Homeಮುಖಪುಟಇದು ಪ್ರಜಾಪ್ರಭುತ್ವದ ಬೇರುಗಳ ಮೇಲಿನ ದಾಳಿ: ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ ನೊಬೆಲ್ ಪುರಸ್ಕೃತ...

ಇದು ಪ್ರಜಾಪ್ರಭುತ್ವದ ಬೇರುಗಳ ಮೇಲಿನ ದಾಳಿ: ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ ನೊಬೆಲ್ ಪುರಸ್ಕೃತ ಅಮರ್ತ್ಯಸೇನ್

ಪ್ರಜಾಪ್ರಭುತ್ವದ ಹೊರತಾಗಿ ಬೇರಾವುದೆ ಮಾರ್ಗದಿಂದ ನಾವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಇಲ್ಲವೆನ್ನುವುದು ನನ್ನ ನಂಬಿಕೆ ಎಂದ ಅಮರ್ತ್ಯ ಸೇನ್

- Advertisement -
- Advertisement -

ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ರು ಜಮ್ಮು-ಕಾಶ್ಮೀರವನ್ನು ಇಬ್ಬಾಗಿಸಿ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾಪ್ರಭುತ್ವದ ಹೊರತಾಗಿ ಬೇರಾವುದೆ ಮಾರ್ಗದಿಂದ ನಾವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಇಲ್ಲವೆನ್ನುವುದು ನನ್ನ ನಂಬಿಕೆ ಎಂದಿರುವ 85 ವಯಸ್ಸಿನ ಈ ಅನುಭವಿ ಆರ್ಥಿಕ ತಜ್ಞರು ಮಾನವಹಕ್ಕುಗಳ ರಕ್ಷಣೆಗೆ ವಿರುದ್ಧವಾದ ಕ್ರಮ ಇದು ಎಂದು ಕೇಂದ್ರದ ಕ್ರಮವನ್ನು ಖಂಡಿಸಿದ್ದಾರೆ.

ಒಬ್ಬ ಭಾರತೀಯನಾಗಿ ನನಗೆ ಈ ವಿಚಾರದ ಬಗ್ಗೆ ಹೆಮ್ಮೆ ಎನಿಸುವುದಿಲ್ಲ. ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಮೊದಲ ಪಶ್ಚಿಮೇತ್ತರ ದೇಶ ಎಂಬ ಹೆಗ್ಗಳಿಕೆಯೊಂದಿಗೆ, ಪ್ರಜಾತಾಂತ್ರಿಕ ನಡವಳಿಕೆಗಳು ಹೇಗಿರಬೇಕು ಎಂಬುದಕ್ಕೆ ಒಂದು ಮಾನದಂಡವಾಗಿ ರೂಪುಗೊಂಡಿತ್ತು ನನ್ನ ಭಾರತ. ಇದೀಗ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ಕ್ರಮದಿಂದಾಗಿ ನಾವು ಆ ಘನತೆಯನ್ನೆ ಕಳೆದುಕೊಂಡಿದ್ದೇವೆ ಎಂದಿದ್ದಾರೆ ಸೇನ್. ಅದು ಕಾಶ್ಮೀರಿಗಳಿಗೆ ಸೇರಿರುವ ನೆಲದ ವಿಚಾರವಾಗಿರುವುದರಿಂದ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಕಾಶ್ಮೀರಿಗರಿಗೇ ಬಿಡಬೇಕು ಎಂಬ ಮಾತನ್ನೂ ಅವರು ಹೇಳಿದ್ದಾರೆ.

