Homeಕರ್ನಾಟಕನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

ನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

- Advertisement -
- Advertisement -

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಕೃಷಿ ಮಂತ್ರಿ ಎನ್. ಚಲುವರಾಯಸ್ವಾಮಿ ಸರಕಾರ ರಚನೆಯಾದ ಒಂದೇ ವಾರಕ್ಕೆ ಸಕ್ಕರೆ ಕಾರ್ಖಾನೆಗೆ ಐವತ್ತು ಕೋಟಿ ಹಣ ಬಿಡುಗಡೆ ಮಾಡಿಸಿ ತಾವೊಬ್ಬ ಸಮರ್ಥ ಮಂತ್ರಿ ಎಂಬ ಭರವಸೆಯನ್ನು ಮೂಡಿಸುವತ್ತ ಮುಂದಡಿಯಿಟ್ಟಿದ್ದಾರೆ!

ಮಂಡ್ಯ ಜಿಲ್ಲಾಪಂಚಾಯ್ತಿಗೆ ಆಯ್ಕೆಯಾಗುವುದರ ಮುಖಾಂತರ ರಾಜಕೀಯ ಪ್ರವೇಶ ಪಡೆದ ಚಲುವರಾಯಸ್ವಾಮಿ ಅಂದು ಜಿಲ್ಲಾ ಮಂತ್ರಿಯಾಗಿದ್ದ ಎಸ್.ಡಿ ಜಯರಾಮರ ಬೆಂಬಲದಿಂದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾಗಿ ನಾಗಮಂಗಲ ಕ್ಷೇತ್ರದ ಕೆಲಸಗಳನ್ನು ಮಾಡುತ್ತ ಜನಪ್ರಿಯತೆ ಗಳಿಸತೊಡಗಿದರು. ಸಹಜವಾಗಿ ಅಂದಿನ ಶಾಸಕರು ಮತ್ತು ಬಿಡಿಎ ಛೇರ್ಮನ್ ಆಗಿದ್ದ ಶಿವರಾಮೇಗೌಡರು ತನ್ನ ಪ್ರತಿಸ್ಪರ್ಧಿಯ ವಿಷಯವಾಗಿ ಹೆಚ್ಚು ಪ್ರಚಾರ ಕೊಡತೊಡಗಿದರು; ಅದಾಗಲೇ ವಕೀಲ ಮತ್ತು ಪತ್ರಕರ್ತ ಗಂಗಾಧರಮೂರ್ತಿ ಕೊಲೆ ಆಪಾದನೆಯಿಂದ ಬಿಡುಗಡೆಯಾಗಿದ್ದ ಶಿವರಾಮೇಗೌಡರು ಹೊಸ ಹುಮ್ಮಸ್ಸಿನಿಂದ ನಾನು ಅಂತಹವನಲ್ಲ ಎಂದು ಸಾಬೀತುಮಾಡುವ ಭರದಲ್ಲಿ ಚಲುವರಾಯಸ್ವಾಮಿಗೇ ಹೆಚ್ಚು ಪ್ರಚಾರಕೊಟ್ಟರು. ಜನಕ್ಕೆ ಚಲುವರಾಯಸ್ವಾಮಿ ಹೇಗಿರಬಹುದೆಂಬ ಕುತೂಹಲ ಜಾಸ್ತಿಯಾಗಿ ತಮ್ಮ ಊರಿನ ಹಬ್ಬ, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕರೆಯತೊಡಗಿದರು; ಆಗ ಜನರಿಗೆ ತಮ್ಮ ನಾಯಕನಾಗಲು ಈತನೇ ಸರಿ ಅನ್ನಿಸತೊಡಗಿತು. ಮುಂದೆ 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶೀವರಾಮೇಗೌಡರ ಎದುರು 16 ಸಾವಿರ ಮತಗಳ ಮುನ್ನಡೆಯಿಂದ ಗೆದ್ದರು. ಆಗ ಕುಮಾರಸ್ವಾಮಿ ದೇವೇಗೌಡರಾದಿಯಾಗಿ ಸೋತು ಹೋಗಿದ್ದರಿಂದ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆ ಗುರುತಿಸುವ ನಾಯಕರಾಗಿ ಬೆಳೆಯತೊಡಗಿದ್ದರು.

