ನೀರಿನಲ್ಲಿ ಬಿದ್ದಿದ್ದ ಫೋನ್ ಹಿಂಪಡೆಯಲು ಜಲಾಶಯದಿಂದ 41 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಿದ ಅಧಿಕಾರಿಗಳ ವಿರುದ್ಧ ಛತ್ತೀಸ್ಗಢ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಉತ್ತರ ಬಾಸ್ಟರ್ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್ನಲ್ಲಿ ನಿಯೋಜನೆಗೊಂಡಿದ್ದ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ಅವರು ಮೇ 21ರಂದು ಸೆಲ್ಫಿ ತೆಗೆದುಕೊಳ್ಳುವಾಗ ತಮ್ಮ ಸ್ಯಾಮ್ಸಂಗ್ ಫೋನ್ ಅನ್ನು ಖೇರ್ಕಟ್ಟಾ ಅಣೆಕಟ್ಟಿಗೆ ಬೀಳಿಸಿದ್ದರು.
ನಂತರ ಸ್ಥಳೀಯ ಈಜುಗಾರರಿಗೆ ಕರೆ ಮಾಡಿ ತಮ್ಮ ಫೋನ್ ಹುಡುಕಲು ಪ್ರಯತ್ನಿಸಿದ್ದರು. ಪ್ರಯತ್ನ ವಿಫಲವಾದ ಕಾರಣ, ನಾಲ್ಕು ದಿನಗಳ ಕಾಲ ನಿರಂತರವಾಗಿ ಎರಡು ಪಂಪ್ಸೆಟ್ಗಳ ಮೂಲಕ 41 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ್ದರು. ಈ ನೀರನ್ನು ಸುಮಾರು 40 ಹೆಕ್ಟೇರ್ ಭೂಮಿಗೆ ಬಳಸಬಹುದಾಗಿತ್ತು.
ಘಟನೆಗೆ ಆಕ್ರೋಶಕ್ಕೆ ಕಾರಣವಾದ ನಂತರ, ವಿಶ್ವಾಸ್ ಅವರನ್ನು ಮೇ 26 ರಂದು ಅವರ ಹುದ್ದೆಯಿಂದ ಅಮಾನತು ಮಾಡಲಾಗಿತ್ತು. 53,000 ರೂ.ಗಳ ದಂಡವನ್ನೂ ವಿಧಿಸುವಂತೆ ಆದೇಶಿಸಲಾಗಿತ್ತು.
ನೀರಾವರಿ ಇಲಾಖೆಯ ಉಪವಿಭಾಗಾಧಿಕಾರಿ ಆರ್.ಎಲ್.ಧಿವಾರ್, ಉಪ ಎಂಜಿನಿಯರ್ ಚೋಟೆಲಾಲ್ ಧ್ರುವ್ ಮತ್ತು ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿರಿ: ಕುಸ್ತಿಪಟುಗಳ ಪ್ರತಿಭಟನೆ: ದೇಶದ ವಿವಿಧ ಭಾಗಗಳಿಂದ ದೆಹಲಿಯತ್ತ ನುಗ್ಗಿ ಬರುತ್ತಿರುವ ರೈತರು; ಗಡಿಯಲ್ಲಿ ಪೊಲೀಸ್ ಬಿಗಿ ಭದ್ರತೆ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 430 (ನೀರಾವರಿ ಕಾಮಗಾರಿಗಳಿಗೆ ಹಾನಿ ಅಥವಾ ನೀರನ್ನು ತಪ್ಪಾಗಿ ತಿರುಗಿಸುವ ಮೂಲಕ ಕಿಡಿಗೇಡಿತನ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಧಿವಾರ್ ಮತ್ತು ಧ್ರುವ್ ಅವರು ನೀರಾವರಿ ಇಲಾಖೆಯಲ್ಲಿ ಕೆಲಸದಲ್ಲಿದ್ದಾರೆ.
ನೀರನ್ನು ಹೊರಹಾಕಲು ಧಿವಾರ್ ಅವರಿಂದ ಮೌಖಿಕ ಅನುಮತಿ ಪಡೆದಿದ್ದೇನೆ ಎಂದು ವಿಶ್ವಾಸ್ ಹೇಳಿಕೊಂಡಿದ್ದರು. ಬುಧವಾರ ರಾಜ್ಯ ನೀರಾವರಿ ಇಲಾಖೆಯು ಧಿವಾರ್ ಅನ್ನು ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ನಾವು ಆಹಾರ ನಿರೀಕ್ಷಕರಿಗೆ ಅನುಮತಿ ನೀಡಿಲ್ಲ. ಘಟನೆಗೆ ವಿಶ್ವಾಸ್ ಮಾತ್ರ ಹೊಣೆಗಾರರಾಗಿದ್ದಾರೆ” ಎಂದು ದಿವಾರ್ ಅವರು ತಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಮಾದದಿಂದಾಗಿ 41 ಲಕ್ಷ ಲೀಟರ್ ನೀರು ಪೋಲಾಗಿದೆ.