ಕೇಂದ್ರ ಸರ್ಕಾರವು ರಾಜಕೀಯ ಪ್ರಚಾರಕ್ಕಾಗಿ ಭಾರತೀಯ ಸೇನೆಯನ್ನು ಬಳಸಿಕೊಳ್ಳುವ ಕೀಳುಮಟ್ಟದ ಪ್ರಯತ್ನವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ವಿಚಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಕ್ಷಣ ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿದೆ.
ದೇಶದಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡಲು ಸೇನೆಯು ಸಹಾಯ ಮಾಡುತ್ತಿದೆ ಎಂದು ಬಿಜೆಪಿ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಟೀಕೆಯನ್ನು ಮಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಕುರಿತು ಪ್ರತಿಕ್ರಿಯಿಸಿದ್ದು, ಸೇನೆಯು ಎಲ್ಲರಿಗೆ ಸೇರಿದ್ದಾಗಿದೆ. ಅದನ್ನು ಎಂದಿಗೂ ದೇಶದ ಆಂತರಿಕ ರಾಜಕೀಯದ ಭಾಗವಾಗಿ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಹಣದುಬ್ಬರ, ನಿರುದ್ಯೋಗ ಮತ್ತು ಇತರ ಎಲ್ಲಾ ರಂಗಗಳಲ್ಲಿ ವೈಫಲ್ಯವನ್ನು ಎದುರಿಸಿದ ನಂತರ ಮೋದಿ ಸರ್ಕಾರವು ಈಗ ಸೇನೆಯಿಂದ ತನ್ನ ರಾಜಕೀಯ ಪ್ರಚಾರವನ್ನು ಪಡೆಯುವ ಅತ್ಯಂತ ಕೀಳುಮಟ್ಟದ ಪ್ರಯತ್ನವನ್ನು ಮಾಡುತ್ತಿದೆ. ಸೇನೆಯನ್ನು ರಾಜಕೀಯಗೊಳಿಸುವ ಈ ಪ್ರಯತ್ನ ಅತ್ಯಂತ ಅಪಾಯಕಾರಿ ಹೆಜ್ಜೆಯಾಗಿದೆ ಎಂದು ಜೈರಾಮ್ ರಮೇಶ್ ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ನಾವು ವಿನಂತಿಸುತ್ತೇವೆ ಮತ್ತು ಈ ನಿಲುವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಮೋದಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ
ಭಾರತೀಯ ಸೇನೆಯು ಇಡೀ ದೇಶದ ಸೈನ್ಯವಾಗಿದೆ ಮತ್ತು ನಮ್ಮ ಕೆಚ್ಚೆದೆಯ ಸೇನೆಯು ಎಂದಿಗೂ ದೇಶದ ಆಂತರಿಕ ರಾಜಕೀಯದಲ್ಲಿ ಭಾಗವಹಿಸದಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದ್ದಾರೆ.