Homeಮುಖಪುಟಅಡ್ವಾಣಿ: ರಥಯಾತ್ರೆಯಿಂದ ಭಾರತ ರತ್ನದವರೆಗೆ; ಹಿಂಸಾಚಾರ, ಧ್ರುವೀಕರಣದಿಂದ ಮುನ್ನಡೆದ ರಾಜಕೀಯ ಪಯಣ

ಅಡ್ವಾಣಿ: ರಥಯಾತ್ರೆಯಿಂದ ಭಾರತ ರತ್ನದವರೆಗೆ; ಹಿಂಸಾಚಾರ, ಧ್ರುವೀಕರಣದಿಂದ ಮುನ್ನಡೆದ ರಾಜಕೀಯ ಪಯಣ

- Advertisement -
- Advertisement -

ಬಿಜೆಪಿಯ ಹಿರಿಯ ನಾಯಕ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ನಿವೃತ್ತಿ ಪೀಠದಲ್ಲಿ ಕೂರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದ ಅತ್ಯುನ್ನತ ಗೌರವ ಭಾರತ ರತ್ನ ನೀಡಿ ಗೌರವಿಸಿದ್ದಾರೆ.

1989ರಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದ ಅಡ್ವಾಣಿ, ಪಾಲಂಪೂರ್ ರಾಷ್ಟ್ರೀಯ ಕಾರ್ಯಕಾರಿ ನಿರ್ಣಯದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಪಕ್ಷದ ಅಜೆಂಡಾಗಳಲ್ಲಿ ಒಂದಾಗಿ ಮೊದಲ ಬಾರಿಗೆ ಅಡ್ವಾಣಿ ಸೇರಿಸಿದ್ದರು. ಅನಿಶ್ಚಿತತೆ, ಭಯ ಮತ್ತು ಅಭದ್ರತೆ ಸೃಷ್ಟಿಯಾಗಿರುವ ಹೊಸ ಭಾರತದಲ್ಲಿ ಹಿಂದುತ್ವ ಸಿದ್ಧಾಂತವಾದಿಗೆ ಭಾರತ ರತ್ನ ನೀಡಿರುವುದು ವಿಶೇಷವೇನಲ್ಲ. ಕಳೆದ ಕೆಲವು ದಶಕಗಳಲ್ಲಿ, ದೇಶದ ಅತ್ಯುನ್ನತ ಗೌರವ ಪ್ರಶಸ್ತಿಯನ್ನು ರಾಜಕೀಯ ಸಂದೇಶ ಕಳುಹಿಸುವ ಸಾಧನವಾಗಿ ಬಳಸಿರುವ ಆರೋಪಗಳಿವೆ. ವಿಜ್ಞಾನಿಗಳು, ಸಂಗೀತಗಾರರು, ಕ್ರೀಡಾಪಟುಗಳು ಮತ್ತು ಸಮಾಜ ಸುಧಾರಕರು ಕಾಲಕಾಲಕ್ಕೆ ಗೌರವವನ್ನು ಪಡೆದರೆ, ಕೇಂದ್ರ ಸರಕಾರ ಹೆಚ್ಚಾಗಿ ತಮ್ಮ ಪಕ್ಷದ ಮತ್ತು ಸರಕಾರದ ಪರ ಇರುವವರಿಗೆ ಪ್ರಶಸ್ತಿಯನ್ನು ನೀಡಲು ಆಯ್ಕೆ ಮಾಡಿಕೊಂಡಿರುವುದು ಚರ್ಚೆಯಲ್ಲಿರುವ ವಿಷಯವೇ ಆಗಿದೆ.

ಅಡ್ವಾಣಿ ಕೇಸರಿ ಪಕ್ಷಕ್ಕೆ ಸ್ಪಷ್ಟ ಮತ್ತು ತೀಕ್ಷ್ಣವಾದ ಸೈದ್ಧಾಂತಿಕ ರೇಖೆಯನ್ನು ನೀಡಿದ ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಅವರು ಕೇಸರಿ ಪಕ್ಷವನ್ನು ಸಾಮೂಹಿಕ ಸಂಘಟನೆಯಾಗಿ ಪರಿವರ್ತಿಸುವಲ್ಲಿ ದೊಡ್ಡ ಸಾಂಸ್ಥಿಕ ಪಾತ್ರವನ್ನು ವಹಿಸಿದ್ದರು.  ಪಾಲಂಪುರ್‌ನಲ್ಲಿ ರಾಮಮಂದಿರ ನಿರ್ಮಾಣದ ಕುರಿತು ನಿರ್ಣಯವನ್ನು ಅಂಗೀಕರಿಸುವುದರಿಂದ ಹಿಡಿದು ದೇಶದಾದ್ಯಂತ ರಥಯಾತ್ರೆಯ ಮೂಲಕ ಅಡ್ವಾಣಿ  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ  ಪಕ್ಷವನ್ನು ಕಟ್ಟಿದ್ದರು. ಇದೀಗ ಅಂತಿಮವಾಗಿ ಆರೆಸ್ಸೆಸ್‌ ಸೈದ್ಧಾಂತಿಕ ಮಾರ್ಗದರ್ಶಕರು ಅವರನ್ನು ಬದಿಗೆ ಸರಿಸಿದ್ದಾರೆ.

