Homeಮುಖಪುಟ‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

- Advertisement -
- Advertisement -

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಭರವಸೆ ನೀಡುತ್ತಿದ್ದರು. ವಿದೇಶ ನೀತಿ, ರಾಜನೀತಿ ಮತ್ತು ಆರ್ಥಿಕ ನೀತಿಗಳೆಲ್ಲವೂ ಭಾರತಕ್ಕೆ ‘ಅಮೃತಕಾಲ’ ತಂದಿವೆ ಎಂಬುದು ಅವರ ಪುನರಾವರ್ತಿತ ಮಂತ್ರವಾಗಿತ್ತು. ಯಾರೂ ಹೆದರಬೇಕಿಲ್ಲ, ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಜನರನ್ನು ಸಮಾಧಾನಗೊಳಿಸುತ್ತಿದ್ದರು. ಆದರೆ ಮತದಾನ ಪ್ರಕ್ರಿಯೆ ಮುಗಿದ ಕೂಡಲೇ ಆ ಭರವಸೆಗಳ ಮುಖವಾಡ ಕಳಚಿ ಬಿದ್ದಿವೆ. ಯಾಕೆಂದರೆ ಚುನಾವಣೆ ಮುಗಿದ ತಕ್ಷಣ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಒಂದೇ ಬಾರಿಗೆ ಸುಮಾರು ₹993 ರಿಂದ ₹1,147 ರಷ್ಟು ಏರಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ದೊಡ್ಡ ಏರಿಕೆಯಾಗಿದೆ. 

ಇದು ಸಾಮಾನ್ಯ ಜನರ ಜೀವನ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುವ ದೊಡ್ಡ ಹೊಡೆತವಾಗಿದೆ. ಸಾಲದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರು ದೇಶಕ್ಕಾಗಿ ಕೋವಿಡ್ ಸಮಯದಲ್ಲಿ ಪಾಲಿಸಿದ ನಿಯಮಗಳನ್ನು ಪಾಲಿಸಬೇಕು, ಒಂದು ವರ್ಷ ಯಾರೂ ಚಿನ್ನ ಖರೀದಿಸಬಾರದು, ಪೆಟ್ರೋಲ್, ಡೀಸೆಲ್ ಕಡಿಮೆ ಬಳಸಬೇಕು ಅಂತಾ ಹಲವು ಸೂಚನೆಗಳನ್ನ ದೇಶದ ಜನರಿಗೆ ನೀಡಿದ್ದಾರೆ. 

ಮೇ 10, 2026ರಂದು ಹೈದರಾಬಾದ್‌ನ ಸೆಕಂದರಾಬಾದ್ ಪರೇಡ್ ಗ್ರೌಂಡ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪೆಟ್ರೋಲ್-ಡೀಸೆಲ್-ಗ್ಯಾಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜನರಿಗೆ ಇಂಥಹ ‘ಸಲಹೆ’ಗಳನ್ನು ನೀಡಿದ್ದಾರೆ. ಇವುಗಳು ಪಶ್ಚಿಮ ಏಷ್ಯಾದಲ್ಲಿ (ವಿಶೇಷವಾಗಿ ಇರಾನ್ ಸಂಬಂಧಿತ) ಸಂಘರ್ಷದಿಂದಾಗಿ ಕ್ರೂಡ್ ಆಯಿಲ್ ಬೆಲೆ ಏರಿಕೆಯಿಂದ ಭಾರತದ ವಿದೇಶಿ ವಿನಿಮಯ ಮೀಸಲು ಉಳಿಸುವ ಉದ್ದೇಶದಿಂದ ಬಂದಿವೆ ಎಂದು ಹೇಳಲಾಗುತ್ತಿದೆ. 

ಮೋದಿಯವರ ಈ ‘ಸಲಹೆ’ಗಳು ಸರ್ಕಾರದ ವಿದೇಶಾಂಗ ನೀತಿ ಮತ್ತು ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ಮುಚ್ಚಿಡಲು ಮಾಡಿದ ಪ್ರಯತ್ನವಾಗಿ ಕಾಣುತ್ತಿವೆ. 

