Homeಗೌರಿ ಲಂಕೇಶ್ಗೌರಿ ಲಂಕೇಶ್ ಹತ್ಯೆ ಪ್ರಕರಣ ಸದ್ಯ ಯಾವ ಹಂತದಲ್ಲಿದೆ?

ಗೌರಿ ಲಂಕೇಶ್ ಹತ್ಯೆ ಪ್ರಕರಣ ಸದ್ಯ ಯಾವ ಹಂತದಲ್ಲಿದೆ?

ಈ ಕೃತ್ಯಗಳನ್ನು ಸಂಘಟಿಸಿದ ಮೂಲ ಪುರುಷರು ಒಂದಿಲ್ಲೊಂದು ರೀತಿಯಲ್ಲಿ ಗೋವಾದ ಸನಾತನ ಸಂಸ್ಥಾ ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದವರೇ.

- Advertisement -
- Advertisement -

ಮೊನ್ನೆ ಸೆಪ್ಟೆಂಬರ್ 5ಕ್ಕೆ ಗೌರಿ ಲಂಕೇಶರು ನಮ್ಮನ್ನಗಲಿ ಮೂರು ವರ್ಷ. ಅವರ ಹತ್ಯೆಯ ತನಿಖೆ ಮತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆ ಎಲ್ಲಿವರೆಗೂ ಬಂತು ಎಂಬುದು ಹಲವರ ಪ್ರಶ್ನೆ.

2013 ರಿಂದ 2017 ರವರೆಗೆ ಒಟ್ಟು ನಾಲ್ವರು ವಿಚಾರವಾದಿ ಲೋಕಚಿಂತಕರ ಹತ್ಯೆ ನಡೆಯಿತು – ಮಹಾರಾಷ್ಟ್ರದಲ್ಲಿ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪಾನ್ಸರೆ, ಕರ್ನಾಟಕದಲ್ಲಿ ಎಂ.ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್. ಮೊದಲ ಮೂರು ಹತ್ಯೆಗಳ ತನಿಖೆ ಕೊಲೆಗಡುಕರನ್ನು ತಲುಪಲಾಗದೇ ಮಧ್ಯದಲ್ಲೇ ದಾರಿ ತಪ್ಪಿತ್ತು, ಇಲ್ಲ ಡೆಡ್‍ಎಂಡ್‍ಗೆ ತಲುಪಿಬಿಟ್ಟಿತ್ತು. ಗೌರಿ ಹತ್ಯೆಯ ತನಿಖೆ ನಾಲ್ಕೂ ಪ್ರಕರಣಗಳನ್ನು ಬೇಧಿಸುವಲ್ಲಿ, ಈ ಹತ್ಯೆಗಳನ್ನು ಮಾಡಿದ ಗುಂಪನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಗೌರಿ ಪ್ರಕರಣದಲ್ಲಿ 2018ರ ನವೆಂಬರ್‌ನಲ್ಲೇ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಅಷ್ಟೇ ಅಲ್ಲ, ಆ ನಂತರದ ದಿನಗಳಲ್ಲಿ ಕಲ್ಬುರ್ಗಿ ಅವರ ಪ್ರಕರಣವನ್ನೂ ಸಹ ಗೌರಿ ಹತ್ಯೆಯ ತನಿಖೆ ನಡೆಸಿದ ವಿಶೇಷ ತನಿಖಾ ದಳಕ್ಕೆ ವರ್ಗಾಯಿಸಲಾಯಿತು. ಸುಮಾರು ವರ್ಷ ನೆನೆಗುದಿಗೆ ಬಿದ್ದಿದ್ದ ಆ ಪ್ರಕರಣದ ತನಿಖೆಯನ್ನೂ ಪೂರ್ಣಗೊಳಿಸಿ 2019ರ ಜನವರಿಯಲ್ಲಿ ಆ ಪ್ರಕರಣದಲ್ಲೂ ಆರೋಪಪಟ್ಟಿ ಸಲ್ಲಿಸಲಾಗಿದೆ.

