ಮಲ್ಲಿಕಾರ್ಜುಜನ ಖರ್ಗೆಯವರು 371ಜೆ ವಿಧಿಗಾಗಿ ಪಾರ್ಲಿಮೆಂಟ್ನಲ್ಲಿ ದನಿಯೆತ್ತುತ್ತಿದ್ದರೆ ಇಲ್ಲಿ ಬೀದಿಗಳಲ್ಲಿ ಹೈದರಾಬಾದ್ ಕರ್ನಾಟಕದ ಪರವಾಗಿ ದೊಡ್ಡ ಹೋರಾಟ ಮುನ್ನಡೆಸಿದ್ದ ದಣಿವರಿಯದ ಹೋರಾಟಗಾರ ಮಾಜಿ ಸಚಿವ, 371ಜೆ ವಿಧಿ ತಿದ್ದುಪಡಿ ಜಾರಿ ಹೋರಾಟಗಾರ ವೈಜನಾಥ ಪಾಟೀಲ್ರವರು ಇಂದು ನಿಧನರಾಗಿದ್ದಾರೆ.
82 ವರ್ಷ ವಯಸ್ಸಿನ ವೈದ್ಯನಾಥ್ ಪಾಟೀಲರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಾಟೀಲರು ಎರಡು ಬಾರಿ ಅಂದರೆ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ 1984ರಲ್ಲಿ ತೋಟಗಾರಿಕೆ ಹಾಗೂ ಎಚ್. ಡಿ. ದೇವೆಗೌಡ ಸಂಪುಟದಲ್ಲಿ 1994ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ದಿಗಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ಪಾಟೀಲರು
371 ಜೆ ವಿಧಿ ಜಾರಿಯಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದ ಸ್ವಾಭಿಮಾನಿಯಾಗಿದ್ದರು.
ಮೂಲತಃ ಬೀದರ್ ಜಿಲ್ಲೆಯವರಾಗಿದ್ದ ವೈಜನಾಥ ಪಾಟೀಲರು ಕಲಬುರ್ಗಿಯನ್ನು ತಮ್ಮ ರಾಜಕೀಯ ಕರ್ಮಭೂಮಿಯನ್ನಾಗಿಸಿಕೊಂಡಿದ್ದರು. ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಮ್ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗೌತಮ ಪಾಟೀಲ್ ಸೇರಿ ಮೂವರು ಪುತ್ರರು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.