ಜೊತೆಗೆ, ಜಮ್ಮು-ಕಾಶ್ಮೀರದ ರಾಜಕೀಯ ನಾಯಕರನ್ನು ಬಂಧಿಸಿದ ಮತ್ತು ಗೃಹಬಂಧನದಲ್ಲಿರಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ಟೀಕಿಸಿದ್ದಾರೆ. ಜನರ ಪ್ರತಿನಿಧಿಗಳೆನಿಸಿದ ಜನನಾಯಕರ ದನಿಗಳನ್ನು ಕೇಳಿಸಿಕೊಳ್ಳದೆ ನೀವು ಯಾವತ್ತಿಗೂ ನ್ಯಾಯಬದ್ಧ ತೀರ್ಮಾನಕ್ಕೆ ಬರಲಾರಿರಿ ಎಂಬುದು ನನ್ನ ದೃಢವಾದ ನಂಬಿಕೆ. ಹಿಂದೆಲ್ಲ ದೇಶವನ್ನು ಮುನ್ನಡೆಸಿದ ಹಾಗೂ ಸರ್ಕಾರಗಳನ್ನು ರಚಿಸಿದಂತಹ ನಾಯಕರುಗಳನ್ನು ನೀವು ಜೈಲಿನಲ್ಲಿ ಬಂಧಿಸಿಡುವುದರ ಅಥವಾ ಗೃಹಬಂಧನದಲ್ಲಿ ಇಡುವುದರ ಮೂಲಕ ಪ್ರಜಾಪ್ರಭುತ್ವದ ಗಟ್ಟಿಗೊಳಿಸಿದ ಬೇರುಗಳ ಮೇಲೆಯೇ ದಾಳಿ ಮಾಡಿದಂತಾಗಿದೆ ಎಂದವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಫರೂಕ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಸೇರಿದಂತೆ ಪೀಪಲ್ ಕಾನ್ಫರೆನ್ಸ್‌ನ ನಾಯಕರಾದ ಸಜದ್ ಲೋನ್, ಜಮ್ಮುಕಾಶ್ಮೀರ ಪೀಪಲ್ಸ್ ಮೂವ್‌ಮೆಂಟಿನ ನಾಯಕ ಶಾ ಫೇಸಲ್, ರಾಜ್ಯ ಕಾಂಗ್ರೆಸ್ ನಾಯಕ ಗುಲಾಂ ಅಹ್ಮದ್ ಮಿರ್ ಸೇರಿದಂತೆ ಹಲವಾರು ರಾಜಕೀಯ ನಾಯಕರುಗಳನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ತನ್ನ ನಿರ್ಧಾರದ ವಿರುದ್ಧ ಭುಗಿಲೇಳಲಿದ್ದ ಪ್ರತಿಭಟನೆ ಮತ್ತು ಅದರಿಂದ ಉಂಟಾಗಲಿದ್ದ ಜೀವಹಾನಿ ಹಾಗು ಆಸ್ತಿಪಾಸ್ತಿ ನಷ್ಟವನ್ನು ತಪ್ಪಿಸುವ ಸಲುವಾಗಿ ಇಡೀ ರಾಜ್ಯವನ್ನು ಬೃಹತ್ ಸೇನಾ ಹೊದಿಕೆಯಡಿ ಮುಚ್ಚಿಹಾಕಿರುವ ಕೇಂದ್ರದ ಕ್ರಮವನ್ನು ಸೇನ್‌ರವರು ವಸಾಹತುಶಾಹಿ ಪ್ರಮಾದ ಎಂದು ಕರೆದಿದ್ದಾರೆ. ಬ್ರಿಟಿಷರು ಇನ್ನೂರು ವರ್ಷ ಭಾರತವನ್ನು ಆಳಿದ್ದು ಹೀಗೇ ಅಲ್ಲವೇ ಎಂದಿದ್ದಾರೆ.

ಇದನ್ನೂ ಓದಿ: ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?

ಆಗಸ್ಟ್ ೫ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಅದನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಸಂಸತ್ತಿನಲ್ಲಿ ಎಂಟು ಪಕ್ಷಗಳು ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದವು. ಆದಾಗ್ಯೂ ಕಾಂಗ್ರೆಸ್ ನಾಯಕರುಗಳಾದ ಜ್ಯೋತಿರಾದಿತ್ಯ ಸಿಂಧಿಯಾ, ಜನಾರ್ಧನ್ ದ್ವಿವೇದಿ, ಕರಣ್ ಸಿಂಗ್, ಜೈವೀರ್ ಶೆರ್ಗಿಲ್, ಮಿಲಿಂದ್ ದಿಯೋರಾ, ಅದಿತಿ ಸಿಂಗ್ ಮತ್ತು ಭುಬನೇಶ್ವರ್ ಕಲಿತಾ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...