ಜಿಎಸ್ಟಿ ಪರಿಹಾರದ ಬಗ್ಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಕ್ಷೀಣಿಸುತ್ತಿರುವ ನಂಬಿಕೆಯನ್ನ ಬಲಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಪತ್ರ ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಬಲಪಡಿಸಲು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಸೊರೆನ್ ಮನವಿ ಮಾಡಿದ್ದಾರೆ.
ಜಿಎಸ್ಟಿ ಪರಿಹಾರ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಈಗಾಗಲೇ ಹಲವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈಗ ಜಾರ್ಖಂಡ್ ಸಿಎಂ ಕೂಡ ಅವರ ಸಾಲಿಗೆ ಸೇರಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಗಳನ್ನು ಬಂಜರುಗೊಳಿಸಿದೆ ಎಂದು ತಮ್ಮ ಪತ್ರದಲ್ಲಿ ಸೊರೆನ್ ತಿಳಿಸಿದ್ದಾರೆ. ಕೇಂದ್ರ ಸಂಸತ್ತಿನಲ್ಲಿ ನಡೆದ ಎಲ್ಲಾ ಕೌನ್ಸಿಲ್ ಸಭೆಗಳಲ್ಲೂ ರಾಜ್ಯಗಳಿಗೆ ದ್ರೋಹವಾಗಿದೆ ಎಂದು ಕಿಡಿಕಾರಿದ್ದಾರೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿ ನಡೆಯುವ ಕೇಂದ್ರ ಸರ್ಕಾರದ ನಡೆ ದೇಶದ ಸಾರ್ವಭೌಮಕ್ಕೆ ದಕ್ಕೆ ತರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ನಮ್ಮ ಪಾಲಿನ ಜಿಎಸ್ಟಿ ಪರಿಹಾರ ಕೊಡಲೇಬೇಕು: ಮೋದಿಗೆ ಪಿಣರಾಯಿ ವಿಜಯನ್ ಪತ್ರ
2017ರ ಜಿಎಸ್ಟಿ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣವನ್ನು ನೆನೆಸಿಕೊಳ್ಳುವ ಹೇಮಂತ್ ಸೊರೆನ್ ನೀವು ಒಕ್ಕೂಟ ವ್ಯವಸ್ಥೆಯಿಂದ ಭಾರತ ಬೆಳೆಯಲು ಸಾಧ್ಯ ಎಂದಿದ್ದಿರಿ. ಆದರೆ ಈಗ ಜಿಎಸ್ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನ್ನ ಸಾಂವಿಧಾನಿಕ ಕಟ್ಟುಪಾಡುಗಳನ್ನು ಪೂರೈಸಲು ಹಿಂಜರಿಯುತ್ತಿರುವುದು ರಾಜ್ಯಗಳ ಹಿತಾಸಕ್ತಿಗಳಿಗೆ ಮತ್ತು ಸಹಕಾರಿ ಫೆಡರಲಿಸಂನ ಮನೋಭಾವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
ಇನ್ನು ಖನಿಜ ವಲಯದಿಂದಲೇ ಜಾರ್ಖಂಡ್ ಸುಮಾರು 5,000 ಕೋಟಿ ರೂ. ಪರಿಹಾರ ನಿಧಿಗೆ ಕೊಡುಗೆ ನೀಡುತ್ತದೆ, ಆದರೆ ಪ್ರತಿಯಾಗಿ ಪಡೆಯುವುದು ಮಾಸಿಕ ಪರಿಹಾರವಾಗಿ ಕೇವಲ 150 ಕೋಟಿ ರೂಪಾಯಿಗಳ ಅಲ್ಪ ಮೊತ್ತವಾಗಿದೆ. ಈಗ ಸರ್ಕಾರಿ ನೌಕರರ ವೇತನವನ್ನು ಪೂರೈಸಲು ರಾಜ್ಯಕ್ಕೆ ಕಷ್ಟವಾಗಿರುವ ಸಮಯದಲ್ಲಿ ಸಾಲ ಪಡೆಯಲು ಹೇಳಲಾಗುತ್ತಿದೆ. ಕೊರೊನಾ ಸಮಯದಲ್ಲಿ ನೀವು ಪರಿಹಾರಕ್ಕಿಂತ ಹೆಚ್ಚಿನದನ್ನು ನೀಡಬೇಕೆಂದು ನಾವು ಸ್ವಾಭಾವಿಕವಾಗಿ ನಿರೀಕ್ಷಿಸಿದ್ದೇವೆ” ಎಂದು ಸೊರೆನ್ ಹೇಳಿದರು.
