ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಸಂಭಾಷಣೆ ರಚನಕಾರ ಕೆ.ವಿ.ರಾಜು ಅವರು ಶುಕ್ರವಾರ ನಿಧನರಾಗಿದ್ದಾರೆ.
ಅನಾರೋಗ್ಯದ ಕಾರಣ ಬೆಂಗಳೂರಿನ ರಾಜಾಜಿನಗರದ ತಮ್ಮ ನಿವಾಸದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ರಾಜಾಜಿನಗರದ ನಿವಾಸದಲ್ಲಿ ಕೆ.ವಿ.ರಾಜು ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಟನೆಯ ‘ಇಂದ್ರಜಿತ್’, ಕನ್ನಡದಲ್ಲಿ ‘ಸುಂದರಕಾಂಡ’, ‘ಕದನ’. ‘ಪೊಲೀಸ್ ಲಾಕಪ್’, ‘ಬೆಳ್ಳಿ ಮೋಡಗಳು’,‘ಬೊಂಬಾಟ್ ಹುಡುಗ’, ‘ಅಭಿಜಿತ್’, ‘ಹುಲಿಯಾ’, ‘ಸಂಗ್ರಾಮ’, ‘ಯುದ್ಧ’ ಮುಂತಾದ ಹಿಟ್ ಚಿತ್ರಗಳನ್ನು ರಾಜು ಅವರು ನಿರ್ದೇಶಿಸಿದ್ದರು.
ಕೆ.ವಿ.ಜಯರಾಂ ಗರಡಿಯಲ್ಲಿ ಸಿನಿಮಾ ಕಸುಬು ಕಲಿತ ರಾಜು, ಜಯರಾಂ ಅವರ ಸಿನಿಮಾಗಳ ದಾಂಪತ್ಯ, ಪ್ರೇಮಕಲಹ, ಸ್ತ್ರೀವಾದಿ ನೆಲೆಗಳ ಕಥನಗಳಿಗಿಂತ ಭಿನ್ನ ಹಾದಿಯನ್ನು ಆಯ್ದುಕೊಂಡರು. ಸಮಾಜದ ಅಸಮಾನತೆ, ಭ್ರಷ್ಟ ರಾಜಕಾರಣ, ಜನಸಾಮಾನ್ಯರ ಅಸಹಾಯಕತೆ-ಇಂತಹ ಸಾಮಾನ್ಯ ವಸ್ತುಗಳಿಗೆ ತಮ್ಮದೇ ವಿಭಿನ್ನ ಶೈಲಿಯ treatment ನೀಡಿ ಪ್ರೇಕ್ಷಕರ ಮನ ಗೆದ್ದವರು ರಾಜು.
‘ಸಂಗ್ರಾಮ’ದಂತಹ ಸಾಮಾನ್ಯ ರೀಮೇಕ್ ಮೂಲಕ ನಿರ್ದೇಶನಕ್ಕಿಳಿದ ರಾಜು, ಗುರುತಿಸಿಕೊಂಡಿದ್ದು ‘ಇಂದ್ರಜಿತ್’ ಚಿತ್ರದ ಮೂಲಕ. ವಿಶಿಷ್ಟ ಸಂಭಾಷಣೆಯನ್ನು ರಚಿಸಿ ಎಲ್ಲರ ಮನಗೆದ್ದರು. ‘ನವಭಾರತ’, ‘ಕದನ’, ‘ಯುದ್ಧ’, ‘ಪೊಲೀಸ್ ಲಾಕಪ್’, ‘ಸುಂದರ ಕಾಂಡ’, ‘ಯುದ್ಧಕಾಂಡ’, ‘ಹುಲಿಯಾ’ ಚಿತ್ರಗಳ ಸಂಭಾಷಣೆಗಳು ಗಮನ ಸೆಳೆದಿವೆ.
ಇದನ್ನೂ ಓದಿರಿ: ಛತ್ತೀಸ್ಗಢ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭರ್ಜರಿ ಗೆಲುವು; BJP ಹೀನಾಯ ಸೋಲು