ಉಪಚುನಾವಣೆ ಸಂದರ್ಭದಲ್ಲೇ ಸಚಿವ ಜೆ.ಸಿ.ಮಾಧುಸ್ವಾಮಿ ಕುರುಬ ಸಮುದಾಯದ ಸ್ವಾಮೀಜಿ ಕುರಿತು ಆಡಿರುವ ಮಾತುಗಳು ಕುರುಬ ಸಮುದಾಯವನ್ನು ಕೆರಳಿಸಿದ್ದು ಉಪಚುನಾವಣೆಯ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ. ಇದೇ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳೇ ಸ್ವತಃ ಕುರುಬ ಸಮುದಾಯದ ಕ್ಷಮೆಯನ್ನು ಕೋರಿದ್ದರು. ಚುನಾವಣೆಯ ಮೇಲಾಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಸಂಧಾನ ಕಳಿಸಿ ಪ್ರಕರಣ ಸುಖ್ಯಾಂತ ಕಾಣುವಂತೆ ಮಾಡಿದ್ದಾರೆ.
ನವೆಂಬರ್ 21 ರಂದು ಕಾಗಿನೆಲೆಯ ಕನಕಗುರು ಪೀಠಕ್ಕೆ ತೆರಳಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಕುರುಬ ಸಮುದಾಯದ ಈಶ್ವರಾನಂದಸ್ವಾಮಿಗಳ ಕ್ಷಮೆಕೋರಿದ್ದು ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಆದರೆ ಜನರ ನಡುವೆ ಹೀಗೊಂದು ಚರ್ಚೆ ನಡೆಯುತ್ತಲೇ ಇದೆ. ಚಿಕ್ಕನಾಯಕನಹಳ್ಳಿಯಲ್ಲಿ ಹಿಂದೆ ಶಾಸಕರಾಗಿದ್ದಾಗಲೂ ಮಾಧುಸ್ವಾಮಿ ಜನರೊಂದಿಗೆ ಬಹು ಒರಟಾಗಿ ನಡೆದುಕೊಳ್ಳುತ್ತಿದ್ದರು. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಗೊಲ್ಲ ಸಮುದಾಯದ ಯುವಕನೊಬ್ಬ ಪ್ರಶ್ನಿಸಿದ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದರು. ಆಗಲೂ ಪ್ರತಿಭಟನೆ ಎದುರಿಸಿದ್ದರು. ಜೆ.ಸಿ.ಮಾಧುಸ್ವಾಮಿ ಬಡಪೆಟ್ಟಿಗೆ ಬಗ್ಗುವ ಆಸಾಮಿ ಅಲ್ಲ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
ಚಿಕ್ಕನಾಯನಹಳ್ಳಿ ಶಾಸಕರಾಗಿದ್ದ ಮಾಧುಸ್ವಾಮಿ ಅಧಿಕಾರಿಗಳ ಮೇಲೆ ರೇಗಿ ಬೀಳುತ್ತಿದ್ದರು. ಇದೇ ಕಾರಣಕ್ಕಾಗಿಯೇ ಅವರನ್ನು ಮರು ಚುನಾವಣೆಯಲ್ಲಿ ಸೋಲುವಂತೆ ಜನರು ಮತ್ತು ಅಧಿಕಾರಿಗಳು ನೋಡಿಕೊಂಡರು. ಬದಲಾದ ಕಾಲದಲ್ಲಿ ಮಾಧುಸ್ವಾಮಿ ಜೆಡಿಯು ತೊರೆದು ಯಡಿಯೂರಪ್ಪ ಅವರನ್ನು ನೆಚ್ಚಿಕೊಂಡು ಬಿಜೆಪಿ ಸೇರಿದರು. ಈಗ ಮತ್ತೆ ಗೆದ್ದು ಕಾನೂನು ಸಚಿವರಾಗಿಯೂ ಕೆಲಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಹಿಂದಿನಿಂದಲೂ ಅದರ ಬಗ್ಗೆ ಸೊಲ್ಲೆತ್ತದೆ ಮೌನವಹಿಸಿದ್ದಾರೆ. ಇದರ ಮರ್ಮವೇನು ಎಂದು ಸ್ಥಳೀಯ ಜನರು ಪ್ರಶ್ನಿಸುತ್ತಾರೆ.
ಸಚಿವ ಮಾಧುಸ್ವಾಮಿ ಅವರು ಮುಖ್ಯಮಂತ್ರಿಗಳ ಒತ್ತಾಯದ ಮೇರೆಗೆ ಕ್ಷಮೆ ಯಾಚಿಸಿದ್ದಾರೆ. ಅದೂ ಉಪಚುನಾವಣೆ ಇದೆ ಎಂಬ ಕಾರಣಕ್ಕೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಒತ್ತಡ ಮತ್ತು ಉಪಚುನಾವಣೆ ಇಲ್ಲದಿದ್ದರೆ, ಪ್ರತಿಭಟನೆಯ ತೀವ್ರಗೊಳ್ಳದಿದ್ದರೆ ಮಾಧುಸ್ವಾಮಿ ಕ್ಷಮೆ ಕೇಳುತ್ತಿರಲಿಲ್ಲ. ಅನಿವಾರ್ಯ ರಾಜಕೀಯ ಒತ್ತಡಗಳಿಗೆ ಒಳಗಾಗಿ ಕ್ಷಮೆ ಕೇಳಬೇಕಾಗಿ ಬಂದಿದೆ ಎನ್ನುತ್ತಾರೆ ಹತ್ತಿರದಿಂದ ಬಲ್ಲವರು.
