ಮಹಾರಾಷ್ಟ್ರದ ಮಾಜಿ ಐಪಿಎಸ್ ಅಧಿಕಾರಿ ಮೀರಾನ್ ಬೋರ್ವಾಂಕರ್, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಜಮೀನು ಹರಾಜು ಕುರಿತು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದು, ಪುಣೆಯ ಜಿಲ್ಲಾಉಸ್ತುವಾರಿ ಸಚಿವರು ‘ದಾದಾ’ ಹರಾಜು ಪ್ರಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಬರೆದಿದ್ದರು. ಇದೀಗ ಪ್ರತಿಪಕ್ಷಗಳು ಈ ಕುರಿತು ತನಿಖೆಗೆ ಆಗ್ರಹಿಸಿದೆ.
ಸಚಿವರ ವಿರುದ್ಧ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಮಾಡಿರುವ ಆರೋಪದ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ಮಹರಾಷ್ಟ್ರದ ಪ್ರತಿಪಕ್ಷದ ನಾಯಕ ವಿಜಯ ವಾಡೆತ್ತಿವಾರ್ ಆಗ್ರಹಿಸಿದ್ದಾರೆ.
‘ಮೇಡಂ ಕಮಿಷನರ್’ ಎಂಬ ಆತ್ಮಚರಿತ್ರೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಮೀರಾನ್ ಬೋರ್ವಾಂಕರ್ ಅವರು ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ. ಆರೋಪಗಳು ಭೂಪರಿವರ್ತನೆಗೆ ಸಂಬಂಧಿಸಿದೆ. ಈ ಬಗ್ಗೆ ತನಿಖೆಗಾಗಿ ಸರ್ಕಾರವು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ವಿಜಯ ವಾಡೆತ್ತಿವಾರ್ ಹೇಳಿದ್ದಾರೆ.
ಬೋರ್ವಾಂಕರ್ ಯಾವುದೇ ಹೆಸರನ್ನು ಪುಸ್ತಕದಲ್ಲಿ ಹೆಸರಿಸಿಲ್ಲ. ಆದರೆ ಅವರು ಪುಸ್ತಕದಲ್ಲಿ ಜಿಲ್ಲಾ ಮಂತ್ರಿ ‘ದಾದಾ’ ಎಂದು ಉಲ್ಲೇಖಿಸಿದ್ದಾರೆ. ಇದು ಪ್ರಸ್ತುತ ಸರ್ಕಾರದ ಭಾಗವಾಗಿರುವ ಸಚಿವರನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ವಾಡೆತ್ತಿವಾರ್ ಹೇಳಿದ್ದಾರೆ. ಇದಲ್ಲದೆ ಅಜಿತ್ ಪವಾರ್ ಅವರನ್ನು ಜಿಲ್ಲಾ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪುಸ್ತಕದಲ್ಲಿ ದಾಖಲಾಗಿರುವ ಪ್ರಕಾರ, 2010ರಲ್ಲಿ ನಗರದ ಯರವಾಡ ಪ್ರದೇಶದಲ್ಲಿ ಹರಾಜಾದ 3 ಎಕರೆ ಪೊಲೀಸ್ ಭೂಮಿಯನ್ನು ಟಾಪ್ ಬಿಡ್ಡರ್ಗೆ ಹಸ್ತಾಂತರಿಸುವುದನ್ನು ಪೂರ್ಣಗೊಳಿಸಬೇಕೆಂದು ಸಚಿವರು ಒತ್ತಾಯಿಸಿದ್ದಾರೆ. ಆದರೆ ಯರವಾಡ ಕೇಂದ್ರ ಸ್ಥಳವಾಗಿದ್ದು, ಪೊಲೀಸರಿಗೆ ಮತ್ತೆ ಅಂತಹ ಸ್ಥಳ ಸಿಗುವುದಿಲ್ಲ. ಅದಲ್ಲದೆ ಕಚೇರಿ, ಪೊಲೀಸ್ ಕಾಲೋನಿಗೆ ಈ ಸ್ಥಳ ಬೇಕಾಗುತ್ತದೆ ಎಂದು ನಾನು ಹೇಳಿದ್ದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಸುಮಾರು ಮೂರು ಎಕರೆ ವಿಸ್ತೀರ್ಣದ ಭೂಮಿಯನ್ನು ಹರಾಜು ಮಾಡಲಾಗಿದೆ ಎಂದು ನಾನು ತಿಳಿದುಕೊಂಡೆ ಮತ್ತು ನಾವು ಅದನ್ನು ಅತಿ ಹೆಚ್ಚು ಬಿಡ್ ಮಾಡಿದವರಿಗೆ ಹಸ್ತಾಂತರಿಸಬೇಕಾಗಿತ್ತು. ಹರಾಜು ಪ್ರಕ್ರಿಯೆಯು ವಿಭಾಗೀಯ ಆಯುಕ್ತರ ನೇತೃತ್ವದ ಮೇಲ್ವಿಚಾರಣೆಯಲ್ಲಿತ್ತು ಎಂದು ಬೋರ್ವಾಂಕರ್ ಬರೆದಿದ್ದಾರೆ. ಭೂಮಿಯು ಪೋಲೀಸ್ ಇಲಾಖೆಗೆ ಸೇರಿದ್ದರಿಂದ ಈ ಬೆಳವಣಿಗೆ ತುಂಬಾ ಆಶ್ಚರ್ಯಕರವಾಗಿದೆ ಎಂದು ಅವರು ಬರೆದಿದ್ದಾರೆ.
2010ರಲ್ಲಿ ಪುಣೆ ಪೊಲೀಸರಿಗೆ ಸೇರಿದ ಪುಣೆಯ ಯರವಾಡದಲ್ಲಿನ ಸುಮಾರು ಮೂರು ಎಕರೆ ಭೂಮಿಯನ್ನು ಆಗಿನ ಜಿಲ್ಲಾ ಸಚಿವರ ಆದೇಶದ ಮೇರೆಗೆ ಹರಾಜು ಮಾಡಲಾಯಿತು. ಭೂಮಿಯನ್ನು ಹಸ್ತಾಂತರಿಸಲು ಸಚಿವರು ಆಗ್ರಹಿಸಿದಾಗ ಪುಣೆಯ ಅಂದಿನ ಪೊಲೀಸ್ ಕಮಿಷನರ್ ಅವರು ಅದನ್ನು ಬಿಟ್ಟುಕೊಡಲು ನಿರಾಕರಿಸಿದ್ದರು. ಆದರೆ ಆ ಬಳಿಕ ಅವರಿಗೆ ಭಾರೀ ಒತ್ತಡ ಮಾಡಲಾಗಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖವಿದೆ.
ಆದರೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೀರಾ ಬೋರವಾಂಕರ್ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸರ್ಕಾರಿ ಭೂಮಿಯನ್ನು ಹರಾಜು ಹಾಕುವ ಹಕ್ಕು ಸಚಿವರಿಗೆ ಇಲ್ಲ, ಸಚಿವ ಸಂಪುಟದ ಒಪ್ಪಿಗೆ ನಂತರವೆ ಭೂಮಿ ಹರಾಜು ನಡೆಯುತ್ತದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ನಾನು ಕೂಡ ಈ ಹರಾಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದೆ. ಜಿಲ್ಲಾ ಸಚಿವರಿಗೆ ಜಮೀನು ಹರಾಜು ಹಾಕುವ ಹಕ್ಕು ಇಲ್ಲ. ಯಾವುದೇ ಭೂಮಿಯನ್ನು ಹರಾಜು ಮಾಡಲು ಕಂದಾಯ ಇಲಾಖೆ ಮೂಲಕ ಪ್ರಸ್ತಾವನೆ ಬಂದ ನಂತರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅಜಿತ್ ಪವಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ; ಪ್ಯಾಲೆಸ್ತೀನ್ ಬಗ್ಗೆ ತಪ್ಪು ಮಾಹಿತಿಯು ಹೆಚ್ಚಾಗಿ ಭಾರತದಿಂದ ಯಾಕೆ ವೈರಲ್ ಆಗುತ್ತಿದೆ?