ಲೈಂಗಿಕ ಕಿರುಕುಳದ ಆರೋಪದ ಮೇಲೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು ತಮ್ಮ ಬೆಂಬಲ ನೀಡಿದ್ದಾರೆ.
ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಬುಧವಾರ ಮಲಿಕ್ ಕೂಡ ಪಾಲ್ಗೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಈ ಹೋರಾಟಕ್ಕೆ ಹೆಚ್ಚಿನ ಬೆಂಬಲ ಸಿಗಬೇಕಿದೆ. ನಾನು ಬೆಂಬಲಿಸುವ ಮೂಲಕ ನನ್ನ ಪಾತ್ರವನ್ನು ನಿರ್ವಹಿಸಿದ್ದೇನೆ. ಏಕೆಂದರೆ ಇದು ಕೇವಲ ಈ ಹೆಣ್ಣುಮಕ್ಕಳದ್ದಷ್ಟೇ ಅಲ್ಲ, ಇಡೀ ದೇಶದ ಹೆಣ್ಣುಮಕ್ಕಳ ರಕ್ಷಣೆಗಾಗಿ ನಾವು ಹೋರಾಟ ಮಾಡಬೇಕಾಗಿದೆ” ಎಂದು ಹೇಳಿದರು.
”ನಾನು ಈ ಯುವತಿಯರಿಗೆ ತಾಳ್ಮೆಯಿಂದಿರಿ ಎಂದು ಹೇಳಲು ಬಯಸುತ್ತೇನೆ, ಏಕೆಂದರೆ ನೀವು ಯಶಸ್ವಿಯಾಗುತ್ತೀರಿ. ಈಗ ಇಡೀ ದೇಶವೇ ನಿಮ್ಮ ಹಿಂದೆ ಇದೆ. ಭಾರತೀಯ ಕುಸ್ತಿ ಫೆಡರೇಶನ್ನಲ್ಲಿ ನಡೆಯುವ ಭ್ರಷ್ಟಾಚಾರವನ್ನು ಕೊನೆಗೊಳಿಸಿದ್ದಕ್ಕಾಗಿ ಇತಿಹಾಸವು ನಿಮ್ಮನ್ನು ನೆನಪಿಸಿಕೊಳ್ಳುತ್ತದೆ” ಎಂದು ಅವರು ಹೇಳಿದರು.
”ಕೆಲವು ತಿಂಗಳ ಹಿಂದೆ ರೈತ ಸಂಘಗಳು ಪ್ರತಿಭಟನೆಗಳನ್ನು ನಡೆಸಿದರು, ಕೊನೆಗೆ ಪ್ರಧಾನಿ ಕ್ಷಮೆಯಾಚಿಸಲು ಸಾಧ್ಯವಾಯಿತು. ಈಗ ಎಲ್ಲರೂ ನಿಮ್ಮ ಹಿಂದೆ ಇದ್ದಾರೆ, ನೀವು ಯಶಸ್ವಿಯಾಗುತ್ತೀರಿ. ಅದರಲ್ಲಿ ಸಂದೇಹವೇ ಇಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಪುಲ್ವಾಮ ದಾಳಿ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಗೌವರ್ನರ್ ಸತ್ಯಪಾಲ್ ಮಲಿಕ್ಗೆ ಸಿಬಿಐ ನೋಟಿಸ್
ಲೈಂಗಿಕ ಕಿರುಕುಳದ ಆರೋಪದ ಮೇಲೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತ್ಯೇಕ ದೂರು ನೀಡಿದ್ದ ಏಳು ಮಹಿಳಾ ಕ್ರೀಡಾಪಟುಗಳಿಗೆ ಮುಂದಿನ ಪರಿಣಾಮಗಳ ಬಗ್ಗೆ ಬೆದರಿಕೆ ಮತ್ತು ಹಣದ ಪ್ರಚೋದನೆ ಮಾಡಲಾಗುತ್ತಿದೆ ಎಂದು ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಸೇರಿದಂತೆ ದೇಶದ ಪ್ರಮುಖ ಕುಸ್ತಿಪಟುಗಳು ಮಂಗಳವಾರ ಹೇಳಿದ್ದಾರೆ.
ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಮಾತನಾಡಿ, ದೂರುದಾರರಿಗೆ ಬೆದರಿಕೆ ಹಾಕುವ ಮೂಲಕ ಈ ಹೋರಾಟ ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಏಳು ದೂರುದಾರರಲ್ಲಿ ಒಬ್ಬರಾದ ಅಪ್ರಾಪ್ತರ ಕುಟುಂಬಕ್ಕೆ ಸಿಂಗ್ ಬೆದರಿಕೆ ಹಾಕಿದ್ದಾರೆ ಎಂದು ಬಜರಂಗ್ ಪುನಿಯಾ ಆರೋಪಿಸಿದರು.
ಈ ಹಿಂದೆ ಕುಸ್ತಿಪಟುಗಳು ತಮ್ಮಪ್ರತಿಭಟನೆಗೆ ಯಾವುದೇ ರಾಜಕೀಯ ಪಕ್ಷದ ಬೆಂಬಲ ಬೇಡ ಎಂದು ಹೇಳಿದ್ದರು. ಆದರೆ ಸೋಮವಾರ ತಮ್ಮ ಹಿಂದಿನ ನಿಲುವನ್ನು ಬದಲಿಸಿ, ರಾಜಕೀಯ ಪಕ್ಷಗಳು ಮತ್ತು ಮಹಿಳಾ ಸಂಘಟನೆಗಳ ಬೆಂಬಲವನ್ನು ಕೋರಿದ್ದರು. ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕಿ ಮತ್ತು ಮಾಜಿ ರಾಜ್ಯಸಭಾ ಸಂಸದೆ ಬೃಂದಾ ಕಾರಟ್ ಮತ್ತು ಆಮ್ ಆದ್ಮಿ ಪಕ್ಷದ ವಕ್ತಾರೆ ರೀನಾ ಗುಪ್ತಾ ಮಂಗಳವಾರ ಕುಸ್ತಿಪಟುಗಳನ್ನು ಭೇಟಿಯಾಗಿದ್ದಾರೆ.