PC : Sikh News Express

ಸನಾತನ ಸಂಸ್ಥೆ ಪ್ರಕಟಿಸಿರುವ ‘ಕ್ಷಾತ್ರಧರ್ಮ ಸಾಧನಾ’ ಪುಸ್ತಕದಿಂದ ಪ್ರಭಾವಿತರಾಗಿ “ಹಿಂದೂರಾಷ್ಟ್ರ ಸ್ಥಾಪಿಸಲು, ದುರ್ಜನರನ್ನು ಕೊಂದು ಸತ್ಯಯುಗವನ್ನು ಆಹ್ವಾನಿಸಲು”, ಆರೋಪಿತರು ತಾವು “ದುರ್ಜನರು”, “ಹಿಂದೂ ವಿರೋಧಿಗಳು” ಎಂದೆಣಿಸಿದವರ ಸರಣಿ ಕೊಲೆಗಳನ್ನು ನಡೆಸಿದರು. ಆರೋಪಿಸಿರುವಂತೆ ಈ ಕೃತ್ಯಗಳನ್ನು ಸಂಘಟಿಸಿದ ಮೂಲ ಪುರುಷರು ಒಂದಿಲ್ಲೊಂದು ರೀತಿಯಲ್ಲಿ ಗೋವಾದ ಸನಾತನ ಸಂಸ್ಥಾ ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದವರೇ. ಆದರೆ ಬಂದೂಕು ಹಿಡಿದು ಕೃತ್ಯ ನಡೆಸಿದವರಲ್ಲಿ ಸಂಸ್ಥಾದೊಂದಿಗೆ ನೇರಾನೇರ ಸಂಬಂಧ ಇರದವರೇ ಹೆಚ್ಚು. ಈ ಸಂಚಿನ ಭಾಗವಾದ ಬಹುತೇಕರನ್ನು ಈಗಾಗಲೆ ಬಂಧಿಸಲಾಗಿದೆ ಮತ್ತು ಆರೋಪಪಟ್ಟಿ ಸಲ್ಲಿಸಲಾಗಿದೆ. ಗೌರಿ ಮತ್ತು ಕಲ್ಬುರ್ಗಿ ಪ್ರಕರಣಗಳಲ್ಲಿ ವಾದ-ಪ್ರತಿವಾದಗಳು ನಡೆದು ನ್ಯಾಯಾಲಯವು ಚಾರ್ಜ್ ಫ್ರೇಮ್ ಮಾಡಿದೆ. ಈ ಪ್ರಕರಣಗಳಲ್ಲಿ ಟ್ರಯಲ್ ಇನ್ನಷ್ಟೇ ಶುರುವಾಗಬೇಕಿದೆ.

ತನಿಖೆಯ ಉಳಿಕೆಗಳು

ಗೌರಿ ಹತ್ಯೆಯ ತನಿಖೆ ನಮ್ಮ ತನಿಖಾ ಸಂಸ್ಥೆಗಳಲ್ಲಿ ನಿಜವಾಗಲೂ ನಂಬಿಕೆ ನೂರ್ಮಡಿಸುವಂತೆ ಮಾಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ತನಿಖೆಯಲ್ಲೂ ಕೆಲವು ಉಳಿಕೆಗಳಿವೆ.

ಗೋವಿಂದ ಪಾನ್ಸರೆ, ಕಲ್ಬುರ್ಗಿ ಮತ್ತು ಗೌರಿಯವರನ್ನು ಒಂದೇ ನಾಡಪಿಸ್ತೂಲಿನಿಂದ ಕೊಲ್ಲಲಾಗಿದೆ. ಈ ಕ್ರೈಂ ಸೀನ್‍ಗಳಲ್ಲಿ ಸಿಕ್ಕ ಬುಲೆಟ್ ಕಾರ್ಟ್ರಿಡ್ಜ್‌ಗಳ ಆಧಾರವಾಗಿಯೇ ಈ ಮೂರೂ ಕೊಲೆಗಳನ್ನು ಒಂದೇ ಪಿಸ್ತೂಲಿನಿಂದ ಮಾಡಲಾಗಿದೆ, ಹಾಗಾಗಿ ಈ ಎಲ್ಲ ಕೊಲೆಗಳ ಹಿಂದೆ ಒಂದೇ ತಂಡ ಇದೆ ಎಂದು ನಿರ್ಣಯಿಸಲಾಯಿತು. ಈಗ ಆ ಪಿಸ್ತೂಲು ಕೊಂಡು ತಂದವರು, ಅದನ್ನು ಬಳಸಲು ಕೊಲೆಗಾರರಿಗೆ ತರಬೇತಿ ನೀಡಿದವರು, ಬುಲೆಟ್ಟುಗಳನ್ನು ನೀಡಿದವರು, ಅದನ್ನು ಬಳಸಿ ಗುಂಡು ಹಾರಿಸಿ ಕೊಂದವರು ಎಲ್ಲರ ಬಂಧನ ಆಗಿದೆ. ಆದರೆ ಈ ಮೂರೂ ಪ್ರಕರಣಗಳಲ್ಲಿ ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಬಹುದಿದ್ದ ಪಿಸ್ತೂಲು ಭಗೀರಥ ಪ್ರಯತ್ನದ ಹೊರತಾಗಿಯೂ ಸಿಗಲಿಲ್ಲ.

