ಇಸ್ರೇಲ್ ಮೇಲೆ ಹೆಜ್ಬುಲ್ಲಾ ನಡೆಸಿರುವ ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿಯೊಬ್ಬರು ಉತ್ತರ ಇಸ್ರೇಲ್ನ ಮಾರ್ಗಲಿಯೊಟ್ನಲ್ಲಿ ಮೃತಪಟ್ಟ ಬೆನ್ನಲ್ಲಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಭಾರತ ಸರ್ಕಾರವು ಇಸ್ರೇಲ್ನಲ್ಲಿ ವಾಸಿಸುವ ತನ್ನ ಪ್ರಜೆಗಳಿಗೆ ಬುಧವಾರ ಸಲಹೆಯನ್ನು ನೀಡಿದೆ.
ಪ್ರಚಲಿತ ಭದ್ರತಾ ಪರಿಸ್ಥಿತಿ ಮತ್ತು ಸ್ಥಳೀಯ ಸುರಕ್ಷತಾ ಸಲಹೆಗಳ ದೃಷ್ಟಿಯಿಂದ, ಇಸ್ರೇಲ್ನಲ್ಲಿರುವ ಎಲ್ಲಾ ಭಾರತೀಯರು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣದ ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವ ಅಥವಾ ಭೇಟಿ ನೀಡುವವರು, ಇಸ್ರೇಲ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕು. ರಾಯಭಾರ ಕಚೇರಿಯು ಇಸ್ರೇಲ್ ಅಧಿಕಾರಿಗಳ ಜೊತೆ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ದೃಷ್ಟಿಯಿಂದ ಸಂಪರ್ಕದಲ್ಲಿದೆ ಎಂದು ರಾಯಭಾರಿ ಕಚೇರಿಯು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದೆ.
ಈ ಕುರಿತು ಭಾರತೀಯ ರಾಯಭಾರ ಕಚೇರಿಯು ಸಹಾಯ ಮತ್ತು ಸ್ಪಷ್ಟೀಕರಣಕ್ಕಾಗಿ ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಕೂಡ ಹಂಚಿಕೊಂಡಿದೆ. ಸಂಪರ್ಕ ಸಂಖ್ಯೆ ಮತ್ತು ಇಮೇಲ್ ವಿಳಾಸ ಕ್ರಮವಾಗಿ +972-35226748 ಮತ್ತು [email protected].ಆಗಿದೆ.
ಲೆಬನಾನ್ನಿಂದ ಉಡಾವಣೆಯಾದ ಕ್ಷಿಪಣಿಯು ಇಸ್ರೇಲ್ನ ಉತ್ತರ ಗಡಿ ಸಮುದಾಯವಾದ ಮಾರ್ಗಲಿಯೊಟ್ ಬಳಿಯ ಹಣ್ಣಿನ ತೋಟಕ್ಕೆ ಬಡಿದು ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ ಒಂದು ದಿನದ ನಂತರ ಭಾರತೀಯ ರಾಯಭಾರ ಕಚೇರಿಯ ಈ ಸಲಹೆಯನ್ನು ನೀಡಿದೆ. ಮೃತರನ್ನು ಕೇರಳದ ಕೊಲ್ಲಂ ಮೂಲದ 31 ವರ್ಷದ ಪ್ಯಾಟ್ ನಿಬಿನ್ ಮ್ಯಾಕ್ಸ್ವೆಲ್ ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆ ಮ್ಯಾಕ್ಸ್ವೆಲ್ ಇಸ್ರೇಲ್ಗೆ ತೆರಳಿದ್ದರು ಮತ್ತು ದಾಳಿಯ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಇನ್ನಿಬ್ಬರು ಭಾರತೀಯರು ಗಾಯಗೊಂಡಿದ್ದು, ಅವರನ್ನು ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಎಂದು ಗುರುತಿಸಲಾಗಿದೆ.
ಮೃತ ಮ್ಯಾಕ್ಸ್ವೆಲ್ ಅವರ ಪಾರ್ಥಿವ ಶರೀರವನ್ನು ಜಿವ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಮೆಲ್ವಿನ್ರನ್ನು ಉತ್ತರ ಇಸ್ರೇಲ್ ನಗರದ ಸಫೆದ್ನ ಝಿವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯಲ್ಲಿ ಓರ್ವ ವಿದೇಶಿ ಕಾರ್ಮಿಕ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಈ ಹಿಂದೆ ಎಂಡಿಎ ಹೇಳಿತ್ತು.
ಇಸ್ರೇಲ್ ಮೇಲೆ ಹಮಾಸ್ ವೈಮಾನಿಕ ದಾಳಿ ನಡೆಸಿದ ಬಳಿಕ ಅಕ್ಟೋಬರ್ 7ರಿಂದ ಇಸ್ರೇಲ್- ಗಾಝಾ ಮೇಲೆ ಯುದ್ದವನ್ನು ನಡೆಸುತ್ತಿದೆ. ಯುದ್ಧದಲ್ಲಿ ಈವೆರೆಗೆ 30,000ಕ್ಕೂ ಅಧಿಕ ಪ್ಯಾಲೆಸ್ತೀನ್ನ ಅಮಾಯಕ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಲಕ್ಷಾಂತರ ಮಂದಿ ಗಾಯಗೊಂಡಿದ್ದಾರೆ. ಮನೆಗಳನ್ನು ಕಳೆದುಕೊಂಡು ಗಾಝಾದ ನಾಗರಿಕರು ನಿರಶ್ರೀತರ ಶಿಬಿರಗಳಲ್ಲಿ ದಿನದೂಡುತ್ತಿದ್ದಾರೆ. ಇಸ್ರೇಲ್ನ ಈ ಅಮಾನವೀಕ ಕೃತ್ಯವನ್ನು ಇಡೀ ವಿಶ್ವವೇ ಖಂಡಿಸಿದ್ದು, ಕದನ ವಿರಾಮಕ್ಕೆ ಆಗ್ರಹಿಸಿವೆ.
ಇದನ್ನು ಓದಿ: ಹೈಕೋರ್ಟ್ ಜಡ್ಜ್ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಸೇರ್ಪಡೆ?