ವಿರೋಧ ಪಕ್ಷದಲ್ಲಿದ್ದುಕೊಂಡೇ ಎಸ್‌ಎಂ ಕೃಷ್ಣರ ಸರಕಾರದಿಂದ ತಾಲೂಕಿಗೆ ಬೇಕಾದ ಕೆಲಸ ಮಾಡುತ್ತ ಐದು ವರ್ಷ ತುಂಬಿಸಿದಾಗ ಮತ್ತೆ ಚುನಾವಣೆ ಬಂತು. 2004ರಲ್ಲಿ ಮತ್ತೆ ಗೆದ್ದ ಚಲುವರಾಯಸ್ವಾಮಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವರಾದರು. ಆಗ ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದುದಲ್ಲದೆ ನಾಗಮಂಗಲದ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ಸುಮಾರು ಐದು ಊರುಗಳಿಗೆ ಪ್ರಾಥಮಿಕ ಆರೋಗ್ಯದ ಘಟಕಗಳನ್ನು ತಂದರು. ಇದರ ಜೊತೆಗೆ ರಾಜ್ಯದ ಇನ್ನಿತರ ಕಡೆಯ ಜವಾಬ್ದಾರಿಯನ್ನು ನೋಡಬೇಕಿದ್ದುದರಿಂದ ಆರೋಗ್ಯ ಇಲಾಖೆಯನ್ನು ಸುಸ್ಥಿತಿಗೆ ತರುವ ಸಮಯದಲ್ಲಿ ಸಮ್ಮಿಶ್ರ ಸರಕಾರವೇ ಹೈಜಾಕಾದಂತಾಗಿ ಧರ್ಮಸಿಂಗ್ ಮನೆಗೆ ಹೋದರು. ಬಹುಶಃ ಕರ್ನಾಟಕದ ರಾಜಕಾರಣ ತನ್ನ ಪಥವನ್ನು ಬದಲಿಸಿಕೊಂಡು ಪತನದ ಹಾದಿ ಹಿಡಿಯಲು ಇದೇ ಕಾರಣ. ಕುಮಾರಸ್ವಾಮಿಯವರು ಬಿಜೆಪಿಗಳೊಟ್ಟಿಗೆ ಸರಕಾರ ಮಾಡಿದರು.

ದೇವೇಗೌಡ

ಆಗ ಕುಮಾರಸ್ವಾಮಿ ಸುತ್ತ ಸಮರ್ಥರ ದಂಡೇ ನೆರೆದಿತ್ತು; ಜಮೀರ್ ಅಹಮದ್, ಬಾಲಕೃಷ್ಣ, ಚಲುವರಾಯಸ್ವಾಮಿ ಹೀಗೆ; ಇವರೆಲ್ಲಾ ತಮ್ಮ ಮಗನನ್ನು ಮೀರಿಸುವ ನಾಯಕರಾಗಿ ಹೊರಹೊಮ್ಮುತ್ತಿದ್ದಂತೆ ಕಂಡಿದ್ದರಿಂದ ಆತಂಕಗೊಂಡ ದೇವೇಗೌಡರು ಮಗನೊಂದಿಗೆ ರಾಜಿಯಾಗಿ ಅಧಿಕಾರದ ಸೂತ್ರ ಕೈಗೆ ತೆಗೆದುಕೊಳ್ಳತೊಡಗಿದರು. ಚಲುವರಾಯಸ್ವಾಮಿ ಆಗ ಸಾರಿಗೆ ಸಚಿವರಾಗಿದ್ದರು. ಆಗಾಗಲೇ ನಾಗಮಂಗಲಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ತಂದು ಆರ್‌ಟಿಓ ಆಫೀಸ್ ತೆರೆದಿದ್ದರು ಮತ್ತು ಬಸ್ಸನ್ನೇ ನೋಡದಂತಹ ಹಳ್ಳಿಗಳಿಗೂ ಬಸ್ಸು ಹೋಗಿ ಬರುವಂತೆ ಮಾಡಿದ್ದರು. ಕೆ.ಇ.ಬಿಯ ಇ.ಇ ಆಫೀಸು (ಎಕ್ಸೆಕ್ಯುಟಿವ್ ಇಂಜಿನಿಯರ್ ಆಫೀಸು) ಪಾಂಡವಪುರದಲ್ಲಿತ್ತು. ಅದನ್ನು ನಾಗಮಂಗಲಕ್ಕೂ ತಂದರು.

ಆಗ ಅಸಿಸ್ಟೆಂಟ್ ಕಮೀಷನರ್ ಕಚೇರಿ ಪಾಂಡವಪುರದಲ್ಲಿದ್ದು ನಾಗಮಂಗಲ ಪ್ರಾಂತ್ಯದ ಜನ ತಮ್ಮ ವ್ಯಾಜ್ಯಗಳ ಇತ್ಯರ್ಥಕ್ಕೆ ಪಾಂಡವಪುರಕ್ಕೆ ಅಲೆಯಬೇಕಾಗಿತ್ತು. ಚಲುವರಾಯಸ್ವಾಮಿಯವರು ಎ.ಸಿ. ಕಚೇರಿಯೇ ವಾರಕ್ಕೊಮ್ಮೆ ನಾಗಮಂಗಲಕ್ಕೆ ಬಂದು ಕೆಲಸ ಮಾಡುವಂತೆ ಮಾಡಿದರು. ಅಲ್ಲದೆ ತಾಲೂಕಿನ ದೊಡ್ಡ ಊರುಗಳಿಗೆ ಹೈಸ್ಕೂಲು ತಂದರು. ಅಷ್ಟರಲ್ಲಿ ಇವರುಗಳ ಇಲಾಖೆಯ ಕೆಲಸಗಳಿಗೆ ಅಡೆತಡೆಗಳು ಶುರುವಾದವು. ಗೌಡರಿಗೆ ಚಲುವರಾಯಸ್ವಾಮಿ ಎಲ್ಲೋ ತಮ್ಮ ಮಗನನ್ನೇ ಒವರ್‌ಟೇಕ್ ಮಾಡುವಂತೆ ಕಂಡಿತು; ಹಾಗಾಗಿ ದೇವೇಗೌಡರ ಅಭಿಮಾನಿಗಳು ಮತ್ತು ರೇವಣ್ಣನ ಹಿಂಬಾಲಕರು ಮುಂದಿನ 2008ರ ಚುನಾವಣೆಯಲ್ಲಿ ಚಲುವರಾಯಸ್ವಾಮಿ ವಿರುದ್ಧ ಕೆಲಸ ಮಾಡಿದ್ದರು ಎಂಬ ಮಾತು ಜನಜನಿತವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹಿಂದೆ ಮುಂದೆ ಪಹರೆ ವಾಹನದ ನಡುವೆ ಸೈರನ್ ಮೊಳಗಿಸಿಕೊಂಡು ಹೋಗುವ ಮಂತ್ರಿ ಬಗ್ಗೆ ನಿಷ್ಕಾರಣದ ತಾತ್ಸಾರ ಬೆಳೆದುಕೊಂಡಿದ್ದು ಒಂದು ಕಾರಣವಾಗಿ ಆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸೋತರು. ಇಷ್ಟೊಂದು ಕೆಲಸ ಮಾಡಿಯೂ ಜನ ಸೋಲಿಸಿದರಲ್ಲಾ ಎಂಬ ನಿರಾಶೆಗೆ ಚಲುವರಾಯಸ್ವಾಮಿ ಒಳಗಾಗಿದ್ದರು. ಬೇರೆ ಕಾರಣಗಳೂ ಇದ್ದವು. ಆ ಕಾರಣಗಳು ಮುಂದೆ ಬೃಹದಾಕಾರವಾಗಿ ಎದ್ದುನಿಂತು ದೇವೇಗೌಡರು ನಾಗಮಂಗಲ ಕ್ಷೇತ್ರದ ದೇವಸ್ಥಾನ ಉದ್ಘಾಟನೆ, ತಿಥಿ, ಮದುವೆಗೆಲ್ಲಾ ಬಂದು ಚಲುವರಾಯಸ್ವಾಮಿಯನ್ನು ಮೂಲೆಗುಂಪು ಮಾಡಲು ಶತಾಯಗತಾಯ ಪ್ರಯತ್ನಿಸಿದರು. ಆಗ ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆ ನೌಕರರ ವಸತಿ ನಿರ್ಮಾಣದ ಸೊಸೈಟಿಯಲ್ಲಿ ಹೆಸರು ಮಾಡಿದ್ದ ಸುರೇಶ್‌ಗೌಡರು ಬಂದು ಚಲುವರಾಯಸ್ವಾಮಿ ಎದುರು ನಿಂತು ಗೆದ್ದರು. 2013ರಲ್ಲಿ ಚಲುವರಾಯಸ್ವಾಮಿ ಮತ್ತೆ ಜೆಡಿಎಸ್‌ನಿಂದ ಗೆದ್ದರೂ ಆಗ ಕಾಂಗ್ರೆಸ್ ಸರ್ಕಾರ ಬಂತು. ಮುಂದೆ ಅದುಲುಬದಲಾಗಿ ಸುರೇಶ್‌ಗೌಡ ಜನತಾದಳಕ್ಕೆ ಹೋದರೆ ಚಲುವರಾಯಸ್ವಾಮಿ ಕಾಂಗ್ರೆಸ್‌ಗೆ ಹೋದರು.

