ಗೋವಾ ಬಿಜೆಪಿ ಸಚಿವ ಮಿಲಿಂದ್ ನಾಯಕ್ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಕಾಂಗ್ರೆಸ್ ಆರೋಪಸಿದ ಬೆನ್ನಿಗೆ ಸಚಿವ ಸ್ಥಾನಕ್ಕೆ ಮಿಲಿಂದ್ ನಾಯಕ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಗೋವಾದ ನಗರಾಭಿವೃದ್ಧಿ ಸಚಿವರಾಗಿದ್ದ ನಾಯಕ್ ಅವರು ಬುಧವಾರ ಪಣಜಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ನಾಯಕ್ ಅವರು ಸಂಪುಟ ಸದಸ್ಯರಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಬಿಹಾರದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಗೋವಾ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೋಡಂಕರ್ ಆರೋಪಿಸಿದ್ದರು.
“ಅದು ಅಪರಾಧವೋ ಅಥವಾ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ ಸಚಿವರೊಬ್ಬರು ತಮ್ಮ ಅಧಿಕಾರ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದಾರೆ. ಇಂತಹ ಸಚಿವರು ಗೋವಾ ಮತ್ತು ಗೋವಾ ಜನರಿಗೆ ಅವಮಾನ. ಕೂಡಲೇ ಅವರನ್ನು ವಜಾಗೊಳಿಸಬೇಕು. ಮಹಿಳೆಯರನ್ನು ಶೋಷಿಸುವ ಮಿಲಿಂದ್ ನಾಯಕ್ ಅವರಂತಹ ಸಚಿವರಿಗೆ ಸ್ಥಾನವಿಲ್ಲ ಎಂಬುದನ್ನು ಸರ್ಕಾರ ಗೋವಾದ ಜನತೆಗೆ ತೋರಿಸಬೇಕು” ಎಂದು ಅವರು ಒತ್ತಾಯಿಸಿದ್ದರು.
ಸಂತ್ರಸ್ತ ಮಹಿಳೆ ಮತ್ತು ಶಾಸಕರ ನಡುವಿನ ಸಂಭಾಷಣೆಯ ಆಡಿಯೊವನ್ನು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಸಂಕಲ್ಪ್ ಅಮೋನ್ಕರ್ ಅವರು ಬಿಡುಗಡೆ ಮಾಡಿದ್ದು, ನಾಯಕ್ ವಿರುದ್ಧ ಪೊಲೀಸ್ ದೂರನ್ನೂ ದಾಖಲಿಸಿದ್ದಾರೆ.
“ಪ್ರಕರಣದ ಮುಕ್ತ ಮತ್ತು ನ್ಯಾಯಯುತ ತನಿಖೆಗಾಗಿ ನಾಯಕ್ ರಾಜೀನಾಮೆ ನೀಡಿದ್ದಾರೆ. ನಾನು ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ ಮತ್ತು ಅದನ್ನು ರಾಜ್ಯಪಾಲರಿಗೂ ಕಳುಹಿಸಿದ್ದೇನೆ. ಕಾಂಗ್ರೆಸ್ ಯಾವುದೇ ಸಾಕ್ಷ್ಯವನ್ನು ನೀಡಿದ್ದರೂ ನಾವು ತನಿಖೆ ನಡೆಸುತ್ತೇವೆ” ಎಂದು ಸಿಎಂ ಸಾವಂತ್ ಹೇಳಿದ್ದಾರೆ.
ಈ ಪ್ರಕರಣದ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ನಾಯಕ್ ಹೇಳಿದ್ದಾರೆ. ಅವರ ವಿರುದ್ಧ ಮಾಡಿರುವ ಆರೋಪಗಳು ವೈಯಕ್ತಿಕವಾಗಿದ್ದು, ಅದರ ಬಗ್ಗೆ ಅವರು ಏನು ಮಾಡುತ್ತಾರೆ ಎಂಬುದು ಅವರ ವೈಯಕ್ತಿಕ ನಿರ್ಧಾರದ ವಿಷಯವಾಗಿದೆ ಎಂದು ಗೋವಾ ಸಿಎಂ ತಿಳಿಸಿದ್ದಾರೆ.
ಕ್ಯಾಬಿನೆಟ್ ಹುದ್ದೆ ಖಾಲಿಯಾಗಿರುತ್ತದೆ. ಆದರೆ ಸದ್ಯಕ್ಕೆ ಆ ಹುದ್ದೆಗೆ ಹೊಸ ಸೇರ್ಪಡೆ ಇರುವುದಿಲ್ಲ. ಅವರು ನಿಭಾಯಿಸುತ್ತಿದ್ದ ಖಾತೆಗಳನ್ನು ನಾನೇ ನಿಭಾಯಿಸುತ್ತೇನೆ ಎಂದು ಸಾವಂತ್ ಹೇಳಿದ್ದಾರೆ.
