ಹಿಂದುತ್ವದ ಸುಳ್ಳುಗಳ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ಶೇಷಾದ್ರಿಪುರಂ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಅಹಿಂಸಾ ಅವರು ಗುರುವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಬಿಡುಗಡೆಗೊಂಡ ಬಳಿಕ ಪರಪ್ಪನ ಅಗ್ರಹಾರ ಬಳಿ ಮಾತನಾಡಿದ ಚೇತನ್, ”ಕಳೆದ ಬಾರಿ ಟ್ವೀಟ್ ಮಾಡಿದ್ದಕ್ಕೆ ಏಳು ದಿನ ಜೈಲಿಗೆ ಹಾಕಿದ್ದರು. ಈ ಬಾರಿ ಟ್ವೀಟ್ ಮಾಡಿದಕ್ಕೆ ಮೂರು ದಿನ ಬಂಧನ ಮಾಡಿದ್ದಾರೆ. ಹಿಂದುತ್ವ ಅನ್ನೋದು ಯಾವುದು ಇಲ್ಲ. ಲಿಂಗಾಯುತ ಪ್ರತ್ಯೇಕ ಧರ್ಮ ಕೇಳಿದಂತೆ ಹಿಂದುತ್ವವನ್ನು ಕೇಳಿ. ನಾವು ನಿಮ್ಮ ಜೊತೆಗೆ ನಿಲ್ಲುತ್ತೇವೆ. ಆದರೆ ಹಿಂದುತ್ವವನ್ನು ಬೇರೆ ರೀತಿ ಬಿಂಬಿಸಲಾಗುತ್ತಿದೆ. ಈಗಲೂ ನಾನು ಹೇಳುತ್ತೇನೆ ಇದನ್ನು ಒಪ್ಪಲು ಸಾಧ್ಯ ಇಲ್ಲ. ಇನ್ನಷ್ಟು ಬಾರಿ ಬಂಧಿಸಿದರೂ ನಾನು ಹೆದರುವುದಿಲ್ಲ. ಹೋರಾಟಗಾರನಿಗೆ ಸೆರೆಮನೆಯೂ ಅರಮನೆಯೇ..” ಎಂದು ಹೇಳಿದರು.
”ಉರಿಗೌಡ ನಂಜೇಗೌಡ ಎನ್ನುವುದು ಶುದ್ಧಸುಳ್ಳು, ಅವರು ಕಾಲ್ಪನಿಕ ವ್ಯಕ್ತಿಗಳು ಎಂದು ಇತಿಹಾಸ ತಜ್ಞರು, ಬುದ್ದಿವಂತರು, ವಿಚಾರವಂತರು ಹಾಗೂ ಓದಿರುವವರೆಲ್ಲರೂ ಹೇಳುತ್ತಾರೆ. ಆ ನಿಟ್ಟಿನಲ್ಲಿ ಉರಿಗೌಡ ನಂಜೇಗೌಡ ಇದ್ದರು ಎನ್ನುವುದಕ್ಕೆ ಯಾವದೇ ದಾಖಲೆಗಳು ಇಲ್ಲ. ಅದೇ ರೀತಿ ಸುಳ್ಳುಗಳ ಮೇಲೆ ಕಟ್ಟಿರುವುದೇ ಹಿಂದುತ್ವ. ನನ್ನ ಟ್ವೀಟ್ನಲ್ಲೇ ಹೇಳಿದ್ದೇನೆ. ಸಾವರ್ಕರ್ನಿಂದ ಹೇಳಿದ ಸುಳ್ಳುಗಳು, 1992ರಲ್ಲಿ ಆಗಿರುವ ಸುಳ್ಳುಗಳು, 2023ರಲ್ಲಿ ಆಗಿರುವ ಸುಳ್ಳುಗಳು, ಈ ಎಲ್ಲ ಸುಳ್ಳುಗಳ ಮೇಲೆ ಹಿಂದುತ್ವ ನಡೆಯುತ್ತಿದೆ” ಎಂದು ಜೈಲಿಗೆ ಕಳುಹಿಸಲು ಕಾರವಾಗಿದ್ದ ಟ್ವೀಟ್ನ್ನೇ ಚೇತನ್ ಪುನರುಚ್ಚರಿಸಿದರು.
”ಉರಿಗೌಡ ನಂಜೇಗೌಡ ಎಂಬುದು ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದು ಮುಸ್ಲಿಂರು ಮತ್ತು ಒಕ್ಕಲಿಗರ ನಡುವೆ ದ್ವೇಷ ಬಿತ್ತುವ ಪ್ರಯತ್ನವಾಗಿದೆ, ಅದು ಯಾವುದೇ ಕಾರಣಕ್ಕೂ ಸಫಲ ಆಗಲ್ಲ. ಟಿಪ್ಪು ಒಬ್ಬ ಮಹಾನ್ ಸ್ವಾತಂತ್ರ ಹೋರಾಟಗಾರ, ಅದ್ಭುತ ಕೆಲಸಗಳನ್ನು ಸಹ ಮಾಡಿದ್ದಾರೆ.. ಅವರ ಖಡ್ಗವನ್ನ ನಾವು ಒಪ್ಪಲ್ಲ, ಆದರೆ ಅವರ ಸುಧಾರಣೆ ಇವತ್ತಿನ ದಿನ ನಮಗೆ ಅಗತ್ಯ ಇದೆ . ಅದೇ ರೀತಿಯಲ್ಲಿ ನಮಗೆ ಬಹಳ ಮುಖ್ಯವಾಗಿ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಪುಲೆ, ಹಾಗೂ ಗಾಂಧಿಯವರ ಸಮಾನತೆ, ನ್ಯಾಯ, ವೈಜ್ಞಾನಿಕತೆ ಮತ್ತು ಅಹಿಂಸೆ ನಮಗೆ ಅಗತ್ಯ ಇದೆ, ಅದೇ ನಮ್ಮ ಶಕ್ತಿ. ಸಮಾನತೆಯೇ ಸತ್ಯ ಸಮಾನತೆಯೇ ಪರಿವರ್ತನೆ ಎಂದು ಹೇಳಿದರು.
