ಹಿಂದಿ ಬ್ಯಾನರ್ ಹರಿದ ಕಾರಣಕ್ಕೆ ಹುಟ್ಟಿಕೊಂಡಿರುವ ವಿವಾದದಲ್ಲಿ ಕನ್ನಡ ಹೋರಾಟಗಾರರನ್ನು ರೌಡಿಗಳೆಂದು ಕರೆದು, ಕೋಮು ಬಣ್ಣ ಕೊಟ್ಟ ಸಂಸದ ತೇಜಸ್ವಿ ಸೂರ್ಯ ಸಾಕಷ್ಟು ಟೀಕೆ ಎದುರಿಸಿದ್ದು ನಿಮಗೆಲ್ಲಾ ಗೊತ್ತಿದೆ. ಆ ಹಾದಿಯಲ್ಲಿ ಈಗ ಇನ್ನೊರ್ವ ಬಿಜೆಪಿ ಸಂಸದ ಸದಾನಂದಗೌಡ ನಡೆದಿದ್ದು ಕನ್ನಡ ಹೋರಾಟಗಾರರನ್ನು ಕಿಡಿಗೇಡಿ ಎಂದು ಕರೆದಿದ್ದಾರೆ.
ಇಂದು ಮುಂಜಾನೆ 4:30ರ ಸಮಯಕ್ಕೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಸದಾನಂದಗೌಡರು ‘ಈ ಕೃತ್ಯ ಎಸಗಿರವವರು ಕಿಡಿಗಳೆ ಹೊರತು ಕನ್ನಡದ ಕಟ್ಟಾಳುಗಳಲ್ಲ ಎಂದು ಕರೆದುದ್ದಲ್ಲದೇ ಈ ವಿಚಾರ ಬಿಟ್ಟು ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿ” ಎಂದು ಕರೆ ನೀಡಿದ್ದಾರೆ. ಇವರ ಈ ಹೇಳಿಕೆಗೆ ಕೆರಳಿದ ಕನ್ನಡಿಗರು ಸದಾನಂದಗೌಡರನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ. ಮೊದಲು ನಿಮಗೆ ಕಾಳಜಿಯಿದ್ದರೆ ಕೇಂದ್ರದಿಂದ ಪರಿಹಾರ ತನ್ನಿ ಎಂದು ಸವಾಲು ಹಾಕಿದ್ದಾರೆ. ಸದಾನಂದಗೌಡರ ಪೋಸ್ಟ್ ಮತ್ತು ಅದಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ.
ಬೆಂಗಳೂರಿನ ಜೈನ ಧಾರ್ಮಿಕ ಕೇಂದ್ರದ ಮುಂದೆ ಹಾಕಿದ್ದ ಹಿಂದಿ ಭಾಷೆಯ ನಾಮ ಫಲಕ ಕಿತ್ತು ಹಾಕಿದ ಘಟನೆ ಯನ್ನು ಭಾಷಾ ಸಂಘರ್ಷವಾಗಿ ಬದಲಾಯಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕ್ಕೊಳ್ಳುತ್ತಿರುವ ಕೈ ಯಾರದ್ದೆಂದು ತಿಳಿದಿದೆ. ಮಾನ್ಯ ಮುಖ್ಯಮಂತ್ರಿಗಳು ಕನ್ನಡ ಹೋರಾಟಗಾರರನ್ನು ಧಮನಿಸುತ್ತಿದ್ದಾರೆ ಎಂಬಂತೆ ಬಿಂಬಿಸಲು ಕೆಲ ಅಸ್ವಸ್ಥ ಮನಸ್ಥಿತಿಗಳು ಪ್ರಯತ್ನ ನಡೆಸಿವೆ. ಕೆಲ ಕಿಡಿಗೇಡಿಗಳು ಮಾಡಿದ ಈ ದುಷ್ಕೃತ್ಯವನ್ನು ಕನ್ನಡದ ಕಟ್ಟಾಳುಗಳ ಕೆಲಸ ಎಂದು ಬಿಂಬಿಸುವ ಪಿತೂರಿ ಕೂಡಾ ಅಷ್ಟೇ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ .
ಕನ್ನಡಿಗರದ್ದು ಯಾವತ್ತೂ ಕಟ್ಟಿ ಕೊಡುವ ಮನಸ್ಥಿತಿ ಹೊರತು ಕೆಡಹುವ ಮನಸ್ಥಿತಿಯಲ್ಲ ಅನ್ನುವುದು ಆ ಕಿಡಿಗೇಡಿಗಳಿಗೆ ತಿಳಿಯದ್ದು ವಿಪರ್ಯಾಸ. ಅದನ್ನು ಬಿಟ್ಟು ಶಾಂತಿಪ್ರಿಯ ಜೈನ ಸಮುದಾಯದ ಮೇಲೆ ನಡಿಸಿದ ನೈತಿಕ ದಾಳಿ ಎಷ್ಟು ಸರಿ? ಅವರ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿದ್ದು ಎಷ್ಟು ಸರಿ? ಹಿಂದಿ ಭಾಷೆಯ ನಾಮ ಫಲಕ ಹಾಕಿದ ಕಾರ್ಯಕ್ರಮ ಸಂಘಟಕರನ್ನು ಸಂಪರ್ಕಿಸಿ ಗಮನ ಸೆಳೆಯಬೇಕಿತ್ತು ಮತ್ತು ತತ್ ಕ್ಷಣ ಸರಿ ಪಡಿಸಿಕ್ಕೊಳ್ಳುವಂತೆ ಸೂಚಿಸಬೇಕಿತ್ತು.
ಕನ್ನಡದ ವಿಷಯದಲ್ಲಿ ಕನ್ನಡಿಗರ ಮಾತನ್ನು ಧಿಕ್ಕರಿಸುವ ಮನಸ್ಥಿತಿ, ಧೈರ್ಯ ಯಾರಿಗಾದರೂ ಕರ್ನಾಟಕದಲ್ಲಿ ಇದೆಯಾ? ಕಾನೂನು ತನ್ನ ಕೆಲಸ ಮಾಡೇ ಮಾಡುತ್ತೆ . ಚಳುವಳಿ ಮಾಡಿ ತಪ್ಪೆಸಗಿದವರನ್ನು ಸರಿದಾರಿಗೆ ತರುವುದು ಕನ್ನಡಿಗ ಮನಸ್ಥಿತಿ. ದಾಳಿ ಮಾಡುವುದು ಕಿಡಿಗೇಡಿಗಳ ಕೆಲಸ. ಇನ್ನು ಈ ಘಟನೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕ್ಕೊಳ್ಳಲು ಯತ್ನಿಸಿ ಏನೋ ಆಗಬಾರದ್ದು ಆಗಿ ಬಿಟ್ಟಿದೆ ಎನ್ನುವಂತೆ ಬಿಂಬಿಸಲು ಯತ್ನಿಸುತ್ತಿರುವ ಹೊರಟಿರುವ ಕೆಲ ಮನಸ್ಥಿತಿ ಗಳನ್ನು ಇಲ್ಲೇ ಕಡಿವಾಣ ಹಾಕಿ ನಿಲ್ಲಿಸಬೇಕೆಂದು. ಇದನ್ನು ರಾಜಕೀಯ ಗೊಳಿಸಲು ಬಿಡಬಾರದೆಂದು ಕನ್ನಡದ ಹಿರಿಯರಲ್ಲಿ ಮನವಿ. ಇಲ್ಲವಾದಲ್ಲಿ ಸಮಾಜದ ಸ್ವಾಸ್ಥ ಇನ್ನಷ್ಟು ಕೆಡುವುದು ಖಂಡಿತಾ . ಈಗಾಗಲೇ ಪ್ರವಾಹಕ್ಕೆ ಸಿಲುಕಿ ನರಳಿರುವ ಕರ್ನಾಟಕದ ನಮ್ಮ ಸಹೋದರರಿಗೆ ನಮ್ಮಆಸರೆ ಬೇಕು ಬನ್ನಿ ಅಲ್ಲಿ ಕೈ ಜೋಡಿಸೋಣ. ಅದನ್ನು ಬಿಟ್ಟು ಇಂತಹ ಸಂಘರ್ಷಕ್ಕಲ್ಲ. ಎಂದು ಸದಾನಂದಗೌಡರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.
