ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ, ದಕ್ಷಿಣ ಭಾರತ ರಾಜ್ಯಗಳ ಮೇಲೆ ಹಿಂದಿ ಕಡ್ಡಾಯ ಮಾಡುವುದಾಗಿ ಹೇಳಿತ್ತು. ದಕ್ಷಿಣ ಭಾರತ ರಾಜ್ಯಗಳ ಮೇಲಿನ ಹಿಂದಿ ಹೇರಿಕೆ ವಿರುದ್ಧ ಸಾಕಷ್ಟು ವಿರೋಧ ಕೇಳಿ ಬಂದಿವೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡುವ ಕೇಂದ್ರ ನಿರ್ಧಾರಕ್ಕೆ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ಆದರೆ ಅದೆಲ್ಲೋ ಒಂದು ಕಡೆಯಿಂದ ಕನ್ನಡವನ್ನು ಹಣಿಯುವ ಹುನ್ನಾರ ಆರಂಭವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಯಾಕೆಂದರೆ ಆಯಾ ರಾಜ್ಯಗಳಲ್ಲಿ ಅದರದ್ದೇ ಆದ ಪ್ರಾದೇಶಿಕ ಭಾಷೆಯಿದೆ. ಹಾಗೆಯೇ ಕನ್ನಡಿಗರಿಗೆ ಕನ್ನಡ ಭಾಷೆಯಿದೆ. ಆದರೆ ಎಲ್ಲ ಕಾರ್ಯಕ್ರಮಗಳು ಕನ್ನಡದಲ್ಲಿ ನಡೆಯುತ್ತಿಲ್ಲ. ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆಯಾ..? ಎಂಬ ಪ್ರಶ್ನೆಗೆ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದ ಕಾರ್ಯಕ್ರಮ ಉದಾಹರಣೆಯಾಗಿ ಕಣ್ಣ ಮುಂದೆ ನಿಲ್ಲುತ್ತದೆ.
ಹೌದು… ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ’ನೆಹರು ಯುವ ಕೇಂದ್ರ ಕಲಬುರಗಿ’ ವತಿಯಿಂದ ತಾಲೂಕಾ ಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಕ್ಟೋಬರ್ ೨೨ರಂದು ಮಧ್ಯಾಹ್ನ ನಡೆದ ಸ್ಪರ್ಧೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಮಾತ್ರ ಅನುಮತಿ ನೀಡಲಾಗಿತ್ತು. ಕನ್ನಡ ಭಾಷೆಯಲ್ಲಿ ಭಾಷಣ ಸ್ಪರ್ಧೆಗೆ ಅವಕಾಶ ಕೊಟ್ಟಿಲ್ಲ.
’ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ಭಾಷಣ ಪ್ರಸ್ತುತಪಡಿಸಲು ಅವಕಾಶವಿರುತ್ತದೆ’ ಎಂದು ಪ್ರಕಟಣೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಿಲ್ಲ. ಕನ್ನಡ ಭಾಷಣ ಸ್ಪರ್ಧೆಗೆ ಯಾಕೆ ಅವಕಾಶವಿಲ್ಲ..? ಎಂಬ ಪ್ರಶ್ನೆ ಉದ್ಭವವಾಗಿದೆ. ಹೀಗಾದರೆ ಏಕಭಾರತ ಆಗುವುದಾದರೂ ಹೇಗೆ..? ಎಲ್ಲಾ ಭಾಷೆಗೂ ಅದರಲ್ಲೂ ಮಾತೃಭಾಷೆಗೆ ಮೊದಲು ಆದ್ಯತೆ ನೀಡದಿರುವುದು ಯಾಕೆ..? ಎಂಬ ಮಾತುಗಳು ಕೇಳಿ ಬಂದಿವೆ.