2008ರಲ್ಲಿ ನಡೆದ ದೆಹಲಿಯ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆಯ ಎಲ್ಲಾ ಐವರು ಆರೋಪಿಗಳನ್ನು ಕೃತ್ಯ ನಡೆದ ಸುಮಾರು ಹದಿನೈದು ವರ್ಷಗಳ ನಂತರ ದೆಹಲಿ ನ್ಯಾಯಾಲಯವು ಬುಧವಾರ ದೋಷಿಗಳೆಂದು ತೀರ್ಪು ನೀಡಿದೆ.
ಹೆಡ್ಲೈನ್ಸ್ ಟುಡೆ ಸುದ್ದಿ ವಾಹಿನಿಯಲ್ಲಿ ಪತ್ರಕರ್ತರಾಗಿದ್ದ ವಿಶ್ವನಾಥನ್ ಅವರು ಸೆ. 2008ರಲ್ಲಿ ಮನೆಯಿಂದ ಕಚೇರಿಗೆ ತೆರಳುತ್ತಿದ್ದಾಗ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಡ್ರೈವಿಂಗ್ ಮಾಡುತ್ತಿದ್ದ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್, ಬಲ್ಜೀತ್ ಮಲಿಕ್ ಮತ್ತು ಅಜಯ್ ಸೇಥಿಯನ್ನು ಸಾಕೇತ್ ನ್ಯಾಯಾಲಯ ದೋಷಿಗಳೆಂದು ಇಂದು ತೀರ್ಪು ನೀಡಿದೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸೌಮ್ಯ ವಿಶ್ವನಾಥನ್ ಅವರ ತಾಯಿ, ನಮ್ಮ ಮಗಳು ಹೋಗಿದ್ದಾಳೆ. ಆದರೆ ಬೇರೆಯವರಿಗೆ ಈ ರೀತಿಯಾಗಬಾರದು. ತೀರ್ಪು ನಮಗೆ ಆಶಾಭಾವನೆಯನ್ನು ಮೂಡಿಸಿದೆ ಎಂದು ಹೇಳಿದ್ದಾರೆ.
ಯುವ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರು 2008 ಸೆ.30ರಂದು ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೊದಲಿಗೆ ಅಪಘಾತವಾಗಿದೆ ಎಂದು ಬಿಂಬಿಸಲಾಗಿತ್ತು. ಆದರೆ ಬಳಿಕ ಫೋರೆನ್ಸಿಕ್ ವರದಿಗಳು ತಲೆಗೆ ಗುಂಡೇಟಿನಿಂದ ಸಾವು ಸಂಭವಿಸಿದೆ ಎಂದು ಹೇಳಿತ್ತು.
ಸಿಸಿಟಿವಿಯಲ್ಲಿ ಸೌಮ್ಯ ವಿಶ್ವನಾಥನ್ ಅವರ ಕಾರನ್ನು ಹಿಂಬಾಲಿಸುವುದು ಪತ್ತೆಯಾಗಿತ್ತು. ಕಾಲ್ ಸೆಂಟರ್ ಉದ್ಯೋಗಿಯ ಹತ್ಯೆ ಪ್ರಕರಣ ಮತ್ತು ಸೌಮ್ಯ ಪ್ರಕರಣದಲ್ಲಿ ಸಾಮ್ಯತೆ ಕಂಡು ಬಂದಿತ್ತು. ಪ್ರಕರಣದಲ್ಲಿ ಬಂಧಿತ ರವಿ ಕಪೂರ್ ಮತ್ತು ಅಮಿತ್ ಶುಕ್ಲಾ ಅವರು ಸೌಮ್ಯ ಹತ್ಯೆಯ ಬಗ್ಗೆ ಕೂಡ ಬಾಯ್ಬಿಟ್ಟಿದ್ದರು.
ಈ ಕುರಿತು ಚಾರ್ಜ್ ಶೀಟ್ನ್ನು ಜೂನ್ 2010ರಲ್ಲಿ ಸಲ್ಲಿಸಲಾಗಿತ್ತು. ನಂತರ ನವೆಂಬರ್ 2010ರಲ್ಲಿ ವಿಚಾರಣೆ ಪ್ರಾರಂಭವಾಗಿತ್ತು. ಜುಲೈ 2016ರಲ್ಲಿ ವಿಚಾರಣೆ ಮುಕ್ತಾಯವಾಗಿತ್ತು.
ಇದನ್ನು ಓದಿ: ಮಾಜಿ IPS ಬೋರ್ವಾಂಕರ್ ಆತ್ಮಚರಿತ್ರೆಯಲ್ಲಿ ಬರೆದ ಅಂಶ ಸೃಷ್ಟಿಸಿದ ವಿವಾದ