ಆರೋಪಿಗಳಾದ ಶರದ್ ಕಲಸ್ಕರ್ ಮತ್ತು ವೈಭವ ರೌತ್ ಜುಲೈ 23, 2018ರಂದು, ಹತ್ಯೆ ಸಂಚಿನ ಪ್ರಮುಖ ರೂವಾರಿಗಳಾದ ಅಮೋಲ ಕಾಳೆ ಮತ್ತು ಅಮಿತ್ ದೇಗ್ವೇಕರ್ ಬಂಧನವಾದ ಕೆಲ ದಿನಗಳ ನಂತರ, ಪ್ರಮುಖ ಸಾಕ್ಷ್ಯವಾದ ಪಿಸ್ತೂಲನ್ನು ಮುಂಬೈ ಬಳಿಯ ಉಲ್ಲಾಸ ನದಿಯ ವಸೈ ಕ್ರೀಕ್‍ಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲಿಂದ ಪಿಸ್ತೂಲಿನ ಬಿಡಿ ಭಾಗಗಳನ್ನು ಬಿಡಿಸಿ ನದಿಗೆ ಎಸೆದುಬಿಟ್ಟರು. ಶರದ್ ಕಲಸ್ಕರ್‌ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಇದು ಸ್ಪಷ್ಟವಾಗಿ ದಾಖಲಾಗಿದೆ. ಆದರೆ ಪೊಲೀಸರಿಗೆ ಈ ಮಾಹಿತಿ ತಿಳಿಯುವ ವೇಳೆಗೆ ಅಕ್ಟೋಬರ್ ದಾಟಿತ್ತು. ಆ ವರ್ಷ, ಅಂದರೆ ಒಂದು ಮುಂಗಾರು ಮುಗಿದಿತ್ತು. ಉಲ್ಲಾಸ ನದಿ ವಸೈ ಕ್ರೀಕ್‍ನಿಂದ ಕೊಂಚ ದೂರದಲ್ಲಿಯೇ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಆದರೂ ಮಧ್ಯ ಏಷಿಯಾದ ಒಂದು ಕಂಪೆನಿಯನ್ನು ಗೊತ್ತು ಮಾಡಿಕೊಂಡು ಇಡೀ ವಸೈ ಕ್ರೀಕ್‍ನ ತಳವನ್ನು ಶೋಧಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಇದಕ್ಕೆ ಮಹಾರಾಷ್ಟ್ರ-ಕರ್ನಾಟಕ ಸರ್ಕಾರಗಳು ಜಂಟಿಯಾಗಿ ಸುಮಾರು ಒಂದೂವರೆ ಕೋಟಿ ರೂ ವ್ಯಯಿಸಿದೆ. ಬಹುಶಃ ಈ ಪಿಸ್ತೂಲನ್ನು ನಾವು ಸಮುದ್ರಕ್ಕೆ ಕಳೆದುಕೊಂಡಿದ್ದು ಇನ್ನು ಸಿಗುವ ಆಸೆ ಇಲ್ಲ. ಈ ಪಿಸ್ತೂಲು ಸಿಕ್ಕಿದ್ದರೆ ಈ ನಾಲ್ಕೂ ಪ್ರಕರಣಗಳು ಇನ್ನಷ್ಟು ಬಿಗಿಯಾಗುತ್ತಿದ್ದವು.

