ಗುಜರಾತ್ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಬಿಜೆಪಿ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ. ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಜಯ್ ನಾರಾಯಣ್ ವ್ಯಾಸ್ ಪಕ್ಷ ತೊರೆದಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಆಪ್ ಪಕ್ಷದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಇಂದು ಅಹಮದಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯಲ್ಲಿ ನನಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ದೂರಿದ್ದೇನೆ. ಆದರೆ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಇಷ್ಟು ಹಿರಿತನವಿದ್ದರೂ ಪ್ರತಿ ಬಾರಿಯೂ ದೂರುದಾರನ ಪಾತ್ರದಲ್ಲಿ ಉಳಿಯಲು ನನಗೆ ಬೇಸರವಾಗಿದೆ. ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದಾರೆ.
30 ವರ್ಷಗಳಿಂದ ಬಿಜೆಪಿಯಲ್ಲಿದ್ದ 75 ವರ್ಷದ ಜಯ್ ನಾರಾಯಣ್ರವರು ಪಟಾನ್ ಜಿಲ್ಲೆಯ ಸಿಧ್ಪುರ ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆರೋಗ್ಯ ಸಚಿವರಾಗಿ ಮತ್ತು ನರ್ಮದಾ ನೀರಾವರಿ ಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದ ಅವರು 2017ರ ವಿಧಾನಸಭೆಯಲ್ಲಿ ಸೋಲು ಕಂಡಿದ್ದರು. ತದನಂತರ ಬಿಜೆಪಿಯ ಜಿಲ್ಲಾ ಘಟಕವು ತನ್ನನ್ನು ಮೂಲೆಗುಂಪು ಮಾಡುತ್ತಿದೆ ಎಂಬುದು ಅವರ ಆರೋಪವಾಗಿದೆ.
ನಾನು ಈ ಹಿಂದೆಯೇ ಪಕ್ಷ ತ್ಯಜಿಸಬೇಕಾಗಿತ್ತು. ಆದರೆ ಬಿಜೆಪಿ ರಾಜ್ಯಾಧ್ಯಕ್ಷರಾದ ಸಿ.ಆರ್ ಪಾಟೀಲ್ರವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅವರು ನನಗೆ ಹಲವಾರು ಬಾರಿ ಸಹಾಯ ಮಾಡಿರುವುದು ನಿಜ. ಆದರೆ ಇನ್ನು ಮುಂದೆಯೂ ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲ ಅವರ ಬಳಿ ಹೋಗುವುದು ನನಗೆ ಇಷ್ಟವಿಲ್ಲ ಎಂದು ವ್ಯಾಸ್ ತಿಳಿಸಿದ್ದಾರೆ.
ವ್ಯಾಸ್ರವರು ಇದೇ ಅಕ್ಟೋಬರ್ 29 ರಂದು ರಾಜಸ್ಥಾನದ ಸಿಎಂ ಮತ್ತು ಗುಜರಾತ್ ಕಾಂಗ್ರೆಸ್ ಉಸ್ತುವಾರಿಯಾಗಿರುವ ಅಶೋಕ್ ಗೆಹ್ಲೋಟ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗಾಗಿ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, “ನಾನು ಮುಂದಿನ ಚುನಾವಣೆಯಲ್ಲಿ ಸಿಧ್ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಮತ್ತು ಆಪ್ ಕಡೆಯಿಂದ ಆಹ್ವಾನ ಬಂದಿದೆ. ನನ್ನ ಕಾರ್ಯಕರ್ತರ ಜೊತೆ ಮಾತನಾಡಿ ನಿರ್ಧಾರ ಮಾಡುತ್ತೇನೆ” ಎಂದಿದ್ದಾರೆ.
ವ್ಯಾಸ್ ಅವರು ಜೂನ್ 2021ರಿಂದಲೇ ಬಿಜೆಪಿ ಬಗ್ಗೆ ಅತೃಪ್ತಗೊಂಡಿದ್ದರು. ಆಗ ಅವರು ಹೃದಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವಾಗ, ಬಿಜೆಪಿ ಪ್ರಧಾನ ಕಚೇರಿ ಕಮಲಂನಿಂದ ಸಭೆಗೆ ಹಾಜರಾಗಲು ಕರೆ ಬಂದಿತ್ತು. ಅನಾರೋಗ್ಯ ಪೀಡಿತರ ಆರೋಗ್ಯ ವಿಚಾರಿಸಿಕೊಳ್ಳುವ ಬದಲಾಗಿ ಸಭೆಗೆ ಬನ್ನಿ ಎಂದು ಕರೆದರೆ ಏನು ಮಾಡುವುದು? ಅವರಿಗೆ ಗೊತ್ತಿಲ್ಲವೆ? ಪಕ್ಷ ಖಂಡಿತ ಬದಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಬಹಿರಂಗವಾಗಿ ತಮ್ಮ ಆಕ್ರೋಶ ಹೊರಹಾಕಿದ್ದರು.
ಎರಡು ಹಂತಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಮೊದಲನೆ ಹಂತ ಡಿಸೆಂಬರ್ 1 ರಂದು ಮತ್ತು ಎರಡನೇ ಹಂತ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ
ಇದನ್ನೂ ಓದಿ; ವಿಜಯಪುರ: ಮತ ನೀಡಿಲ್ಲವೆಂದು ಬಿಜೆಪಿ ನಾಯಕನ ಬೆಂಬಲಿಗರಿಂದ ಹಲ್ಲೆ