Homeಮುಖಪುಟರಾಹುಲ್ ಗಾಂಧಿ ಅನರ್ಹತೆ ಒಂದು ರಾಜಕೀಯ ತಿರುವಾಗಬಹುದು ಹೇಗೆ?

ರಾಹುಲ್ ಗಾಂಧಿ ಅನರ್ಹತೆ ಒಂದು ರಾಜಕೀಯ ತಿರುವಾಗಬಹುದು ಹೇಗೆ?

- Advertisement -
- Advertisement -

’ಮೋದಿಯ ಭಾರತದಲ್ಲಿ’ (ಮೋದಿ’ಸ್ ಇಂಡಿಯಾ – ವೆಸ್ಟ್‌ಲ್ಯಾಂಡ್ ಪ್ರಕಾಶನ 2023) ಎಂಬ ಪುಸ್ತಕದಲ್ಲಿ ನಾನು ರಾಷ್ಟ್ರೀಯ ಜನಪ್ರಿಯ ರಾಜಕಾರಣದಿಂದ ಚುನಾಯಿತ ಸರ್ವಾಧಿಕಾರಕ್ಕೆ ಆದ ಸ್ಥಿತ್ಯಂತರವನ್ನು ಅಧ್ಯಯನ ಮಾಡಿದ್ದೇನೆ. ಚುನಾವಣಾ ಆಯೋಗವೂ ಸೇರಿದಂತೆ ಅತಿಮುಖ್ಯ ಸಂಸ್ಥೆಗಳನ್ನು ಕಾರ್ಯಾಂಗವು ವಶಪಡಿಸಿಕೊಂಡಿರುವುದು ಮತ್ತು ಕ್ರೋನಿ ಬಂಡವಾಳಶಾಹಿಯ ನೆರವಿನಿಂದ ’ಮುಖ್ಯವಾಹಿನಿ’ಯ ಮಾಧ್ಯಮಗಳನ್ನು ಸಾಕುಪ್ರಾಣಿಯಂತೆ ಪಳಗಿಸಿರುವುದರಿಂದ ಈ ಹಂತವನ್ನು ಗುರುತಿಸಬಹುದು.

ಬೇರೆ ದೇಶಗಳು ಕೂಡಾ ಇಂತಹುದೇ ಸನ್ನಿವೇಶವನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿ ಚುನಾವಣೆಗಳು ಈಗಲೂ ನಡೆಯುತ್ತಿವೆ; ಯಾಕೆಂದರೆ, ಅವುಗಳ ಪರಮೋಚ್ಛ ನಾಯಕನಿಗೆ ಇತರ ಅಧಿಕಾರ ಕೇಂದ್ರಗಳ (ನ್ಯಾಯಾಂಗವೂ ಸೇರಿದಂತೆ) ಮೇಲೆ ನಿಯಂತ್ರಣ ಸಾಧಿಸಲು ತೋರಿಕೆಗಾದರೂ ಜನಾದೇಶದ ನ್ಯಾಯಸಮ್ಮತತೆ ಬೇಕಾಗುತ್ತದೆ. ಆದರೆ, ಇದೀಗ ಚುನಾವಣೆಗಳು ಸಮಾನಾವಕಾಶದ ಕಣದಲ್ಲಿ ನಡೆಯುವುದಿಲ್ಲ. ಮಾಧ್ಯಮಗಳ ತಾರತಮ್ಯ ಮಾತ್ರವಲ್ಲದೇ, ಭಾರೀ ಪ್ರಮಾಣದ ಹಣವನ್ನು ಒದಗಿಸುವ ಸಾರ್ವಜನಿಕ ಅವಕಾಶದ ಸಾಂದ್ರೀಕರಣವೂ ಇದಕ್ಕೆ ಕಾರಣ. ಅದಕ್ಕಾಗಿಯೇ ಇರುವ ಚುನಾವಣಾ ಬಾಂಡ್ ಇತ್ಯಾದಿಗಳು. (ದೊಡ್ಡ ಉದ್ದಿಮೆಗಳು ನೀಡುವ ಬಹುತೇಕ ನಿಧಿಯು ಆಳುವ ಪಕ್ಷದ ಪಾಲಾಗುತ್ತಿದೆ ಎಂದು ಲೇಖಕರು ಸೂಚಿಸುತ್ತಿದ್ದಾರೆ.)