ಇದನ್ನೂ ಓದಿ: ನಮ್ಮ ಸಚಿವರಿವರು; ಸರಳ ರಾಜಕಾರಣಿ ರಹೀಂ ಖಾನ್ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ

ನಂತರ 2018ರ ಚುನಾವಣೆಯಲ್ಲಿ ಸುರೇಶ್‌ಗೌಡರು ದಾಖಲೆಯ ನಲವತ್ತೇಳುವರೆ ಸಾವಿರ ಲೀಡನಲ್ಲಿ ಗೆದ್ದರು. ಚಲುವರಾಯಸ್ವಾಮಿ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ಸಿಗೆ ಹೋದರೆಂದು ದೇವೇಗೌಡರ ಕಡೆಯವರು ಮತದಾರರನ್ನು ಕೆರಳಿಸಿ ಗೆಲುವು ಸಾಧಿಸಿದ್ದರು. ಮುಂದೆ ಸಮ್ಮಿಶ್ರ ಸರಕಾರ ಬಂತು; 80 ಸೀಟು ಗೆದ್ದಿದ್ದ ಕಾಂಗ್ರೆಸ್ ಮೂವತ್ತು ಚಿಲ್ಲರೆ ಸೀಟು ಗೆದ್ದಿದ್ದ ದಳಕ್ಕೆ ಸಪೋರ್ಟಟು ಮಾಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿತ್ತು. ಚಲುವರಾಯಸ್ವಾಮಿಯವರನ್ನು ಮೂಲೆಗುಂಪು ಮಾಡಿ ಮಂಡ್ಯವನ್ನು ಕೈಗೆ ತೆಗೆದುಕೊಳ್ಳುವ ಪ್ಲಾನ್ ಮಾಡಿದ ದೇವೇಗೌಡರು ಮತ್ತು ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯವರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿಸಿದರು. ಅವರಗೂ ಓಟು ಕೇಳುವಂತಹ ಸ್ಥಿತಿ ಚಲುವರಾಯಸ್ವಾಮಿಗೆ ಬಂತು. ಆದರೆ ಮಂಡ್ಯದ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿಯಾದ ನಿಖಿಲ್‌ಗೆ ಕೆಲಸ ಮಾಡುವುದರ ಬದಲು ಸುಮಲತಾಗೆ ವರ್ಕ್ ಮಾಡಿದ್ದರಿಂದ ನಿಖಿಲ್ ಒಂದೂಕಾಲು ಲಕ್ಷದ ಅಂತರದಿಂದ ಸೋತರು. ಇದರಲ್ಲಿ ಚಲುವರಾಯಸ್ವಾಮಿ ಶ್ರಮವೂ ಇತ್ತು.

ಸುರೇಶ್‌ಗೌಡ

ಮುಂದೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ನಾಗಮಂಗಲದ ಮುಖಾಂತರ ಹಾದುಹೋಗುವಾಗ ಅದರ ಜವಾಬ್ದಾರಿ ಚಲುವರಾಯಸ್ವಾಮಿ ಮೇಲೆ ಬಿತ್ತು. ಈ ಐತಿಹಾಸಿಕ ಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ ಚಲುವರಾಯಸ್ವಾಮಿ ರಾಹುಲಗಾಂಧಿಗೆ ಹತ್ತಿರವಾದರು.

