ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ಮೀಸಲು ಅರಣ್ಯ ಪದೇಶವನ್ನು ಒತ್ತುವರಿ ಮಾಡಿದ್ದಾರೆ ಎನ್ನಲಾದ ಜಾಗದಲ್ಲಿ ನಿರ್ಮಿಸಿದ ಮನೆ ತೆರವಿನ ವೇಳೆ ಉಪ್ಪಿನಂಗಡಿ ಅರಣಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಶಾಸಕ ಹರೀಶ್ ಪೂಂಜ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳಂಜ ಗ್ರಾಮದ ಸರ್ವೆ ನಂಬ್ರ 309ರಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿ ಲೋಲಾಕ್ಷ ಗೌಡ ಅವರು ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಅ.9ರಂದು ಬೆಳಗೆ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದೆವು. ಆಗ ಲೋಲಾಕ್ಷ ಗೌಡ ಅವರು ಮೀಸಲು ಅರಣ್ಯದಲ್ಲಿ ಮನೆಯ ತಳಪಾಯ ಹಾಕಿದ್ದು ಕಂಡುಬಂದಿತ್ತು, ಅದನ್ನು ತೆರವು ಮಾಡುವಂತೆ ಅವರಿಗೆ ಸೂಚಿಸಿದರೂ ಅದಕ್ಕೆ ಒಪ್ಪಲಿಲ್ಲ ಹಾಗಾಗಿ ನಾವು ತೆರವುಗೊಳಿಸಲು ಮುಂದಾದೆವು. ಆಗ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದ ಶಾಸಕ ಹರೀಶ್ ಪೂಂಜ ತೆರವು ಕಾರ್ಯವನ್ನು ತಡೆದರು. ಅಲ್ಲದೆ, ನನ್ನನ್ನು ಉದ್ದೇಶಿಸಿ ಲೋಪ ನನ್ನ ಮಗ’ ಎಂದು ಅವಾಚ್ಯವಾಗಿ ನಿಂದಿಸಿದರು. ಅದನ್ನು ತೆರವುಗೊಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡಿಪಡಿಸಿದ ಶಾಸಕ ಹರೀಶ್ ಪೂಂಜ ಮತ್ತು ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರು ಅ.13ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
‘ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಕಾನೂನು ಸಲಹೆ ಪಡೆದ ಬಳಿಕ ದೂರು ನೀಡಿದ್ದೇನೆ, ಹಾಗಾಗಿ ದೂರು ನೀಡಲು ವಿಳಂಬವಾಗಿದೆ ಎಂದು ಜಯಪ್ರಕಾಶ್ ಕೆ.ಕೆ. ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಅನ್ವಯ ಶಾಸಕ ಹರೀಶ್ ಪೂಂಜ ವಿರುದ್ಧ ಅಕ್ರಮ ಕೂಟ ರಚನೆ, ಕರ್ತವ್ಯಕ್ಕೆ ಅಡ್ಡಿ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೀಶ್ ಪೂಂಜಾ ವಿರುದ್ಧ ಐಪಿಸಿ 1860(ಯು/ಎಸ್-143, 353, 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 149) ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹರೀಶ್ ಪೂಂಜಾ ವಿಡಿಯೋ ವೈರಲ್: ಇದು ಬಿಜೆಪಿಯ ಅಸಲಿ ಸಂಸ್ಕೃತಿ ಎಂದು ಕಾಂಗ್ರೆಸ್ ಟೀಕೆ