ಪ್ರಧಾನಿಯ ಮುಖ್ಯ ಸಲಹೆಗಳು ಹೀಗಿವೆ: 

  1. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಮಿತ ಬಳಕೆ
    • ಅಗತ್ಯಕ್ಕೆ ಮಾತ್ರ ಬಳಸಿ, ಅನಗತ್ಯ ಪ್ರಯಾಣ ಕಡಿಮೆ ಮಾಡಿ.
    • “ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಅನ್ನು ತುಂಬಾ ಎಚ್ಚರಿಕೆಯಿಂದ ಬಳಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.
  2. ಪಬ್ಲಿಕ್ ಟ್ರಾನ್ಸ್‌ಪೋರ್ಟ್, ಮೆಟ್ರೋ ಮತ್ತು ಕಾರ್ ಪೂಲಿಂಗ್
    • ನಗರಗಳಲ್ಲಿ ಮೆಟ್ರೋ ಬಳಸಿ.
    • ಕಾರ್ ಪೂಲಿಂಗ್ ಮಾಡಿ (ಹೆಚ್ಚು ಜನರೊಂದಿಗೆ ಪ್ರಯಾಣ).
    • ಸರಕು ಸಾಗಣೆಗೆ ರೈಲುಗಳನ್ನು ಬಳಸಿ.
  3. ವರ್ಕ್ ಫ್ರಮ್ ಹೋಮ್ (WFH) ಮತ್ತು ಆನ್‌ಲೈನ್ ಮೀಟಿಂಗ್‌ಗಳು
    • ಕೋವಿಡ್ ಸಮಯದಂತೆ WFH ಅನ್ನು ಮತ್ತೆ ಅಳವಡಿಸಿಕೊಳ್ಳಿ.
    • ವರ್ಚುವಲ್ ಮೀಟಿಂಗ್‌ಗಳನ್ನು ಹೆಚ್ಚಿಸಿ.
  4. ಚಿನ್ನ ಖರೀದಿ 1 ವರ್ಷ ಬಿಡಿ
    • ವಿವಾಹ, ಇತರ ಅಗತ್ಯಗಳಿಗೂ ಚಿನ್ನ ಖರೀದಿಸಬೇಡಿ.
    • ಚಿನ್ನದ ಆಮದು ವಿದೇಶಿ ವಿನಿಮಯ ಮೀಸಲನ್ನು ಒತ್ತಡಕ್ಕೆ ಒಳಪಡಿಸುತ್ತದೆ ಎಂದು ಹೇಳಿದ್ದಾರೆ.
  5. ಅನಗತ್ಯ ವಿದೇಶಿ ಪ್ರಯಾಣ ಕಡಿಮೆ ಮಾಡಿ
    • ವಿದೇಶಿ ಪ್ರವಾಸ, ವಿದೇಶಿ ವಿವಾಹ/ಕಾರ್ಯಕ್ರಮಗಳನ್ನು ಮುಂದೂಡಿ.
    • ದೇಶೀಯ ಪ್ರವಾಸ ಮತ್ತು ಆಚರಣೆಗಳನ್ನು ಉತ್ತೇಜಿಸಿ.
  6. ಎಡಿಬಲ್ ಆಯಿಲ್ (ಅಡುಗೆ ಎಣ್ಣೆ) ಬಳಕೆ ಕಡಿಮೆ
    • ಮನೆಗಳಲ್ಲಿ ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆಗೊಳಿಸಿ.
  7. ನ್ಯಾಚುರಲ್ ಫಾರ್ಮಿಂಗ್ ಮತ್ತು ರಸಾಯನಿಕ ಗೊಬ್ಬರ ಕಡಿಮೆ
    • ರೈತರು ಆಮದು ರಸಾಯನಿಕ ಗೊಬ್ಬರ ಕಡಿಮೆ ಮಾಡಿ, ನೈಸರ್ಗಿಕ ಕೃಷಿಗೆ ಮುಂದಾಗಿ.
  8. ಸ್ವದೇಶಿ ಉತ್ಪನ್ನಗಳನ್ನು ಬಳಸಿ (Made in India)
    • ದೇಶೀಯ ಉತ್ಪನ್ನಗಳನ್ನು ಉತ್ತೇಜಿಸಿ.