 

ಗೌರಿ ಪ್ರಕರಣದ ಆರೋಪ ಪಟ್ಟಿಯು ಒಟ್ಟು 18 ಜನರನ್ನು ಆರೋಪಿಗಳೆಂದು ಹೆಸರಿಸುತ್ತವೆ. ಅದರಲ್ಲಿ ಈವರೆಗೆ 17 ಜನರ ಬಂಧನವಾಗಿದೆ. ಒಬ್ಬ ನಿಹಾಲ್ ಅಲಿಯಾಸ್ ದಾದಾ ಎಂಬಾತ ಇನ್ನೂ ಸಿಕ್ಕಿಲ್ಲವಷ್ಟೇ ಅಲ್ಲ, ಆತನ ನಿಜ ಹೆಸರು ಸಹ ಇನ್ನೂ ಗೊತ್ತಾಗಿಲ್ಲ. ಒಟ್ಟಾರೆ ಸಂಚು ಮತ್ತು ಹತ್ಯೆಯಲ್ಲಿ ಈತನ ಪಾತ್ರ ಅಂಚಿನದೇ ಆದರೂ, ಈತ ಈ ಪ್ರಕರಣದ ಪ್ರಮುಖ ಆರೋಪಿಗಳ ಬ್ರೈನ್‍ವಾಶ್ ಮಾಡಿದ ಐಡಿಯಲೋಗ್. ಹಾಗಾಗಿ ಈತ ಹೊರಗಿದ್ದಷ್ಟೂ ದಿನ, ಇನ್ನಷ್ಟು ಜನರ ತಲೆಕೆಡಿಸಿ ಇಂತ ಹಿಂಸಾಕಾರ್ಯಗಳಿಗೆ ಅಣಿಮಾಡಿಸಬಲ್ಲವ. ಹಾಗಾಗಿ ಈತನ ಬಂಧನ ಜರೂರು ನಡೆಯಬೇಕಿದೆ. ಆದರೆ ಈತನ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಆರೋಪಪಟ್ಟಿ ಸಲ್ಲಿಸುವಾಗ ಬಂಧಿತರು 16 ಜನ. ನಂತರ ಜನವರಿ 2020ರಲ್ಲಿ ಅದುವರೆಗೂ ತಲೆಮರೆಸಿಕೊಂಡಿದ್ದ ಇಂಥದೇ ಒಬ್ಬ ಐಡಿಯಲೋಗ್ ರಿಷಿಕೇಶ ದೇವಡೀಕರ್ ಅನ್ನು ಜಾರ್ಖಂಡ್‍ನಿಂದ ಬಂಧಿಸಿ ತಂದಿತು ವಿಶೇಷ ತನಿಖಾದಳ. ಆತ ಅಲ್ಲಿ ಸನಾತನ ಸಂಸ್ಥಾ ಪ್ರಕಾಶನದ ಪುಸ್ತಕಗಳ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದ, ಆದರೆ ಬೇರೆ ಹೆಸರಿನಲ್ಲಿ. ಹಾಗಾಗಿ ತನಿಖಾದಳವು ನಿಹಾಲ್‍ಅನ್ನು ಸಹ ಇಷ್ಟರಲ್ಲೇ ಬಂಧಿಸಲಿ ಎಂದು ಆಶಿಸೋಣ.

ಉತ್ತರ ಸಿಗದ ಪ್ರಶ್ನೆಗಳು

ಇನ್ನು ಈ ಇಡೀ ಪ್ರಕರಣ ಮತ್ತು ತನಿಖೆಯಲ್ಲಿ ಹಲವು ಉತ್ತರ ಸಿಗದ ಪ್ರಶ್ನೆಗಳಿವೆ. ತನಿಖಾಧಿಕಾರಿಗಳ ಅವಿರತ ಪ್ರಯತ್ನದ ಹೊರತಾಗಿಯೂ ಉಳಿದುಬಿಟ್ಟಿರುವ ಪ್ರಶ್ನೆಗಳಿವು. ಕೆಲವು ಅವರ ಕೈಮೀರಿದವು.