ಒಂದು ಹೊಸ ಅನುಕ್ರಮವು ಈಗಷ್ಟೇ ಆರಂಭವಾಗಿದೆ. ಭಾರತದಲ್ಲಿ ಈಗ ನಡೆಯುತ್ತಿರುವಂತೆ ಸಾಂವಿಧಾನಿಕ ಸಂಸ್ಥೆಗಳನ್ನು ಆಳುವ ಪಕ್ಷಗಳು ವಶಕ್ಕೆ ಪಡೆಯುತ್ತಿರುವಾಗ ಪ್ರತಿಪಕ್ಷಗಳು ಬದಲಿ ದಾರಿ ಮತ್ತು ವಿಧಾನಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ. ಮೊದಲಿಗೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಈ ಕಾರ್ಯದಲ್ಲಿ ತೊಡಗಿಕೊಂಡರು. ಅವರು ಪ್ರಜಾಪ್ರಭುತ್ವದ ಮೇಲಿನ ದಾಳಿಗಳು ಮತ್ತು ಸರಕಾರ ಹಾಗೂ ಹೊಸ ಅತಿ ಶ್ರೀಮಂತರ ನಡುವಿನ ಕೂಟವನ್ನು ಖಂಡಿಸಿದರು. ಸ್ಪಷ್ಟವಾಗಿಯೇ ಅದು ಸಾಕಾಗಲಿಲ್ಲ: ಸಂಸತ್ತನ್ನು ದುರ್ಬಲಗೊಳಿಸಲಾಗಿದೆ ಮಾತ್ರವಲ್ಲದೇ, ಸಂಸತ್ತಿನಲ್ಲಿ ನಡೆಯುವ ಚರ್ಚೆಗಳನ್ನೀಗ ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡುವುದೇ ಇಲ್ಲ. (ಸಂಸತ್ತನ್ನು ಎಷ್ಟರ ಮಟ್ಟಿಗೆ ದುರ್ಬಲಗೊಳಿಸಲಾಗಿದೆ ಎಂದರೆ, ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ತುರ್ತುಪರಿಸ್ಥಿತಿಯು ವೇಳೆ ನಡೆದ ಕೆಲವು ಚರ್ಚೆಗಳ ಬಗೆಗೆ ಒಲವು ತೋರುವಷ್ಟು!)

