ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಒಕ್ಕೂಟದಲ್ಲಿ ಹೊಸ ಮಂತ್ರಿಗಳಿಗೆ ನೀಡಬೇಕಾದ ಖಾತೆ ಹಂಚಿಕೆ ಪಟ್ಟಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಶನಿವಾರ ಬೆಳಿಗ್ಗೆ ಅನುಮೋದನೆ ನೀಡಿದರು.
ಮೂರು ಪಕ್ಷಗಳ ನಾಯಕರನ್ನು ಒಳಗೊಂಡ 43 ಸದಸ್ಯ ಬಲದ ಕ್ಯಾಬಿನೆಟ್ ಅಂತಿಮವಾಗಿ ಅಧಿಕೃತವಾಗಿದೆ. ಖಾತೆ ಹಂಚಿಕೆಯನ್ನು ಮುಖ್ಯಮಂತ್ರಿ ಶನಿವಾರ ಸಂಜೆ ಅಂತಿಮಗೊಳಿಸಿದರು.
ಎನ್ಸಿಪಿ ಪಕ್ಷದ ಅಜಿತ್ ಪವಾರ್ ಹಣಕಾಸು ಖಾತೆಯನ್ನು ಪಡೆದರೆ, ಇನ್ನೊಬ್ಬ ಎನ್ಸಿಪಿ ಮುಖಂಡ ಅನಿಲ್ ದೇಶ್ಮುಖ್ ಅವರನ್ನು ರಾಜ್ಯ ಗೃಹ ಸಚಿವರನ್ನಾಗಿ ಮಾಡಲಾಯಿತು.
ಈ ವರ್ಷ ಚುನಾವಣೆಗೆ ಪಾದಾರ್ಪಣೆ ಮಾಡಿದ ವರ್ಲಿ ಶಾಸಕ ಆದಿತ್ಯ ಠಾಕ್ರೆ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಸಚಿವಾಲಯ ನೀಡಲಾಗಿದೆ.
ಸಿಎಂ ಉದ್ಧವ್ ಠಾಕ್ರೆ ಅವರು ಸಾಮಾನ್ಯ ಆಡಳಿತ, ಮಾಹಿತಿ ಮತ್ತು ತಂತ್ರಜ್ಞಾನ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಕಾನೂನು ಮತ್ತು ನ್ಯಾಯಾಂಗ ಸೇರಿದಂತೆ ಇತರ ಇಲಾಖೆಗಳನ್ನು ಇತರ ಸಚಿವರಿಗೆ ಹಂಚಿಕೆ ಮಾಡದೇ ತಾವೇ ಉಸ್ತುವಾರಿ ವಹಿಸಲಿದ್ದಾರೆ.
ಒಕ್ಕೂಟದಲ್ಲಿ ಕಿರಿಯ ಪಾಲುದಾರರಾಗಿರುವ ಕಾಂಗ್ರೆಸ್ ತನ್ನ ಬಾಲಾಸಾಹೇಬ್ ಥೋರತ್ ಅವರಿಗೆ ಕಂದಾಯ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿದೆ.
ಖಾತೆ ಹಂಚಿಕೆಯು ಮೂರು ಪಕ್ಷಗಳಿಂದ ಕೂಡಿದ ಮಹಾರಾಷ್ಟ್ರ ವಿಕಾಸ್ ಅಗಾಡಿಯಲ್ಲಿನ ಅಧಿಕಾರದ ಸಮತೋಲನವು ಎನ್ಸಿಪಿ ಪರವಾಗಿರುವುದನ್ನು ಸೂಚಿಸುತ್ತದೆ. ಎನ್ಸಿಪಿ ಹೆಚ್ಚಿನ ಮಂತ್ರಿ ಹುದ್ದೆಗಳನ್ನು (16) ಪಡೆದುಕೊಂಡಿದ್ದಲ್ಲದೆ, ಗೃಹ, ಹಣಕಾಸು, ನೀರಾವರಿ ಮತ್ತು ವಸತಿಯಂತಹ ಅತ್ಯಂತ ನಿರ್ಣಾಯಕ ಇಲಾಖೆಗಳನ್ನು ಉಳಿಸಿಕೊಂಡಿದೆ. ಸಿಎಂ ಜೊತೆಗೆ ಶಿವಸೇನೆ ಇತರ 14 ಮಂತ್ರಿ ಹುದ್ದೆಗಳನ್ನು ಹೊಂದಿದೆ. ಆದರೆ ಅವರ ಪಾಲಿಗೆ ನಗರ ಅಭಿವೃದ್ಧಿ, ಕೃಷಿ ಮತ್ತು ಕೈಗಾರಿಕೆಗಳಂತಹ ಕಡಿಮೆ ಪ್ರಮುಖ ಖಾತೆಗಳನ್ನು ಉಳಿಸಿಕೊಂಡಿದೆ. ಕಾಂಗ್ರೆಸ್ 10 ಮಂತ್ರಿ ಹುದ್ದೆಗಳನ್ನು ಮತ್ತು ಆದಾಯ ಹಾಗೂ ಪಿಡಬ್ಲ್ಯುಡಿಯಂತಹ ಎರಡು ನಿರ್ಣಾಯಕ ಇಲಾಖೆಗಳನ್ನು ಪಡೆದಿದೆ.
ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವು ಈಗ ಒಂದು ತಿಂಗಳ ಕಾಲ ಅಧಿಕಾರದಲ್ಲಿದ್ದರೂ ಖಾತೆ ಹಂಚಿಕೆ ವಿಳಂಬಕ್ಕೆ ಪ್ರತಿಪಕ್ಷ ಬಿಜೆಪಿಯಿಂದ ಟೀಕೆಗಳನ್ನು ಎದುರಿಸುತ್ತಿತ್ತು.