ಆರೋಪಪಟ್ಟಿಯು ಸ್ಪಷ್ಟವಾಗಿ ಈ ಕೊಲೆಗಳ ಷಡ್ಯಂತ್ರದ ಮೂಲ ಪುರುಷರಲ್ಲಿ ಅನೇಕರು ಸನಾತನ ಸಂಸ್ಥಾ ಅಥವಾ ಅದರ ಅಂಗಸಂಸ್ಥೆಗಳಿಗೆ ಸೇರಿದವರು ಅಷ್ಟೇ ಅಲ್ಲ, ಈ ಹತ್ಯೆಗಳ ಹಿಂದಿನ ವಿಕೃತ ತಾತ್ವಿಕತೆ ಸಂಸ್ಥಾದ ಸ್ಥಾಪಕ ಡಾ. ಜಯಂತ ಬಾಲಾಜಿ ಅಠಾವಳೆ ರಚಿಸಿರುವ ‘ಕ್ಷಾತ್ರಧರ್ಮ ಸಾಧನಾ’ ಎಂಬ ಪುಸ್ತಕದ್ದು ಎಂದೂ ಹೇಳುತ್ತದೆ. ಆದರೆ ಸನಾತನ ಸಂಸ್ಥಾ ಮತ್ತು ಅದರ ಸ್ಥಾಪಕ ಡಾ. ಅಠಾವಳೆ ವಿರುದ್ಧ ಕಾನೂನುರೀತ್ಯಾ ಯಾವುದೇ ಕ್ರಮ ಆಗಿಲ್ಲ. ಇದಕ್ಕೆ ನ್ಯಾಯಿಕವಾದ ಕೆಲವು ಕಾರಣಗಳಿವೆ. ಒಂದು ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಯು ಒಂದು ಕುಕೃತ್ಯ ಮಾಡಿದ ಮಾತ್ರಕ್ಕೆ ಅದರ ಸಂಸ್ಥೆಯನ್ನು ದೂರಲು ಬರುವುದಿಲ್ಲ. ಹಲವು ಬಾರಿ ಉಗ್ರಗಾಮಿ ಕೃತ್ಯಗಳಲ್ಲಿ ಕೆಲವು ಸಂಘಟನೆಗಳೇ ಜವಾಬ್ದಾರಿ ಹೊರುತ್ತವೆ. ಅಲ್ಲಿಗೆ ಈ ಸಂಘಟನೆ/ಸಂಸ್ಥೆಯೇ ತನ್ನ ಕಾರ್ಯಸೂಚಿಯ ಭಾಗವಾಗಿ ಈ ಕೃತ್ಯ ನಡೆಸಿದೆ. ಇಲ್ಲ ಅವರು ಜವಾಬ್ದಾರಿ ಹೊರದಿದ್ದರೂ, ತನಿಖಾಧಿಕಾರಿಗಳು ಸಂಸ್ಥೆಯೇ ಈ ಕೃತ್ಯಗಳನ್ನು ನಡೆಸಿವೆ ಎಂದು ಸಾಕ್ಷ್ಯಗಳ ಸಮೇತ ರುಜು ಮಾಡಬೇಕಿರುತ್ತದೆ. ಸದ್ಯ ಈ ನಾಲ್ಕು ಪ್ರಕರಣಗಳ ತನಿಖೆಯಲ್ಲಿ, ಸನಾತನ ಸಂಸ್ಥೆಯೇ ತನ್ನ ಕಾರ್ಯಸೂಚಿಯ ಭಾಗವಾಗಿ ಈ ಕೊಲೆಗಳನ್ನು ಮಾಡಿಸಿದೆ ಎಂದು ಹೇಳಲು ತಕ್ಕ ಸಾಕ್ಷಿ ಪುರಾವೆಗಳು ದೊರೆತಿಲ್ಲ. ಈ ಪ್ರಕರಣಗಳ ಆರೋಪಿಗಳು ಸನಾತನ ಸಂಸ್ಥಾ ಮತ್ತು ಅದರ ಅಂಗಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದವರೇ ಆದರೂ ಸುಮಾರು 2011-12ರ ಸುಮಾರಿಗೆ ಇವರಲ್ಲಿ ಬಹುತೇಕರು ಬಹಿರಂಗವಾಗಿ ಈ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಈಗ ಈ ಸಂಘಟನೆಗಳು ತಮಗೂ ಈ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದೇ ವಾದಿಸುತ್ತಿವೆ.