ಆದುದರಿಂದ, ಪ್ರತಿಪಕ್ಷಗಳು- ನಿರಂತರವಾದ ಸುಳ್ಳು ಮಾಹಿತಿ, ಅಪಪ್ರಚಾರಗಳ ಕಾರಣದಿಂದ ವಾಸ್ತವವನ್ನು ಕಡೆಗಣಿಸುತ್ತಾ ಬಂದಿರುವ ಜನತೆಯನ್ನು ಸಂಪರ್ಕಿಸಲು ನೇರವಾಗಿ ಅವರ ಕಡೆಗೇ ಹೋಗಬೇಕಾಯಿತು. ಪಕ್ಷದೊಳಗಿನ ಇತ್ತೀಚಿನ ಆಂತರಿಕ ಚುನಾವಣೆಗಳ ನಂತರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪುನಶ್ಚೇತನಗೊಳಿಸಲು ’ಭಾರತ್ ಜೋಡೊ’ ಯಾತ್ರೆ ಕೂಡಾ ಒಂದು ದಾರಿಯಾಯಿತು. ಅತ್ಯಂತ ಕಳಪೆ ಮಾಧ್ಯಮ ವರದಿಗಳ ಹೊರತಾಗಿಯೂ (ಗುಣಮಟ್ಟ ಮತ್ತು ಪ್ರಮಾಣ ಎರಡರಲ್ಲೂ) ಈ 4,000 ಕಿ.ಮೀ.ಗಳ ಈ ಯಾತ್ರೆಯು ಯಶಸ್ವಿಯಾಯಿತು: ಕಾಂಗ್ರೆಸ್ ತನ್ನ ಸ್ವಾತಂತ್ರ್ಯಪೂರ್ವದ ಬೇರುಗಳಿಗೆ ಮರಳಿತು; ಹೇಗೆಂದರೆ, ಪ್ರಬಲವಾದ ಆಳುವ ಬಹುಸಂಖ್ಯಾತವಾದಿ ಕೂಟವು ಬಹಳಷ್ಟು ಜನವರ್ಗಗಳನ್ನು ಅಧಿಕೃತ ರಾಷ್ಟ್ರದ ವ್ಯಾಪ್ತಿಯಿಂದ ಹೊರಗಿಡುವ ಧೋರಣೆಯನ್ನು ಅನುಸರಿಸುತ್ತಿರುವಾಗ, ಈ ಯಾತ್ರೆಯು ಎಲ್ಲಾ ರೀತಿಯ ಜನರನ್ನು ಒಂದು ಸಾಮಾಜಿಕ ಚಳವಳಿಯಾಗಿ ಜೊತೆ ತರಲು ಸಾಧ್ಯವಾಯಿತು.

ಮುಂದಿನ ನಡೆಗಳು

ಮುಂದಿನ ಹೆಜ್ಜೆಯನ್ನು ಮೊದಲೇ ಊಹಿಸಬಹುದಿತ್ತು: ರಾಹುಲ್ ಗಾಂಧಿಯನ್ನು ನಿಷ್ಕ್ರಿಯಗೊಳಿಸಬೇಕೆನ್ನುವುದು. ಆದಕ್ಕಾಗಿ ಉಪಯೋಗಿಸಿಕೊಂಡ ನೆಪವೆಂದರೆ, ಜಗತ್ತಿನ ಮೋದಿಗಳೆಲ್ಲರ ಮಾನಹಾನಿ ಮಾಡಿದ್ದು- ಸಿಗಬಹುದಾಗಿದ್ದ ಕುಂಟುನೆಪ ಅದೊಂದೇ. ಸ್ವತಃ ನರೇಂದ್ರ ಮೋದಿಯೇ “ಪಾಸ್ತ ಬೆಹನ್”, “ಜರ್ಸಿ ಹಸು”, “ಮೌನ್ ಮೋಹನ್ ಸಿಂಗ್” ಇತ್ಯಾದಿ ಕೀಳು ಪದಗಳನ್ನು ಬಳಸಿ ವ್ಯಂಗ್ಯವಾಡಿರುವಾಗ, ಇದೊಂದು ವಿಪರ್ಯಾಸದಂತೆ ಕಾಣುತ್ತದೆ. ಆದರೆ, ಇದಕ್ಕಿಂತ ಒಳ್ಳೆಯ ನೆಪ ದೊರಕದೇ ಇದ್ದಾಗ ಅದುವೇ ಪ್ರಯೋಜನಕ್ಕೆ ಬಂತು. ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಶಿಕ್ಷೆಯಾಯಿತು. ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಮೂಲ ಉದ್ದೇಶ ಅದೇ ಆಗಿತ್ತು: ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ತೆಗೆದುಹಾಕುವುದು.