ಫೆಬ್ರವರಿ 2022 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ನಾಯಕ್ ವಿರುದ್ಧದ ಆರೋಪದ ಬಗ್ಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಬೇಕು ಎಂದು ಕಾಂಗ್ರೆಸ್ ನಾಯಕ ಚೋಡಂಕರ್ ಒತ್ತಾಯಿಸಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ಡಿಸೆಂಬರ್ 10 ರಂದು ಬಿಹಾರದ ಮಹಿಳೆಯೊಬ್ಬರು ಅಮೋನ್ಕರ್ ಮತ್ತು ಇತರ ಕಾಂಗ್ರೆಸ್ ನಾಯಕರ ವಿರುದ್ಧ ಸುಲಿಗೆ, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಪಿತೂರಿಗಾಗಿ ಪ್ರಕರಣ ದಾಖಲಿಸಿದ್ದರು. ಮಂಗಳವಾರ ಪ್ರಕರಣವನ್ನು ಗೋವಾ ಪೊಲೀಸರಿಗೆ ವರ್ಗಾಯಿಸಲಾಗಿದೆ.
ಏತನ್ಮಧ್ಯೆ, ಅಮೋನ್ಕರ್ ಮತ್ತು ಇತರ ಕಾಂಗ್ರೆಸ್ ನಾಯಕರು ನಾಯಕ್ ವಿರುದ್ಧ ಪಣಜಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಬುಧವಾರ ದಾಖಲಿಸಿದ್ದಾರೆ. ಸಚಿವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಸಾಬೀತುಪಡಿಸುವ ಸೆಲ್ ಫೋನ್ ದಾಖಲೆಗಳು ಮತ್ತು ಇತರ ಪುರಾವೆಗಳನ್ನು ಅವರು ಒದಗಿಸಿದ್ದಾರೆ.
“ನಾವು ನಾಯಕ್ ವಿರುದ್ಧ ಮಹಿಳೆಯ ಮೂಲ ಫೋನ್ ಎಲ್ಲಾ ಸಾಕ್ಷ್ಯಗಳನ್ನು ನಾವು ಪೊಲೀಸರಿಗೆ ಸಲ್ಲಿಸಿದ್ದೇವೆ. ನಮ್ಮ ವಿರುದ್ಧ ದೂರು ದಾಖಲಿಸುವಂತೆ ಸಂತ್ರಸ್ತೆಗೆ ಒತ್ತಾಯಿಸಲಾಗಿದೆ. ನಾನು ಪೊಲೀಸರೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ” ಎಂದು ಅಮೋನ್ಕರ್ ಹೇಳಿದ್ದಾರೆ.
ಸಂತ್ರಸ್ತ ಮಹಿಳೆಯು 2019ರ ನವೆಂಬರ್ನಲ್ಲಿ ನಮ್ಮನ್ನು ಸಂಪರ್ಕಿಸಿದ್ದರು. ಅವರು ನಮಗೆ ವಾಟ್ಸಾಪ್ ಚಾಟ್ಗಳು, ವಿಡಿಯೋ ಮತ್ತು ಆಡಿಯೋವನ್ನು ತೋರಿಸಿದರು. ನಾನು ಅದನ್ನು ಮೊದಲು ನೋಡಿದಾಗ ನನಗೆ ತುಂಬಾ ಕೋಪ ಬಂದಿತು. ಉದ್ಯೋಗದ ಭರವಸೆ ನೀಡಿ ತನ್ನನ್ನು ಬಳಸಿಕೊಳ್ಳಲಾಗಿದೆ, ಶೋಷಣೆ ಮಾಡಲಾಗಿದೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆಕೆ ಹೇಳಿಕೊಂಡಿದದರು ಎಂದು ಅಮೋನ್ಕರ್ ಹೇಳಿದ್ದಾರೆ.
ಐದು ತಿಂಗಳ ಹಿಂದೆ, ತನಗೆ ಮತ್ತು ತನ್ನ ಮಗುವಿಗೆ ಭಯವಾಗುತ್ತಿದೆ ಎಂದು ಹೇಳಿದ್ದ ಮಹಿಳೆ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
2015-16ರಲ್ಲಿ ಮಹಿಳೆ ಮತ್ತು ನಾಯಕ್ ನಡುವೆ ಸಂಭಾಷಣೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಯುವತಿಯರ ಮದುವೆಯ ವಯಸ್ಸು 21 ಕ್ಕೆ ಏರಿಕೆ: ಇತರ ದೇಶಗಳಲ್ಲಿ ಮದುವೆ ವಯಸ್ಸು ಹೇಗಿದೆ?