Homeಮುಖಪುಟಭ್ರಷ್ಟರು ಎಷ್ಟೇ ಪ್ರಭಾವಿಗಳಾದರೂ ಸಿಬಿಐ ಕ್ರಮ ಜರುಗಿಸಬೇಕು: ಮೋದಿ

ಭ್ರಷ್ಟರು ಎಷ್ಟೇ ಪ್ರಭಾವಿಗಳಾದರೂ ಸಿಬಿಐ ಕ್ರಮ ಜರುಗಿಸಬೇಕು: ಮೋದಿ

- Advertisement -
- Advertisement -

ಎಷ್ಟೇ ಪ್ರಭಾವಿಗಳಾದರೂ ಭ್ರಷ್ಟರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಕೇಂದ್ರೀಯ ತನಿಖಾ ದಳದ ವಜ್ರಮಹೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಅವರು, “ಪ್ರಜಾಪ್ರಭುತ್ವ ಮತ್ತು ನ್ಯಾಯ ವ್ಯವಸ್ಥೆಗೆ ಭ್ರಷ್ಟಚಾರದಿಮದ ದೊಡ್ಡ ಅಡ್ಡಿಯಾಗಿದೆ” ಎಂದು ತಿಳಿಸಿದ್ದಾರೆ.

ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಕೇಂದ್ರೀಯ ತನಿಖಾ ದಳದ ಮುಖ್ಯ ಕಾರ್ಯವಾಗಿದೆ ಎಂದಿದ್ದಾರೆ.

“ಯಾವುದೇ ಭ್ರಷ್ಟರನ್ನು ಬಿಡಬಾರದು” ಎಂದು ಒತ್ತಿ ಹೇಳಿರುವ ಮೋದಿ, “ನಮ್ಮ ಪ್ರಯತ್ನಗಳಲ್ಲಿ ಯಾವುದೇ ಸಡಿಲಿಕೆ ಇರಬಾರದು. ಇದು ದೇಶದ ಜನತೆಯ ಆಶಯ. ದೇಶ, ಕಾನೂನು ಮತ್ತು ಸಂವಿಧಾನ ನಿಮ್ಮೊಂದಿಗಿದೆ. ಇಂದು ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಕೇಂದ್ರೀಯ ಸಂಸ್ಥೆ ನ್ಯಾಯದ ಬ್ರಾಂಡ್ ಅಂಬಾಸಿಡರ್ ಆಗಿದೆ. ಇಂದಿಗೂ ಪ್ರಕರಣ ಇತ್ಯರ್ಥವಾಗದೆ ಇದ್ದ ಸಂದರ್ಭದಲ್ಲಿ, ಅದನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಬೇಡಿಕೆಗಳಿವೆ. ಎಲ್ಲರ ಬಾಯಲ್ಲೂ ಸಿಬಿಐ ಹೆಸರು ಇದೆ. ಯಾವುದೇ ಮಹತ್ವದ ಅಪರಾಧ ನಡೆದರೆ ಅದನ್ನು ಸಿಬಿಐಗೆ ಒಪ್ಪಿಸಬೇಕೆಂದುಪಂಚಾಯತಿ ಮಟ್ಟದಲ್ಲಿಯೂ ಜನರು ಬಯಸುತ್ತಾರೆ” ಎಂದಿದ್ದಾರೆ.

“ದಶಕಗಳ ಕಾಲ ಭ್ರಷ್ಟಾಚಾರದಿಂದ ಲಾಭ ಪಡೆದವರು ಕೇಂದ್ರ ತನಿಖಾ ಸಂಸ್ಥೆಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ” ಎಂದು ಮೋದಿ ಆರೋಪಿಸಿದ್ದಾರೆ.