ಹೀಗೆ ಸಾಲು ಸಾಲು ಸಲಹೆಗಳನ್ನು ನೀಡಿರುವ ಮೋದಿ ಅವರು ದುಬಾರಿ ಚುನಾವಣಾ ರ್ಯಾಲಿಗಳನ್ನು ಮಾತ್ರ ನಡೆಸುತ್ತಲೇ ಇದ್ದಾರೆ ಎಂದು ಹಲವು ಪ್ರಜ್ಞಾವಂತರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಮೋದಿ ಸಲಹೆಗಳು: ಮಧ್ಯಮ ವರ್ಗ ಮತ್ತು ಸಾಮಾನ್ಯರ ಮೇಲಿನ ಹೊರೆ

ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್‌ನಲ್ಲಿ ನೀಡಿರುವ ಈ ಸಲಹೆಗಳು ಮೇಲುನೋಟಕ್ಕೆ ರಾಷ್ಟ್ರೀಯ ಹಿತದಂತೆ ಕಾಣುತ್ತವೆ. ಆದರೆ ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವು ಮಧ್ಯಮ ವರ್ಗ ಮತ್ತು ಸಾಮಾನ್ಯ ಭಾರತೀಯರ ಜೀವನದ ಮೇಲೆ ಗಣನೀಯ ಒತ್ತಡ ಹೇರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. 

ಚಿನ್ನದ ಆಮದು ನಿಯಂತ್ರಣಕ್ಕೆ ಕರೆ ನೀಡುವುದು ವಿದೇಶಿ ವಿನಿಮಯ ಮೀಸಲು ರಕ್ಷಿಸುವ ಉದ್ದೇಶ ಹೊಂದಿದ್ದರೂ, ಭಾರತೀಯ ವಿವಾಹ ಸಂಸ್ಕೃತಿಯಲ್ಲಿ ಚಿನ್ನಕ್ಕಿರುವ ಅಪಾರ ಮಹತ್ವವನ್ನು ಸರ್ಕಾರ ಉಪೇಕ್ಷಿಸಿದೆ. ವಿವಾಹ, ನಿಶ್ಚಿತಾರ್ಥ, ಗೃಹಪ್ರವೇಶ ಸೇರಿದಂತೆ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಚಿನ್ನ ಆರ್ಥಿಕ ಮತ್ತು ಭಾವನಾತ್ಮಕ ಸಂಕೇತವಾಗಿದೆ. ಒಂದು ವರ್ಷ ಚಿನ್ನ ಖರೀದಿ ಬಿಡುವಂತೆ ಹೇಳುವುದು ಮಧ್ಯಮ ವರ್ಗದ ಕುಟುಂಬಗಳ ಯೋಜನೆಗಳನ್ನು ಅಸ್ತವ್ಯಸ್ತಗೊಳಿಸುತ್ತದೆ. ಸಾಲದ್ದಕ್ಕೆ ಈ ಸಲಹೆಯಿಂದಾಗಿ ಚಿನ್ನದ ವ್ಯಾಪಾರಿಗಳು ಮತ್ತು ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಜನರ ಬದುಕನ್ನು ಅಸ್ಥಿರಗೊಳಿಸುತ್ತದೆ.  

ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡುವ ಸಲಹೆ ಸಾಮಾನ್ಯ ಮನೆಗಳ ಪೋಷಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈಗಾಗಲೇ ಏರಿದ ಬೆಲೆಗಳ ನಡುವೆ ಪೌಷ್ಟಿಕಾಂಶ ಕಡಿಮೆಯಾಗುವ ಅಪಾಯವಿದೆ. 

ಪೆಟ್ರೋಲ್-ಡೀಸೆಲ್-ಗ್ಯಾಸ್ ಮಿತ ಬಳಕೆ, ಕಾರ್ ಪೂಲಿಂಗ್, ವರ್ಕ್ ಫ್ರಮ್ ಹೋಮ್ ಮತ್ತು ವಿದೇಶಿ ಪ್ರಯಾಣ ಕಡಿತಗಳು ನಗರ ಮಧ್ಯಮ ವರ್ಗದ ದೈನಂದಿನ ಜೀವನಶೈಲಿ ಮತ್ತು ವೃತ್ತಿ ಅವಕಾಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. 

ರೈತರಿಗೆ ನೈಸರ್ಗಿಕ ಕೃಷಿ ಸಲಹೆ ನೀಡುವ ಸರ್ಕಾರ ತನ್ನ ರಸಾಯನಿಕ ಗೊಬ್ಬರ ಮತ್ತು ಬೀಜ ನೀತಿಗಳಲ್ಲಿ ಏಕೆ ಸುಧಾರಣೆ ತರಲಿಲ್ಲ ಎಂಬ ಪ್ರಶ್ನೆ ಉಳಿಯುತ್ತದೆ. 

