ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಜರುಗಿದ 19 ವರ್ಷದ ದಲಿತ ಹೆಣ್ಣುಮಗಳ ಮೇಲಿನ ಅತ್ಯಾಚಾರ, ಕೊಲೆ ಮತ್ತು ಶವವನ್ನು ಆಕೆಯ ಕುಟುಂಬದವರಿಗೆ ನೀಡದೇ ಪೊಲೀಸರೇ ಸುಟ್ಟುಹಾಕಿದ ದುರ್ಘಟನೆಗೆ ರಾಷ್ಟ್ರಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಗಾಜಿಯಾಬಾದ್ ವಕೀಲರು ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಒತ್ತಾಯಿಸಿದ್ದಾರೆ.
“ಉತ್ತರ ಪ್ರದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಮಿತಿ ಮೀರಿವೆ. ಇವುಗಳನ್ನು ನಿಯಂತ್ರಿಸಿ ಮಹಿಳೆಯರಿಗೆ ರಕ್ಷಣೆ ನೀಡಲು ಮುಖ್ಯಮಂತ್ರಿ ಆದಿತ್ಯನಾಥ್ ವಿಫಲರಾಗಿದ್ದಾರೆ. ಬದಲಿಗೆ ಸರ್ಕಾರ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು ಇದು ಇನ್ನಷ್ಟು ಅತ್ಯಾಚಾರಗಳಿಗೆ ಕಾರಣವಾಗುತ್ತಿದೆ. ಹಾಗಾಗಿ ಕೂಡಲೇ ಆದಿತ್ಯನಾಥ್ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ರಾಷ್ಟ್ರಪತಿ ಆಡಳಿತ ಜಾರಿಯಾಗಬೇಕು” ಎಂದು ವಕೀಲರು ಒತ್ತಾಯಿಸಿದ್ದಾರೆ.
ಆದಿವಕ್ತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಗಾಜಿಯಾಬಾದ್ನ ಸಿವಿಲ್ ಕೋರ್ಟ್ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದ ವಕೀಲರು, ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮೆರವಣಿಗೆಯುದ್ದಕ್ಕೂ ಸಿಎಂ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ವಕೀಲರು, ಆದಿತ್ಯನಾಥ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಏರುತ್ತಿರುವ ಮಹಿಳೆಯರ ಮೇಲಿನ ಅಪರಾಧ ತಡೆಯಲು ಆದಿತ್ಯನಾಥ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ವಕೀಲರ ತಂಡದ ನಹರ್ ಸಿಂಗ್ ಯಾದವ್ ಮಾತನಾಡಿ “ರಾಜ್ಯದಲ್ಲಿ ಅಪರಾಧಗಳನ್ನು, ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯುವಲ್ಲಿ ಸಿಎಂ ಆದಿತ್ಯನಾಥ್ ಸಂಪೂರ್ಣ ವಿಫಲರಾಗಿದ್ದಾರೆ. ಪ್ರಸ್ತುತ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಪೊಲೀಸರು ಸಾಕ್ಷಿಗಳನ್ನು ಮುಚ್ಚಿಹಾಕಲು ಯುವತಿಯ ಮೃತದೇಹವನ್ನು ನೀಡದೇ ಸುಟ್ಟುಹಾಕಿದ್ದಾರೆ. ನಮಗೆ ರಾಜ್ಯ ಸರ್ಕಾರದ ಮೇಲಿನ ನಂಬಿಕೆ ಉಳಿದಿಲ್ಲ. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಬೇಕೆಂದು” ಒತ್ತಾಯಿಸಿದ್ದಾರೆ.
ಈಗಿನಿಂದಲೇ ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ ರಕ್ಷಣೆ ನೀಡಬೇಕು. 2 ಕೋಟಿ ರೂ ಪರಿಹಾರ, ಸರ್ಕಾರಿ ಉದ್ಯೋಗ ಮತ್ತು ದೆಹಲಿಯಲ್ಲಿ ಮನೆ ನೀಡಬೇಕು. ನಿಷ್ಪಕ್ಷಪಾತ ತನಿಖೆಗಾಗಿ ಬೇರೆ ರಾಜ್ಯದ ತ್ವರಿತ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಲ್ಮಿಕಿ ಸಮಾಜದ ಕಾರ್ಯಕರ್ತರು ಗಾಜಿಯಾಬಾದ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಸ್ತೆಗಳನ್ನು ನಿರ್ಭಂಧಿಸಿದ್ದಾರೆ. ಸಿಎಂ ಆದಿತ್ಯಾನಾಥ್ರವರ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಕುಟುಂಬದ ಒಪ್ಪಿಗೆಯಿಲ್ಲದೇ ಶವವನ್ನು ಸುಟ್ಟು ಹಾಕಿದ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಕ್ಟೋಬರ್ 03 ರಂದು ಗಾಜಿಯಾಬಾದ್ ನಗರದಾದ್ಯಂತ ಪೌರಕಾರ್ಮಿಕರು ಸ್ವಚ್ಛತಾ ಕೆಲಸ ತ್ಯಜಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಲ್ಮಿಕಿ ಸಮಾಜದ ಅನಿಲ್ ಕಲ್ಯಾಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್: ತೀವ್ರಗೊಂಡ ಆಕ್ರೋಶ, ಪ್ರತಿಭಟನೆ ಹತ್ತಿಕ್ಕಲು ಇಂಡಿಯಾ ಗೇಟ್ ಬಳಿ ನಿಷೇದಾಜ್ಞೆ ಹೇರಿದ ದೆಹಲಿ ಪೊಲೀಸ್!