ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ರಾಜಕೀಯ ಇನ್ನಿಂಗ್ಸ್ ಮುಕ್ತಾಯಗೊಳ್ಳಬಹುದು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ರಾಯ್ಪುರದಲ್ಲಿ ನಡೆಯುತ್ತಿರುವ 85ನೇ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, “2004 ಮತ್ತು 2009 ರಲ್ಲಿನ ನಮ್ಮ ವಿಜಯಗಳು, ಡಾ. ಮನಮೋಹನ್ ಸಿಂಗ್ ಅವರ ಸಮರ್ಥ ನಾಯಕತ್ವದ ಆಡಳಿತ ನನಗೆ ವೈಯಕ್ತಿಕ ತೃಪ್ತಿಯನ್ನು ನೀಡಿತು. ಆದರೆ ನನಗೆ ಹೆಚ್ಚು ತೃಪ್ತಿ ನೀಡಿದ್ದು ಭಾರತ್ ಜೋಡೋ ಯಾತ್ರೆಯಾಗಿದೆ. ಇದು ಕಾಂಗ್ರೆಸ್ಗೆ ಮಹತ್ವದ ತಿರುವು ಆಗಿದ್ದು, ಇದರೊಂದಿಗೆ ನನ್ನ ರಾಜಕೀಯ ಇನ್ನಿಂಗ್ಸ್ ಮುಕ್ತಾಯವಾಗಬಹುದು” ಎಂದಿದ್ದಾರೆ.
ಬಿಜೆಪಿ-ಆರ್ಎಸ್ಎಸ್ ದೇಶದ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡು ಬುಡಮೇಲು ಮಾಡಿದೆ. ಕೆಲವೇ ಕೆಲವು ಉದ್ಯಮಿಗಳಿಗೆ ಒಲವು ತೋರುವ ಮೂಲಕ ಆರ್ಥಿಕ ವಿನಾಶಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಸವಾಲಿನ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, “ಒಂದು ಕಾಲದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಇಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಅಧ್ಯಕ್ಷನಾಗಲು ಕಾಂಗ್ರೆಸ್ನಲ್ಲಿ ಮಾತ್ರ ಸಾಧ್ಯ. ಇದು ಪ್ರಜಾಪ್ರಭುತ್ವದ ಬಹುದೊಡ್ಡ ಸಾಕ್ಷಿ” ಎಂದರು.
ಮಹಾತ್ಮಾ ಗಾಂಧೀಜಿ, ಪಂಡಿತ್ ನೆಹರು, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಡಾ. ರಾಜೇಂದ್ರ ಪ್ರಸಾದ್, ಸರೋಜಿನಿ ನಾಯ್ಡು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ನೀರೆರೆದ ಆ ಭವ್ಯ ಪರಂಪರೆಯನ್ನು ನಾವೆಲ್ಲರೂ ಪ್ರತಿನಿಧಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
“ದೇಶದಲ್ಲಿ ಪ್ರಜಾಪ್ರಭುತ್ವವನ್ನು ಅಳಿಸಲು ಬಿಜೆಪಿ ಪಿತೂರಿ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಭಾರತವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಕ್ಕಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು 22 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದಕ್ಕಾಗಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಧನ್ಯವಾದ ಅರ್ಪಿಸಿದರು. “ಭಾರತ್ ಜೋಡೋ ಯಾತ್ರೆ ಎಂಬುದು ದೇಶದ ಭರವಸೆಯ ಹೊಸ ಅರುಣೋದಯದ ಹೆಸರು, ಅದರ ಬೆಳಕು ದೇಶದಾದ್ಯಂತ ಹರಡಿದೆ” ಎಂದಿದ್ದಾರೆ.
ಇದನ್ನೂ ಓದಿ: ‘ಸರ್ಕಾರ ವಿರೋಧಿ ಕಾವ್ಯಕ್ಕೆ ಅವಕಾಶವಿಲ್ಲ’: ರೇಖ್ತಾ ಸಾಂಸ್ಕೃತಿಕ ಉತ್ಸವದಿಂದ ಹಿಂದೆ ಸರಿದ ಕವಿ ವಾಜಪೇಯಿ