ಇದಕ್ಕೆ “ನಿಮಗೆ fund ಮಾಡುವವರಿಗೆ ಇಷ್ಟು ಬಕೆಟ್ ಹಿಡಿಯದೇ ಹೋದರೆ ಹೇಗೆ ಅಲ್ವಾ? ಅದ್ಯಾವನ್ಗೋ ಅದೆಲ್ಲೋ ಹರ್ಟ್ ಆಯ್ತಂತೆ ನಿಮ್ಗೂ ಕೂಡ ಆಗೋಯ್ತು, ಕರ್ನಾಟಕ ನೆರೆಗೆ ನಿಮ್ಮ ಕೊಡುಗೆ ಏನಿದೆ ಅಂತ ಕನ್ನಡಿಗರಿಗೆ ಗೊತ್ತಿದೆ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ.. ಕರ್ನಾಟಕದಲ್ಲಿ ಹುಟ್ಟಿ ಇಲ್ಲಿನ ಅನ್ನ ತಿಂತಿದ್ದೀರಿ ಸ್ವಾಭಿಮಾನದ ಬದುಕು ಬಾಳಿ” ಎಂದು ಸಂತೋಷ್ ಮಹದೇವಯ್ಯನವರು ಆಕ್ರೋಶದಿಂದ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡ ಭಾಷೆಯ ಪ್ರಕರಣಕ್ಕೆ ಕೋಮು ಬಣ್ಣ ಕೊಟ್ಟ ಬಿಜೆಪಿ ಸಂಸದ: ತೇಜಸ್ವಿ ನಡೆಗೆ ವ್ಯಾಪಕ ಖಂಡನೆ
“ಉತ್ತರ ಕನಾ೯ಟಕ ಪ್ರವಾಹ ಸಂತ್ರಸ್ತರಿಗೆ ನೆರವು ನಿಡುವ ವಿಚಾರ ಇಲ್ಲಿ ಮಾತನಾಡಬೇಡಿ. ಕೇಂದ್ರ ಸರ್ಕಾರದ ವಿರುದ್ಧ ಹೋರಾಡಬೇಕಾಗಿದೆ ಪರಿಹಾರ ತರಲು ಸಾಧ್ಯವಾಗದ ನಿಮಗೆ ರಾಜಕೀಯ ಬೇಕಾ? ಸುಮ್ಮನೆ ರಾಜಿನಾಮೆ ಕೋಟ್ಟು ಮನೆಯಲ್ಲಿ ಇರಿ ಸಾರ್. ಎಲ್ಲ ಗುಳೆ ಹೋದ ಮೇಲೆ ಮೊಳೆ ಹೋಡೆಯೊಕೆ ಬರಬೇಡಿ, ರಾಜ್ಯಕ್ಕೆ ಗೊತ್ತು ನಿಮ್ಮ ಬಿಜೆಪಿಯವರ ಗೊಸುಂಬೆ ಆಟಗಳು” ಎಂದು ಪದ್ಮರಾಜ್ ರವರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ನೆರೆ ಪರಿಹಾರಕ್ಕೆ ಒಂದು ನಯಾಪೈಸೆ ತರುವ ಯೋಗ್ಯತೆ ಇಲ್ಲ.. ಈಗ ಉತ್ತರ ಭಾರತೀಯ ಮಾರ್ವಾಡಿಗಳ ಪರವಾಗಿ ನಿಂತು ಕನ್ನಡಿಗರ ವಿಶಯವನ್ನ ರಾಜಕೀಯ ಮಾಡಿ ಬೇಳೆ ಬೇಯಿಸ್ಕೊಳ್ತೀರ!! ಎಂದು ಶೃತಿ ಎಚ್.ಎಂ ರವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಹಿಂದಿ ಬ್ಯಾನರ್ ಹರಿದ ಆರೋಪ: ಆರು ಕನ್ನಡ ಹೋರಾಟಗಾರರ ಬಂಧನ