ಗೌತಮ್ ಅದಾನಿ ಮತ್ತು ನರೇಂದ್ರ ಮೋದಿಯ ಸಂಬಂಧದ ಬಗ್ಗೆ ಹೊಸ ಚರ್ಚೆ ಆರಂಭವಾಗಿರುವಾಗ ಭಾರತ ಮತ್ತು ವಿದೇಶಗಳ ಉದ್ಯಮಿ ಸಮುದಾಯಗಳು ಉಸಿರು ಬಿಗಿಹಿಡಿದು ಗಮನಿಸುವ ಸಂದರ್ಭದಲ್ಲಿ ಸರಕಾರಕ್ಕೆ ಹುಟ್ಟಿಕೊಂಡಿರುವ ತೀವ್ರ ಹೆದರಿಕೆಯನ್ನು ಈ ನಡೆ ತೋರಿಸುತ್ತದೆ. ಈ ರೀತಿಯ ನಡೆಗಳೆಲ್ಲವೂ ತೀರಾ ಕೆಟ್ಟದನ್ನು ತಪ್ಪಿಸುವ “ಪ್ಲಾನ್ ಬಿ”ಗಳು. ಆದರೆ, ಹಾನಿ ನಿಯಂತ್ರಣದ ಈ ನಡೆಯು ವ್ಯತಿರಿಕ್ತ ಪರಿಣಾಮ ಬೀರಬಹುದು.

ಪ್ರತಿಯೇಟು

ಮೊದಲನೆಯದಾಗಿ ಉದಾರವಾದಿ ಪ್ರಜಾಪ್ರಭುತ್ವಗಳಲ್ಲಿ ಈ ರೀತಿಯ ಕ್ಷುಲ್ಲಕ ಅಪರಾಧಗಳಿಗಾಗಿ ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ಕಳಿಸುವುದಿಲ್ಲ. ಇದರಿಂದಾಗಿ ಭಾರತವು ತಾನು ಮಾಡುವ “ಪ್ರಜಾಪ್ರಭುತ್ವಗಳ ಮಾತೆ”, “ವಿಶ್ವಗುರು” ಇತ್ಯಾದಿ ದಾವೆಗಳನ್ನು ದುರ್ಬಲಗೊಳಿಸಿದಂತಾಗಿದೆ. ಜಿ20 ಶೃಂಗಸಭೆಗೆ ಕೇವಲ ಆರು ತಿಂಗಳುಗಳು ಇರುವಾಗ ಭಾರತವು ತನ್ನ ಈ ಇಮೇಜನ್ನು ಹೆಚ್ಚಿಸಿಕೊಳ್ಳಬೇಕಾಗಿದ್ದ ಸಂದರ್ಭದಲ್ಲಿ ಅದನ್ನು ತೆಳುಗೊಳಿಸುತ್ತಿದೆ.

ಎರಡನೆಯದಾಗಿ, ಟರ್ಕಿ, ಇಸ್ರೇಲ್, ಹಂಗೆರಿ ಮತ್ತು ಪೋಲೆಂಡಿನಲ್ಲಿ ಆದಂತೆ, ಈ ರೀತಿಯ ತೀವ್ರತರದ ಕ್ರಮಗಳು ಪ್ರತಿಪಕ್ಷಗಳನ್ನು ಇನ್ನಷ್ಟು ಬಲಗೊಳಿಸುತ್ತವೆ. ಅರವಿಂದ ಕೇಜ್ರಿವಾಲ್ ಅವರಂಥ ರಾಹುಲ್ ಗಾಂಧಿಯ ಪ್ರತಿಸ್ಪರ್ಧಿಗಳು ತಮ್ಮನ್ನು ಸೇರಿಸಿದಂತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಎಲ್ಲರಿಗೂ ಈ ಸರಕಾರವು ಒಡ್ಡುತ್ತಿರುವ ಬೆದರಿಕೆಯನ್ನು ಮನಗಾಣುತ್ತಿದ್ದಾರೆ. ಮನೀಶ್ ಸಿಸೋಡಿಯಾ ಅವರ ಬಂಧನವು ಈ ವಿಷಯವನ್ನು ಈಗಾಗಲೇ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ‘ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ’: ಅನರ್ಹತೆ ಬಳಿಕ ರಾಹುಲ್‌ ಹೇಳಿಕೆ

