ಹರ್ಯಾಣದ ನುಹ್ ಜಿಲ್ಲೆಯಲ್ಲಿ ಹಿಂಸಾಚಾರದ ಬಳಿಕ ಮುಸ್ಲಿಮರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಕರೆ ನೀಡಿದ್ದ ಬೆಳವಣಿಗೆಯ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.
ಮುಸ್ಲಿಂ ಸಮುದಾಯದವರು ಇಲ್ಲೇ ಇರುತ್ತಾರೆ, ಅವರ ಮೇಲೆ ದೌರ್ಜನ್ಯಕ್ಕೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹರಿಯಾಣದ ರೈತ ಸಂಘಟನೆಗಳು ಮತ್ತು ಖಾಪ್ ಪಂಚಾಯತ್ಗಳ ಮುಖಂಡರು ಘೋಷಿಸಿದ್ದಾರೆ.
ರಾಜ್ಯದಲ್ಲಿನ ಕೋಮುಗಲಭೆಯನ್ನು ತಡೆಯಲು ಸಂಕಲ್ಪ ಮಾಡುವ ಉದ್ದೇಶದಿಂದ ರೈತರು ಹಿಸಾರ್ನ ಬಾಸ್ ಗ್ರಾಮದಲ್ಲಿ ಜಮಾಯಿಸಿದ್ದರು. ಹಿಂದೂ, ಮುಸ್ಲಿಂ ಮತ್ತು ಸಿಖ್ ಸಮುದಾಯಗಳ ಸುಮಾರು 2,000 ರೈತರು ರೈತ ಪಂಚಾಯತ್ ನಲ್ಲಿ ಪಾಲ್ಗೊಂಡಿದ್ದರು. ಹಿಂಸಾಚಾರದ ನಂತರ ಹರಿಯಾಣದಲ್ಲಿ ಇದೇ ಮೊದಲ ಬಾರಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ರೈತರು ಮುಂದಾಗಿದ್ದಾರೆ.
ಹರ್ಯಾಣದಲ್ಲಿ ಮುಸ್ಲಿಮರಿಗೆ ಬೆದರಿಕೆಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ತಮ್ಮ ಗ್ರಾಮಗಳ ಪ್ರವೇಶದ ವಿರುದ್ಧ ಕೆಲವು ಗ್ರಾಮ ಪಂಚಾಯತ್ಗಳು ನಿರ್ಣಯ ಕೈಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರೈತ ಮುಖಂಡ ಸುರೇಶ್ ಕೋತ್ ಈ ಕುರಿತು ಮಾತನಾಡಿ, ಮುಸ್ಲಿಮರು ಇಲ್ಲೇ ಇರುತ್ತಾರೆ, ಯಾರೂ ಅವರನ್ನು ಮುಟ್ಟುವಂತಿಲ್ಲ. ಎಲ್ಲಾ ರೈತರು ಅವರ ರಕ್ಷಣೆಗೆ ಜವಾಬ್ದಾರರು. ಕೆಲವು ಹಳ್ಳಿಗಳಲ್ಲಿ ಮುಸ್ಲಿಮರ ಪ್ರವೇಶ ನಿಷೇಧದ ಬಗ್ಗೆ ವರದಿಗಳು ಸುಳ್ಳು ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಬುಧವಾರದ ಪಂಚಾಯತ್ನಲ್ಲಿ, ರೈತರು ನೂಹ್ನಲ್ಲಿ ಶಾಂತಿ ಮರುಸ್ಥಾಪಿಸುವ ಪ್ರಯತ್ನಗಳನ್ನು ಮಾಡುವುದರ ಹೊರತಾಗಿ ಯಾವುದೇ ರೀತಿಯ ಜಾತಿ ಅಥವಾ ಕೋಮು ಹಿಂಸಾಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಜನರನ್ನು ಪ್ರಚೋದಿಸುವವರ ವಿರುದ್ಧ ಕ್ರಮಕೈಗೊಳ್ಳಲು ಪಂಚಾಯತ್ ಒತ್ತಾಯಿಸಿದೆ.
ಇದನ್ನು ಓದಿ: ಲೋಕಸಭೆ ದಾಖಲೆಯಿಂದ ‘ಭಾರತ ಮಾತೆ’ ಗೆ ಸಂಬಂಧಿಸಿದ ರಾಹುಲ್ ಗಾಂಧಿ ಟೀಕೆ ಕಡಿತ