1986-91ರ ನಡುವೆ ಮೊದಲ ಬಾರಿಗೆ, ನಂತರ 1993-98ರ ಮತ್ತು ಅಂತಿಮವಾಗಿ 2004-05ರವರೆಗೆ ಬಿಜೆಪಿಯ ಅಧಕ್ಷರಾಗಿದ್ದ ಅಡ್ವಾಣಿ ಬಿಜೆಪಿಯ ಸುದೀರ್ಘ ಅವಧಿಯ ಅಧ್ಯಕ್ಷರಾಗಿದ್ದಾರೆ. ಮುಹಮ್ಮದ್ ಅಲಿ ಜಿನ್ನಾರನ್ನು ಜಾತ್ಯತೀತ ನಾಯಕ ಎಂದು ಬಣ್ಣಿಸುವ ವಿವಾದವನ್ನು ಉಂಟುಮಾಡಿದ ನಂತರ ಅವರನ್ನು ಆರೆಸ್ಸೆಸ್‌ ರಾಜೀನಾಮೆ ನೀಡುವಂತೆ ಒತ್ತಾಯಿಸಿತ್ತು.

2005ರಲ್ಲಿ ಅಡ್ವಾಣಿ ರಾಜೀನಾಮೆಯು ಅವರ ರಾಜಕೀಯ ಜೀವನದ ಅಂತ್ಯದ ಆರಂಭವಾಗಿದೆ. 2013ರಲ್ಲಿ ಅವರನ್ನು ದೂರವಿಟ್ಟರೂ, 2009ರ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಾಗಿತ್ತು. ಬಿಜೆಪಿ ಸೋಲಿನಿಂದ ಅಡ್ವಾಣಿ ವರ್ಚಸ್ಸು ಕಡಿಮೆಯಾಗಿತ್ತು ಎಂದು ಹಿರಿಯ ಪತ್ರಕರ್ತೆ ನೀನಾ ವ್ಯಾಸ್ ಹೇಳಿದ್ದಾರೆ.

2002ರ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ವಿರೋಧಿ ಗಲಭೆಯ ನಂತರ ವಾಜಪೇಯಿ ಅವರು ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರನ್ನು ರಾಜೀನಾಮೆ ಕೇಳಲು ಬಹುತೇಕ ನಿರ್ಧರಿಸಿದ್ದರು. ಆದರೆ ಇದನ್ನು ಅಡ್ವಾಣಿ ತಡೆದಿದ್ದರು. 2014ರಲ್ಲಿ ಮೋದಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಡ್ವಾಣಿ ಅವರನ್ನು ನೇಪಥ್ಯಕ್ಕೆ ಸರಿಸಲಾಯಿತು. ಮೋದಿ ಪ್ರಧಾನಿಯಾದ ಒಂದು ತಿಂಗಳಲ್ಲಿ ಅಮಿತ್‌ ಶಾ ಪಕ್ಷದ ಅಧ್ಯಕ್ಷರಾದರು. ಆ ಬಳಿಕ ಪಕ್ಷದ ಸ್ಥಾಪಕ ಸದಸ್ಯರಾದ ಅಡ್ವಾಣಿ ಮತ್ತು ಬಿಜೆಪಿಯ ಮಾಜಿ ಅಧ್ಯಕ್ಷ ಮುರಳಿ ಮನೋಹರ್ ಜೋಷಿ ಅವರ ಸಲಹಾ ಮಂಡಳಿಯನ್ನು ರಚಿಸಲಾಗಿತ್ತು. ಆದರೆ ಸಮಿತಿ ಒಮ್ಮೆಯೂ ಸಭೆ ನಡೆಸಿರಲಿಲ್ಲ. ಆ ಬಳಿಕ 2019ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಅಡ್ವಾಣಿ ಮತ್ತು ಜೋಷಿ ಅವರ ರಾಜಕೀಯ ಜೀವನವು ಇದೇ ವೇಳೆಗೆ ಅಂತ್ಯಗೊಂಡಿತ್ತು.