‘ಆತ್ಮನಿರ್ಭರ ಭಾರತ’ ಘೋಷಣೆಯ ನಂತರವೂ ತೈಲ ಆಮದುವಿನಲ್ಲಿ 85%ಕ್ಕೂ ಹೆಚ್ಚು ಅವಲಂಬನೆ ಉಳಿದಿರುವುದು ಸರ್ಕಾರದ ದೀರ್ಘಕಾಲೀನ ಯೋಜನಾ ಕೊರತೆಯನ್ನು ಬಯಲು ಮಾಡುತ್ತದೆ. 

ಚುನಾವಣೆಗೆ ಮುನ್ನ ‘ಯಾವ ಸಮಸ್ಯೆಯೂ ಇಲ್ಲ’ ಎಂದು ಭರವಸೆ ನೀಡಿದ ಸರ್ಕಾರ, ನಂತರ ಬೆಲೆ ಏರಿಕೆಯ ಹೊರೆಯನ್ನು ಜನರ ಮೇಲೆ ಹಾಕಿ ‘ಉಳಿಸಿಕೊಳ್ಳಿ’ ಎಂದು ಕರೆ ನೀಡುತ್ತಿರುವುದು ರಾಜಕೀಯವಾಗಿ ಅನ್ಯಾಯವೆನಿಸುತ್ತದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಗೆ ವಿರುದ್ಧವಾಗಿ ಸಾಮಾನ್ಯರು ಜೀವನ ವೆಚ್ಚದ ಒತ್ತಡದಲ್ಲಿ ಸಂಯಮ ಅಳವಡಿಸಿಕೊಳ್ಳುವಂತಾಗಿದೆ. ದೀರ್ಘಕಾಲೀನ ಆರ್ಥಿಕ ಯೋಜನೆಗಳು ಮತ್ತು ಸಮರ್ಥ ವಿದೇಶ ನೀತಿ ಇಲ್ಲದಿದ್ದರೆ, ಈ ಆಪೀಲ್‌ಗಳು ತಾತ್ಕಾಲಿಕ ಪರಿಹಾರವಾಗಿ ಮಾತ್ರ ಉಳಿಯುತ್ತವೆ. ‘ಅಮೃತಕಾಲ’ದ ಸ್ವಪ್ನ ಸಾಮಾನ್ಯ ಭಾರತೀಯರಿಗೆ ಬಿಕ್ಕಟ್ಟಿನ ಕಾಲವಾಗದಂತೆ ಸರ್ಕಾರವು ನೀತಿ ಪುನರ್ ವಿಮರ್ಶೆ ಮಾಡಬೇಕಾಗಿದೆ.

ಮೋದಿ ಸರ್ಕಾರದ ರಾಜತಾಂತ್ರಿಕ ಸೋಲು ಮತ್ತು ‘ಸಮತೋಲನ’ದ ವೈಫಲ್ಯ

ಈಗ ಜನಸಾಮಾನ್ಯರಿಗೆ ಪ್ರಧಾನಿ ಮೋದಿ ಅವರು ನೀಡುತ್ತಿರುವ ಈ ಸಲಹೆಗಳು ಕೇಲವ ಮಧ್ಯಮವರ್ಗ, ಜನಸಾಮಾನ್ಯರ ಮೇಲಿನ ಹೊರೆ ಮಾತ್ರವಲ್ಲ, ಇದು ದೇಶದ ರಾಜತಾಂತ್ರಿಕತೆಯ ಸೋಲನ್ನು ಸೂಚಿಸುತ್ತದೆ ಯಾಕೆಂದರೆ ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಭಾರತ ತನ್ನ ಸಮತೋಲನದ ವಿದೇಶ ನೀತಿಯನ್ನು ಕಾಯ್ದುಕೊಳ್ಳಲು ವಿಫಲವಾಗಿದೆಯೇ ಎಂಬ ಪ್ರಶ್ನೆ ಇಂದು ತೀವ್ರವಾಗಿ ಉದ್ಭವಿಸಿದೆ. 