ಪ್ರತಿಪಕ್ಷಗಳ ನಾಯಕರು ಒಗ್ಗಟ್ಟಾದಾಗ ಸರ್ವಾಧಿಕಾರಿ ನಾಯಕರ ಕೆಲಸ ಇನ್ನಷ್ಟು ಸಂಕೀರ್ಣವಾಗುತ್ತದೆ: ಅವರ ಧ್ರುವೀಕರಣದ ತಂತ್ರವು ತಿರುಗೇಟು ಹೊಡೆಯುತ್ತದೆ. ಈ ಹೊಸ ಪರಿಸ್ಥಿತಿಯು ಹೊಸ ಬೆಂಬಲಿಗರನ್ನು ಕಂಡುಕೊಳ್ಳದ ಹೊರತು- ಹೆಚ್ಚು ಉದಾರವಾಗುವುದನ್ನು ’ಒತ್ತಾಯ’ದಿಂದ ಅನಿವಾರ್ಯಗೊಳಿಸುತ್ತದೆ ಕೂಡಾ: ಮರಳಿಮರಳಿ ಜ್ಯೋತಿರಾದಿತ್ಯ ಸಿಂಧಿಯಾ ಮಾದರಿ/ಲಕ್ಷಣಕ್ಕೆ ಹೊರಳುವ ಸಾಧ್ಯತೆಯಿದೆ; ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಭಾರತದ ರಾಜಕೀಯ ಪರಿಸ್ಥಿತಿಯನ್ನು ಅಂದಾಜು ಮಾಡುವಲ್ಲಿ ಇದು ಒಂದು ಮುಖ್ಯ ಅಂಶವಾಗಲಿದೆ. ಆದರೆ, ದಿಲ್ಲಿ ಮತ್ತು ಪಂಜಾಬ್ ಮಾತ್ರವಲ್ಲ, ಬಿಹಾರ ಮತ್ತು ಉತ್ತರ ಪ್ರದೇಶ (ಇಲ್ಲಿ ಮುಂದೊಂದು ದಿನ ಮಾಯಾವತಿ ಸಕ್ರಿಯ ರಾಜಕಾರಣಕ್ಕೆ ಮರಳಬಹುದು), ಪಶ್ಚಿಮ ಬಂಗಾಳ, ಒರಿಸ್ಸಾ, ಜಾರ್ಖಂಡ್, ಕೇರಳದ ರಾಜ್ಯ ಮಟ್ಟದ ಪಕ್ಷಗಳ ನಾಯಕರು ಮಹಾರಾಷ್ಟ್ರ ಮತ್ತು ತಮಿಳುನಾಡಿನ ಮುಖಂಡರ ಜೊತೆಗೆ ಬರಬಹುದು; ಯಾಕೆಂದರೆ, ಒಗ್ಗಟ್ಟೇ ಈ ಕಾಲದ ಮೂಲ ಮಂತ್ರ. ಕರ್ನಾಟಕದ (ಆ ನಂತರ ಮಧ್ಯಪ್ರದೇಶ, ಛತ್ತೀಸಗಢ ಮತ್ತು ರಾಜಸ್ಥಾನದ) ಚುನಾವಣಾ ಫಲಿತಾಂಶ 2024ರ ಲೋಕಸಭಾ ಚುನಾವಣೆಯ ಗತಿಯನ್ನು ನಿರ್ಧರಿಸಲಿದೆ.

ಕೊನೆಯದಾಗಿ, ರಾಹುಲ್ ಅವರನ್ನು ಸಂಸತ್ಸದಸ್ಯತ್ವದಿಂದ ಆನರ್ಹಗೊಳಿಸಿರುವುದು (ಮತ್ತು ಸಂಭಾವ್ಯ ಜೈಲುವಾಸ) ದೇಶದ ಆಡಳಿತ ಪಕ್ಷದವರಿಗೆ ತಿರುಗುಬಾಣವಾಗಬಹುದು. ಅವರನ್ನು ಜೈಲಿಗೆ ಕಳಿಸಿದ್ದೇ ಆದಲ್ಲಿ ಸಂತ್ರಸ್ತತನದ ಕಥಾನಕವು ರಾಜಕೀಯ ರಂಗದ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಸ್ಥಿತ್ಯಂತರಗೊಳ್ಳಬಹುದು. 2002ರಿಂದಲೂ ನರೇಂದ್ರ ಮೋದಿ ತನ್ನನ್ನು “ಉದಾರವಾದಿಗಳು”, “ಲ್ಯುಟೆನ್ ದಿಲ್ಲಿವಾಲಗಳು”, “ಖಾನ್ ಮಾರ್ಕೆಟ್ ಗ್ಯಾಂಗ್” ಪ್ರತಿನಿಧಿಸುವ ವ್ಯವಸ್ಥೆಯ ಮತ್ತು ಅವರ ವಕ್ತಾರರ (ಹಿಂದಿನ ದಿನಗಳ ಎನ್‌ಡಿಟಿವಿ ಸೇರಿದಂತೆ) ಬಲಿಪಶು ಎಂಬಂತೆ ಬಿಂಬಿಸುತ್ತಾ ಬಂದಿದ್ದಾರೆ. ತಾನೊಬ್ಬ “ಚಾಯ್‌ವಾಲ”, ಒಬಿಸಿಯವನಾದುದರಿಂದ ಈ ಪ್ರತಿಷ್ಠಿತ ಗುಂಪುಗಳ ನೇರ ಬಲಿಪಶುವಾಗಿರುವ ಕೆಳವರ್ಗದ ಸಾಕಾರರೂಪವೇ ತಾನು ಎಂದವರು ಹೇಳಿಕೊಳ್ಳುತ್ತಾರೆ. ನಿಜವಾದ ಬಲಿಪಶು- ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನದ ಒಂಬತ್ತು ವರ್ಷಗಳನ್ನು ಜೈಲಿನಲ್ಲಿ ಕಳೆದ, ಹಲವಾರು ತ್ಯಾಗಗಳನ್ನು ಮಾಡಿದ ಜವಾಹರಲಾಲ್ ನೆಹರೂ ಅವರ ಮರಿಮೊಮ್ಮಗನಾದ ರಾಹುಲ್ ಗಾಂಧಿ ಎಂದಾದಲ್ಲಿ ಮೋದಿಯವರ ಈ ಬಲಿಪಶು ಕಥಾನಕ ಇನ್ನು ಮುಂದೆ ಕೇಳಲಾರದೆ ಹೋಗಬಹುದು.

ಕೊರೊನಾ ಉಲ್ಭಣ: ಗುರುವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿರುವ ಮೋದಿ? | naanu gauriಆದರೆ, ರಾಹುಲ್ ಗಾಂಧಿಯನ್ನು ಜೈಲಿಗೆ ಕಳಿಸಲಾಗದಿದ್ದರೆ ಅವರು ಬೀದಿಯಲ್ಲೇ ಜನರ ನಡುವೆ ಮುಂದುವರಿಯಲಿದ್ದಾರೆ. “ಭಾರತ್ ಜೋಡೊ” ಯಾತ್ರೆಯು ಅವರನ್ನು ತಮಿಳುನಾಡಿನಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಕೊಂಡೊಯ್ದಿರುವಾಗ, ಇನ್ನೊಂದು ಯಾತ್ರೆಯು ಗುಜರಾತಿನಿಂದ ಆರಂಭವಾಗಿ ಈಶಾನ್ಯ ರಾಜ್ಯಗಳ ತನಕ- ಉತ್ತರ ಪ್ರದೇಶ ಸೇರಿದಂತೆ ಬಿಜೆಪಿಯ ಭದ್ರಕೋಟೆಗಳ ನಡುವಿಂದ ಸಾಗಲಿದೆ. ಕಾಂಗ್ರೆಸ್ ಈಗ ಪಕ್ಷದ ಕಾರ್ಯಕರ್ತರು ಮಾತ್ರವಲ್ಲ; ಆದರೆ ಪಕ್ಷದ ಪ್ರಮುಖ ಮುಖಂಡ ಮೋದಿಗೆ ಬದಲಿ ಎಂದು ಗುರುತಿಸುವ ಸಹಾನುಭೂತಿ ಹೊಂದಿರುವವರನ್ನು ಕೂಡಾ ಅವಲಂಬಿಸಬಹುದು.

