ನಿನ್ನೆಯಿಂದ (ಫೆ.13) ದಿಲ್ಲಿ ಚಲೋ ಹಮ್ಮಿಕೊಂಡಿರುವ ವಿವಿಧ ರಾಜ್ಯಗಳ ರೈತರು, ರಾತ್ರಿ ವಿಶ್ರಾಂತಿ ಪಡೆದ ಬಳಿಕ ಇಂದು ತಮ್ಮ ಪಾದಯಾತ್ರೆ, ವಾಹನ ಮೆರವಣಿಗೆ ಮತ್ತೆ ಮುಂದುವರೆಸಲಿದ್ದಾರೆ.
ಈಗಾಗಲೇ ತಿಳಿದಿರುವಂತೆ ರೈತರನ್ನು ತಡೆಯಲು ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಪೊಲೀಸರು ಮುಚ್ಚಿದ್ದಾರೆ. ಕೆಂಪು ಕೋಟೆ ಸಂಕೀರ್ಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿ ಕಾನೂನು ಜಾರಿ, ಸಾಲ ಮನ್ನಾ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ‘ದೆಹಲಿ ಚಲೋ’ ಆಂದೋಲನವನ್ನು ಮುನ್ನಡೆಸುತ್ತಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದು, ಟ್ರ್ಯಾಕ್ಟರ್ ಟ್ರಾಲಿಗಳ ದೆಹಲಿ ನಗರ ಪ್ರವೇಶ ಮತ್ತು ದೊಡ್ಡ ಸಭೆಗಳ ಆಯೋಜನೆ ನಿರ್ಬಂಧಿಸಿದ್ದಾರೆ.
ನಿನ್ನೆ ದೆಹಲಿಯತ್ತ ಆಗಮಿಸುತ್ತಿದ್ದ ರೈತರ ಮೇಲೆ ಬಿಜೆಪಿ ಆಡಳಿತದ ಹರ್ಯಾಣದ ಶಂಭು ಗಡಿಯಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಪೊಲೀಸರು ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದು, ಗಡಿಯಲ್ಲಿ ರೈತರ ಟ್ರಕ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ರೈತರ ದೆಹಲಿ ಚಲೋ ಪ್ರತಿಭಟನೆ ಮತ್ತು ಪೊಲೀಸ್ ಬಲಪ್ರಯೋದ ಬಗೆಗಿನ ಅರ್ಜಿ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ರೈತರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಮತ್ತು ಬಲಪ್ರಯೋಗ ಕೊನೆಯ ಆಯ್ಕೆಯಾಗಬೇಕು ಎಂದು ಹೇಳಿದೆ.
ಇದನ್ನೂ ಓದಿ: ದಿಲ್ಲಿ ಚಲೋ: ಬಲಪ್ರಯೋಗ ಕೊನೆಯ ಆಯ್ಕೆಯಾಗಬೇಕು: ಹೈಕೋರ್ಟ್