ಅಡ್ವಾಣಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಅವರು ರಾಮ ಜನ್ಮಭೂಮಿ ರಥಯಾತ್ರೆ ಬಗ್ಗೆ ನೀಡಿದ ಹೇಳಿಕೆ ಅವರನ್ನು ಬದಿಗೆ ಸರಿಸುವಂತೆ ಮಾಡಿದೆ. ಇದಲ್ಲದೆ ಅವರು ತಮ್ಮ ಜೀವನಚರಿತ್ರೆಯನ್ನು ಬರೆದಿದ್ದರು, ಅದರಲ್ಲಿ ಅವರು ಬಾಬರಿ ಮಸೀದಿಯ ಧ್ವಂಸವನ್ನು ಖಂಡಿಸಿದ್ದರು, ಇದನ್ನು ‘ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ಯತ್ನ’ ಎಂದು ಹಲವರು ಹೇಳಿದ್ದರು.  ಅಡ್ವಾಣಿ ‘ಇದು ಈ ರೀತಿ ಕೊನೆಗೊಳ್ಳುತ್ತದೆ ಎಂದು ನನಗೆ ತಿಳಿದಿದ್ದರೆ, ನಾನು ಎಂದಿಗೂ ಅಯೋಧ್ಯೆಗೆ ಹೋಗುತ್ತಿರಲಿಲ್ಲ’ ಎಂದು ಹೇಳಿದ್ದರು. ಆ ಯಾತ್ರೆಯು ಕೆಲವರನ್ನು ಮೆಚ್ಚಿಸಿರಬಹುದು, ನನ್ನ ಬೆಂಬಲಿಗರನ್ನು ಗೆಲ್ಲಿಸಿ ನನ್ನ ವಿರೋಧಿಗಳನ್ನು ಕೆರಳಿಸಿರಬಹುದು. ಆದರೆ ನನಗೆ ಪ್ರಮುಖ ಪಾಠದ ಸಮಯ ಎಂದು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಅಡ್ವಾಣಿ ಹೇಳಿದ್ದರು. ಜಿನ್ನಾ ಅವರ ಬಗೆಗಿನ ಹೇಳಿಕೆ ಪಕ್ಷದಲ್ಲಿನ ಅವರ ದೊಡ್ಡ ವರ್ಗದ ಸ್ನೇಹಿತರ ವಿರೋಧಕ್ಕೆ ಕಾರಣವಾಗಿತ್ತು.

ಹಿರಿಯ ಪತ್ರಕರ್ತ ಕುಲದೀಪ್ ಕುಮಾರ್ ಅವರು ಅಡ್ವಾಣಿ ಬಗ್ಗೆ ಮಾತನಾಡುತ್ತಾ, ನಾನು ಜಿನ್ನಾ ಮತ್ತು ಅಡ್ವಾಣಿ ಅವರಿಗೆ ಪರಸ್ಪರ ಹತ್ತಿರವಾಗಿದ್ದೇನೆ. ಜಿನ್ನಾ ಅವರು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಧಾರ್ಮಿಕ ಮಾರ್ಗಗಳಲ್ಲಿ ಪ್ರಸ್ತಾಪಿಸಿದರು. ಅವರು ಮುಸ್ಲಿಂ ರಾಷ್ಟ್ರವನ್ನು ಬಯಸಿದ್ದರು. ಅಡ್ವಾಣಿ ಮತ್ತು ಸಂಘ ಪರಿವಾರವು ಹಿಂದೂ ರಾಷ್ಟ್ರವನ್ನು ಬಯಸಿದ್ದರು. ಇಬ್ಬರೂ ನಂಬಿಕೆಯ ಆಧಾರದಲ್ಲಿ ಧಾರ್ಮಿಕ ಮಾರ್ಗಗಳಲ್ಲಿ ಮಾತ್ರ ರಾಷ್ಟ್ರಗಳನ್ನು ರೂಪಿಸುವ ಬಯಕೆಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ.

