ಕ್ಯಾಲಿಕಟ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಾಪಕರೊಬ್ಬರು ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆಯನ್ನು ಶ್ಲಾಘಿಸಿ ಫೇಸ್ಬುಕ್ ಕಮೆಂಟ್ ಮಾಡಿದ್ದು, ಇದೀಗ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿವಾದಕ್ಕೆ ಸುದ್ದಿಯಾಗಿದೆ.
ಜನವರಿ 30ರಂದು ಮಹಾತ್ಮ ಗಾಂಧಿಯವರ ಹುತಾತ್ಮ ದಿನಾಚರಣೆಯಂದು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಶೈಜಾ ಆಂಡವನ್ ಅವರು ನಿರಂತರವಾಗಿ ಹಿಂದುತ್ವದ ನಿಲುವು ತಳೆದಿರುವ ಕೃಷ್ಣರಾಜ್ ಎಂಬ ವಕೀಲರು ಹಾಕಿರುವ ಪೋಸ್ಟ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ.
ಗೋಡ್ಸೆಯ ಛಾಯಾಚಿತ್ರವನ್ನು ಹಂಚಿಕೊಂಡ ಕೃಷ್ಣ ರಾಜ್ ಮಲಯಾಳಂನಲ್ಲಿ, ಹಿಂದೂ ಮಹಾಸಭಾ ಸದಸ್ಯ ನಾಥೂರಾಂ ಗೋಡ್ಸೆ,’ಭಾರತದ ಅನೇಕ ಜನರ ವೀರ’ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶೈಜಾ ಆಂಡವನ್ ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆಯ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಪ್ರಾಧ್ಯಾಪಕಿಯ ಸ್ಟೇಟಸ್ ವೈರಲ್ ಆಗುತ್ತಿದ್ದಂತೆ, NITCಯಂತಹ ಇನ್ಸ್ಟಿಟ್ಯೂಟ್ನ ಪ್ರಾಧ್ಯಾಪಕರು ರಾಷ್ಟ್ರಪಿತನ ಹತ್ಯೆಗೆ ಕಾರಣವಾದ ವ್ಯಕ್ತಿಯನ್ನು ಹೇಗೆ ಶ್ಲಾಘಿಸುತ್ತಾರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಿದ್ದಂತೆ ಶೈಜಾ ಕಮೆಂಟ್ನ್ನು ಅಳಿಸಿ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶೈಜಾ, ನಾನು ಮೊದಲು ಕಾಮೆಂಟ್ ಮಾಡಿದಾಗ ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ‘ನಾನೇಕೆ ಗಾಂಧಿಯನ್ನು ಕೊಂದೆ’ ಎಂಬ ಪುಸ್ತಕವನ್ನು ಓದಿ ಅದರಲ್ಲಿ ಉಲ್ಲೇಖಿಸಿರುವ ಕೆಲವು ಅಂಶಗಳು ನಿಜವೆಂದು ಅನಿಸಿತ್ತು. ಹಾಗಾಗಿ ಕಾಮೆಂಟ್ ಮಾಡಿದ್ದೇನೆ. ಆದರೆ ಈಗ, ನಾನು ಅದನ್ನು ಮಾಡಬಾರದಿತ್ತು ಎಂದು ಭಾವಿಸುತ್ತೇನೆ ಮತ್ತು ಆದ್ದರಿಂದ ನಾನು ಕಾಮೆಂಟ್ನ್ನು ಅಳಿಸಿದ್ದೇನೆ ಎಂದು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಅದೇ ಕಾಲೇಜಿನ ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿಯನ್ನು ಅಮಾನತುಗೊಳಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ನಲ್ಲಿ ರಾಮ ಮಂದಿರ ಉದ್ಘಾಟನೆ ದಿನ ಸಂಭ್ರಮಾಚರಣೆಯನ್ನು ವಿರೋಧಿಸಿದ್ದರು. ಇದರಿಂದಾಗಿ ವಿದ್ಯಾರ್ಥಿಯನ್ನು ಅಮಾನತು ಮಾಡಲಾಗಿದೆ. ಅಮಾನತು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆ ಅಮಾನತ್ತನ್ನು ಹಿಂಪಡೆಯಲಾಗಿದೆ.
ಇದನ್ನು ಓದಿ: ‘ಭಾರತ್ ಮಾತಾ ಕೀ ಜೈ’ ಹೇಳದ ಮಹಿಳೆಗೆ ಸಭೆಯಿಂದ ಹೊರ ನಡೆಯುವಂತೆ ಸೂಚಿಸಿದ ಕೇಂದ್ರ ಸಚಿವೆ