾಗಿ ಆಹಾರದ ಕೊರತೆ, ಕ್ಷಾಮ ಉಂಟಾಯಿತು. ಡಾಮರಗಳಲ್ಲಿ ತಿನ್ನಲೇನೂ ಇಲ್ಲದೆ ಲಕ್ಷಾಂತರ ಜನರ ಸಾವುಗಳಾಗಿ “ಹೊಸ ಶಕೆ” ಆರಂಭಾಯಿತು.

“ಹತ್ತಿ ಬಿತ್ತಿ ಬೆಳೆಕೊಂಡೆವು ಹಾಳು
ತಿನ್ನಲು ದೊರೆಯದು ತುಸು ಕಡಿ ಕಾಳು”
“ಕುರುಡು ಕಾಂಚಾಣ ಕುಣಿಯತಲಿತ್ತು”,

“ಗದರುತ್ತಿಹುದು ಗರ್ಜಿಸುತಿಹುದು ಬೆವರ ಬಗ್ಗರ ತುತ್ತಿನ ಚೀಲದ ಒಳಗಿನಒಳಗಿನ ಒಳದನಿಯೊಂದು” ಎಂದು ಬೇಂದ್ರೆಯವರು ಬರೆದದ್ದು ಇಂತಹ ಹಿನ್ನೆಲೆಯಲ್ಲಿಯೇ.

ಶತ ಶತಮಾನಗಳ ಈ ಕತೆಯೆಲ್ಲ ಏಕೆ ಬೇಕು ಎಂದು ಕೆಲವರು ಪ್ರಶ್ನಿಸಬಹುದು.

ಅಮೆರಿಕದ ಮತ್ತಿತರ ದೇಶಗಳ ಕಾರ್ಪೊರೆಟ್‌ಗಳ ಕೃಷಿಯ ಜೊತೆ ಸ್ಫರ್ಧೆ ಮಾಡಬೇಕಾದ, ಇಂದಿನ ವಿಶ್ವ ವಾಣಿಜ್ಯ ಸಂಸ್ಥೆ WTO ಮತ್ತು ಅಮೆರಿಕ ಮೊದಲಾದ ದೇಶಗಳು ಹೇರಿದ ನಿಯಮಗಳಡಿ ಒದ್ದಾಡುತ್ತಿರುವ ರೈತರ ಪರಿಸ್ಥಿತಿಯೊಂದಿಗೆ ಈ ಶತಶತಮಾನಗಳ ಸಾಮ್ಯತೆ ಎದ್ದು ಕಾಣುತ್ತದೆ.

ರೈತರ ಇಂತಹ ದುಸ್ಥಿತಿಗಳೇ 1850ರ ದಶಕದ ನೀಲಿ ರೈತರ, ಸಂತಾಲರ ದಂಗೆಗೆ ಕಾರಣವಾದವು. ಭಾರತದ ಮೊತ್ತಮೊದಲ ಆಧುನಿಕ ನಾಟಕ ’ನೀಲ ದರ್ಪಣ್’ ಇದೇ ಸಂದರ್ಭದಲ್ಲಿಯೇ ರಚಿತವಾಗಿ ಇಂಗ್ಲಿಷಿಗೂ ಅನುವಾದವಾಗಿ ಇಂಗ್ಲೆಂಡಿನಲ್ಲಿಯೂ ಪ್ರದರ್ಶನ ಕಂಡಿತು.

ಗಾಂಧೀಜಿಯವರ ಭಾರತದ ಮೊದಲ ಹೋರಾಟವೂ ಚಂಪಾರಣ್ ನೀಲಿ ಬೆಳೆಗಾರರ ಹೋರಾಟವೇ. ನೀಲಿ ಬೆಳೆಯ ಬೆಲೆ, ಕಂಟ್ರಾಕ್ಟ್ ಫಾರ್ಮಿಂಗ್ ಪದ್ಧತಿ ಇವುಗಳ ಸಲುವಾಗಿಯೇ. ನೆಹರೂ ಕೂಡಾ ರೈತ ಹೋರಾಟಗಾರರಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಎಂಬುದನ್ನು ನೆನೆಯೋಣ. 1920ರ, 1930ರ ಸ್ವಾತಂತ್ರ್ಯ ಚಳವಳಿಗಳಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದರು.

