ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಮರ ಸಾರಿದ್ದು, ಗುರುವಾರ (ಏ.16) ಅಧಿಕೃತವಾಗಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆ, ನಾಮಕ್ಕಲ್ನಲ್ಲಿ ಪ್ರಚಾರ ಕಾರ್ಯ ಕೈಗೊಂಡಿರುವ ಸ್ಟಾಲಿನ್ ಅವರು, ಅಲ್ಲಿಯೇ ಕಪ್ಪು ಬಾವುಟ ಹಾರಿಸಿ, ಕೇಂದ್ರದ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿ ಪ್ರತಿಭಟನೆಗೆ ಚಾಲನೆ ಕೊಟ್ಟಿದ್ದಾರೆ.
ಚೆನ್ನೈನ ಡಿಎಂಕೆ ಕೇಂದ್ರ ಕಚೇರಿ ಮತ್ತು ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಗೋಪಾಲಪುರಂ ನಿವಾಸ ಸೇರಿದಂತೆ ರಾಜ್ಯದಾದ್ಯಂತ ಕಪ್ಪು ಬಾವುಟಗಳನ್ನು ಹಾರಿಸಲಾಗಿದೆ.
ಸ್ಟಾಲಿನ್ ಮತ್ತು ಅವರ ಪಕ್ಷದ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಹೋರಾಟವನ್ನು 1960ರ ದಶಕದ ಹಿಂದಿ ಹೇರಿಕೆ ವಿರೋಧಿ ಚಳವಳಿಗೆ ಹೋಲಿಸಿರುವ ಸ್ಟಾಲಿನ್ ಅವರು, ಕೇಂದ್ರದ ಕ್ರಮ ತಮಿಳುನಾಡು ಮತ್ತು ದಕ್ಷಿಣ ಭಾರತಕ್ಕೆ ಆಗುತ್ತಿರುವ ‘ಐತಿಹಾಸಿಕ ಅನ್ಯಾಯ’ ಎಂದು ಬಣ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಸ್ಟಾಲಿನ್ ಅವರು, “ತಮಿಳುನಾಡಿನಾದ್ಯಂತ ಪ್ರತಿರೋಧ ಹರಡಲಿ. ಫ್ಯಾಸಿಸ್ಟ್ ಬಿಜೆಪಿಯ ಅಹಂಕಾರ ಪತನಗೊಳ್ಳಲಿ. ಅಂದು ತಮಿಳುನಾಡಿನಲ್ಲಿ ಹೊತ್ತಿಕೊಂಡ ಹಿಂದಿ ವಿರೋಧಿ ಪ್ರತಿರೋಧದ ಕಿಚ್ಚು ದೆಹಲಿಯನ್ನು ದಹಿಸಿತ್ತು. ದೆಹಲಿಯು ಮಣಿದ ನಂತರವಷ್ಟೇ ನಮ್ಮ ಕಿಚ್ಚು ತಣ್ಣಗಾಯಿತು. ಇಂದು, ತಮಿಳರನ್ನು ತಮ್ಮದೇ ನೆಲದಲ್ಲಿ ನಿರಾಶ್ರಿತರನ್ನಾಗಿ ಮಾಡುವ ಕರಾಳ ಕಾನೂನಿನ ಪ್ರತಿಯನ್ನು ಸುಡುವ ಮೂಲಕ ನಾನು ಮತ್ತೊಂದು ಕಿಚ್ಚನ್ನು ಹೊತ್ತಿಸಿದ್ದೇನೆ. ಈ ಬೆಂಕಿಯು ದ್ರಾವಿಡ ಭೂಮಿಯಾದ್ಯಂತ ಹರಡಲಿದೆ ಮತ್ತು ಬಿಜೆಪಿಯ ಅಹಂಕಾರವನ್ನು ಅಡಗಿಸಲಿದೆ. “ತಮಿಳು ನಮ್ಮ ಜನ್ಮದ ತಾಯಿ – ಆನಂದಮಯವಾದದ್ದು; ತಮಿಳು ನಮ್ಮ ಆತ್ಮದ ಪ್ರಜ್ವಲಿಸುವ ಅಂತರಾಳದ ಕಿಚ್ಚು” ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ ಹಾಕಿರುವ ಸ್ಟಾಲಿನ್ ಅವರು, “ತಮಿಳುನಾಡಿನಾದ್ಯಂತ ಪ್ರತಿರೋಧದ ಜ್ವಾಲೆಯು ಹರಡಲಿ. ಫ್ಯಾಸಿಸ್ಟ್ ಬಿಜೆಪಿಯ ಅಹಂಕಾರ ಪತನಗೊಳ್ಳಲಿ. ಅಂದು ತಮಿಳುನಾಡಿನಿಂದ ಉದ್ಭವಿಸಿದ ಹಿಂದಿ ಹೇರಿಕೆಯ ವಿರುದ್ಧದ ಪ್ರತಿರೋಧದ ಕಿಚ್ಚು ದೆಹಲಿಯನ್ನು ದಹಿಸಿತ್ತು; ದೆಹಲಿಯು ಮಣಿದ ನಂತರವಷ್ಟೇ ಆ ಕಿಚ್ಚು ತಣ್ಣಗಾಯಿತು. ಇಂದು, ತಮಿಳರನ್ನು ತಮ್ಮದೇ ನೆಲದಲ್ಲಿ ನಿರಾಶ್ರಿತರನ್ನಾಗಿ ಮಾಡಲು ಹವಣಿಸುತ್ತಿರುವ ಈ ಕರಾಳ ಕಾನೂನಿನ ಪ್ರತಿಯನ್ನು ಸುಡುವ ಮೂಲಕ ಮತ್ತು ಅದರ ವಿರುದ್ಧ ಕಪ್ಪು ಬಾವುಟವನ್ನು ಹಾರಿಸುವ ಮೂಲಕ ನಾನು ಆ ಕಿಚ್ಚನ್ನು ಮತ್ತೆ ಹೊತ್ತಿಸಿದ್ದೇನೆ. ಈ ಬೆಂಕಿಯು ಈಗ ದ್ರಾವಿಡ ಭೂಮಿಯಾದ್ಯಂತ ಪಸರಿಸಲಿದೆ. ಇದು ಪುಟಿದೇಳಲಿದೆ, ಇದು ಕೆರಳಲಿದೆ ಮತ್ತು ಬಿಜೆಪಿಯ ಅಹಂಕಾರವನ್ನು ಮಂಡಿಯೂರಿಸುವಂತೆ ಮಾಡಲಿದೆ” ಎಂದು ಹೇಳಿದ್ದಾರೆ.