ಚುನಾವಣೆ ನಂತರದ ಆರ್ಥಿಕ ಬಿಕ್ಕಟ್ಟು ಮತ್ತು ಮೋದಿಯವರ ಸಲಹೆಗಳು ಅವರ ವಿದೇಶಾಂಗ ನೀತಿಯು ರಾಜತಾಂತ್ರಿಕವಾಗಿ ದೊಡ್ಡ ಹಿನ್ನಡೆಯನ್ನು ಎದುರಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಪಾಕಿಸ್ತಾನವು ಪಶ್ಚಿಮ ಏಷ್ಯಾ ಶಾಂತಿ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವುದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ವಿರುದ್ಧದ ಹೇಳಿಕೆಗಳು, ಮೋದಿ ಅವರ ಮೌನ ಮತ್ತು ಒಟ್ಟಾರೆಯಾಗಿ ಭಾರತದ ಸಾರ್ವಭೌಮತ್ವಕ್ಕೆ ಆದ ಧಕ್ಕೆ – ಇವೆಲ್ಲವೂ ಮೋದಿ ನಾಯಕತ್ವದ ವೈಫಲ್ಯವನ್ನು ಬಯಲು ಮಾಡುತ್ತಿವೆ.

ಪಾಕಿಸ್ತಾನವು ಅಮೆರಿಕಾ-ಇರಾನ್ ನಡುವಿನ ಶಾಂತಿ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಉಲ್ಲೇಖಿಸಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, “ಪಾಕಿಸ್ತಾನದ ಈ ಹೊಸ ಜಾಗತಿಕ ಸ್ವೀಕಾರವು ಮೋದಿ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದರು. ಅಲ್ಲದೇ ಭಾರತವು ಪಾಕಿಸ್ತಾನವನ್ನು ಒಂಟಿಯಾಗಿಸುವ ನೀತಿಯಲ್ಲಿ ವಿಫಲವಾಗಿದೆ.” ಎಂದು ಆರೋಪಿಸಿದ್ದರು. ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಮಾತುಕತೆಗಳು ಮತ್ತು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರ ಟ್ರಂಪ್‌ನೊಂದಿಗಿನ ಸಂಬಂಧವನ್ನು ಉಲ್ಲೇಖಿಸಿ ರಮೇಶ್ ಅವರು ಇದನ್ನು “ಮೋದಿ ವಿದೇಶ ನೀತಿಗೆ ದೊಡ್ಡ ಹಿನ್ನಡೆ” ಎಂದು ಕರೆದಿದ್ದರು. 

ಇದೇ ವಿಚಾರದ ಕುರಿತು ಇನ್ನೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನಮ್ಮ ವಿದೇಶ ನೀತಿ ಮೋದಿ ಅವರ ವೈಯಕ್ತಿಕ ನೀತಿಯಾಗಿದೆ. ಇದನ್ನು ಜಗತ್ತು ‘ಯುನಿವರ್ಸಲ್ ಜೋಕ್’ ಎಂದು ಕರೆಯುತ್ತಿದೆ. ಟ್ರಂಪ್ ಅವರು ಮೋದಿ ಏನು ಮಾಡಬಲ್ಲರು ಮತ್ತು ಏನು ಮಾಡಲಾರರು ಎಂದು ಚೆನ್ನಾಗಿ ತಿಳಿದಿದ್ದಾರೆ. ಪ್ರಧಾನಿ ಕಾಂಪ್ರೊಮೈಸ್ ಆಗಿದ್ದರೆ, ದೇಶದ ವಿದೇಶ ನೀತಿಯೂ ಕಾಂಪ್ರೊಮೈಸ್ ಆಗುತ್ತದೆ,” ಎಂದು ರಾಹುಲ್ ಹೇಳಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷದ ಸಂದರ್ಭದಲ್ಲಿ ಮೋದಿ ಅವರು ಅಮೆರಿಕಾ ಮತ್ತು ಇಸ್ರೇಲ್‌ನ ಒತ್ತಡಕ್ಕೆ ಮಣಿದಿದ್ದಾರೆ ಎಂಬ ಆರೋಪವನ್ನು ಅವರು ಪುನರಾವರ್ತಿಸಿದ್ದಾರೆ.

