ಮೈಸೂರಿನ ಹೆಚ್ಡಿ ಕೋಟೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರನ್ನು ಬಲವಂತವಾಗಿ ಮ್ಯಾನ್ ಹೋಲ್ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿದ ಆಘಾತಕಾರಿ ಘಟನೆ ನಡೆದಿದೆ.
ಕಳೆದ ಶುಕ್ರವಾರ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಹೆಚ್ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಡಿಕಲ್ ಆಫೀಸರ್ ಡಾ. ಸೋಮಣ್ಣ, ನರ್ಸ್ ಪರಿಮಳ, ಪರುಶುರಾಮ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಡಿ ದರ್ಜೆ ನೌಕರ ಪಾಂಡುರಂಗಯ್ಯ ಅವರಿಗೆ ಆಸ್ಪತ್ರೆಯ ಆಡಳಿತದವರು ಕ್ಲೀನ್ ಮಾಡುವಂತೆ ಒತ್ತಡ ಹಾಕಿದ್ದಾರೆ. ಅದಕ್ಕೆ ಅವರು ಇನ್ನೊಬ್ಬರನ್ನು ಜೊತೆಗೆ ಕರೆಸಿಕೊಂಡು ಬಂದು ಅಪಾಯಕಾರಿ ಮ್ಯಾನ್ ಹೋಲ್ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ. ನೌಕರರು ಮ್ಯಾನ್ ಹೋಲ್ ಗುಂಡಿಗೆ ಇಳಿಯಲು ನಿರಾಕರಿಸಿದರೂ ಅವರಿಗೆ ಬಲವಂತ ಮಾಡಿ ಬೆದರಿಸಿ ಸ್ವಚ್ಛತೆ ಮಾಡುವಂತೆ ಸೂಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ರಾಜ್ಯ ಸಂಚಾಲಕರಾದ ಓಬಲೇಶ್, ಡಿ ದರ್ಜೆ ನೌಕರರನ್ನು ಗುತ್ತಿಗೆದಾರರು ನೇಮಕ ಮಾಡಿಕೊಂಡಿರುತ್ತಾರೆ. ಅವರನ್ನು ಮ್ಯಾನ್ ಹೋಲ್ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸುವಂತಿಲ್ಲ. ಈ ರೀತಿ ಮಾಡುವುದು ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಆಕ್ಟ್ ಪ್ರಕಾರ ಅಪರಾಧ. ಆಸ್ಪತ್ರೆಯ ವೈದ್ಯರು, ನರ್ಸ್, ಗುತ್ತಿಗೆದಾರ ಮಾಡಿರುವುದು ಬಹು ಅಪಯಾಕಾರಿ, ಘೋರ ಅಪರಾಧ. ಮ್ಯಾನ್ ಹೋಲ್ ಗುಂಡಿಗಳನ್ನು ಮನುಷ್ಯರ ಮೂಲಕ ಸ್ವಚ್ಛತೆ ಮಾಡಿಸುವಂತಿಲ್ಲ. ಇದನ್ನು ತಾಂತ್ರಿಕವಾಗಿ ಮಾಡಬೇಕು. ಯಾರ ಕೈಯ್ಯಲ್ಲೂ ಈ ಕೆಲಸ ಮಾಡಿಸಬಾರದು. ಆದರೆ ಇವರು ಬೆದರಿಸಿ ನೌಕರರಲ್ಲಿ ಬಲವಂತವಾಗಿ ಮಾಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಎಸಿ, ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದು ಅನ್ಯಾಯ, ದಲಿತ ಕಾರ್ಮಿಕರ ಕೈಯ್ಯಲ್ಲಿ ಈ ಕೆಲಸ ಮಾಡಿಸಿರುವುದು ಅಪರಾಧ ಎಂದು ಹೇಳಿದ್ದಾರೆ.
ಇದನ್ನು ಓದಿ: ಪ್ಯಾಲೆಸ್ತೀನ್ ಬಗ್ಗೆ ತಪ್ಪು ಮಾಹಿತಿಯು ಹೆಚ್ಚಾಗಿ ಭಾರತದಿಂದ ಯಾಕೆ ವೈರಲ್ ಆಗುತ್ತಿದೆ?