ದೇಶವನ್ನೇ ಬೆಚ್ಚಿಬೀಳಿಸಿದ 2002ರ ಗುಜರಾತ್ ಗೋದ್ರಾ ಹತ್ಯಾಕಾಂಡ ಸಂದರ್ಭದಲ್ಲಿ ಕಲೋಲ್ ಎಂಬ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ನಡೆದಿತ್ತು. ಈ ಪ್ರಕರಣದ 26 ಆರೋಪಿಗಳನ್ನು ಗುಜರಾತ್ನ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.
ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 39 ಆರೋಪಿಗಳ ಪೈಕಿ 13 ಆರೋಪಿಗಳು ಪ್ರಕರಣದ ವಿಚಾರಣೆಯ ಸಮಯದಲ್ಲಿ ಮೃತಪಟ್ಟಿದ್ದರು. ಅವರ ವಿರುದ್ಧದ ವಿಚಾರಣೆಯನ್ನು ಈ ಹಿಂದೆಯೇ ರದ್ದುಗೊಳಿಸಲಾಗಿತ್ತು. ಇದೀಗ ಪಂಚಮಹಲ್ ಜಿಲ್ಲೆಯ ಕಲೋಲ್ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಲೀಲಾಭಾಯಿ ಚುಡಾಸಮಾ ಅವರು ಇನ್ನುಳಿದ 26 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆ ಮಾಡಿದ್ದಾರೆ.
ಗುಜರಾತ್ನ ಗೋದ್ರಾದಲ್ಲಿ 2002ರ ಫೆಬ್ರುವರಿ 27ರಂದು ಸಾಬರಮತಿ ರೈಲನ್ನು ಸುಟ್ಟುಹಾಕಲಾಗಿತ್ತು. ಆನಂತರ ಮಾರ್ಚ್ 1 ರಂದು ಎರಡು ಕೋಮುಗಳ ನಡುವಿನ ಕೋಮು ಗಲಭೆ ಭುಗಿಲೆದ್ದು, ಹಿಂಸಾಚಾರಗಳು ಸಂಭವಿಸಿದ್ದವು. ಈಗ ಖುಲಾಸೆಗೊಂಡಿರುವ ಎಲ್ಲ 26 ಆರೋಪಿಗಳೂ ಗಲಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಗೋರಕ್ಷಣೆ ಹೆಸರಲ್ಲಿ ಪುನಿತ್ ಕೆರೆಹಳ್ಳಿಯಿಂದ ಮುಸ್ಲಿಂ ವ್ಯಕ್ತಿಯ ಕೊಲೆ: ಕುಟುಂಬಸ್ಥರ ಆರೋಪ
ಕಲೋಲ್ ಪೊಲೀಸ್ ಠಾಣೆಯಲ್ಲಿ ಈ ಆರೋಪಿಗಳ ವಿರುದ್ಧ 2002ರ ಮಾರ್ಚ್ 2ರಂದು ಎಫ್ಐಆರ್ ದಾಖಲಾಗಿತ್ತು. ಪ್ರಾಸಿಕ್ಯೂಷನ್ 190 ಸಾಕ್ಷಿಗಳು ಮತ್ತು 334 ಸಾಕ್ಷ್ಯಗಳನ್ನು ಪರಿಶೀಲಿಸಿತ್ತು. ಆದರೆ ನ್ಯಾಯಾಲಯವು ಸಾಕ್ಷಿಗಳಲ್ಲಿ ವಿರೋಧಾಭಾಸಗಳಿವೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಪ್ರಾಸಿಕ್ಯೂಷನ್ ವಾದವನ್ನು ಕೋರ್ಟ್ ತಳ್ಳಿಹಾಕಿದೆ.
2002ರ ಮಾರ್ಚ್ 1ರಂದು ಗಾಂಧಿನಗರ ಜಿಲ್ಲೆಯ ಕಲೋಲ್ ನಗರದಲ್ಲಿ ನಡೆದ ಕೋಮು ಗಲಭೆಯಲ್ಲಿ ಸುಮಾರು 2,000ಕ್ಕೂ ಹೆಚ್ಚು ಜನರು ಹರಿತವಾದ ಆಯುಧಗಳಿಂದ ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದರು. ಈ ವೇಳೆ ಹಲವು ಅಂಗಡಿಗಳನ್ನು ಧ್ವಂಸ ಮಾಡಿದ್ದರು.
ಮಸೀದಿಯಿಂದ ಹೊರಗೆ ಬರುತ್ತಿದ್ದ ವ್ಯಕ್ತಿಯನ್ನು ಹಿಂದುತ್ವವಾದಿ ಗುಂಪೊಂದು ಆತನನ್ನು ಕೊಂದು, ದೇಹವನ್ನು ಮಸೀದಿಯೊಳಗೆ ಸುಟ್ಟು ಹಾಕಿತ್ತು. ಮತ್ತೊಂದು ಘಟನೆಯಲ್ಲಿ ಗುಂಪೊಂದು 38 ಜನರ ಮೇಲೆ ದಾಳಿ ನಡೆಸಿತ್ತು. ಈ ಪೈಕಿ 11 ಜನರನ್ನು ಜೀವಂತವಿರುವಾಗಲೇ ಸುಟ್ಟುಹಾಕಿದ ಭೀಕರ ಘಟನೆಗಳು ನಡೆದಿದ್ದವು.
ಈ ಘಟನೆ ನಡೆಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆಯೊಬ್ಬರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು.