ಹಿಂದೂ ಸಮುದಾಯ ಮತ್ತು ಹಿಂದೂ ದೇವರುಗಳ ವಿರುದ್ಧ ಮುಸ್ಲಿಂ ಮುಖಂಡರು ದ್ವೇಷ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿರುವ ಎರಡು ಹಿಂದುತ್ವ ಸಂಘಟನೆಗಳು ವಿಶೇಷ ತನಿಖೆಗೆ ಆಗ್ರಹಿಸಿವೆ.
ಈ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಬೇಕು ಎಂದು ಕೋರಿ ಎರಡು ಹಿಂದುತ್ವ ಸಂಘಟನೆಗಳು (ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಮತ್ತು ಹಿಂದೂ ಸೇನೆ) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿವೆ ಎಂದು ಲೈವ್ ಲಾ ವರದಿ ಮಾಡಿದೆ.
ಕಳೆದ ವರ್ಷ ಡಿಸೆಂಬರ್ 17 ಮತ್ತು 19ರ ನಡುವೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ಮಾಡಿದ ಭಾಷಣಗಳ ಬಗ್ಗೆ ಎಸ್ಐಟಿ ತನಿಖೆಗೆ ಕೋರಿ ಎರಡು ಹಿಂದೂ ಗುಂಪುಗಳು ಪ್ರಕರಣದ ಮಧ್ಯಸ್ಥಿಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಈ ಸಂಬಂಧ ಪ್ರಕರಣವೊಂದು ನಡೆಯುತ್ತಿದೆ.
ಪಾಟ್ನಾ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಮತ್ತು ಪತ್ರಕರ್ತ ಕುರ್ಬಾನ್ ಅಲಿ ಅವರು ಮೂಲ ಅರ್ಜಿಯನ್ನು ಸಲ್ಲಿಸಿದ್ದಾರೆ. ಹರಿದ್ವಾರದ ಕಾರ್ಯಕ್ರಮ ಮತ್ತು ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳು ಮತ್ತು ನರಮೇಧದ ಕರೆಗಳ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ತನಿಖೆಗೆ ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ಈಗಾಗಲೇ ಕೋರಿದ್ದಾರೆ.
ಜನವರಿ 10 ರಂದು, ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಪೀಠವು ಈ ವಿಷಯವನ್ನು ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದೆ. ಜನವರಿ 12ರಂದು ಸುಪ್ರೀಂ ಕೋರ್ಟ್ ಈ ಮನವಿಯ ಮೇಲೆ ನೋಟಿಸ್ ಜಾರಿಗೊಳಿಸಿತು. ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಗಳಿಂದ ಪ್ರತಿಕ್ರಿಯೆಯನ್ನು ಕೇಳಿತು.
ವಕೀಲ ವಿಷ್ಣು ಶಂಕರ್ ಜೈನ್ ಮೂಲಕ ಸಲ್ಲಿಸಲಾದ ಮತ್ತೊಂದು ಅರ್ಜಿಯು ಹಿಂದೂಗಳ ವಿರುದ್ಧ ದ್ವೇಷದ ಭಾಷಣ ಮಾಡಲಾಗಿದೆ ಎಂದು ಆರೋಪಿಸಿ ಕನಿಷ್ಠ 25 ಪ್ರಕರಣಗಳನ್ನು ಉಲ್ಲೇಖಿಸಿದೆ. ಹಿಂದೂ ಸಮುದಾಯ, ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧದ ದ್ವೇಷ ಭಾಷಣಗಳ ತನಿಖೆಗೆ ಎಸ್ಐಟಿಗೆ ನಿರ್ದೇಶಿಸುವಂತೆ ಕೋರಲಾಗಿದೆ.
ಎಐಎಂಐಎಂನ ಅಸಾದುದ್ದೀನ್ ಓವೈಸಿ ಮತ್ತು ವಾರಿಸ್ ಪಠಾಣ್, ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (ಐಇಎಂಸಿ) ತೌಕೀರ್ ರಜಾ, ಆಲ್ ಇಂಡಿಯಾ ಇಮಾಮ್ ಅಸೋಸಿಯೇಶನ್ನ (AIIA) ಸಾಜಿದ್ ರಶೀದಿ ಮತ್ತು AAPಯ ಅಮಾನತುಲ್ಲಾ ಖಾನ್ ಸೇರಿದಂತೆ ದೇಶದ ಹಲವಾರು ಮುಸ್ಲಿಂ ರಾಜಕೀಯ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲು ಅರ್ಜಿಯಲ್ಲಿ ಕೋರಲಾಗಿದೆ.
ಈ ನಾಯಕರು ಹಿಂದೂ ಸಮುದಾಯದಲ್ಲಿ ಭಯ ಮತ್ತು ಅಶಾಂತಿಯ ವಾತಾವರಣವನ್ನು ಸೃಷ್ಟಿಸುವ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿರಿ: ಬಿಜೆಪಿ ಜೊತೆಗಿನ ಮೈತ್ರಿಯಿಂದ 25 ವರ್ಷಗಳು ವ್ಯರ್ಥವಾದವು: ಉದ್ಧವ್ ಠಾಕ್ರೆ