1920-33ರಲ್ಲಿ ವಿಶ್ವವನ್ನು ಆವರಿಸಿದ ಆರ್ಥಿಕ ಮಹಾ ಕುಸಿತ ಭಾರತದಲ್ಲಿ ರೈತರ ಮೇಲೆ ಇದ್ದಕ್ಕಿದ್ದಂತೆ ಎರಗಿ ಕೃಷಿ ಫಸಲುಗಳ ಬೆಲೆಯನ್ನು ಶೇ.55 ರಷ್ಟು ಅಂದರೆ ಅರ್ಧಕ್ಕಿಂತ ಹೆಚ್ಚು ಕುಸಿಯುವಂತೆ ಮಾಡಿತು.

ಇಂತಹ ಪರಿಸ್ಥಿತಿಗಳು ಭಾರತದ ರೈತರನ್ನು ದೊಡ್ಡ ಪ್ರಮಾಣದಲ್ಲಿ ಸಾಲಗಾರರನ್ನಾಗಿ ಮಾಡಿತು. ರೈತರ ಭೂಮಿ ನಗರ, ಪಟ್ಟಣಗಳ ಕೃಷಿಕರಲ್ಲದ ಲೇವಾದೇವಿಗಾರರ ಒಡೆತನಕ್ಕೆ ಒಳಗಾಯಿತು. ರೈತರು ತಮ್ಮದೇ ಭೂಮಿಯ ಗೇಣೀದಾರರಾದರು ಅಥವಾ ದೊಡ್ಡ ಸಂಖ್ಯೆಯಲ್ಲಿ ಕೃಷಿಯನ್ನು ಕೈಬಿಟ್ಟು ನಗರಗಳ ಅಗ್ಗದ ದುಡಿಮೆಯ ಕೂಲಿಕಾರ, ಕೈಗಾರಿಕೆಗಳ ಕಾರ್ಮಿಕರಾದರು. ಇನ್ನು ಈ ರೈತರ ಹೊಲಗಳಲ್ಲಿ ಜೀತಗಾರರಾಗಿ, ಕೂಲಿಕಾರರಾಗಿ ದುಡಿಯುತ್ತಿದ್ದ ದಲಿತರ ಪಾಡೇನು? ಅವರೂ ನಗರ, ಪಟ್ಟಣಗಳ ಅಗ್ಗದ ಕೂಲಿಕಾರರಾದರು.