ಇಲ್ಲಿ ಗಮನಿಸಬೇಕಿರುವ ಮುಖ್ಯ ಸಂಗತಿ 2026ರ ಇರಾನ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವು ಅಮೆರಿಕಾ-ಇರಾನ್ ನಡುವಿನ ಸಂಭಾಷಣೆಗಳಿಗೆ ಮಧ್ಯಸ್ಥಿಕೆ ವಹಿಸಿ, ಇಸ್ಲಾಮಾಬಾದ್‌ನಲ್ಲಿ ಮಾತುಕತೆಗಳನ್ನು ಆಯೋಜಿಸಿದ್ದು. ಇದು ಭಾರತದ ದೀರ್ಘಕಾಲೀನ ಪ್ರಯತ್ನಗಳಿಗೆ ದೊಡ್ಡ ಏಟು. ಜೈರಾಮ್ ರಮೇಶ್ ಅವರು ಇದನ್ನು “ಮೋದಿ ವಿದೇಶ ನೀತಿಯ ಭಾರೀ ವೈಫಲ್ಯ” ಎಂದು ಕರೆದಿದ್ದಾರೆ. ಮುಂಬೈ ದಾಳಿಯ ನಂತರ ಡಾ. ಮನಮೋಹನ್ ಸಿಂಗ್ ಅವರು ಪಾಕಿಸ್ತಾನವನ್ನು ಒಂಟಿಯಾಗಿಸಿದ್ದರೆ, ಮೋದಿ ಕಾಲದಲ್ಲಿ ಪಾಕಿಸ್ತಾನವು ಜಾಗತಿಕ ಮಧ್ಯಸ್ಥಿಯಾಗಿ ಹೊರಹೊಮ್ಮಿದೆ ಎಂಬುದು ಅವರ ವಾದ.

ಟ್ರಂಪ್ ಹೇಳಿಕೆಗಳು ಮತ್ತು ಮೋದಿ ಮೌನ

ಟ್ರಂಪ್ ಅವರು ಭಾರತದ ರಷ್ಯಾ ತೈಲ ಖರೀದಿಯನ್ನು ಟೀಕಿಸುತ್ತಾ, ಭಾರತಕ್ಕೆ ಟ್ಯಾರಿಫ್ ಬೆದರಿಕೆ ಹಾಕಿದ್ದಾರೆ. ಭಾರತವು ರಷ್ಯಾ ತೈಲ ಖರೀದಿ ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಾ, ವ್ಯಾಪಾರ ಒಪ್ಪಂದಗಳಲ್ಲಿ ಭಾರತಕ್ಕೆ ಅನುಕೂಲವಲ್ಲದ ಷರತ್ತುಗಳನ್ನು ಹೇರಿದ್ದಾರೆ. ಮೋದಿ ಅವರು ಇದಕ್ಕೆ ಸ್ಪಷ್ಟ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದು, ರಾಹುಲ್ ಗಾಂಧಿ ಅವರ “ಕಾಂಪ್ರೊಮೈಸ್” ಆರೋಪಕ್ಕೆ ಆಧಾರವಾಗಿದೆ. ಟ್ರಂಪ್ ಅವರು ಪಾಕಿಸ್ತಾನಿ ಸೇನಾ ಮುಖ್ಯಸ್ಥರನ್ನು “ನನ್ನ ಫೇವರಿಟ್ ಫೀಲ್ಡ್ ಮಾರ್ಷಲ್” ಎಂದು ಕರೆಯುತ್ತಿರುವುದು ಭಾರತದ ರಾಜತಾಂತ್ರಿಕತೆಗೆ ಇನ್ನಷ್ಟು ಧಕ್ಕೆಯಾಗಿದೆ.

ಭಾರತವು ಇರಾನ್‌ನೊಂದಿಗೆ ಚಾಬಹಾರ್ ಬಂದರು, INSTC ಮತ್ತು ಶಕ್ತಿ ಸಹಕಾರವನ್ನು ಹೊಂದಿದ್ದರೂ, ಇಸ್ರೇಲ್-ಅಮೆರಿಕಾ ಪಕ್ಷಕ್ಕೆ ಒಲಿದಂತೆ ಕಾಣುವ ನಡವಳಿಕೆಯು ತನ್ನ ಸಮತೋಲನವನ್ನು ಕಳೆದುಕೊಂಡಿದೆ. ಮೋದಿ ಅವರ ಇಸ್ರೇಲ್ ಭೇಟಿ ಮತ್ತು ಇರಾನ್ ದಾಳಿಗಳನ್ನು ಪರೋಕ್ಷವಾಗಿ ಬೆಂಬಲಿಸುವಂತಹ ನಿಲುವುಗಳು ಜಗತ್ತಿನಲ್ಲಿ ಭಾರತದ ಸ್ವತಂತ್ರ ಧ್ವನಿಯನ್ನು ದುರ್ಬಲಗೊಳಿಸಿವೆ.

