ಕಳೆದ ವಾರ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರಗೈದು, ಆಕೆಯನ್ನು ಸುಟ್ಟುಹಾಕಲಾಗಿತ್ತು ಆದರೆ ಪೊಲೀಸರು ಸಮಯೋಚಿತವಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಕುಟುಂಬಸ್ಥರು ಸೋಮವಾರ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ”ಬಾಲಕಿಯ ಶವವು ಆಗಸ್ಟ್ 2ರಂದು ಕುಲುಮೆಯ ಬಳಿ ಪತ್ತೆಯಾಗಿದೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾದ ಪುರುಷರ ಗುಂಪಿನಿಂದ ಆಕೆಯ ದೇಹವನ್ನು ಸುಟ್ಟುಹಾಕಿದ್ದಾರೆ. ಈ ಪ್ರಕರಣದಲ್ಲಿ ಏಳು ಜನರನ್ನು ಬಂಧಿಸಲಾಗಿದೆ” ಎಂದು ಶನಿವಾರ ಟ್ವೀಟ್ ಮಾಡಿದ್ದಾರೆ.
भीलवाड़ा के कोटडी में बालिका के रेप एवं हत्या की जघन्य घटना में पुलिस ने अभी तक 7 आरोपियों को गिरफ्तार कर लिया है। कल इस मामले को लेकर CS, DGP एवं अन्य वरिष्ठ अधिकारियों से विस्तृत चर्चा की। इस मामले को केस ऑफिसर स्कीम के तहत लेकर न्यूनतम समय में चालान पेश कर एवं फास्ट ट्रैक…
— Ashok Gehlot (@ashokgehlot51) August 5, 2023
ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ ತಕ್ಷಣ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
”ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದರೆ, ಹುಡುಗಿ ಈಗ ಜೀವಂತವಾಗಿರಬಹುದು ಅಥವಾ ಕನಿಷ್ಠ ಅವಳ ದೇಹವನ್ನು ಅಂತಿಮ ವಿಧಿಗಳಿಗಾಗಿ ನಾವು ಪಡೆಯುತ್ತಿದ್ದೆವು” ಎಂದು ಆಕೆಯ ಚಿಕ್ಕಪ್ಪ ಹೇಳಿಕೊಂಡಿದ್ದಾರೆ.
ಕುಟುಂಬದವರು ಏನು ಆರೋಪ ಮಾಡುತ್ತಿದ್ದಾರೆ?
ಘಟನೆ ನಡೆದ ದಿನ ಬಾಲಕಿ ಮತ್ತು ಆಕೆಯ ತಾಯಿ ಮೇಕೆ ಮೇಯಿಸಲು ಹೊಲಕ್ಕೆ ಹೋಗಿದ್ದರು. ನಂತರ ತಾಯಿ ತನ್ನ ಪೋಷಕರ ಮನೆಗೆ ಹೋಗಿದ್ದಳು ಮತ್ತು ಅವಳು ಹಿಂದಿರುಗಿದಾಗ ಬಾಲಕಿ ಕಾಣಲಿಲ್ಲ. ಆಗ ಬಾಲಕಿಯ ಬಗ್ಗೆ ಆ ಪ್ರದೇಶದಲ್ಲಿದ್ದ ಅಲೆಮಾರಿಗಳ ಬಳಿ ವಿಚಾರಿಸಿದಾಗ ಅವರು ತೃಪ್ತಿಕರ ಉತ್ತರವನ್ನು ನೀಡಲಿಲ್ಲ ಎಂದು ಬಾಲಕಿಯ ಚಿಕ್ಕಪ್ಪ ತಿಳಿಸಿದ್ದಾರೆ.
ಸಂಜೆಯವರೆಗೂ ಬಾಲಕಿ ಹಿಂತಿರುಗದಿದ್ದಾಗ ಆಕೆಯ ಸೋದರ ಸಂಬಂಧಿಯೊಬ್ಬರು ಪೊಲೀಸರಿಗೆ ದೂರು ನೀಡಲು ತೆರಳಿದ್ದರು. ಆದಾಗ್ಯೂ, ಪೊಲೀಸರು ಕಾಣೆಯಾದವರ ವರದಿಯನ್ನು ದಾಖಲಿಸಲಿಲ್ಲ ಮತ್ತು ಹುಡುಗಿಯ ವಯಸ್ಸಿನ ಪುರಾವೆ, ಅಂಕಪಟ್ಟಿ ಮತ್ತು ಇತರ ದಾಖಲೆಗಳನ್ನು ನೀಡುವಂತೆ ಕುಟುಂಬವನ್ನು ಕೇಳಿ, ಮರುದಿನ ಬೆಳಿಗ್ಗೆ ಮತ್ತೆ ಬರಲು ಪೊಲೀಸರು ಹೇಳಿದರು.
ಮನೆಯವರು ಬಾಲಕಿಗಾಗಿ ಹುಡುಕಾಟ ನಡೆಸಿದಾಗ ಅಲೆಮಾರಿಗಳು ವಾಸಿಸುವ ಪಕ್ಕದ ಕಲ್ಲಿದ್ದಲು ಕುಲುಮೆಯಲ್ಲಿ ಕೆಲವು ಮೂಳೆಗಳು ಮತ್ತು ಆಭರಣಗಳು ಪತ್ತೆಯಾಗಿವೆ. ಕುಟುಂಬ ಸದಸ್ಯರು ಅಲೆಮಾರಿಗಳನ್ನು ಸಂಪರ್ಕಿಸಿದಾಗ, ಅವರಲ್ಲಿ ಇಬ್ಬರು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಒಪ್ಪಿಕೊಂಡರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಜ್ಮೀರ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಲತಾ ಮನೋಜ್ ಕುಮಾರ್, ”ಸ್ಥಳೀಯ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಮತ್ತು ಕರ್ತವ್ಯದಲ್ಲಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ರನ್ನು ಕರ್ತವ್ಯಲೋಪಕ್ಕಾಗಿ ಅಮಾನತುಗೊಳಿಸಲಾಗಿದೆ” ಎಂದು ತಿಳಿಸಿದರು.
ಬಂಧಿತ ಏಳು ಮಂದಿಯಲ್ಲಿ ಇಬ್ಬರು ಪ್ರಮುಖ ಶಂಕಿತರಾದ ಕಲು ಲಾಲ್ (21) ಮತ್ತು ಕನ್ಹಾ ಲಾಲು (25) ಸೇರಿದ್ದಾರೆ ಎಂದು ಕುಮಾರ್ ಹೇಳಿದರು.
”ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಇತರ ನಾಲ್ವರು ಮತ್ತು ಒಬ್ಬ ಅಪ್ರಾಪ್ತನನ್ನು ಈ ಹಿಂದೆ ಬಂಧಿಸಲಾಗಿತ್ತು. ಶನಿವಾರವೂ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳ ಪತ್ನಿಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು” ಎಂದು ಅವರು ಹೇಳಿದರು.
ಇಬ್ಬರು ಪ್ರಮುಖ ಆರೋಪಿಗಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ. ಇತರ ಆರೋಪಿಗಳು ಬಾಲಕಿಯ ಶವವನ್ನು ಕುಲುಮೆಯಲ್ಲಿ ಸುಡಲು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ: ಪ್ರಚೋದನಕಾರಿ ವಿಡಿಯೋ ಶೇರ್ ಮಾಡುತ್ತಿರುವ ಬಲಪಂಥೀಯ ಮಾಧ್ಯಮಗಳಿಗೆ ಡಿಜಿಪಿ ಎಚ್ಚರಿಕೆ