ಅಡ್ವಾಣಿ ಮತ್ತು ಬಾಬರಿ ಮಸೀದಿ ಧ್ವಂಸ: 

80ರ ದಶಕದಲ್ಲಿ ರಾಮ ಮಂದಿರಕ್ಕಾಗಿ ನಡೆದ ಚಳುವಳಿಯ ನೇತೃತ್ವವನ್ನು ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ವಹಿಸಿದ್ದರು. ಅಡ್ವಾಣಿ ಸೋಮನಾಥದಿಂದ ಅಯೋಧ್ಯೆಯವರೆಗೆ ‘ರಥಯಾತ್ರೆ’ ನಡೆಸಿದ್ದರು. ದೊಡ್ಡ ಪ್ರಮಾಣದ ಹಿಂಸಾಚಾರ, ದಂಗೆ ಮತ್ತು ಹತ್ಯೆಗಳೊಂದಿಗೆ ರಥಯಾತ್ರೆ ಕಾರಣವಾಗಿತ್ತು.  ಆ ಬಳಿಕ ಅಡ್ವಾಣಿ ಅವರನ್ನು ಬಿಹಾರದ ಲಾಲು ಪ್ರಸಾದ್ ಯಾದವ್ ಸರಕಾರ ಬಂಧಿಸಿತ್ತು.

ಇದಾದ ಬಳಿಕ 1992 ಡಿ.6ರಂದು ಅಡ್ವಾಣಿ, ಜೋಷಿ ನೇತೃತ್ವದ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ ನಡೆಯುತ್ತದೆ. ಆ ಬಳಿಕ ರಾಷ್ಟ್ರವ್ಯಾಪಿ ಕೋಮು ಗಲಭೆ ಆರಂಭವಾಗುತ್ತದೆ. ಎರಡು ಸಾವಿರಕ್ಕೂ ಹೆಚ್ಚು ಮಂದಿಯ ಸಾವು ಸಂಭವಿಸುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಕರಸೇವಕರ ವಿರುದ್ಧ, ಎಲ್‌.ಕೆ. ಅಡ್ವಾಣಿ, ಅಶೋಕ್‌ ಸಿಂಘಲ್‌, ವಿನಯ್‌ ಕಟಿಯಾರ್‌, ಉಮಾಭಾರತಿ, ಸಾಧ್ವಿ ಋತಂಬರಾ, ಮುರಳಿಮನೋಹರ ಜೋಶಿ, ಗಿರಿರಾಜ್‌ ಕಿಶೋರ್‌ ಹಾಗೂ ವಿಷ್ಣು ಹರಿ ದಾಲ್ಮಿಯಾ ಅವರ ವಿರುದ್ಧ ಪ್ರಕರಣ ದಾಖಲಾಗತ್ತದೆ.

ಆ ಬಳಿಕ ವಿಚಾರಣೆಯ ವೇಳೆ ಕರಸೇವಕರು ಬಿಜೆಪಿಯ ಹಿರಿಯ ನಾಯಕರಾದ ಅಡ್ವಾಣಿ, ಜೋಷಿ ಅವರ ಸೂಚನೆ ಮೇರೆಗೆ ಸಭೆ ಸೇರಿದ್ದೇವೆ ಮತ್ತು ಮಸೀದಿಗೆ ನುಗ್ಗಿದ್ದೇವೆ ಎಂದು ಹೇಳಿದ್ದರು. ಬಾಬರಿ ಮಸೀದಿಯ ಧ್ವಂಸಕ್ಕೆ ಮೊದಲು ಸುಮಾರು 1,50,000 ಜನರು ಅಡ್ವಾಣಿ ಮತ್ತು ಜೋಷಿಯ ಭಾಷಣಗಳನ್ನು ಕೇಳಲು ಜಮಾಯಿಸಿದ್ದರು. ಈ ಇಬ್ಬರು ಕೂಡ ಬಾಬರಿ ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳಲ್ಲಿ ಸೇರಿದ್ದರು.

ಬಾಬರಿ ಮಸೀದಿ ಧ್ವಂಸದ ಬಳಿಕ ರಾಮಮಂದಿರ ನಿರ್ಮಾಣವನ್ನು ಪ್ರಮುಖ ವಿಷಯವಾಗಿ ಬಿಜೆಪಿ ರಾಜಕೀಯ ಮಾಡಿಕೊಂಡು ಬಂದಿದೆ. ಹಿಂದುತ್ವ, ಧಾರ್ಮಿಕ ವಿಚಾರಗಳನ್ನೇ ಇಟ್ಟುಕೊಂಡೇ ಪಕ್ಷದ ಬಲವರ್ಧನೆ ಮಾಡಲಾಗಿದೆ. ಇದಕ್ಕೆ ರಥಯಾತ್ರೆ ಮೂಲಕ ಅಡ್ವಾಣಿ ಮುನ್ನುಡಿ ಬರೆದಿದ್ದರು.

ಇದನ್ನು ಓದಿ: ‘ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆ ಬಗ್ಗೆ ಹೆಮ್ಮೆಯಿದೆ’: ಗಾಂಧಿ ಹಂತಕನನ್ನು ಶ್ಲಾಘಿಸಿದ NIT ಪ್ರಾಧ್ಯಾಪಕಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...