ಈ ಎಲ್ಲಾ ಘಟನೆಗಳು ಮೋದಿ ಅವರ ‘ವಿಶ್ವಗುರು’ ಇಮೇಜ್‌ಗೆ ದೊಡ್ಡ ಏಟು. ಚುನಾವಣೆಗೆ ಮುನ್ನ ‘ಬಲವಾದ ಭಾರತ’ ಎಂದು ಹೇಳಿದ್ದ ಸರ್ಕಾರ, ಈಗ ಆರ್ಥಿಕ ಒತ್ತಡದಲ್ಲಿ ಜನರಿಗೆ ‘ಉಳಿಸಿಕೊಳ್ಳಿ’ ಎಂದು ಹೇಳುತ್ತಿದೆ. ವಿದೇಶ ನೀತಿಯಲ್ಲಿ ಸ್ವತಂತ್ರ ನಿಲುವು ಇಲ್ಲದಿದ್ದರೆ, ಆರ್ಥಿಕ ಸ್ವಾವಲಂಬನೆ ಸಾಧ್ಯವಿಲ್ಲ. ಜೈರಾಮ್ ರಮೇಶ್ ಮತ್ತು ರಾಹುಲ್ ಗಾಂಧಿ ಅವರ ಹೇಳಿಕೆಗಳು ಈ ನರೇಟಿವ್‌ನ್ನು ಬಲಪಡಿಸುತ್ತವೆ. 

ಮೋದಿ ನಾಯಕತ್ವದಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವ ಕುಸಿದಿದೆ. ಭಾರತವು ಗ್ಲೋಬಲ್ ಸೌತ್‌ನ ನಾಯಕತ್ವಕ್ಕೆ ಆಕಾಂಕ್ಷಿ ಆಗಿದ್ದರೆ, ಇರಾನ್-ಇಸ್ರೇಲ್ ನಡುವಿನ ಸಂಘರ್ಷದಲ್ಲಿ ನಿಜವಾದ ಮಧ್ಯಸ್ಥಿಕೆ ವಹಿಸಬೇಕಿತ್ತು. ಬದಲಿಗೆ ಪಾಕಿಸ್ತಾನ ಆ ಸ್ಥಾನವನ್ನು ಪಡೆದಿರುವುದು ದೊಡ್ಡ ರಾಜತಾಂತ್ರಿಕ ಸೋಲು. ಮೋದಿ ಸರ್ಕಾರವು ಈ ವೈಫಲ್ಯಗಳನ್ನು ಒಪ್ಪಿಕೊಂಡು ನೀತಿ ಪುನರ್ ವಿಮರ್ಶೆ ಮಾಡಬೇಕಾಗಿದೆ. ಇಲ್ಲವಾದರೆ ‘ಅಮೃತಕಾಲ’ದ ಸ್ವಪ್ನವು ರಾಜತಾಂತ್ರಿಕ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗುವ ಅಪಾಯವಿದೆ.

ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ಟೀಕೆಗಳು ಕೇವಲ ರಾಜಕೀಯವಲ್ಲ, ದೇಶದ ದೀರ್ಘಕಾಲೀನ ಹಿತದ ಬಗ್ಗೆಯೂ ಆಗಿವೆ. ಸ್ವತಂತ್ರ, ಸಮತೋಲಿತ ಮತ್ತು ಸ್ಪಷ್ಟ ವಿದೇಶ ನೀತಿಯ ಅಗತ್ಯವನ್ನು ಈ ಘಟನೆಗಳು ಮತ್ತೊಮ್ಮೆ ಎತ್ತಿ ತೋರಿಸಿವೆ.

ಮೋದಿ ಸಲಹೆಗಳು vs ವಾಸ್ತವ: ಮಿತ ಬಳಕೆ ಸ್ವಯಂ ಅನ್ವಯ?

ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಭಾಷಣದಲ್ಲಿ ಜನರಿಗೆ ಪೆಟ್ರೋಲ್-ಡೀಸೆಲ್ ಸಂಯಮದ ಬಳಕೆ, ಒಂದು ವರ್ಷ ಚಿನ್ನ ಖರೀದಿ ಬಿಡುವುದು, ಅನಗತ್ಯ ವಿದೇಶಿ ಪ್ರಯಾಣ ಕಡಿಮೆ ಮಾಡುವುದು ಮತ್ತು ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ. ಇದು ವಿದೇಶಿ ವಿನಿಮಯ ಮೀಸಲು ರಕ್ಷಿಸುವ ರಾಷ್ಟ್ರೀಯ ಕರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಲಹೆಗಳು ಪ್ರಧಾನಿಯ ದೈನಂದಿನ ಕಾರ್ಯಕ್ರಮಗಳೊಂದಿಗೆ ಹೊಂದಿಕೊಳ್ಳುತ್ತಿಲ್ಲ ಎಂಬ ಟೀಕೆಗಳು ತೀವ್ರವಾಗಿವೆ.