“ನೀವು ಯಾರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೀರೋ ಅವರು ತುಂಬಾ ಪ್ರಭಾವಿಗಳು ಎಂದು ನನಗೆ ತಿಳಿದಿದೆ, ಅವರು ಹಲವು ವರ್ಷಗಳಿಂದ ಸರ್ಕಾರ ಮತ್ತು ವ್ಯವಸ್ಥೆಯ ಭಾಗವಾಗಿದ್ದಾರೆ. ಆದರೆ ಭ್ರಷ್ಟರ ಪ್ರಭಾವ ನೋಡಿ ಏಜೆನ್ಸಿಗಳು ಹಿಂಜರಿಯಬಾರದು” ಎಂದು ಸಲಹೆ ನೀಡಿದ್ದಾರೆ.

ಸಿಬಿಐ ದುರ್ಬಳಕೆ; ಪ್ರತಿಪಕ್ಷಗಳ ಆರೋಪ

ಕೇಂದ್ರೀಯ ತನಿಖಾ ದಳವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ಮಾರ್ಚ್ 5ರಂದು ಎಂಟು ವಿರೋಧ ಪಕ್ಷಗಳ ನಾಯಕರು ಮೋದಿಯವರಿಗೆ ಪತ್ರ ಬರೆದು, “ತನಿಖಾ ಸಂಸ್ಥೆಗಳ ದುರುಪಯೋಗವು ನಾವು ಪ್ರಜಾಪ್ರಭುತ್ವದಿಂದ ನಿರಂಕುಶಾಧಿಕಾರಕ್ಕೆ ಹೋಗುತ್ತಿದ್ದೇವೆ ಎಂದು ಸೂಚಿಸುತ್ತದೆ” ಎಂದಿದ್ದವು.

ದೆಹಲಿಯಲ್ಲಿ ರದ್ದಾದ ಮದ್ಯ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಬಂಧಿಸಿದ ನಂತರ ಪ್ರತಿಪಕ್ಷಗಳು ಟೀಕಿಸಿದ್ದವು.

ಇದನ್ನೂ ಓದಿರಿ: ಮೋದಿ ಪದವಿ ಪ್ರಮಾಣಪತ್ರ ಒದಗಿಸುವ ಅಗತ್ಯವಿಲ್ಲ: ಕೇಜ್ರಿವಾಲ್‌ಗೆ 25,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

‘ಮೋದಿ ಉಪನಾಮ’ಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಸೇಡಿನ ರಾಜಕೀಯ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ರ್‍ಯಾಲಿ ನಡೆಸಿವೆ.

ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳು ಶಿಕ್ಷೆಯ ದಿನಾಂಕದಿಂದ ಆರು ವರ್ಷಗಳ ಅವಧಿಯ ನಂತರ ಅನರ್ಹರಾಗುತ್ತಾರೆ ಎಂದು ಪ್ರಜಾಪ್ರತಿನಿಧಿ ಕಾಯಿದೆ, 1951 ಹೇಳುತ್ತದೆ.

ಪ್ರತಿಪಕ್ಷಗಳ ಒಗ್ಗಟ್ಟಿನ ನಿಟ್ಟಿನಲ್ಲಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಭಾರತ್ ರಾಷ್ಟ್ರ ಸಮಿತಿ ಮತ್ತು ಆಮ್ ಆದ್ಮಿಯಂತಹ ಪಕ್ಷಗಳ ನಾಯಕರು ರಾಹುಲ್ ಗಾಂಧಿಯವರ ಅನರ್ಹತೆಯ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸೋಮವಾರ ಪಾಲ್ಗೊಂಡಿದ್ದರು. ಬಿಜೆಪಿಯ ಪ್ರಬಲ ವಿರೋಧಿ ಪಕ್ಷವೆಂದರೆ ಕಾಂಗ್ರೆಸ್ ಎಂಬ ವಾದವನ್ನು ಇಲ್ಲಿನ ಕೆಲವು ಪ್ರತಿಪಕ್ಷಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬುದು ಗಮನಾರ್ಹ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read