ಇಲ್ಲಿ ಅನರ್ಹತೆಯ ಕ್ರಮದ ಕುರಿತ ಇನ್ನೊಂದು ಪಾಠವೂ ಇದೆ: ಇತ್ತೀಚಿನ ತನಕ ಮಮತಾ ಬ್ಯಾನರ್ಜಿ ಅಥವಾ ಅರವಿಂದ ಕೇಜ್ರಿವಾಲ್‌ಗಿಂತಲೂ ದುರ್ಬಲ ಎಂದು ತಾವು ಭಾವಿಸಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯು ಹೋರಾಡಬೇಕಿತ್ತು ಎಂದು ಬಿಜೆಪಿ ಮುಖಂಡರು ತಮ್ಮನ್ನು ತಾವೇ ಅಭಿನಂದಿಸಿಕೊಳ್ಳುತ್ತಿದ್ದರು. ಆದರೆ, ಕಾಲ ಬದಲಾಗುತ್ತಿದೆ- ಅವರ ಚೈತನ್ಯ ಮತ್ತು ಧಾರಣಾಶಕ್ತಿಯು ಒಂದು ಹೊಸ ವರ್ಚಸ್ಸನ್ನು ಅವರ ಗಟ್ಟಿತನ ತಂದುಕೊಟ್ಟಿದೆ; ಜೊತೆಗೆ ಬಿಜೆಪಿಯು ಯಾವ ರೀತಿಯಲ್ಲಿ ಅವರನ್ನು ಗುರಿ ಮಾಡಿ ದಾಳಿ ನಡೆಸಿದೆ ಎಂಬ ಕಾರಣದಿಂದ ಕೂಡಾ ಅದು ಲಭ್ಯವಾಗಿದೆ. ವಿಪರ್ಯಾಸವೆಂದರೆ, ದೇಶದ ಆಡಳಿತಗಾರರೇ ತಮ್ಮ ಪ್ರತಿಸ್ಪರ್ಧಿಯ ಸೃಷ್ಟಿಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದಾರೆ.

ಮುಂದಿನ ಹಾದಿ

ಕೊನೆಗೂ ರಾಹುಲ್ ಅವರಿಗೆ ಶಿಕ್ಷೆ ಖಾತ್ರಿ ಆಗುವುದೇ ಎಂಬುದು ನ್ಯಾಯಾಂಗವು ವಹಿಸುವ ಪಾತ್ರದ ಮೇಲೆ ಆಧರಿತವಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಡಿ. ವೈ. ಚಂದ್ರಚೂಡ್ ಅವರು ಸಂವಿಧಾನದ ಮೂಲ ಸಂರಚನೆಯನ್ನು ಭಾರತೀಯ ಪ್ರಜಾಪ್ರಭುತ್ವದ ಧ್ರುವ ನಕ್ಷತ್ರ ಎಂದು ಬಣ್ಣಿಸಿದ್ದಾರೆ. ಅದನ್ನು ರಕ್ಷಿಸಲು ಸರ್ವೋಚ್ಚ ನ್ಯಾಯಾಲಯ ಮತ್ತೊಮ್ಮೆ ಹೋರಾಡುವುದೇ? ಹಾಗಿದ್ದರೆ, ಆರು ವರ್ಷಗಳಿಗಿಂತಲೂ ಹೆಚ್ಚು ಕಾಲದ ಅಸಡ್ಡೆಯ ತೀರ್ಪುಗಳ ನಂತರ- ಅಥವಾ ಯಾವುದೇ ತೀರ್ಪು ನೀಡುವುದರಿಂದ ಹಿಂಜರಿಯುವ ವಿದ್ಯಮಾನಗಳ ನಂತರ- ನ್ಯಾಯಾಲಯವು ಸಾರ್ವಜನಿಕ ಜೀವನದ ಮುಂಚೂಣಿಗೆ ಬರಲಿದೆ. ಅದು ದೇಶದ ಆಡಳಿತಗಾರರಿಗೆ ಕೂಡಾ ಒಳ್ಳೆಯ ವಿಷಯ ಆಗಿರಲಾರದು.

ಸಾರಾಂಶದಲ್ಲಿ ಹೇಳುವುದಾದರೆ: ರಾಹುಲ್ ಗಾಂಧಿಯವರ ಅನರ್ಹತೆಯು ಭಾರತೀಯ ರಾಜಕೀಯದಲ್ಲಿ ಒಂದು ತಿರುವಿನ ಕ್ಷಣ ಆಗಲೂಬಹುದು. ಆದರೆ ಎಲ್ಲವೂ ವಿರೋಧಪಕ್ಷಗಳ, ನ್ಯಾಯಾಂಗದ ಮತ್ತು ಸ್ವತಃ ರಾಹುಲ್ ಗಾಂಧಿಯವರ ಅಂಗಳದಲ್ಲಿದೆ! ಆದರೆ, ನಾನು ಪಾಶ್ಚಾತ್ಯ ಜಗತ್ತಿನಿಂದ ಯಾವುದೇ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾರೆ. ಆ ಜಗತ್ತಿನ ಆದ್ಯತೆಗಳು ಇದೀಗ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿರ್ಧಾರವಾಗುವುದಿಲ್ಲ; ಅಲ್ಲದೆ ಚರ್ಚೆಯಲ್ಲಿ ಅವರ ಭಾಗವಹಿಸುವಿಕೆ ಪ್ರತಿಕೂಲವಾದೀತು ಕೂಡ: ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯ ವೇಳೆ ಬಳಸಿದ “ವಿದೇಶಿ ಕೈವಾಡ”ದ ರೋಗಲಕ್ಷಣ- ಇಂದೂ ಪ್ರಬಲವಾಗಿದೆ. ರಾಹುಲ್ ಇತ್ತೀಚಿಗೆ ಯುಕೆಯಲ್ಲಿ ಮಾಡಿದ ಭಾಷಣಗಳ ಕುರಿತು ಎಬ್ಬಿಸಲಾದ ಬೊಬ್ಬೆ ಇದನ್ನು ತೋರಿಸಿಕೊಟ್ಟಿದೆ.

(ಕೃಪೆ): The Wire

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕ್ರಿಸ್ಟೋಫ್ ಜಫ್ರೆಲೋ

ಕ್ರಿಸ್ಟೋಫ್ ಜಫ್ರೆಲೋ
CERI-Sciences Po/CNRS, ಪ್ಯಾರಿಸ್‌ನಲ್ಲಿ ಹಿರಿಯ ಸಂಶೋಧಕ. ಲಂಡನ್ನಿನ ಕಿಂಗ್ಸ್ ಇಂಡಿಯಾ ಇನ್‌ಸ್ಟಿಟ್ಯೂಟಿನಲ್ಲಿ ’ಭಾರತೀಯ ರಾಜಕೀಯಶಾಸ್ತ್ರ ಮತ್ತು ಸಮಾಜಶಾಸ್ತ್ರ’ದ ಹಿರಿಯ ಪ್ರಾಧ್ಯಾಪಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...