ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಎನ್ಸಿಪಿಯಿಂದ ಬಂಡೆದ್ದ ಸಂಸದರಾದ ಪ್ರಫುಲ್ ಪಟೇಲ್ ಹಾಗೂ ಸುನೀಲ್ ತಟ್ಕರೆ ಅವರನ್ನು ಶರದ್ ಪವಾರ್ ಪಕ್ಷದಿಂದ ಉಚ್ಚಾಟಿಸಿದ್ದಾರೆ.
ಜೊತೆಗೆ ಅಜಿತ್ ಪವಾರ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಂಬೈ ವಿಭಾಗೀಯ ಎನ್ಸಿಪಿ ಮುಖ್ಯಸ್ಥ ನರೇಂದ್ರ ರಾಥೋಡ್, ಅಕೋಲಾ ನಗರ ಜಿಲ್ಲಾ ಮುಖ್ಯಸ್ಥ ವಿಜಯ್ ದೇಶಮುಖ್ ಮತ್ತು ರಾಜ್ಯ ಸಚಿವ ಶಿವಾಜಿರಾವ್ ಗರ್ಜೆ ಅವರನ್ನು ಉಚ್ಚಾಟಿಸಲಾಗಿದೆ.
ಇನ್ನೊಂದೆಡೆ ನಮ್ಮದೇ ಅಧಿಕೃತ ಎನ್ಸಿಪಿ ಎಂದು ಹೇಳಿಕೊಂಡಿರುವ ಅಜಿತ್ ಪವಾರ್ ಬಣ ಮೇಲಿನ ಉಚ್ಚಾಟನೆಗಳಿಗೆ ಯಾವುದೇ ಮಾನ್ಯತೆ ಇಲ್ಲ ಎಂದಿದೆ. ಅಲ್ಲದೇ ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ರನ್ನು ಪಕ್ಷದಿಂದ ಉಚ್ಚಾಟಿಸಿದೆ. ಆ ಸ್ಥಾನಕ್ಕೆ ಸುನೀಲ್ ತಟ್ಕರೆಯವರನ್ನು ಹೆಸರಿಸಿದೆ.
“ಪಕ್ಷದಲ್ಲಿ ಬಹುಮತದ ನಿರ್ಧಾರವನ್ನು ಒಪ್ಪಿಕೊಳ್ಳುವಂತೆ ನಾವು ಶರದ್ ಪವಾರ್ ಅವರನ್ನು ವಿನಂತಿಸುತ್ತೇವೆ. ನಾವು ಅವರ ಆಶೀರ್ವಾದವನ್ನು ಬಯಸುತ್ತೇವೆ,” ಅಜಿತ್ ಪವಾರ್ ಅವರು ಆಕಸ್ಮಿಕವಾಗಿ ಸರ್ಕಾರಕ್ಕೆ ಬೆಂಬಲ ಸೂಚಿಸಿಲ್ಲ, ಬದಲಾಗಿ ನಾವೆಲ್ಲರೂ ಸೇರಿ ತೀರ್ಮಾನಿಸಿದ್ದೇವೆ. ಈಗ ಪಕ್ಷದಲ್ಲಿ ಯಾವುದೇ ಸಮಸ್ಯೆ ಇದ್ದರೂ, ಪಕ್ಷ ಮತ್ತು ಚಿಹ್ನೆ ಯಾರಿಗೆ ಸೇರಿದೆ ಎಂಬುದನ್ನು ಭಾರತ ಚುನಾವಣಾ ಆಯೋಗ ನಿರ್ಧರಿಸುತ್ತದೆ” ಎಂದು ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.
ಈ ಹಿಂದೆಯೂ ಮುಖ್ಯ ಸಚೇತಕರಾಗಿದ್ದ ಅನಿಲ್ ಭೈದಾಸ್ ಪಾಟೀಲ್ ಅವರೇ ನಮ್ಮ ವಿಪ್ ಆಗಿ ಮುಂದುವರಿಯುತ್ತಾರೆ ಎಂದು ಸ್ಪೀಕರ್ ಅವರಿಗೆ ತಿಳಿಸಿದ್ದೇವೆ. ನಾವು ಯಾವುದೇ ನೇಮಕಾತಿಯನ್ನು ಮಾಡಬೇಕಾಗಿದ್ದರೂ, ಮಳೆಗಾಲದ ಅಧಿವೇಶನಕ್ಕೆ ಮುಂಚಿತವಾಗಿ ನಾವು ಎಲ್ಲವನ್ನೂ ಅಧಿಕೃತವಾಗಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
9 ಶಾಸಕರನ್ನು ಅನರ್ಹಗೊಳಿಸುವ ಶರದ್ ಪವಾರ್ರವರ ಪತ್ರದ ಕುರಿತು ಮಾತನಾಡಿದ ಅವರು, “ನಾನು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಯಾವುದೇ ಪಕ್ಷದಿಂದ ಯಾವುದೇ ಅನರ್ಹತೆ ಅಥವಾ ಅಮಾನತು ಮಾಡಲಾಗುವುದಿಲ್ಲ. ಚುನಾವಣಾ ಆಯೋಗಕ್ಕೂ ಆ ಹಕ್ಕಿಲ್ಲ. ಹಕ್ಕು ಇರುವುದು ಸ್ಪೀಕರ್ಗೆ ಮಾತ್ರ ಮತ್ತು ಅದು ಧೀರ್ಘ ಪ್ರಕ್ರಿಯೆಯಾಗಿದೆ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ; ಮಹಾರಾಷ್ಟ್ರ ಜನರು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಶರಣಾಗುವುದಿಲ್ಲ: ಕರಾದ್ನಲ್ಲಿ ಶರದ್ ಪವಾರ್ ಶಕ್ತಿಪ್ರದರ್ಶನ