ಗಣಪತಿಯನ್ನು ವಿಘ್ನ ನಿವಾರಕ ಎಂದು ಪೂಜಿಸುವುದು ಅಥವಾ ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ. ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಗುರುವಾರ ಆರಂಭವಾದ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಶಿವ ಧ್ವಜಾರೋಹಣ ನೇರವೇರಿಸಿದ ಬಳಿಕ ಮಾತನಾಡಿದ ಅವರು, ”ಗಣಪತಿಯನ್ನು ಸ್ತುತಿಸುವುದು ಮೌಡ್ಯದ ಆಚರಣೆ, ವಚನಗಳನ್ನು ಪ್ರಸ್ತುತಪಡಿಸುವುದು ನಿಜವಾದ ಪ್ರಾರ್ಥನೆ. ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನೂ ಹಾಡಬಹುದು ಎಂದು ತೋರಿಸಿದವರು ಶಿವಕುಮಾರ ಸ್ವಾಮೀಜಿ” ಎಂದು ಹೇಳಿದರು.
”ಗಣಪತಿ ಕಾಲ್ಪನಿಕ ದೇವರು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ನೆಪಮಾತ್ರಕ್ಕೆ ಹುಟ್ಟಿಕೊಂಡ ದೇವರದು. ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ. ಮನೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಮೊದಲು ಗಣಪತಿ ಪೂಜೆ, ಸ್ತೋತ್ರ ಹಾಗೂ ಶ್ಲೋಕ ಪಠಿಸಬೇಕು ಎಂಬುದು ಹಲವರ ನಂಬಿಕೆಯಾಗಿದೆ. ಅದರ ಬದಲು ವಚನಗಳನ್ನೇ ಪ್ರಾರ್ಥನೆಯಂತೆ ಪಠಿಸಬೇಕು” ಎಂದು ತಿಳಿಸಿದರು.
”ಸ್ವಸಾಮರ್ಥ್ಯ, ಉತ್ತಮ ನಡವಳಿಕೆ ಹೊಂದಿದವರೇ ನಿಜವಾದ ದೇವರು. ನಮ್ಮನ್ನು ನಾವು ನಂಬಬೇಕು. ಶರಣರ ಆಶಯಗಳಂತೆ ಬದುಕಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯ” ಎಂದು ಹೇಳಿದರು.
ಇದನ್ನೂ ಓದಿ: ಕೊಳಕು ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು ಲೋಕಸಭೆಯ ಸಮಿತಿ ಸಭೆಯಿಂದ ಹೊರಬಂದ ಮಹುವಾ ಮೊಯಿತ್ರಾ