ಹೈಕೋರ್ಟ್ ನ್ಯಾಯಾಧೀಶರ ಕುರಿತು ನೀಡಿದ್ದ ಹೇಳಿಕೆಯನ್ನು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸೋಮವಾರ ಹಿಂತೆಗೆದುಕೊಂಡಿದ್ದಾರೆ. ಅವರು ನೀಡಿದ್ದ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು.
ಭಿವಾನಿಯಲ್ಲಿ ಹಿಂದಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಖಟ್ಟರ್, “ಇದು ಅಸ್ವಾಭಾವಿಕ ಅಭಿಪ್ರಾಯ. ಈ ಹೇಳಿಕೆಯನ್ನು ನೀಡಬಾರದಿತ್ತು” ಎಂದಿದ್ದಾರೆ.
ಮೂರು ದಿನಗಳ ಪ್ರವಾಸವನ್ನು ಆರಂಭಿಸಿದ ಭಿವಾನಿಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಭಾನುವಾರ ಖಟ್ಟರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು.
2019ರ ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಖಟ್ಟರ್, “ಆ ಸಮಸ್ಯೆ ಬಗೆಹರಿಯುತ್ತದೆ. ನ್ಯಾಯಾಧೀಶರಿದ್ದಾರೆ, ಅವರ ತಲೆಯಲ್ಲಿ ಕೆಲವು ಸಮಸ್ಯೆ ಇದೆ. ನಾವು ಅದನ್ನು ಸರಿಪಡಿಸುತ್ತೇವೆ. ನನಗೆ ಸಂಪೂರ್ಣ ವಿಷಯ ತಿಳಿದಿದೆ. ಮೂರು ಸಾವಿರ ಮಂದಿ ಈಗಾಗಲೇ ನೇಮಕವಾಗಿದ್ದಾರೆ. 5,000ದಲ್ಲಿ ಮೂರು ಸಾವಿರ ಸೇರಿದ್ದಾರೆ. ಇನ್ನುಳಿದ 2,000 ಮಂದಿ ಶೀಘ್ರದಲ್ಲೇ ನ್ಯಾಯಾಲಯದ ತೀರ್ಪು ಪಡೆಯುತ್ತಾರೆ” ಎಂದಿದ್ದರು. ಇದು ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.
ಹರಿಯಾಣ ಪೊಲೀಸ್ ಕಾನ್ಸ್ಟೇಬಲ್ಗಳ ನೇಮಕಾತಿಗೆ ಸಂಬಂಧಿಸಿದ 2019ರ ಪ್ರಕರಣವನ್ನು ಉಲ್ಲೇಖಿಸಿ ಖಟ್ಟರ್ ಮಾತನಾಡಿದ್ದಾರೆಂದು ಮೂಲಗಳು ತಿಳಿಸಿವೆ. ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆಕ್ಷೇಪಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಭರ್ತಿ ಮಾಡಬೇಕಿದ್ದ 5,000 ಹುದ್ದೆಗಳ ಪೈಕಿ ಕನಿಷ್ಠ 833 ಅಭ್ಯರ್ಥಿಗಳ ಬಯೋಮೆಟ್ರಿಕ್ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಹರಿಯಾಣ ಸಿಬ್ಬಂದಿ ಆಯ್ಕೆ ಆಯೋಗ ಹೇಳಿದೆ. ಹೈಕೋರ್ಟ್ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಆ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಖಟ್ಟರ್, “ನಾನು ನ್ಯಾಯಾಲಯಗಳನ್ನು ಗೌರವಿಸುತ್ತೇನೆ. ನ್ಯಾಯಾಲಯಗಳು ಏನೇ ತೀರ್ಪು ನೀಡಿದರೂ ಅದು ಅಂತಿಮ ತೀರ್ಪು ಎಂಬುದರಲ್ಲಿ ಸಂದೇಹವಿಲ್ಲ ಎಂದು ನಾನು ತಕ್ಷಣ ಹೇಳಿದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ವಿಷಯಗಳು ಮುಂದುವರಿಯುತ್ತವೆ. ಎಲ್ಲರೂ ಸಾರ್ವಜನಿಕ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾರೆ. ವಿಪರೀತ ವಿಳಂಬಕ್ಕೆ ಸಂಬಂಧಿಸಿದ ಪ್ರಶ್ನೆ ಇದಾಗಿತ್ತು. ಪರೀಕ್ಷೆ ನಡೆಯಿತು, ಮತ್ತು ಫಲಿತಾಂಶವನ್ನು ಪ್ರಕಟಿಸಲಾಯಿತು, ಆದರೆ ತಡೆಯಾಜ್ಞೆ ವಿಧಿಸಲಾಯಿತು. ಹೀಗಾಗಿ, ಅಸ್ವಾಭಾವಿಕ ಅಭಿಪ್ರಾಯ ಹೊರಬಿದ್ದಿದೆ, ನಾನು ಈ ಹೇಳಿಕೆ ನೀಡಬಾರದಿತ್ತು ಎಂದು ಭಾವಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿರಿ: ಯಾರದೋ ಮೀಸಲಾತಿ ಕಿತ್ತು ಕೊಟ್ಟಿದ್ದಾರೆ, ಒಕ್ಕಲಿಗರು ಬೇರೆಯವರ ಅನ್ನ ಕಿತ್ತು ತಿನ್ನುವುದಿಲ್ಲ: ನಂಜಾವಧೂತ ಸ್ವಾಮೀಜಿ
“ಒಂದು ವಿಷಯ ನಿರ್ದಿಷ್ಟ ನ್ಯಾಯಾಧೀಶರನ್ನು ತಲುಪಿದ್ದರೂ ಸಹ, ನಾನು ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ. ಆದರೆ, ಈ ವಿಳಂಬದಿಂದ ಸಾವಿರಾರು ಜನರು ತೊಂದರೆಗೀಡಾಗಿದ್ದಾರೆ. ಅವರ ತರಬೇತಿಗೆ ಸಾಕಷ್ಟು ಸಮಯ ಸಿಗುತ್ತಿಲ್ಲ. ನಿನ್ನೆಯ ಸಾರ್ವಜನಿಕ ಸಭೆಗೆ, ತಮ್ಮ ಕೆಲಸಕ್ಕೆ ಸೇರಲು ಸಾಧ್ಯವಾಗದ ಅಂತಹ ಜನರೆಲ್ಲರೂ ಬಂದಿದ್ದರು. ಹೀಗಾಗಿ, ಅಸ್ವಾಭಾವಿಕ ಹೇಳಿಕೆ ನೀಡಲಾಯಿತು. ಅದಕ್ಕಾಗಿ ನಾನು ವಿಷಾದಿಸುತ್ತೇನೆ” ಎಂದು ಕಟ್ಟರ್ ಸ್ಪಷ್ಟಪಡಿಸಿದ್ದಾರೆ.
ಖಟ್ಟರ್ ಅವರ ವೀಡಿಯೊ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ರಾಜ್ಯಸಭಾ ಸಂಸದ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರತಿಕ್ರಿಯಿಸಿ, “ಇದು ನ್ಯಾಯಾಂಗದ ಮೇಲಿನ ನೇರ ದಾಳಿ” ಎಂದು ಟೀಕಿಸಿದರು.
ಖಟ್ಟರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, “ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ), ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಈ ವಿಷಯವನ್ನು ಅರಿತುಕೊಳ್ಳಬೇಕು. ಹರಿಯಾಣ ಮುಖ್ಯಮಂತ್ರಿಗೆ ನಿಂದನೆ ನೋಟಿಸ್ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
“ಆಯೋಗವು 833 ಅಭ್ಯರ್ಥಿಗಳ ಬಯೋಮೆಟ್ರಿಕ್ಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಆಯೋಗದ ಅಧ್ಯಕ್ಷರು ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲದೆ, ಜೂನ್ 2019ರಲ್ಲಿ ಪ್ರಾರಂಭವಾದ ನೇಮಕಾತಿ ಇನ್ನೂ ಏಕೆ ಪೂರ್ಣಗೊಂಡಿಲ್ಲ ಎಂಬುದನ್ನು ಸರ್ಕಾರವು ವಿವರಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ಎಲ್ಲದ್ದಕ್ಕೂ ನ್ಯಾಯಾಧೀಶರನ್ನು ದೂಷಿಸುವುದು ಸರಿಯೇ? ಸುಮಾರು ನಾಲ್ಕು ವರ್ಷಗಳಿಂದ ನೇಮಕಾತಿ ಪೂರ್ಣಗೊಳ್ಳದಿರುವುದು ಯಾರ ತಪ್ಪೆಂದು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.