ಇದನ್ನೂ ಓದಿ: ಹಿಂದುತ್ವದ ಸುಳ್ಳುಗಳ ಬಗ್ಗೆ ಪೋಸ್ಟ್: ನಟ ಚೇತನ್ಗೆ 14 ದಿನಗಳ ನ್ಯಾಯಾಂಗ ಬಂಧನ
ಮಾದ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಚೇತನ್, ”ಇದು ನನ್ನನ್ನ ಮಾತ್ರ ಕುಗ್ಗಿಸುವ ಪ್ರಯತ್ನ ಅಲ್ಲ, ಲಕ್ಷಾಂತರ ಸಮಾನತಾವಾದಿಗಳನ್ನು ಕುಗ್ಗಿಸುವ ಪ್ರಯತ್ನವಾಗಿದೆ. ನಾವು ಸತ್ಯ ಮಾತನಾಡಿದರೆ ಜೈಲಿಗೆ ಹಾಕುವ ಪ್ರಯತ್ನ ನಡೆಯುತ್ತದೆ. ಆದರೆ ಅವರು ನಮ್ಮನ್ನ ವಿಚಾರಗಳಲ್ಲಿ ಸೋಲಿಸೋಕಾಗಲ್ಲ ಹಾಗಾಗಿ ಜೈಲಿಗೆ ಹಾಕುವ ಪ್ರಯತ್ನ ಮಾಡುತ್ತಾರೆ. ಅವರಲ್ಲಿ ವಿಚಾರಗಳೇ ಇಲ್ಲ, ಬರೀ ಸುಳ್ಳು, ದ್ವೇಷ, ಅಸಮಾನತೆ, ಹಿಂಸೆ ಇದೆ. ಸಮಾನತಾವಾದಿಗಳಾದ ನಾವುಗಳು ಸಂವಿಧಾನದ ಪೀಠಿಕೆಯನ್ನು ಎತ್ತಿಹಿಡಿಯುತ್ತೇವೆ, ನಾವೇ ನಿಜವಾದ ಭಾರತೀಯರು” ಎಂದರು.
”ನಿಮಗೆ ತಾಕತ್ತಿದ್ದರೆ ವಿಚಾರದಲ್ಲಿ ಸೋಲಿಸಿ, ಯಾವುದೇ ತಪ್ಪಿಲ್ಲದೇ ನಮ್ಮನ್ನ ನೀವು ಜೈಲಿಗೆ ಹಾಕುತ್ತಿದ್ದಿರಿ. ಸಾವಿರಾರು ವರ್ಷಗಳಿಂದ ನಮನ್ನ ಸತ್ಯ ಹೇಳಲಿಕ್ಕೆ ಬಿಟ್ಟಿಲ್ಲ ನೀವು.. ಬಸವಣ್ಣನವರ ವಚನಗಳನ್ನೇ ಸುಟ್ಟು ಹಾಕಿದ್ದಾರೆ. ಬಾಬಾಸಾಹೇಬರ ವಿಚಾರಗಳು ಇಂದಿಗೂ ಬೆಳಕಿಗೆ ಬರಲ್ಲ. ಪೆರಿಯಾರ್ ವಿಚಾರಗಳನ್ನ ಮುಚ್ಚಿಹಾಕುತ್ತಿದ್ದೀರಿ. ಆದರೆ ಸಮಾನತೆಯೇ ಸತ್ಯ ನಮ್ಮ ಹೋರಾಟ ಹೀಗೆ ಮುಂದುವರೆಯುತ್ತದೆ” ಎಂದು ನಟ ಚೇತನ್ ಹೇಳಿದ್ದಾರೆ.
ಗುರುವಾರ, ನಟ ಚೇತನ್ ಕುಮಾರ್ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 32ನೇ ಎಸಿಎಂಎಂ ನ್ಯಾಯಾಧೀಶೆ ಜೆ.ಲತಾ ಅವರು, 25 ಸಾವಿರ ರೂ. ವೈಯಕ್ತಿಕ ಬಾಂಡ್ ಅಥವಾ ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ನೀಡಲು ಆದೇಶಿಸಿದ್ದಾರೆ. ಅಲ್ಲದೇ, ತನಿಖೆಗೆ ಸಹಕರಿಸುವಂತೆ ನಿರ್ದೇಶನ ನೀಡಿದ್ದಾರೆ.