ಈ ಬಾರಿ ಚಲುವರಾಯಸ್ವಾಮಿ ಎದುರಿಸಿದ ನಾಗಮಂಗಲದ ಚುನಾವಣೆ ಹಿಂದಿಗಿಂತಲೂ ಬಿರುಸಾಗಿತ್ತು. ಗೆಲ್ಲುವ ಎಲ್ಲ ಸೂಚನೆಗಳಿದ್ದರೂ ಕಡೆ ಗಳಿಗೆಯಲ್ಲಿ ನಾಗಮಂಗಲಕ್ಕೆ ಬಂದು ರೋಡ್‌ಶೋ ಮಾಡಿದ ದೇವೇಗೌಡರು, ಚಲುವರಾಯಸ್ವಾಮಿಯನ್ನು ಸೋಲಿಸಲು ಕರೆಕೊಟ್ಟಿದ್ದಲ್ಲದೆ, ಗದ್ಗರಿತವಾಗಿ ಕೇಳಿಕೊಂಡರು. ಅವರ ಸಭೆಗೆ ಸೇರಿದ್ದ ಜನಸ್ತೋಮ ನೋಡಿದ ಜನರು ಸುರೇಶ್‌ಗೌಡರ ಗೆಲುವಿನ ಬಗ್ಗೆ ಯಾವ ಸಂಶಯವನ್ನು ಇಟ್ಟುಕೊಳ್ಳದೆ ಮನಸ್ಸಿಗೆ ಬಂದಷ್ಟು ಬೆಟ್ ಕಟ್ಟಿ ಸೋತುಹೋದರು. ಬೆಳ್ಳೂರು, ನಾಗಮಂಗಲ ಮತ್ತು ಕೊಪ್ಪ ಹೋಬಳಿ ಚಲುವರಾಯಸ್ವಾಮಿಯವರ ಕೈಹಿಡಿದಿದ್ದರಿಂದ ಅವರು ನಾಲ್ಕುವರೆ ಸಾವಿರ ವೋಟುಗಳ ಅಂತರದಲ್ಲಿ ಗೆದ್ದರು. ಈಗ ಎಲ್ಲ ಅಡೆತಡೆಗಳನ್ನು ನಿಭಾಯಿಸಿಕೊಂಡು ಗೆದ್ದು ಸಚಿವರಾಗಿರುವ ಮಂಡ್ಯ ಜಿಲ್ಲೆಯ ನಾಯಕರಾದ ಚಲುವರಾಯಸ್ವಾಮಿಯನ್ನು ಮಂಡ್ಯದ ಕರ್ನಾಟಕ ಸಂಘ ಸನ್ಮಾನಿಸಿದೆ. ಕೃಷಿ ಸಮಾಜದಿಂದ ಬಂದ ಭೈರೇಗೌಡರ ನಂತರ ಚಲುವರಾಯಸ್ವಾಮಿ ಆ ಇಲಾಖೆಗೆ ಜೀವ ನೀಡಬೇಕಾಗಿದೆ. ನಾಗಮಂಗಲದ ಶಾಸಕರಾಗಿದ್ದ ಚಲುವರಾಯಸ್ವಾಮಿ ಈಗ ಕೃಷಿಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ, ಮಂಡ್ಯದಲ್ಲಿ ನಿರ್ವಹಣೆಯಿಲ್ಲದೆ ಹಾಳುಬಿದ್ದಿರುವ ರೈತ ಸಭಾಂಗಣ, ಕಲಾಮಂದಿರ ಇತ್ಯಾದಿ ಸಾಂಸ್ಕೃತಿಕ ವಲಯಗಳ ಪುನಶ್ಚೇತನಕ್ಕೆ ಕೆಲಸ ಮಾಡಿ, ಮಂಡ್ಯವನ್ನು ಅದರ ಗತಕಾಲದ ವೈಭವಕ್ಕೆ ಮರಳಿ ತರಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...