ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಇಂದು ಕರ್ನಾಲ್ ಬಳಿಯ ಕೈಮ್ಲಾ ಎಂಬ ಗ್ರಾಮಕ್ಕೆ ಭೇಟಿ ನೀಡಲಿದ್ದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ಉಪಯೋಗಗಳ ಬಗ್ಗೆ ಭಾಷಣ ಮಾಡಲಿದ್ದಾರೆ. ಆದರೆ ಅದಕ್ಕೂ ಮುನ್ನ ರೈತರ ಮೇಲೆ ಮುಗಿಬಿದ್ದಿರುವ ಹರಿಯಾಣ ಪೊಲೀಸರು ಕರ್ನಾಲ್ ಟೋಲ್ ಪ್ಲಾಜಾ ಬಳಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಸಿಡಿಸಿ ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ.
ಈ ಹಿಂದೆ ಸಿಎಂ ಕಟ್ಟರ್ರವರಿಗೆ ಕಪ್ಪು ಬಾವುಟ ತೋರಿಸಿದ್ದಲ್ಲದೆ ಅವರು ಬೆಂಗಾವಲು ವಾಹನವನ್ನು ರೈತರು ತಡೆದಿದ್ದರು. ಇದರಿಂದ ಕೆರಳಿದ ಪೊಲೀಸರು 13 ರೈತ ಮುಖಂಡರ ಮೇಲೆ ಕೊಲೆಯತ್ನದ ದೂರು ದಾಖಲಿಸಿದ್ದರು. ಇಂದು ಮುನ್ನೆಚ್ಚರಿಕೆ ಎಂದು ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ.
ನವೆಂಬರ್ 26-27 ರಂದು ರೈತರು ದೆಹಲಿ ಚಲೋ ನಡೆಸಲು ದೆಹಲಿಯತ್ತ ನಡೆದಿದ್ದಾಗ ಅವರ ಮೇಲೆ ಲಾಠಿ ಚಾರ್ಜ್, ಅಶ್ರುವಾಯು ಸಿಡಿಸಿ ಕ್ರೌರ್ಯ ಮೆರೆದಿದ್ದವರು ಇದೇ ಹರಿಯಾಣ ಪೊಲೀಸರು.. ಈಗ ಮತ್ತೆ ಮತ್ತೆ ರೈತರ ಮೇಲೆ ಮುಗಿಬೀಳುತ್ತಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತರ ವಿರುದ್ಧವಿದ್ದು, ಕಾರ್ಪೊರೇಟ್ಗಳ ಹಿತಾಸಕ್ತಿ ಕಾಪಾಡುತ್ತವೆ ಎಂದು ರೈತರು ಆರೋಪಿಸಿದ್ದಾರೆ. ಆದರೆ ಕೇಂದ್ರ ಆ ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ದೇಶಾದ್ಯಂತ 700 ಕಾರ್ಯಕ್ರಮಗಳ ಮೂಲಕ ಅವುಗಳ ಉಪಯೋಗಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೊರಟಿದೆ.
ಇಂದು ಹರಿಯಾಣದ ರೈತರ ಮೇಲೆ ದಾಳಿಯನ್ನು ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೇವಾಲ ತೀವ್ರವಾಗಿ ಖಂಡಿಸಿದ್ದಾರೆ. “ಮನೋಹರ್ ಲಾಲ್ ಕಟ್ಟರ್ಜಿ ದಯವಿಟ್ಟು ನೀವು ಇಂದು ಕೈಮ್ಲಾ ಗ್ರಾಮದ ಕಾರ್ಯಕ್ರಮವನ್ನು ಕೈಬಿಡಿ. ದೇಶಕ್ಕೆ ಅನ್ನ ಕೊಡುವ ರೈತರ ವಿಚಾರದಲ್ಲಿ ಭಾವನಾತ್ಮಕ ನಾಟಕ ಆಡಬೇಡಿ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ನೀವು ರೈತರೊಂದಿಗೆ ಮಾತನಾಡಬೇಕೆಂದಿದ್ದರೆ ಕಳೆದ 46 ದಿನಗಳಿಂದ ಹೋರಾಡುತ್ತಿರುವ ರೈತರೊಂದಿಗೆ ಮಾತನಾಡಿ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರೈತರು ಬಿರಿಯಾನಿ ತಿಂದು ಹಕ್ಕಿ ಜ್ವರ ಹರಡುತ್ತಿದ್ದಾರೆ: ನಾಲಿಗೆ ಹರಿಯಬಿಟ್ಟ ಬಿಜೆಪಿ ಶಾಸಕ