ಆದರೆ ಸನಾತನ ಸಂಸ್ಥಾದ ಅಂಗಸಂಸ್ಥೆ ಹಿಂದೂ ವಿಧಿಧಿಜ್ಞ ಪರಿಷತ್ತು, ವಕೀಲರ ಪ್ರಕೋಷ್ಠ. ಈ ನಾಲ್ಕು ಹತ್ಯೆ ಪ್ರಕರಣದ ಎಲ್ಲ ಆರೋಪಿಗಳ ಪರ ಇವರೇ ವಕೀಲರು. ಬಂಧಿತ ಆರೋಪಿಗಳೆಲ್ಲರೂ ನಿರ್ದೋಷಿಗಳೆಂದು ಅವರ ಪರ ನ್ಯಾಯಾಲಯಗಳಲ್ಲಿ ಮತ್ತು ಹೊರಗೆ ಸಮಾಜದಲ್ಲಿ ವಾದಿಸುತ್ತಿರುವವರು, ಹತ್ಯೆಗೀಡಾದ ನಾಲ್ವರ ಬಗ್ಗೆಯೂ ಕೀಳಾಗಿ ಮಾತಾಡುತ್ತಾ ಚಾರಿತ್ರ್ಯಹರಣಗೊಳಿಸುತ್ತಾ ಅವರ ಕೊಲೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತಿರುವುದು ಅದೇ ಸನಾತನ ಸಂಸ್ಥಾ! ಹಿಂದೂ ವಿಧಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಸಂಚಾಲಕ ಆರೋಪಿಗಳೆಲ್ಲರ ಪರ ವಾದಿಸುತ್ತಿರುವ ವಕೀಲ ಸಂಜೀವ ಪುಣಲೇಕರನನ್ನು ಸಿಬಿಐ ನರೇಂದ್ರ ದಾಭೋಲ್ಕರ್ ಪ್ರಕರಣದಲ್ಲಿ ಬಂಧಿಸಿ ಆರೋಪಿಯನ್ನಾಗಿಸಿದೆ. ಆತನ ಮೇಲೆ ಷಡ್ಯಂತ್ರದ ಭಾಗವಾಗಿರುವ ಮತ್ತು ಸಾಕ್ಷ್ಯ ನಾಶದ ಆರೋಪ ಇದೆ. ಇನ್ನು ‘ಕ್ಷಾತ್ರಧರ್ಮ ಸಾಧನಾ’ ಪುಸ್ತಕದ ತಾತ್ವಿಕ ತಳಹದಿ. ಹತ್ಯೆಯ ಆರೋಪಿಗಳಾರಿಗೂ ಡಾ. ಅಠಾವಳೆ ಅವರೊಂದಿಗೆ ನೇರ ಸಂಪರ್ಕ ಹೊಂದಿರುವ ಬಗ್ಗೆ ಸಾಕ್ಷ್ಯಗಳಿಲ್ಲ. ಸಿಬಿಐ ಡಾ. ಅಠಾವಳೆಯನ್ನೂ ತನಿಖೆಗೊಳಪಡಿಸಿದೆ. ಆತ ತನ್ನ ಬರವಣಿಗೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾರೋ ಕೆಲವರು ಪ್ರಚೋದನೆಗೊಳಗಾದರೆ ಅದಕ್ಕೆ ತನ್ನನ್ನು ಬಾಧ್ಯನನ್ನಾಗಿ ಮಾಡಲಾಗುವುದಿಲ್ಲ ಎಂದು ವಾದಿಸಿದ್ದಾರೆ. ಅದು ಕಾನೂನಾತ್ಮಕವಾಗಿ ನಿಜ ಕೂಡ. ಆದರೆ ಇದೇ ವಾದ ಜಾಕಿರ್ ನಾಯಕ್‍ನಿಗೆ ಬೇರೆ ರೀತಿಯಲ್ಲಿ ಅನ್ವಯಿಸಲಾಗಿದೆ ಎಂಬುದು ಇಂದಿನ ವಾಸ್ತವ.