ಈ ಮಹಾಕುಸಿತದ ಪರಿಣಾಮಗಳನ್ನು ಎದುರಿಸಲು ಕಾಂಗ್ರೆಸ್‌ನಿಂದ ಬಿಡಿಸಿಕೊಂಡು ಸ್ವತಂತ್ರವಾದ ರೈತ ಚಳವಳಿ ಯುಪಿ, ಬಿಹಾರ, ಬಂಗಾಲ, ಪಂಜಾಬ್ ಮಹಾರಾಷ್ಟರ ಮೊದಲಾದ ಪ್ರಾಂತ್ಯಗಳಲ್ಲಿ ಚಿಮ್ಮಿಬಂದಿತು. ಎರಡನೇ ಮಹಾಯುದ್ಧದ ನಂತರದ ಬೆಲೆ ಏರಿಕೆ, ಆಹಾರ ವಸ್ತುಗಳ ಕೃತಕ ಅಭಾವದ ನಂತರ ಭಾರತದ ಹಲವು ಪ್ರದೇಶಗಳಲ್ಲಿ ರೈತ ಹೋರಾಟ ಸಂಘರ್ಷಗಳಾಗಿ ಬೆಳೆದುನಿಂತಿತು. ತೆಲಂಗಾಣ ರೈತರ ಸಶಸ್ತ್ರ ದಂಗೆ, ಕೇರಳದ ಮಲಬಾರ್ ಪ್ರದೇಶದ ಕಯ್ಯಾರು, ಕರಿವೆಳ್ಳೂರು ಮೊದಲಾದ ಹಲವು ಹಳ್ಳಿಗಳ ರೈತ ಹೋರಾಟ, ಬಂಗಾಲದ ತೇಭಾಗ ಗೇಣಿ ಚಳುವಳಿ, ಅಸ್ಸಾಂ, ತ್ರಿಪುರಾಗಳ ಸುವರ್ಣ ಕಣಿವೆ ರೈತರ ಹೋರಾಟ, ಮಹಾರಾಷ್ಟ್ರದ ವಾರಲೀ ಆದಿವಾಸಿಗಳ ಹೋರಾಟ, ತಂಜಾವೂರು, ಪಂಜಾಬ್ ರೈತರ ಹೋರಾಟ ಹೀಗೆ ಹಲವು ಸಂಘರ್ಷಗಳು ಬೆಳೆದು ಸ್ವಾತಂತ್ರ್ಯ ಚಳುವಳಿಯ ವಿಸ್ತಾರಕ್ಕೆ ಕಾರಣವಾದವು. ಕೊನೆಗೆ ಸ್ವಾತಂತ್ರ್ಯ ಪಡೆಯುವದರಲ್ಲಿ ರೈತ ಸಂಘರ್ಷಗಳ ಪಾತ್ರ ಮಹತ್ವಪೂರ್ಣವಾಯಿತು. ತೇಭಾಗದ ನಾಮ ಶೂದ್ರ, ತೆಲಂಗಾಣದ ಅಸ್ಪೃಶ್ಯರು, ಲಂಬಾಣಿಗಳು, ವಾರಲಿ ಆದಿವಾಸಿಗಳು, ಸಂತಾಲರಂತೆ ಈ ಹೋರಾಟಗಳಲ್ಲಿ ದಲಿತರ, ಆದಿವಾಸಿಗಳ ಪಾತ್ರ ಕೂಡಾ ಮಹತ್ವದ್ದು.

ಈ ಎಲ್ಲ ಜನಸಮುದಾಯಗಳ ಹೋರಾಟದ ಫಲವಾಗಿ ದಕ್ಕಿದ ಸ್ವಾತಂತ್ರ್ಯದ ಫಲವಾಗಿ ಸ್ವತಂತ್ರ ಭಾರತದ ಸರ್ಕಾರ ತನ್ನ ಮೊದಲೆರಡು ದಶಕಗಳಲ್ಲಿ ರೈತ, ದಲಿತ, ಆದಿವಾಸಿಗಳಿಗೆ ಒಂದಷ್ಟು ಪರಿಹಾರ ಒದಗಿಸಲು ಪ್ರಯತ್ನಿಸಿತು. ವಿದೇಶಿ ಕೃಷಿ ಫಸಲುಗಳ ಆಮದಿನಿಂದಾಗುವ ಬೆಲೆ ಕುಸಿತದಿಂದ ಮತ್ತು ಅಗ್ಗದ ಬೆಲೆಗೆ ಮಾರುವ ರಫ್ತಿನಿಂದ ರೈತರನ್ನು, ಗ್ರಾಮೀಣ ಆರ್ಥಿಕತೆಯನ್ನು ರಕ್ಷಿಸಲು ಮೂರು ಸುತ್ತಿನ ಕೋಟೆಯನ್ನು ಕಟ್ಟಿತು.

ಇವುಗಳ ಬಗ್ಗೆ, ನಂತರ ಕಾಲದ ಭೂ ಸುಧಾರಣೆ, ಹಸಿರು ಕ್ರಾಂತಿ, ಬೆಂಬಲ ಬೆಲೆ, ಪಡಿತರ ವ್ಯವಸ್ಥೆ, ಎಪಿಎಂಸಿ ಕಾನೂನು, ಕೃಷಿ ಸಾಲ ನೀತಿ, ಬ್ಯಾಂಕ್ ರಾಷ್ಟ್ರೀಕರಣ, ಬೀಜ ಕಾನೂನು, ಪೇಟೆಂಟ್ ಕಾನೂನು ಮೊದಲಾದ ಕ್ರಮಗಳ ಬಗ್ಗೆ, ಅದರ ಪರಿಣಾಮಗಳ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ಕಾರ್ಪೊರೆಟ್ ಕೃಷಿಯ ವಿಶ್ವರೂಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...