ಮೋದಿ ಅವರು ಚುನಾವಣೆ ನಂತರದ ದಿನಗಳಲ್ಲಿ ಗುಜರಾತ್‌ನ ಜಾಮ್‌ನಗರ, ಸೋಮನಾಥ, ವಡೋದರಾ ಸೇರಿದಂತೆ ಹಲವು ಸ್ಥಳಗಳಲ್ಲಿ ರೋಡ್ ಶೋಗಳನ್ನು ನಡೆಸಿದ್ದಾರೆ. ಈ ರ್ಯಾಲಿಗಳಲ್ಲಿ ಭಾರೀ ಸಂಖ್ಯೆಯ ವಾಹನಗಳ ಕಾನ್ವಾಯ್, ಆರ್ಮರ್ಡ್ SUVಗಳು ಮತ್ತು ಹೆಲಿಕಾಪ್ಟರ್‌ಗಳ ಬಳಕೆಯಿಂದ ಗಣನೀಯ ಪೆಟ್ರೋಲ್-ಡೀಸೆಲ್ ಖರ್ಚಾಗುತ್ತದೆ ಎಂದು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಲಾಗುತ್ತಿದೆ. 

ಒಂದು ರೋಡ್ ಶೋನಲ್ಲಿ ಡಜನ್‌ಗಟ್ಟಲೆ ವಾಹನಗಳು ತುಂಬಾ ಕಡಿಮೆ ಮೈಲೇಜ್ ನೀಡುವ ವಾಹನಗಳಾಗಿರುವುದು ಗಮನಾರ್ಹ.

ಮೋದಿ ಅವರ ವಿಮಾನ ಪ್ರಯಾಣದ ಬಗ್ಗೆಯೂ ಪ್ರಶ್ನೆಗಳಿವೆ. ಏರ್ ಇಂಡಿಯಾ ವನ್ (ಬೋಯಿಂಗ್ 777) ವಿಮಾನಗಳು ದೀರ್ಘ ದೂರದ ಪ್ರಯಾಣಕ್ಕೆ ಬಹಳಷ್ಟು ಇಂಧನ ಬಳಸುತ್ತವೆ. ಪ್ರಧಾನಿಯ ವಿದೇಶಿ ಮತ್ತು ದೇಶೀಯ ಪ್ರವಾಸಗಳು ಈಗಾಗಲೇ ಗಣನೀಯ ಇಂಧನ ಖರ್ಚು ಮಾಡುತ್ತಿವೆ.

ಸ್ವದೇಶಿ ಕರೆಯ ನಡುವೆ ವೈಯಕ್ತಿಕ ಬಳಕೆಯಲ್ಲಿ ವಿದೇಶಿ ವಸ್ತುಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮೋದಿ ಅವರು Movado (ಸ್ವಿಸ್) ವಾಚ್ ಧರಿಸುವುದು ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ Armani ಸೂಟ್, Bvlgari ಗ್ಲಾಸ್‌ಗಳು, Apple ಫೋನ್ ಮತ್ತು ಮರ್ಸಿಡಿಸ್ ಕಾರುಗಳ ಬಳಕೆಯ ಆರೋಪಗಳಿವೆ.

ಈ ವ್ಯತ್ಯಾಸವು ರಾಜಕೀಯವಾಗಿ ಅಸಮಾನತೆಯ ಭಾವನೆಯನ್ನು ಹುಟ್ಟುಹಾಕುತ್ತಿದೆ. ಜನರಿಗೆ ಸಂಯಮ ಕೇಳುವ ನಾಯಕರು ತಮ್ಮ ಕಾರ್ಯಕ್ರಮಗಳಲ್ಲಿ ಇಂಧನ ಮತ್ತು ಸಂಪನ್ಮೂಲಗಳ ಉಳಿತಾಯಕ್ಕೆ ಆದ್ಯತೆ ನೀಡಬೇಕು ಎಂಬುದು ವಿಶ್ಲೇಷಕರ ವಾದ. ‘ಆತ್ಮನಿರ್ಭರ ಭಾರತ’ದ ಸಂದೇಶಕ್ಕೆ ಸ್ವಯಂ ಅನ್ವಯವಾಗಬೇಕು ಎಂಬುದು ಪ್ರಸ್ತುತ ಚರ್ಚೆಯ ಕೇಂದ್ರವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....