“ರಾಷ್ಟ್ರ ಭಾಷೆ ಹಿಂದಿ ಕಲಿಯಿರಿ” ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕರಿಗೆ ತಾಕೀತು ಮಾಡಿರುವುದಾಗಿ ವರದಿಗಳು ತಿಳಿಸಿವೆ.
ಮಂಗಳವಾರ ನವದೆಹಲಿಯಲ್ಲಿ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ನಿತೀಶ್ ಕುಮಾರ್ ಮಾತನಾಡಲು ಶುರು ಮಾಡಿದಾಗ ಡಿಎಂಕೆ ನಾಯಕರಾದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಡಿಎಂಕೆ ನಾಯಕ ಟಿ.ಆರ್ ಬಾಲು ಅವರು ನಿತೀಶ್ ಕುಮಾರ್ ಅವರ ಹಿಂದಿ ಭಾಷಣವನ್ನು ಇಂಗ್ಲಿಷ್ಗೆ ಭಾಷಾಂತರಿಸುವಂತೆ ಕೋರಿದ್ದರು.
ಈ ವೇಳೆ ರಾಷ್ಟ್ರೀಯ ಜನತಾ ದಳದ ರಾಜ್ಯಸಭಾ ಸಂಸದ ಮನೋಜ್ ಕೆ. ಝಾ ಅವರು ನಿತೀಶ್ ಕುಮಾರ್ ಭಾಷಣವನ್ನು ಭಾಷಾಂತರಿಸಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಿತೀಶ್ ಕುಮಾರ್ ” ಹಿಂದಿ ನಮ್ಮ ರಾಷ್ಟ್ರ ಭಾಷೆ, ಅದನ್ನು ಕಲಿಯಿರಿ. ಎಲ್ಲವನ್ನು ಭಾಷಾಂತರ ಮಾಡುತ್ತಾ ಕೂರಲು ಆಗುತ್ತಾ?” ಎಂದು ಪ್ರಶ್ನಿಸಿದ್ದಾಗಿ ತಿಳಿದು ಬಂದಿದೆ.
ಬ್ರಿಟಿಷರ ವಿರುದ್ಧ ಭಾರತೀಯರ ಸ್ವಾತಂತ್ರ್ಯ ಹೋರಾಟ ಮತ್ತು ಇಂಗ್ಲಿಷ್ ಹೇರಿಕೆಯ ಬಗ್ಗೆ ಇದೇ ವೇಳೆ ನಿತೀಶ್ ಕುಮಾರ್ ಮಾತನಾಡಿದ್ದಾರೆ ಎನ್ನಲಾಗಿದ್ದು, ನಿತೀಶ್ ಹೇಳಿಕೆ ಸಂಬಂಧ ಸಭೆಯಲ್ಲಿ ಕೆಲ ಹೊತ್ತು ಚರ್ಚೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಭಾಷಾಂತರ ಕೇಳಿದ್ದಕ್ಕೆ ಕೋಪಗೊಂಡಿದ್ದ ನಿತೀಶ್ ಕುಮಾರ್ ಅವರನ್ನು ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಇತರ ನಾಯಕರು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೂ, ಅವರು ಸಮಾಧಾನಗೊಂಡಿಲ್ಲ ಎನ್ನಲಾಗಿದೆ. ನಿತೀಶ್ ಕುಮಾರ್ ಭಾಷಣದ ಬಳಿಕ ಲಾಲೂ ಪ್ರಸಾದ್ ಯಾದವ್ ಕೂಡ ಹಿಂದಿಯಲ್ಲೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಬಳಿಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಕೆಲ ಹಿಂದಿ ಮಾತನಾಡುವ ನಾಯಕರನ್ನು ಹಿಂದಿ ಬದಲು ಇಂಗ್ಲಿಷ್ನಲ್ಲಿ ಭಾಷಣ ಮಾಡಿದ್ದಾರೆ.
ತಮಿಳುನಾಡು ಹಿಂದಿ ಭಾಷೆಯ ಹೇರಿಕೆಯನ್ನು ಕಠುವಾಗಿ ವಿರೋಧಿಸುವ ರಾಜ್ಯವಾಗಿದೆ. ಅಲ್ಲಿನ ಸಾಮಾನ್ಯ ಜನರು, ರಾಜಕೀಯ ನಾಯಕರೂ ಕೂಡ ಹಿಂದಿಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಹಿಂದೆ ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡಿನಲ್ಲಿ ದೊಡ್ಡ ಕ್ರಾಂತಿಯೇ ಆಗಿದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪ ಕಳೆದ 10 ವರ್ಷಗಳಿಂದ ಇದೆ. ತಮಿಳುನಾಡು ಮೋದಿ ಸರ್ಕಾರದ ಹಿಂದಿ ಹೇರಿಕೆಯನ್ನು ಸದಾ ವಿರೋಧಿಸುತ್ತಲೇ ಬಂದಿದೆ. ಆದರೆ, ಈಗ ಡಿಎಂಕೆಯ ಮಿತ್ರ ಪಕ್ಷದ ನಾಯಕನೇ ಹಿಂದಿ ಹೇರಿಕೆಯ ಮಾತನಾಡಿರುವುದು ಹೊಸತೊಂದು ಚರ್ಚೆಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: “ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ”: ಸಂಸದರ ಅಮಾನತು ಕುರಿತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