ಪರಶುರಾಮ ವಾಘ್ಮೋರೆ PC : Vartha Bharathi

ಸನಾತನ ಸಂಸ್ಥಾವನ್ನು ಸಂಘ ಪರಿವಾರ ಮತ್ತು ಅಧಿಕಾರಾರೂಢ ಬಿಜೆಪಿ ರಕ್ಷಿಸುತ್ತಿದೆಯೇ, ಎಂಬುದು ನಮ್ಮ ಮುಂದಿರುವ ಅತಿದೊಡ್ಡ ಪ್ರಶ್ನೆ. ನಮ್ಮಲ್ಲಿ ಅನೇಕರು ಸೈದ್ಧಾಂತಿಕ ಕಾರಣಗಳಿಗಾಗಿ ಹೌದು ಎಂದೇ ನಂಬುತ್ತೇವೆ. ಆದರೆ ಬಹುಶಃ ಸಂಘ ಪರಿವಾರ ಮತ್ತು ಬಿಜೆಪಿಯು ಸನಾತನ ಸಂಸ್ಥಾವನ್ನು ಮಟ್ಟ ಹಾಕಬೇಕೆಂದೇ ಆಶಿಸಿದೆ ಎನಿಸುತ್ತದೆ. ಉಗ್ರ ಹಿಂದುತ್ವ ಪ್ರತಿಪಾದಿಸುವ ಸಂಸ್ಥಾ, ತನ್ನ ಅಂಗ ಸಂಸ್ಥೆ ಹಿಂದೂ ಜನಜಾಗೃತಿ ಸಮಿತಿಯ ಅಡಿಯಲ್ಲಿ ಸಂಘ ಪರಿವಾರದ ಹೊರಗಿರುವ ಉಗ್ರ ಹಿಂದುತ್ವವಾದಿಗಳೆಲ್ಲರನ್ನೂ ಒಂದು ತೆಕ್ಕೆಗೆ ತರುವ ಪ್ರಯತ್ನವನ್ನು ಕಳೆದೊಂದು ದಶಕದಿಂದ ಮಾಡುತ್ತಾ ಬಂದಿದೆ. ಇವರ ಪ್ರಕಾರ ಸಂಘ ಪರಿವಾರ ಅಧಿಕಾರದಾಸೆಗೆ ಹಿಂದುತ್ವ ಕೈಬಿಟ್ಟು ರಾಜಿಯಾದ ಸಂಘಟನೆ. ಇವರು ಬಲಗೊಂಡಂತೆ ಸಂಘಪರಿವಾರಕ್ಕೆ ಅಪಾಯ. ಮಹಾರಾಷ್ಟ್ರದ ಕೊಲೆಯ ತನಿಖಾಧಿಕಾರಿಗಳನ್ನು ಕೇಳಿ ನೋಡಿ. ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಫ್ರೀಹ್ಯಾಂಡ್ ನೀಡಿದ್ದಷ್ಟೇ ಅಲ್ಲ, ಕೊಲೆಗಾರರನ್ನು ಹಿಡಿದು ಎಡೆಮುರಿಕಟ್ಟುವಂತೆ ಒತ್ತಾಯಿಸಿದ್ದೂ ಇದೆ. ಆದರೆ ಅವರು ಬಹಿರಂಗವಾಗಿ ಸನಾತನ ಸಂಸ್ಥಾ ಜೊತೆಗೆ ವಾದಕ್ಕಿಳಿಯರು, ಒಂದೊಮ್ಮೆ ಇಳಿದರೆ ಯಾರದು ನೈಜ ಹಿಂದುತ್ವ ಎಂಬ ಚರ್ಚೆ ಆರಂಭವಾಗಿಬಿಡುತ್ತದೆ ಎಂಬ ಭಯ ಇದಕ್ಕೆ ಕಾರಣ. ಸಂಘ ಪರಿವಾರ ಮತ್ತು ಬಿಜೆಪಿಗೆ ಸನಾತನ ಸಂಸ್ಥಾ ಉಗುಳಲೂ ಆಗದ ನುಂಗಲೂ ಆಗದ ಬಿಸಿತುಪ್ಪ.


ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?

ಇದನ್ನೂ ಓದಿ: ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ರೋಚಕ ಸತ್ಯಗಳು… ಭಾಗ-2

ಇದನ್ನೂ ಓದಿ: ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...