ಒತ್ತಡ ಕಾರಣಕ್ಕಾಗಿಯೇ ಮಾಧುಸ್ವಾಮಿ ಕಾಗಿನೆಲೆಗೆ ಭೇಠಿ ಕೊಟ್ಟಿರುವುದು. ಇವರ ಜೊತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನೂ ಸಂಧಾನಕ್ಕೆ ಕಳಿಸಿರುವ ಮುಖ್ಯಮಂತ್ರಿಗಳು ವಿವಾದವನ್ನು ಉಪಾಯವಾಗಿ ಮೈಮೇಲೆ ಎಳೆದುಕೊಳ್ಳದ ರೀತಿಯಲ್ಲಿ ಬಗೆಹರಿಸಿದ್ದಾರೆ. ಹೀಗಾಗಿ ಉಪಚುನಾವಣೆಯ ಮೇಲೆ ಆಗುತ್ತಿದ್ದ ಡ್ಯಾಮೇಜ್ ನಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿತ್ತು. ಸನ್ನಿವೇಶದ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಮುಖ್ಯಮಂತ್ರಿಗಳು ಬುಧವಾರ ಸಂಜೆಯೇ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾಧುಸ್ವಾಮಿ ಪರ ಬಹಿರಂಗ ಕ್ಷಮೆ ಕೋರಿದರು. ಕಾಗಿನೆಲೆ ಕ್ಷೇತ್ರಕ್ಕೆ ತಾನು ನೀಡಿದ ನೆರವನ್ನೂ ಪ್ರಸ್ತಾಪಿಸಿದ್ದರು. ಆದ್ದರಿಂದ ಕಾನೂನು ಸಚಿವರಿಂದಲೂ ಒಂದು ಕ್ಷಮೆ ಯಾಚನೆಯನ್ನು ಕೊಡಿಸಿದರು. ಗೃಹ ಸಚಿವರು ಕೂಡ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿವಾದ ಸದ್ಯಕ್ಕೆ ಬಗೆಹರಿದಿದೆ.
ಕುರುಬ ಸಮುದಾಯದ ಮುಖಂಡರೇ ಹೇಳುವಂತೆ ಮಾಧುಸ್ವಾಮಿ ಕನಕ ವೃತ್ತದ ಹೆಸರನ್ನು ಬದಲಿಸಲು ಹೊರಟಿದ್ದರು. ಶಾಂತಿಸಭೆಯಲ್ಲಿ ಅದೇ ಕಾರಣಕ್ಕೆ ಈಶ್ವರಾನಂದ ಸ್ವಾಮೀಜಿ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂಬ ಎಚ್ಚರವನ್ನು ಕೊಟ್ಟಿದ್ದು. ಸಚಿವರಿಗೇ ಸ್ವಾಮೀಜಿ ಎಚ್ಚರ ಕೊಡುವಷ್ಟರ ಮಟ್ಟಕ್ಕೆ ಬಂದರೆ ಎಂದು ಸ್ವಾಮೀಜಿಗಳನ್ನು ಕುತ್ಕೊಳ್ರಿ ನೋಡಿದ್ದೀನಿ ಎಂದು ದಬಾಯಿಸಿದರು. ಆಗ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಕ್ಷಮೆಯಾಚಿಸುವಂತೆ ಪಟ್ಟು ಹಿಡಿದರು. ಆದರೆ ಸಚಿವರು ಕ್ಷಮೆ ಯಾಚಿಸಲಿಲ್ಲ. ಇದರಿಂದ ಪ್ರತಿಭಟನೆ ಅನಿವಾರ್ಯವಾಯಿತು ಎನ್ನುತ್ತಾರೆ ಕುರುಬ ಸಮುದಾಯದ ಮುಖಂಡರು.
ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಕುರುಬರ ಸಂಖ್ಯೆ ಹೆಚ್ಚಾಗಿದೆ. ಇದೇ ಭಾಗದಲ್ಲಿ ಉಪಚುನಾವಣೆಯೂ ನಡೆಯುತ್ತಿದೆ. ಇದೇ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣ ಕಾರ್ಯಪ್ರವೃತ್ತರಾಗಿ ವಿವಾದಕ್ಕೆ ಇತಿಶ್ರೀ ಹಾಡುವಂತೆ ಮಾಡಿದ್ದಾರೆ. ಆದರೆ ಕುರುಬ ಸಮುದಾಯ ಮಾಧುಸ್ವಾಮಿ ಬಗ್ಗೆ ಇರುವ ಸಿಟ್ಟನ್ನು ಉಪಚುನಾವಣೆಯಲ್ಲಿ ತೋರಿಸಿದರೆ ಬಿಜೆಪಿಗೆ ಹೊಡೆತವಂತೂ ಗ್ಯಾರೆಂಟಿ.