2020-21 ರ ವಿತ್ತೀಯ ವರ್ಷದಲ್ಲಿ ಜಿಎಸ್ಟಿ ಪರಿಹಾರದಲ್ಲಿ 2.35 ಲಕ್ಷ ಕೋಟಿ ರೂ.ಗಳ ಕೊರತೆಯನ್ನು ಪೂರೈಸಲು ಆಗಸ್ಟ್ 29 ರಂದು ಕೇಂದ್ರ ಹಣಕಾಸು ಸಚಿವಾಲಯ ರಾಜ್ಯಗಳ ಮುಂದೆ ಎರಡು ಆಯ್ಕೆಗಳನ್ನು ಇಟ್ಟಿತ್ತು. ಮೊದಲ ಆಯ್ಕೆಯಾಗಿ ಆರ್ಬಿಐನಿಂದ 97,000 ಕೋಟಿ ರೂ. ಸಾಲ ಪಡೆಯಬಹುದು ಮತ್ತು ಎರಡನೇ ಆಯ್ಕೆಯಾಗಿ ಹೊರಗಿನಿಂದ 2.35 ಲಕ್ಷ ಕೋಟಿ ಸಾಲ ಪಡೆಯಬಹುದೆಂಬ ಮತ್ತು ಅದನ್ನು 2022 ರ ನಂತರ ಕೇಂದ್ರ ಸರ್ಕಾರ ಭಾಗಶಃ ತೀರಿಸುತ್ತದೆ ಎಂಬ ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದಿಟ್ಟಿತ್ತು.
ಇದನ್ನೂ ಓದಿ: ಜಿಎಸ್ಟಿ ಸಂಗ್ರಹ ಕೊರತೆ: ಸಾಲ ಪಡೆಯಿರಿ ಎಂಬ ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ಕೇರಳ
ಜಿಎಸ್ಟಿ ಪರಿಹಾರ ಕೋರಿ ಸೆಪ್ಟೆಂಬರ್ 2 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೋದಿಗೆ ಪತ್ರ ಬರೆದು, ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆ ಪರಿಹಾರವನ್ನು ನಿರಾಕರಿಸುವುದು ನಮ್ಮ ರಾಷ್ಟ್ರದ ಫೆಡರಲಿಸ್ಟ್ ನೀತಿಗೆ ಅಸಹನೀಯ ಹೊಡೆತ ಎಂದಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜಿಎಸ್ಟಿ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.
ಕೇರಳ ಮತ್ತು ಛತ್ತೀಸ್ಘಡ ಸರ್ಕಾರಗಳು ಕೇಂದ್ರವೇ ಸಾಲ ಪಡೆದು ಜಿಎಸ್ಟಿ ನೀಡಲು ಕೇಂದ್ರವನ್ನು ಕೇಳಿಕೊಂಡಿವೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದು ಈ ಸಮಯದಲ್ಲಿ ಕಾನೂನುಬದ್ಧವಾದ ಮತ್ತು ಸುಸ್ಥಿರ ಆಯ್ಕೆಗಳನ್ನು ಪರಿಗಣಿಸುವಂತೆ ತಿಳಿಸಿದ್ದರು.. ಅಂತೆಯೇ, ಆದಾಯ ನಷ್ಟಕ್ಕೆ ರಾಜ್ಯಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ಪುದುಚೇರಿ ಮುಖ್ಯಮಂತ್ರಿ ಹೇಳಿದ್ದಾರೆ.
ತಮ್ಮ ಹಕ್ಕುಗಳಿಗಾಗಿ, ಕೇಂದ್ರದಿಂದ ಬರಬೇಕಾದ ಬಿಎಸ್ಟಿ ಪರಿಹಾರಕ್ಕಾಗಿ ಬಿಜೆಪಿಯೇತರ ಸರ್ಕಾರಗಳು ಪ್ರಧಾನಿಗೆ ಪತ್ರ ಬರೆದು ಪರಿಹಾರ ಕೇಳುತ್ತಿದ್ದಾರೆ. ಆದರೆ ಬಿಜೆಪಿ ಆಡಳಿತವಿರುವ ಕರ್ನಾಟಕ ಸರ್ಕಾರ ಮಾತ್ರ ಕೇಂದ್ರ ನೀಡಿದ ಮೊದಲ ಆಯ್ಕೆ ತೆಗೆದುಕೊಂಡಿದ್ದು, ಸಾಲ ಪಡೆಯಲು ಸಿದ್ಧವಾಗಿದೆ.