ಹಾಸನ ಜಿಲ್ಲೆಯ ಬೇಲೂರಿನ ಡಾ. ಅಂಬೇಡ್ಕರ್ ಸರ್ಕಲ್ ಪಕ್ಕದ ರಸ್ತೆ ಬದಿಯ ಪುಟ್ಪಾತ್ ಮೇಲೆ ನಡೆದು ಹೋಗುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಹರಿದ ಮರಳು ತುಂಬಿದ ಟಿಪ್ಪರ್ ಲಾರಿ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಜರುಗಿದೆ.
ಅಪಘಾತ ಘಟನೆ ನಡೆದ ಕ್ಷಣವೆ ಚಾಲಕ ಮತ್ತು ಕ್ಲೀನರ್ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಈ ವಾರದಲ್ಲಿ ಮರಳು ತುಂಬಿದ ಲಾರಿಗಳಿಗೆ ಎರಡನೇ ಬಲಿ ಇದಾಗಿದೆ. ಒಂದು ವಾರದ ಹಿಂದೆ ಬೇಲೂರು ಮೂಡಿಗೆರೆ ರಸ್ತೆಯ ಕೋರ್ಟ್ ಮುಂಭಾಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ಮೇಲೆ ಮರಳು ಟಿಪ್ಪರ್ ಲಾರಿ ಹರಿದಿತ್ತು. ಆ ವ್ಯಕ್ತಿ ಸಹ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಆ ದುರ್ಘಟನೆ ಮಾಸುವ ಮುನ್ನವೇ ಶುಕ್ರವಾರ ಅಂಬೇಡ್ಕರ್ ಸರ್ಕಲ್ನಲ್ಲಿ ಎರಡನೇ ಅಪಘಾತ ಸಂಭವಿಸಿದೆ. ಬೇಲೂರಿನಲ್ಲಿ ಮಿತಿಮೀರಿದ ಮರಳು ಮಾಫಿಯಾವೆ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಶಾಲಾ ಮಕ್ಕಳು, ರೈತರು- ದನಕರುಗಳು ಓಡಾಡುತ್ತಿರುತ್ತಾರೆ. ಶಿರಾಡಿ ಘಾಟ್ ಬಂದ್ ಆಗಿರುವುದರಿಂದ ಹೆಚ್ಚಿನ ವಾಹನಗಳು ಇದೇ ರಸ್ತೆಯಲ್ಲಿ ಓಡಾಡುತ್ತಿವೆ. ರಸ್ತೆ ಸಹ ಚಿಕ್ಕದಾಗಿದೆ. ಇಂತಹ ಸಂದರ್ಭದಲ್ಲಿ ಮರಳು ಲಾರಿಗಳು ಅತಿ ವೇಗದಲ್ಲಿ ಚಲಿಸುತ್ತಿರುವುದು ಅಪಘಾತಕ್ಕೆ ಕಾರಣವಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತ ಸತ್ಯನಾರಾಯಣರವರು ತಿಳಿಸಿದ್ದಾರೆ.
“ಮರಳು ಲಾರಿ ಡ್ರೈವರ್ಗಳು ಕುಡಿದು ವಾಹನ ಚಲಾಯಿಸುವುದು ಕಂಡುಬಂದಿದೆ. ಅದನ್ನು ತಡೆಗಟ್ಟಬೇಕಿದೆ. ಅಲ್ಲದೆ ಓವರ್ ಲೋಡ್ ಮಾಡಲಾಗುತ್ತಿದೆ. ಧರ್ಮಸ್ಥಳಕ್ಕೆ ಪಾದಯಾತ್ರಿಗಳು ಸಹ ಹೋಗುತ್ತಿದ್ದು ಈ ಮರಳು ಲಾರಿಗಳು ಮರಣಮೃಗಗಳಾಗಿ ಬದಲಾಗಿವೆ. ಇವುಗಳಿಗೆ ಕಡಿವಾಣ ಹಾಕಬೇಕು” ಎಂದಿದ್ದಾರೆ.
ಇಷ್ಟೆಲ್ಲಾ ಅಪಘಾತಗಳು ನಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಅಕ್ರಮಗಳು ಸಿಸಿಕ್ಯಾಮರದಲ್ಲಿ ಸೆರಯಾಗಿವೆ. ಆದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೋಲೀಸ್ ಇಲಾಖೆ ಕೈಕಟ್ಟಿ ಕುಳಿತಿವೆ ಎಂದಿದ್ದಾರೆ.
ಮರಳು ಮಾಫಿಯದಿಂದ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಂತರ ರೂ ನಷ್ಟವಾಗುತ್ತಿದೆ. ಈ ಕೂಡಲೇ ಹಾಸನ ಜಿಲ್ಲಾಡಳಿತ ಈ ಕುರಿತು ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪಿಂಚಣಿಗಾಗಿ ಮುಷ್ಕರ ನಿರತ ಇಬ್ಬರು ಶಿಕ್ಷಕರ ಸಾವು: ಸರ್ಕಾರಿ ಕೊಲೆಗಳು ಎಂದ ಸಿದ್ದರಾಮಯ್ಯ